Advertisement

ಚಿಕ್ಕರಸಿನಕೆರೆ ಸಹಕಾರ ಸಂಘದಲ್ಲಿ ಅವ್ಯವಹಾರ

03:20 PM May 07, 2019 | Suhan S |

ಭಾರತೀನಗರ: ರೈತರಿಗೆ ಕೃಷಿ ಮಾಹಿತಿ, ಸಾಲ ಸೌಲಭ್ಯ ಒದಗಿಸಲು ರೂಪುಗೊಂಡಿದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು. ರಾಜ್ಯಾದ್ಯಂತ ರೈತ ಕುಟುಂಬಗಳಿಗೆ ಅನುಕೂಲ ಕಲ್ಪಿಸಿದೆ. ಆದರೆ ಚಿಕ್ಕರಸಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರಿಜಮ್ಮ ಸರ್ವಾಧಿಕಾರಿ ಧೋರಣೆ, ಅವ್ಯವಹಾರಕ್ಕೆ ಕಡಿವಾಣ ಹಾಕಬೇಕೆಂದು ಸಂಘದ ನಿರ್ದೇಶಕರು, ಸದಸ್ಯರ ಆಗ್ರಹಿಸಿದ್ದಾರೆ.

Advertisement

ಸಹಕಾರ ಸಂಘದಲ್ಲಿ 13 ಮಂದಿ ನಿರ್ದೇಶಕರು ಆಯ್ಕೆಗೊಂಡಿದ್ದಾರೆ. ಆದರೆ ಚುನಾಯಿತ ಪ್ರತಿನಿಧಿಗಳಿಗಿಂತ ಸಿಇಒ ಗಿರಿಜಮ್ಮ ಅವರೇ ಸೂಪರ್‌ ಸಿಎಂ ಎಂಬಂತೆ ವರ್ತಿಸುತ್ತಿದ್ದಾರೆ. ಇವರ ಅಕ್ರಮ, ಅವ್ಯವಹಾರ ಒಂದೆರಡಲ್ಲ. ಸಂಘಕ್ಕೆ ಬರುವ ಸರ್ಕಾರಿ ಯೋಜನೆಗಳ ಸೌಲಭ್ಯಗಳಲ್ಲಿ ಬಹುಪಾಲು ಈಕೆಯೇ ಗುಳುಂ ಮಾಡುತ್ತಿದ್ದಾರೆ. ಮೇಲಧಿಕಾರಿಗಳು ಜಾಣಕುರುಡುತನದಿಂದ ವರ್ತಿಸುತ್ತಿರುವುದು ಮತ್ತಷ್ಟು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.

ಸಾಲ ಮನ್ನಾ: ಚಿಕ್ಕರಸಿನಕೆರೆ ಕೆಲ ರೈತರಿಂದ ಹೆಬ್ಬೆಟ್ಟು ಸಹಿ ಪಡೆದು ತಾನೇ ಸಾಲ ಪಡೆದುಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ ಸಾಲಮನ್ನಾ ಸೌಲಭ್ಯವನ್ನೂ ಪಡೆದಿದ್ದಾರೆ. ಸಂಘದಲ್ಲಿ 195 ರೈತರು ಸಾಲ ಪಡೆದಿದ್ದು, ಅವರಲ್ಲಿ ಸುಮಾರು 67 ಮಂದಿಗೆ ಸಾಲ ಮನ್ನಾ ಸೌಲಭ್ಯ ದೊರೆತಿಲ್ಲ. ಆದರೆ, ಇವರು ಹೆಬ್ಬೆಟ್ಟು ಹಾಕಿಸಿಕೊಂಡು ಪಡೆದಿರುವ ಸಾಲಕ್ಕೆ ಮಾತ್ರ ಮನ್ನಾ ಸೌಲಭ್ಯ ದೊರೆತಿದೆ.

ವೇತನ ನೀಡಿಲ್ಲ: ಸಂಘದ ನೌಕರರಿಗೂ ಒಂದು ವರ್ಷದಿಂದ ವೇತನ ನೀಡಿಲ್ಲ. ಜೊತೆಗೆ ನೌಕರರ ಪಿಎಫ್ 3.80 ಲಕ್ಷ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆಂದು ನೌಕರರು ಆರೋಸಿದ್ದಾರೆ. ಇದಲ್ಲದೆ ಪಡಿತರ ವಿತರಣೆ, ಸ್ತ್ರೀಶಕ್ತಿ ಸಂಘಗಳ ಹಣ ದುರುಪಯೋಗ ಮಾಡಿಕೊಂಡಿರುವ ಸಿಇಒ ಗಿರಿಜಮ್ಮ ದಬ್ಟಾಳಿಕೆ ಖಂಡಿಸಿ ಸಂಘದ ಸದಸ್ಯರು, ನಿರ್ದೇಶಕರು ಆಡಳಿತ ಮಂಡಳಿಯ ವಾರ್ಷಿಕ ಸಭೆಯನ್ನೂ ರದ್ದು ಪಡಿಸಿ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಕ್ಯಾರೇ ಎನ್ನದ ಗಿರಿಜಮ್ಮನ ಡೋಂಟ್ ಕೇರ್‌ ವರ್ತನೆಯಿಂದ ಬೇಸತ್ತ ಗ್ರಾಮಸ್ಥರು ಅವರ ಅನ್ಯಾಯ, ಅಕ್ರಮಗಳನ್ನು ಕರಪತ್ರದಲ್ಲಿ ಮುದ್ರಿಸಿ ಇಡೀ ಗ್ರಾಮಕ್ಕೆ ಹಂಚಿಸಿದ್ದರು.

ಚಿಕ್ಕರಸಿನಕೆರೆ, ಗುರುದೇವರಹಳ್ಳಿ ಮತ್ತು ಕೆಂಚೇಗೌಡನದೊಡ್ಡಿ ವ್ಯಾಪ್ತಿಗೊಳಪಡುವ ಈ ಕೃಷಿ ಪತ್ತಿನ ಸಹಕಾರ ಸಂಘ ದಿವಾಳಿಯಾಗುತ್ತದೆಂಬ ಆತಂಕ ಗ್ರಾಮಸ್ಥದ್ದು. ಸಿಇಒ ಗಿರಿಜಮ್ಮ ನನಗೆ ಮೇಲಧಿಕಾರಿಗಳು, ರಾಜಕಾರಣಿಗಳು ನನ್ನ ಸಂಪರ್ಕದಲ್ಲಿದ್ದಾರೆ. ನನ್ನನ್ನು ಯಾರೂ ಏನೂ ಮಾಡಲಾಗಲ್ಲ ಎಂದು ಬೆದರಿಸುವುದಲ್ಲದೆ, ಹಿಟ್ಲರ್‌ ಆಡಳಿತ ನಡೆಸುತ್ತಿದ್ದಾರೆ ಎಂದು ಸಂಘದ ಸದಸ್ಯರು, ನಿರ್ದೇಶಕರು ಆರೋಪಿಸಿದ್ದಾರೆ.

Advertisement

ಕಳೆದ 10 ವರ್ಷಗಳಿಂದಲೂ ಸಹಕಾರ ಸಂಘದಲ್ಲಿ ಹಣ ದುರುಪಯೋಗವಾಗುತ್ತಲೇ ಇದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಂಘದ ಆಡಳಿತ ವ್ಯವಸ್ಥಾಪಕರಾಗಲಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಲಿ ಯಾರೂ ಸಿಇಒ ಗಿರಿಜಮ್ಮ ಅವರನ್ನು ಪ್ರಶ್ನಿಸುತ್ತಿಲ್ಲ. ಮೂರು ಗ್ರಾಮಗಳಲ್ಲಿ ಗಿರಿಜಮ್ಮ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಗಿರಿಜಮ್ಮ ಮಾಡಿರುವ ಅಕ್ರಮ ಅವ್ಯವಹಾರಗಳ ಕುರಿತು ತನಿಖೆಯೂ ನಡೆಯುತ್ತಿದೆ. ಆದರೂ ಪ್ರಭಾವಿ ರಾಜಕಾರಣಿಗಳು ಮತ್ತು ಮೇಲಧಿಕಾರಿಗಳಿಂದ ಪ್ರಭಾವ ಬೀರಿ ಅಕ್ರಮಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

● ಅಣ್ಣೂರು ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next