Advertisement

ರೋಗಕಾರಕವೇ ನೀರು ಶುದ್ಧೀಕರಣ ಘಟಕ?

10:57 PM Jul 31, 2019 | mahesh |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ನಗರದ ವಾಲಗದಕೇರಿ ಬಳಿಯ ಒಂದೇ ಕುಟುಂಬಕ್ಕೆ ಸೇರಿದ ಎರಡು ಪುಟ್ಟ ಮಕ್ಕಳು ಎರಡು ವರ್ಷದ ಅವಧಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕಂದಮ್ಮಗಳ ಸಾವಿನ ಬಗ್ಗೆ ಹೆತ್ತವರಲ್ಲಿ ಅನುಮಾನಗಳಿವೆ. ಪಕ್ಕದಲ್ಲಿರುವ ನೀರು ಸಂಸ್ಕರಣ ಘಟಕದ ಕೊಳಚೆ ನೀರು ಸೋರಿಕೆಯಿಂದ ರೋಗ ಉತ್ಪತ್ತಿಗೊಂಡು ಸಾವು ಸಂಭವಿಸಿದೆ ಎನ್ನುವ ಸಂದೇಹಗಳು ಅವರನ್ನು ಕಾಡುತ್ತಿವೆ.

Advertisement

ವಾಲಗದಕೇರಿ ಪರಿಶಿಷ್ಟ ಜಾತಿಗೆ ಸೇರಿದ ಗೀತಾ-ಮರ್ಧಾಳದ ಹರೀಶ ದಂಪತಿಯ ಗಂಡು ಮಗು 2 ತಿಂಗಳು ಸುಬ್ರಹ್ಮಣ್ಯದಲ್ಲಿತ್ತು. ಮಗುವಿನ ಹೆತ್ತವರು ಮರ್ಧಾಳದಲ್ಲಿ ವಾಸವಿದ್ದರೂ ಮಗು ನಿಶಾಂತ್‌ ಹೆಚ್ಚಾಗಿ ವಾಲಗದಕೇರಿ ಕಾಲನಿಯ ಅಜ್ಜನ ಮನೆಯಲ್ಲಿ ಇರುತ್ತಿದ್ದ. ಅನಂತರದ ದಿನಗಳಲ್ಲಿ ಮಗುವಿಗೆ ಆಗಾಗ್ಗೆ ಜ್ವರ ಕಾಣಿಸಿಕೊಳ್ಳುತ್ತಿತ್ತು. ಅನೇಕ ಸಲ ಮಗು ಆಸ್ಪತ್ರೆಗೆ ದಾಖಲಾಗಿತ್ತು.

ಶ್ವಾಸಕೋಶ, ಹೃದಯ ಕಾಯಿಲೆ

ಜು. 22ರಂದು ಮಗುವಿನ ಹುಟ್ಟುಹಬ್ಬವಾಗಿತ್ತು. ತಂದೆ-ತಾಯಿ, ಮಗು ಜತೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದರು. ಇದೇ ವೇಳೆ ತಾಯಿ ಮನೆ ವಾಲಗದಕೇರಿಗೆ ಹೋಗಿ ದ್ದರು. ಅಲ್ಲಿ ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ವೈದ್ಯರ ಬಳಿ ತೋರಿಸಿ, ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಕರೆದೊಯ್ದಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಮಗುವನ್ನು ಜು. 23ರಂದು ದಾಖಲಿ ಸಿದ್ದರು. ಚಿಕಿತ್ಸೆ ಫಲ ಕಾರಿಯಾಗದೆ 1 ವರ್ಷದ ಪ್ರಾಯದ ಗಂಡು ಮಗು ನಿಶಾಂತ್‌ ಜು. 29ರಂದು ಮೃತಪಟ್ಟಿದೆ. ಪರೀಕ್ಷಿಸಿದ ವೈದ್ಯರು, ಮಗು ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿ ಮೃತಪಟ್ಟಿದೆ ಎಂದು ಹೇಳಿದ್ದಾರೆ.

ಹಿಂದೆಯೂ ನಡೆದಿತ್ತು

Advertisement

ವರ್ಷದ ಹಿಂದೆ ಇದೇ ಕಾಲನಿಯಲ್ಲಿ ವಾಸವಿದ್ದ ರಮೇಶ-ಯಶೋದಾ ದಂಪತಿಯ ಪುತ್ರ, 14 ತಿಂಗಳ ಪ್ರಾಯದ ಮಗು ಯಕ್ಷಿತ್‌ ಕೂಡ ಜ್ವರ ಬಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಹುಟ್ಟಿದಾಗ ತಾಯಿಯನ್ನು ಕಳ ಕೊಂಡು ಅಜ್ಜನ ಆಸರೆಯಲ್ಲಿ ಬೆಳೆದ ಮಗುವಿಗೆ ಜ್ವರ ತೀವ್ರವಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಫ‌ಲಕಾರಿಯಾಗಿರಲಿಲ್ಲ.

10 ವರ್ಷಗಳ ಹಿಂದಿನ ಘಟಕ
ವಾಲಗದಕೇರಿ ಕಾಲನಿ ಪಕ್ಕ 20 ಮೀ. ಅಂತರದಲ್ಲಿ ದೇವಸ್ಥಾನದ ಮಾಸ್ಟರ್‌ ಪ್ಲಾನ್‌ ಯೋಜನೆಯಡಿ ಒಳಚರಂಡಿ ಮತ್ತು ಕುಡಿಯುವ ನೀರು ಯೋಜನೆ ಮಂಡಳಿಯ ತ್ಯಾಜ್ಯ ನೀರು ಸಂಸ್ಕರಣೆ ಘಟಕ ತೆರೆಯಲಾಗಿದೆ. 10 ವರ್ಷಗಳ ಹಿಂದೆ ಇದನ್ನು ತೆರೆಯಲಾಗಿದೆ. 25 ಕೋಟಿ ರೂ. ವೆಚ್ಚ ಮಾಡಲಾಗಿದೆ. ಹೊಳೆ ಬದಿಯಲ್ಲಿರುವ ಈ ಘಟಕದಲ್ಲಿ ಅಳವಡಿಸಿದ ಕೊಳವೆಗಳು ಶಿಥಿಲವಾಗಿ ಮಲಿನ ನೀರು ಸೋರಿಕೆ ಆಗುತ್ತಿದೆ. ಘಟಕದಲ್ಲಿ ನಿರ್ವಹಣೆ ಸರಿಯಾಗಿಲ್ಲ. ಕೊಳಚೆ ನೀರು ಪಕ್ಕದ ನಿವಾಸಿಗಳ ಬಳಕೆಯ ಬಾವಿಗಳ ಒಡಲನ್ನು ಸೇರುತ್ತಿದೆ. ಕಾಲನಿಯಲ್ಲಿ ಬಾವಿಯ ನೀರನ್ನೆ ಕುಡಿಯುವ ಹತ್ತು ಕುಟುಂಬಗಳಿವೆ. ಜತೆಗೆ ಪರಿಸರದಲ್ಲಿ ದುರ್ವಾಸನೆ ಹೆಚ್ಚಿದೆ. ಇದೆಲ್ಲವೂ ರೋಗ ಹರಡಲು ಕಾರಣವಾಗುತ್ತಿದೆ. ಘಟಕದಿಂದ ಪಕ್ಕದಲ್ಲಿ ಹೊಳೆ ನೀರಿಗೂ ಮಲಿನ ನೀರು ಸೇರುತ್ತಿದ್ದು, ಇದರಿಂದ ಹೊಳೆ ದಾಟಿದಾಗ ಕೈಕಾಲು, ದೇಹಗಳಲ್ಲಿ ತುರಿಕೆ ಆಗುತ್ತಿರುತ್ತದೆ ಎಂದು ಮಹಿಳೆಯರು ದೂರುತ್ತಿದ್ದಾರೆ. ಇಲ್ಲಿ 45 ಕುಟುಂಬಗಳು ವಾಸಿಸುತ್ತಿವೆ. ಪಕ್ಕದಲ್ಲೆ ಮಹಾವಿದ್ಯಾಲಯವೂ ಇದ್ದು, ಪರಿಸರ ಶುಚಿತ್ವದ ಕೊರತೆಯಿಂದ ಮಾರಣಾಂತಿಕ ರೋಗ ಭೀತಿ ಅಪಾಯವಿದೆ.

ಪರಿಶೀಲನೆ ನಡೆಸುತ್ತೇವೆ
ಮಕ್ಕಳಿಬ್ಬರು ಸಾವನ್ನಪ್ಪಲು ಕಾರಣವೇನು ಎನ್ನುವ ಬಗ್ಗೆ ಹೆತ್ತವರಿಂದ ವೈದ್ಯಕೀಯ ವರದಿ ತರಿಸಿಕೊಂಡು ಪರಿಶೀಲನೆ ನಡೆಸುತ್ತೇವೆ. ಮಕ್ಕಳ ಹೆತ್ತವರ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳಿವೆಯೇ ಎನ್ನುವುದನ್ನು ಪರೀಕ್ಷಿಸಬೇಕಾಗುತ್ತದೆ. ನೀರು ಮಲಿನವಾಗಿದ್ದರೆ ಬಾವಿಯ ನೀರನ್ನು ಪರೀಕ್ಷೆಗೆ ಒಳಪಡಿಸಲಾಗವುದು. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತೇವೆ.
– ಡಾ| ಸುಬ್ರಹ್ಮಣ್ಯ ತಾಲೂಕು ವೈದ್ಯಾಧಿಕಾರಿ, ಸುಳ್ಯ
ತನಿಖೆ ನಡೆಯಬೇಕುತ್ಯಾಜ್ಯ ನೀರು ಸಂಸ್ಕರಣ ಶುದ್ಧೀಕರಣ ಘಟಕ ಆದ ಬಳಿಕ ಸಾಕಷ್ಟು ತೊಂದರೆ ಎದುರಿಸುತ್ತಿದ್ದೇವೆ. ಅನೇಕ ರೋಗಗಳಿಗೆ ತುತ್ತಾಗಿದ್ದೇವೆ. ವಾಸನೆಗೆ ಇಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ರೋಗ ಬರಲು ಘಟಕದ ಕೊಳಚೆಯೇ ಕಾರಣ ಎನ್ನುವ ಸಂಶಯ ನಮಗಿದೆ. ಅಮಾಯಕ ಮಕ್ಕಳಿಬ್ಬರನ್ನು ಕಳೆದುಕೊಂಡಿದ್ದೇವೆ. ಸಾಕಷ್ಟು ಹಣ ವೆಚ್ಚ ಮಾಡಿದ್ದೇವೆ. ನಾವು ಬಡವರು. ನಮಗೆ ಏನೂ ಗೊತ್ತಾಗುತ್ತಿಲ್ಲ. ತನಿಖೆ ನಡೆಸಿ ಅಮಾಯಕ ಸಾವಿಗೆ ನ್ಯಾಯ ಮತ್ತು ಪರಿಹಾರ ದೊರಕಬೇಕು.
– ಪುಟ್ಟ ವಾಲಗದಕೇರಿ ಮಗುವಿನ ತಾಯಿ

ಸಾಕಷ್ಟು ಅನುಮಾನ

ಒಂದೇ ಕುಟುಂಬದ ಇಬ್ಬರು ಮಕ್ಕಳು ಅನಾರೋಗ್ಯದಿಂದ ಸಾವನ್ನಪ್ಪಿರುವುದು ಹೆತ್ತವರನ್ನು ಕಂಗೆಡಿಸಿದೆ. ಜತೆಗೆ ಸಾಕಷ್ಟು ಅನುಮಾನ ತರಿಸಿದೆ. ಘಟಕದ ಮಲಿನ ನೀರು ಸೋರುವಿಕೆ, ಹೊರಸೂಸುವ ವಾಸನೆಯಿಂದ ರೋಗ ಹರಡಿ ಮಾರಣಾಂತಿಕ ಕಾಯಿಲೆ ಸೃಷ್ಟಿಯಾಗುತ್ತಿದೆ ಎನ್ನುವ ಸಂಶಯ ಬಲಗೊಳ್ಳುತ್ತಿದೆ. ಕಾಲನಿಯ ಹಲವರಿಗೆ ಇದೇ ಸಂಶಯವಿದ್ದು, ಘಟಕ ನಿರ್ಮಾಣವಾದ ಬಳಿಕ ಹಲವು ಬಗೆಯ ಅನಾರೋಗ್ಯಕ್ಕೆ ಒಳಗಾಗಿದ್ದಾಗಿ ಹೇಳುತ್ತಿದ್ದಾರೆ. ತನಿಖೆಗೂ ಒತ್ತಾಯಿಸಿದ್ದಾರೆ.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next