Advertisement

ಪ್ರಕೃತಿ ವಿಕೋಪ ಎದುರಿಸಲು ಸಿದ್ಧರಾಗಿ

03:40 PM May 08, 2022 | Team Udayavani |

ಚಾಮರಾಜನಗರ: ಮಾನ್ಸೂನ್‌ ಸಂದರ್ಭದಲ್ಲಿ ಅತಿವೃಷ್ಟಿ, ಪ್ರವಾಹ ಹಾವಳಿ ಸೇರಿದಂತೆ ಪ್ರಕೃತಿ ವಿಕೋಪಗಳಿಂದ ಯಾವುದೇ ಅನಾಹುತ ವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸನ್ನದ್ದರಾಗಿರಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನ್ಸೂನ್‌ ವೇಳೆಯಲ್ಲಿ ಸಂಭವಿಸಬಹು ದಾದ ಅತಿವೃಷ್ಟಿ, ಪ್ರವಾಹ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿರಬೇಕು. ಕಂದಾಯ, ಪಂಚಾಯತ್‌ ರಾಜ್‌ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್‌, ಸ್ಥಳೀಯ ನಗರ ಸಂಸ್ಥೆಗಳು ಒಟ್ಟುಗೂಡಿ ಯಾವುದೇ ಪರಿಸ್ಥಿತಿ ಉಂಟಾದರೂ ನಿಭಾಯಿ ಸಲು ಅಗತ್ಯ ಕ್ರಮಗಳಿಗೆ ಮುಂದಾಗ ಬೇಕಾಗು ತ್ತದೆ. ವಿಪತ್ತು ಕಾರ್ಯ ನಿರ್ವಹಣೆಗೆ ಪ್ರತ್ಯೇಕ ವಾಗಿ ವಿಶೇಷ ತಂಡ ರಚಿಸಬೇಕು ಎಂದರು.

ಕೊಳ್ಳೇಗಾಲ ತಾಲೂಕಿನ ದಾಸನಪುರ, ಅಗ್ರಹಾರ, ಹರಳೆ, ಹಳೆ ಹಂಪಾಪುರ, ಹೊಸ ಹಂಪಾಪುರ, ಹಳೆ ಅಣಗಳ್ಳಿ, ಮುಳ್ಳೂರು, ಯಡಕುರಿಯ, ಧನಗೆರೆ, ಸರಗೂರು ಗ್ರಾಮ ಗಳಲ್ಲಿ ಈ ಹಿಂದೆ ಪ್ರವಾಹ ತಲೆದೋರಿದ್ದು ಇಂತಹ ಸಂಭವನೀಯ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಬೇಕು. ಪ್ರಕೃತಿ ವಿಕೋಪ ಸಂಭವಿಸಿದರೆ ಕಾಳಜಿ ಕೇಂದ್ರಗಳನ್ನು ತೆರೆಯುವ ಅಗತ್ಯ ಬೀಳ ಬಹುದು. ಇದಕ್ಕಾಗಿ ಸ್ಥಳ ಗುರುತಿಸಿ ಅವಶ್ಯಕ ಪ್ರಕ್ರಿಯೆ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಅಧಿಕಾರಿಗಳು ವಿಶೇಷ ಗಮನಹರಿ: ಮಾನ್ಸೂನ್‌ ವೇಳೆಯಲ್ಲಿ ಗಣಿಗಾರಿಕೆ ಪ್ರದೇಶಗಳಲ್ಲಿ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಾಹನ, ಯಂತ್ರೋಪಕರಣಗಳಿಂದಾಗುವ ಅನಾಹುತಗಳು, ಸಡಿಲಗೊಂಡ ಗಣಿ ಪ್ರದೇಶದ ಭಾಗದಲ್ಲಿ ಉಂಟಾಗಬಹುದಾದ ಭೂಕುಸಿತಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿ ಯವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಿರುಗಾಳಿ, ಪ್ರವಾಹ, ಅತಿವೃಷ್ಟಿ ಸಮಯದಲ್ಲಿ ವಹಿಸಬೇಕಿರುವ ಸುರಕ್ಷತಾ ಕ್ರಮಗಳಿಗೆ ಚಾಮುಂಡೇಶ್ವರಿ ವಿದ್ಯುತ್‌ ಪ್ರಸರಣ ನಿಗಮದ ಅಧಿಕಾರಿ ಸಿಬ್ಬಂದಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕೋವಿಡ್‌ ಜೊತೆಗೆ ಪ್ರವಾಹ, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಡೆಂಗ್ಯು, ಮಲೇರಿಯಾ, ಚಿಕನ್‌ ಗುನ್ಯ, ನೀರು ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ತಡೆಗೆ ಆರೋಗ್ಯ ಇಲಾಖೆ ಗಮನ ಹರಿಸಬೇಕು. ಅಲ್ಲದೇ ನೀರಿನ ಮಾದರಿಗಳನ್ನು ಪರೀಕ್ಷಿಸಿ ಸುರಕ್ಷತೆ ಬಗ್ಗೆ ಖಾತರಿ ಪಡಿಸಿಕೊಳ್ಳ ಬೇಕು ಎಂದರು.

Advertisement

ಜಾನುವಾರುಗಳಿಗೆ ತಗಲಬಹುದಾದ ರೋಗಗಳ ನಿಯಂತ್ರಣಕ್ಕಾಗಿ ಲಸಿಕೆ ನೀಡುವ ಕಾರ್ಯವನ್ನು ಪೂರ್ಣ ಗೊಳಿಸಬೇಕು. ಜಾನುವಾರುಗಳಿಗೆ ಆಶ್ರಯ, ಮೇವು, ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮುಂಗಾರು ಹಂಗಾಮಿನ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಸಬೇಕು. ಬಿರುಗಾಳಿ, ಅತಿವೃಷ್ಟಿಯಿಂದ ಹಾನಿಗೊಳಗಾಗುವ ಬೆಳೆಗಳ ಕುರಿತು ಶೀಘ್ರವಾಗಿ ವರದಿ ಸಲ್ಲಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ, ಹಳ್ಳಿಗಳಲ್ಲಿ ಕುಡಿವ ನೀರಿನ ಕುರಿತು ಯಾವುದೇ ದೂರು ಬರದ ಹಾಗೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತಾಪಂ ಇಒಗಳು ಗ್ರಾಪಂ ಗಳಲ್ಲಿ ಸಭೆ ನಡೆಸಬೇಕು. ಕಂದಾಯ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್‌ ಮಟ್ಟದ ಅಧಿಕಾರಿಗಳು ವಿಪತ್ತು ನಿರ್ವಹಣ ಕುರಿತು ಸಭೆ ನಡೆಸಿ ಅಗತ್ಯ ವ್ಯವಸ್ಥೆ ಮಾಡಬೇಕು ಎಂದರು. ಎಡೀಸಿ ಎಸ್‌. ಕಾತ್ಯಾಯಿನಿ ದೇವಿ, ಎಎಸ್‌ಪಿ ಸುಂದರ್‌ರಾಜ್‌, ಡಿಎಚ್‌ಓ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಆಸ್ಪತ್ರೆಯ ನೋಡಲ್‌ ಅಧಿಕಾರಿ ಡಾ. ಮಹೇಶ್‌, ಆರ್‌. ಎಂ.ಒ ಡಾ. ಕೃಷ್ಣಪ್ರಸಾದ್‌, ತಹಶೀಲ್ದಾರ ಬಸವ ರಾಜು, ರವಿ ಶಂಕರ್‌, ಮಂಜುಳಾ, ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಪ್ರೇಮ್‌ಕುಮಾರ್‌, ಮಹೇಶ್‌, ಧರಣೇಶ್‌, ಉಮೇಶ್‌ ಇತರರು ಇದ್ದರು.

ಡ್ಯಾಂಗಳಲ್ಲಿ ಹೂಳು ತೆಗೆಯಬೇಕು: ಡೀಸಿ : ನೀರಾವರಿ ಕಾಲುವೆಗಳು, ಚೆಕ್‌ ಡ್ಯಾಂಗಳಲ್ಲಿ ಹೂಳು ತೆಗೆಯಬೇಕು. ಗಿಡ ಗಂಟಿ, ಕಸ ತ್ಯಾಜ್ಯಗಳನ್ನು ತೆರವುಗೊಳಿಸಬೇಕು. ಸಂಭವನೀಯ ಪ್ರವಾಹ ಪೀಡಿತ ಗ್ರಾಮಗಳಲ್ಲಿ ವಿಪತ್ತು ನಿರ್ವಹಣೆ ಕುರಿತ ಅಣಕು ಕಾರ್ಯಚರಣೆಯನ್ನು ನಡೆಸಬೇಕು. ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆ ಕರೆದು ಅಗತ್ಯ ಮಾರ್ಗದರ್ಶನ ಸಿದ್ದತಾ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ತಾಲೂಕು ಮಟ್ಟದಲ್ಲಿಯೂ ತಹಶೀಲ್ದಾರ್‌, ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next