Advertisement

ಭಾವೈಕ್ಯತೆ ವಿರೋಧಿ ಸ್ವಾಮೀಜಿ ಹೆಸರಲ್ಲಿ ಭಾವೈಕ್ಯತೆ ದಿನ: ದಿಂಗಾಲೇಶ್ವರಶ್ರೀ ಆಕ್ಷೇಪ

06:11 PM Apr 19, 2022 | Team Udayavani |

ಶಿರಹಟ್ಟಿ(ಗದಗ): ವೀರಶೈವ- ಲಿಂಗಾಯತ ಒಂದೇ ಅಲ್ಲ ಎಂಬ ವಿವಾದವನ್ನು ಸೃಷ್ಟಿಮಾಡಿ, ಇಡೀ ಸಮಾಜ ಹೊತ್ತಿ ಉರಿಸುವಂತೆ ಮಾಡಿದ್ದು, ಆರ್‌ಎಸ್‌ಎಸ್, ಬಿಜೆಪಿಯನ್ನು ವಿರೋಧಿಸಿದ್ದರು ನೆನಪಿಲ್ಲವೇ. ಅಂತಹ ಸ್ವಾಮೀಜಿ ಜನ್ಮದಿನಾಚರಣೆಯನ್ನ ಭಾವೈಕ್ಯತಾ ದಿನಾಚರಣೆಯನ್ನಾಗಿ ಘೊಷಿಸಲು ಕಾರಣವೇನು ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಶಿರಹಟ್ಟಿ ಫಕ್ಕೀರಸ್ವಾಮಿ ಮಠದ ದಿಂಗಾಲೇಶ್ವರ ಶ್ರೀಗಳು ಆಗ್ರಹಿಸಿದರು.

Advertisement

ಶಿರಹಟ್ಟಿ ಫಕ್ಕೀರಸ್ವಾಮಿಗಳ ಮಠದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೋಂಟದ ಸಿದ್ಧಲಿಂಗ ಸ್ವಾಮಿಗಳ ಸ್ಮರಣಾರ್ಥ ನೂರು ಪ್ರಶಸ್ತಿಗಳನ್ನು ನೀಡಲಿ. ವರ್ಷದ 365 ದಿನಗಳಲ್ಲಿ 364 ದಿನಗಳನ್ನು ಅವರ ಸಾಧನೆಯನ್ನು ಸಾರಲು ಮೀಸಲಿಡಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಕಳೆದ 5 ಶತಮಾನಗಳಿಂದ ಭಾವೈಕ್ಯತೆಗೆ ಶ್ರಮಿಸುತ್ತಿರುವ ಶಿರಹಟ್ಟಿಯ ಫಕ್ಕೀರಸ್ವಾಮಿ ಮಠವನ್ನು ಕಡೆಗಣಿಸಲಾಗಿದೆ. ರಾಜಕಾರಣಿಗಳಲ್ಲಿ ಅಧ್ಯಯನದ ಕೊರತೆಯಿಂದಾಗಿ ಇಂತಹ ಅಚಾತುರ್ಯಗಳು ನಡೆಯುತ್ತವೆ ಎಂದು ಸಚಿವ ಸಿ.ಸಿ.ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡರು.

ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದಾಖಲೆ ನೀಡಲಿ ಎಂಬ ಸಚಿವ ಭೈರತಿ ಬಸವರಾಜ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಲಂಚ ಎಂಬುದು ಗುಪ್ತವಾಗಿ ನಡೆಯುವ ವ್ಯವಹಾರವೇ ಹೊರತು, ಬಹಿರಂಗ ವ್ಯವಹಾರವಲ್ಲ. ಮಠ ಮಾನ್ಯಗಳಿಗೆ ದೇಣಿಗೆ ನೀಡುವ ಭಕ್ತರಿಗೆ ನೀಡುವಂತೆ ಅಧಿಕಾರಿಗಳು ಪಾವತಿ ನೀಡುವುದಿಲ್ಲ. ಲಂಚಗುಳಿತನಕ್ಕೆ ದಾಖಲೆ ಕೇಳುವವರ ಜನ್ಮಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ನಿರ್ಮಿತಿ ಕೇಂದ್ರದ ವಿರುದ್ಧ ಆರೋಪ:

ಶಿರಹಟ್ಟ ಫಕ್ಕೀರಸ್ವಾಮಿಗಳ ಮಠಕ್ಕೆ 75 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಅದರಲ್ಲಿ 25 ಲಕ್ಷ ರೂ. ಗಳನ್ನು ಕಡಿತ ಮಾಡಿಕೊಂಡು ಬಿಡುಗಡೆ ಮಾಡುವುದಾಗಿ ಗದಗ ಮತ್ತು ಶಿರಹಟ್ಟಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಠಕ್ಕೆ ಬಿದ್ದಿದ್ದಾರೆ. ಆದರೆ, ಅಧಿಕಾರಿಗಳ ಒತ್ತಡಕ್ಕೆ ನಾವು ಮಣಿದಿಲ್ಲ. ಅನುದಾನ ಇನ್ನೂ ಬಿಡುಗಡೆ ಮಾಡಿಯಾಗಿಲ್ಲ. ಸರಕಾರ ತೆರಿಗೆ ರೂಪದಲ್ಲಿ ಅದನ್ನು ಕಡಿತ ಮಾಡಿಕೊಂಡರೆ, ನಮ್ಮ ಅಭ್ಯಂತರವಿಲ್ಲ. ಆದರೆ, ಭ್ರಷ್ಟಾಚಾರ ನಡೆಯುತ್ತಿದ್ದರೆ, ಅದನ್ನು ತಡೆದು ಸರಕಾರ ಘೋಷಿಸಿರುವ 75 ಲಕ್ಷ ರೂ.ಗಳನ್ನೂ ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದರು.

Advertisement

ಯಾವುದೇ ಆಸೆ, ಆಮಿಷಕ್ಕೆ ಒಳಗಾಗಿ ಸರಕಾರದ ವಿರುದ್ಧ ಆರೋಪ ಮಾಡುತ್ತಿಲ್ಲ. ಹಾಗಾದರೆ, ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸುವಾಗ ನೂರಾರು ಸ್ವಾಮೀಜಿಗಳೊಂದಿಗೆ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದೆವು. ಆಗ ಯಾರು, ಯಾವ ಆಮಿಷವನ್ನೊಡ್ಡಿದ್ದರ ಎಂದು ಖಾರವಾಗಿ ಪ್ರಶ್ನಿಸಿದ ಅವರು, ರಾಜ್ಯದ ಹಿತಕ್ಕಾಗಿ ಸ್ವಾಮಿಗಳು ಎಚ್ಚರಿಸುವ, ಸೂಚಿಸುವ ಕೆಲಸವನ್ನು ಮಾಡುತ್ತಾರೆ. ಅದನ್ನೇ ನಾನು ಮಾಡುತ್ತಿದ್ದೇನೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next