Advertisement

ಇನ್ನೆರಡು ವರ್ಷ ದಿನಕರ ದೇಸಾಯಿ ಸೂತ್ರ

01:38 AM May 29, 2021 | Team Udayavani |

“ಸರಳ ಬದುಕು’ ಎನ್ನುವ ಶಬ್ದ ಆಡಲು, ಕೇಳಲು, ಭಾಷಣ ಬಿಗಿಯಲು ಬಲು ಅಂದ, ಅನುಷ್ಠಾನದ ಹಂತ ದಲ್ಲಿ ಬಹುತೇಕರಿಗೆ ಇದು ಬಲು ಕನಿಷ್ಠದ ಆನಂದ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಅಂಕೋಲಾ ತಾಲೂಕಿನಲ್ಲಿ ಛಾಪು ಮೂಡಿಸಿದ ದಿನಕರ ದೇಸಾಯಿ (1909-1982) ಅವರ ವಿಶೇಷಣಗಳು ಒಂದೆರಡಲ್ಲ. ಮುಂಬಯಿಯಲ್ಲಿ ಹೆಸ ರಾಂತ ಕಾರ್ಮಿಕ ಸಂಘಟನೆ ನಾಯಕರು, ನ್ಯಾಯವಾದಿ, ಗೋಪಾಲಕೃಷ್ಣ ಗೋಖಲೆ ಸ್ಥಾಪಿಸಿದ ಸರ್ವೆಂಟ್ಸ್‌ ಆಫ್ ಇಂಡಿಯಾ ಸೊಸೈಟಿ ಪದಾಧಿಕಾರಿಗಳು, ಮುಂಬಯಿ ಮಹಾನಗರ ಪಾಲಿಕೆ ಸದಸ್ಯರು (1948-61), ಕೆನರಾ ಲೋಕಸಭಾ ಕ್ಷೇತ್ರದ ಸದಸ್ಯರು (1967), ಕರ್ನಾಟಕ ಏಕೀಕರಣ ಸಮಿತಿ ಸದಸ್ಯರು, ಪತ್ರಕರ್ತರು, ಚುಟುಕು ಸಾಹಿತಿಯಾಗಿ “ಚುಟುಕು ಬ್ರಹ್ಮ’ ಎಂದೆನಿಸಿಕೊಂಡವರು, ಹತ್ತಾರು ಶಾಲಾ ಕಾಲೇಜುಗಳನ್ನು ನಡೆಸುತ್ತಿರುವ ಕೆನರಾ ವೆಲ್‌ಫೇರ್‌ ಟ್ರಸ್ಟ್‌ ಸ್ಥಾಪಕಾಧ್ಯಕ್ಷರು (1953ರಿಂದ), ಕರ್ನಾಟಕ ವಿ.ವಿ.ಯಿಂದ ಗೌರವ ಡಾಕ್ಟರೇಟ್‌ ಪುರಸ್ಕೃತರು, ಗ್ರಂಥಕರ್ತರು…

Advertisement

ಇಷ್ಟೆಲ್ಲ ಪ್ರತಿಷ್ಠಿತರಾಗಿದ್ದ ದೇಸಾಯಿ ಅವರು ಇಂದಿರಾ ಅವರನ್ನು ಮದುವೆಯಾದದ್ದು 1936ರ ಜುಲೈ 2ರಂದು. ಸರಳ ಬದುಕಿನ ಅಗತ್ಯವನ್ನು ಅವರು ಹಿರಿಯರಿಗೆ ಮನ ಗಾಣಿಸಿದರು. ಧಾರವಾಡದಲ್ಲಿ ಮದುವೆ ನೋಂದಣಿ ಯಾಯಿತು. ಮದುವೆಗೆ ಆದ ಖರ್ಚು ನೋಂದಣಿ ಶುಲ್ಕ, ಊಟದ ಬಾಬ್ತು ಸೇರಿ ಒಟ್ಟು 13 ರೂ…

ಮೆರೆಯಲು ಸಾಕಷ್ಟು ಅವಕಾಶಗಳಿದ್ದೂ ಸರಳತನ ವನ್ನು ಅಪ್ಪಿಕೊಂಡವರು ದೇಸಾಯಿ. ದೇಶದ ರಾಜಕೀಯ ದಲ್ಲಿ ಬೆಟ್ಟು ಮಾಡುವುದಾದರೆ ಪ್ರಭಾರ ಪ್ರಧಾನಿಯಾಗಿದ್ದ ಗುಲ್ಜಾರಿಲಾಲ್‌ ನಂದಾ, ಪ್ರಧಾನಿಯಾಗಿದ್ದ ಲಾಲ್‌ಬಹಾ ದ್ದೂರ್‌ ಶಾಸಿŒ ಅವರ ಹೆಸರನ್ನು ಉಲ್ಲೇಖೀಸಬಹುದು.

ದೇಸಾಯಿ ಅವರಿಗೆ ಈ ಸರಳ ವಿವಾಹದ ಸಲಹೆ ಕೊಟ್ಟವರು ದ.ಕ. ಜಿಲ್ಲೆಯ ಉದ್ಧಾಮ ಶಿಶು ಸಾಹಿತಿ ಯಾಗಿದ್ದ, “ನಾಗರ ಹಾವೆ ಹೂವೊಳು ಹೂವೆ…’ ಜನಪ್ರಿಯ ಮಕ್ಕಳ ಹಾಡನ್ನು ಬರೆದ ಪಂಜೆ ಮಂಗೇಶ ರಾಯರು. “ನಾನು ಸರಳವಾಗಿ ಮದುವೆಯಾಗ ಬೇಕೆಂದಿದ್ದೇನೆ. ತಪ್ಪು ತಿಳಿದುಕೊಳ್ಳಬೇಡ. ನಾನು ಬದುಕುವುದೇ ಹೀಗೆ’ ಎಂದು ಪತ್ನಿಗೆ ಹೇಳಿಯೇ ಮದುವೆಯಾದದ್ದು. ಜೀವನದುದ್ದಕ್ಕೂ ಇದೇ ನೀತಿ ಯನ್ನು ಅನುಸರಿಸಿದ್ದರು ಎಂಬ ಆ ಕಾಲದ ಘಟನೆಯನ್ನು ಸ್ಮರಿಸಿಕೊಳ್ಳುತ್ತಾರೆ ಸಮೀಪವರ್ತಿಗಳಾಗಿದ್ದ ಹಿರಿಯ ಸಾಹಿತಿ ವಿಷ್ಣು ನಾಯ್ಕರು.

ಸರಳ ಬದುಕು ಅನಿವಾರ್ಯ
ಈಗ ಈ ಸರಳತೆ ದುರ್ಬಲವೆನಿಸಬಹುದು. ಕೊರೊನಾ ಸೋಂಕಿನ 2ನೇ ಅಲೆಯ ಅಬ್ಬರದ ಕಾಲಘಟ್ಟವಿದು. ಮೊದಲು ಕೇವಲ 40 ಜನರನ್ನು ಒಳಗೊಂಡಂತೆ ಮದುವೆಗಳನ್ನು ಕಲ್ಯಾಣ ಮಂಟಪಗಳಲ್ಲಿ ಆಚರಿಸಬಹುದು, ಅನಂತರ ಮನೆಗಳಲ್ಲಿ ಮಾತ್ರ ನಡೆಸಬಹುದು, ಬಳಿಕ ಈಗಾಗಲೇ ನಿಗದಿಯಾದ ಮದುವೆ ಹೊರತುಪಡಿಸಿ ಹೊಸ ಮದುವೆ ಮಾಡು ವಂತಿಲ್ಲ, ಮೆಹಂದಿಯಂತಹ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ ಎಂಬ ಕಾನೂನನ್ನು ಸರಕಾರ ಕಾಲಕಾಲಕ್ಕೆ ತಿದ್ದುಪಡಿ ಮಾಡಿ ಹೇಳುತ್ತಿದೆ. ಒಟ್ಟಾರೆ ಸರಕಾರ ಬೆಂಗಳೂರಿನಿಂದ ನಿಯಮಾವಳಿ ಪರಿಷ್ಕರಿಸಿ ಆದೇಶ ಹೊರಡಿಸುವುದು, ಇತ್ತ ಜಿಲ್ಲಾ ಮಟ್ಟದ ಅಧಿಕಾರಿಗಳು ಕೆಳಗಿನ ಅಧಿಕಾರಿಗಳಿಗೆ ಅವುಗಳ ಪಾಲನೆಗೆ ವರ್ಗಾ ಯಿಸುವುದು ನಡೆಯುತ್ತಲೇ ಇದೆ. ಕಲಿತವರು (ಕಲಿಯ ದವರು ಬಲು ಕಡಿಮೆ) ಆದೇಶಗಳನ್ನು ತಮ್ಮ ಕೈಲಾದ ಮಟ್ಟಿಗೆ ಉಲ್ಲಂ ಸುತ್ತಲೇ ಇದ್ದಾರೆ. ಇದರಿಂದಾಗಿ ಎಷ್ಟು ಜನರಿಂದ ಎಷ್ಟು ಜನರಿಗೆ ಕೊರೊನಾ ಸೋಂಕು ವರ್ಗಾವಣೆಯಾಯಿತೆಂದು ಹೇಳುವುದು ಕಷ್ಟ.

Advertisement

ಕೊರೊನಾ ಎರಡನೆಯ ಅಲೆ ಇನ್ನೇನು ಕೆಲವು ದಿನಗಳಲ್ಲಿ ಇಳಿಮುಖವಾದರೂ ವೈರಸ್‌ ನಾಶವಾಗು ವುದಿಲ್ಲ. 1800ರ ಆದಿಭಾಗದಲ್ಲಿದ್ದ ಕಾಲರಾ ಬ್ಯಾಕ್ಟೀರಿಯಾ ಇನ್ನೂ ಇದೆ. ಈಗ ಕೊರೊನಾದ ಹಿಂದೆಯೇ ವಿವಿಧ ಫ‌ಂಗಸ್‌ ಬಂದಂತೆ ಭವಿಷ್ಯದಲ್ಲಿ ತರಹೇವಾರಿ ಫ‌ಂಗಸ್‌ಗಳು ಹುಟ್ಟಿಕೊಳ್ಳಬಹುದು, ಅವು ಗಳಿಗೂ ನಮ್ಮಂತೆ ಸಂತಾನಭಾಗ್ಯವಿದೆಯಲ್ಲ? ಇದುವೇ ನಿಸರ್ಗದ ನಿಷ್ಪಕ್ಷಪಾತ ನೀತಿ. ಮನುಷ್ಯ ಜಾತಿಯಲ್ಲೂ ಕಾಲಘಟ್ಟ ಉರುಳಿದಂತೆ ನೈತಿಕತೆ, ಪ್ರಾಮಾಣಿಕತೆ, ಮುಗ್ಧತೆ ಇಳಿಮುಖವಾಗಿ ಭ್ರಷ್ಟಾಚಾರ, ಮೈಗಳ್ಳತನ, ಅಪ್ರಾಮಾಣಿಕತೆ, ಅಧಿಕಾರದಾಹ, ಸೋಗಲಾಡಿತನ, ಲಾಭಬುಡುಕತನ, ದುರಾಸೆ, ಅಸೂಯಾಪರತೆಯಂತಹ ಋಣಾತ್ಮಕ ಗುಣಗಳು ಹೆಚ್ಚಿದಂತೆ ವೈರಸ್‌, ಫ‌ಂಗಸ್‌ಗಳೂ ಬಲಿಷ್ಠವಾಗುತ್ತಿವೆ.

ಲಾಕ್‌ಡೌನ್‌ ಮುಗಿದಾಕ್ಷಣವೇ ಜನರು ಒಮ್ಮೆಲೆ ಆವೇಶಭರಿತರಾಗಿ ವರ್ತಿಸುತ್ತಾರೆ. ವೈರಸ್‌ ಇಂತಹ ಸಂದರ್ಭವನ್ನೇ ಕಾಯುತ್ತಿರುವುದು. ಮೈ ಮರೆತರೆ ಇದುವರೆಗೆ ಕೊರೊನಾ ಸೋಂಕು ಬಾರದೆ ಇರುವವರನ್ನು ಅಪ್ಪಿಕೊಳ್ಳಬಹುದು. “ಹೊಸ ಹೊಸ ಗಿರಾಕಿಗಳನ್ನೇ ಬುಟ್ಟಿಗೆ ಹಾಕಿಕೊಳ್ಳುವ’ ನೀತಿ ನಿಸರ್ಗದಲ್ಲಿಯೇ ಇದೆ ಎಂದು ಊಹಿಸಬಹುದು. ನಾವು ಮತ್ತು ನಮ್ಮ ಪೀಳಿಗೆ ಉಳಿಯಬೇಕೆನಿಸಿದರೆ ಮುಂದೆ ಅತೀ ಜಾಗರೂಕ ಹೆಜ್ಜೆಯನ್ನು ಇಡಲೇ ಬೇಕು. ಇದರಿಂದ ಅನುಕೂಲವೂ ಆಗಲಿದೆ. ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಬೀಳಲಿದೆ. ಎಷ್ಟೋ ಜನರಿಗೆ ಎಷ್ಟೋ ಜನರನ್ನು ಬದುಕಿಸಿದ ಪುಣ್ಯವೂ ಲಭಿಸಲಿದೆ. ಇನ್ನೂ ಹೆಚ್ಚುವರಿ ಪುಣ್ಯ ಬೇಕಾದರೆ ಮಾಡಬೇಕಾಗಿದ್ದ ಖರ್ಚನ್ನು ಅಗತ್ಯವುಳ್ಳವರಿಗೆ ಹಂಚಲೂಬಹುದು. ಇಷ್ಟು ದಿನ ನಾವು ಮಾಡಿದ್ದು ಅಗತ್ಯವಿಲ್ಲದವರಿಗೆ ನಮ್ಮ ಪ್ರತಿಷ್ಠೆ ತೋರಿಸಲು ಹಂಚಿದ್ದು, ಮಧುಮೇಹಿಗಳಿಗೆ ಸಿಹಿ ಭಕ್ಷ್ಯಗಳನ್ನು ಹಂಚಿದ್ದು, ಮುಂದೆ ಹಾಗಲ್ಲ… ತಿಂದದ್ದು ಜೀರ್ಣಗೊಳ್ಳುವ ಮುಗ್ಧರಿಗೆ ಹಂಚುವುದು…

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next