Advertisement

ಶಿವಮೊಗ್ಗದಲ್ಲಿ ಮೈತ್ರಿಕೂಟಕ್ಕೆ ಆನೆಬಲ ತಂದ ಡಿಕೆಶಿ !

10:47 AM Apr 21, 2019 | Team Udayavani |

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಅಖಾಡಕ್ಕೆ “ಡಿಕೆ ಬ್ರದರ್ ‘ ಕಾಲಿಟ್ಟಿದ್ದು ಮತ್ತೂಮ್ಮೆ “ಟ್ರಬಲ್‌ ಶೂಟರ್’ ಎನ್ನುವುದನ್ನು ನಿರೂಪಿಸಿದ್ದಾರೆ. ಹೊಂದಾಣಿಕೆ ಕೊರತೆಯಿಂದ ಪ್ರಚಾರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದ ಮೈತ್ರಿಕೂಟಕ್ಕೆ ಡಿ.ಕೆ.ಶಿವಕುಮಾರ್‌ ಆಗಮನ ಆನೆ ಬಲ ನೀಡಿದೆ.

Advertisement

ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಒಂದೇ ವೇದಿಕೆ ಏರಲು ನಿರಾಕರಿಸಿದ್ದ ಕಾರಣ ಉಪ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ನಿರೀಕ್ಷಿತ ಮತ ಗಳಿಕೆ ಸಾಧ್ಯವಾಗಿರಲಿಲ್ಲ. ಇದರಿಂದ ಕಡಿಮೆ ಅಂತರದಲ್ಲಿ ಮಧು ಬಂಗಾರಪ್ಪ ಸೋಲನುಭವಿಸಿದ್ದರು.

ಸೋಲಿನ ಪಾಠ ಕಲಿತ ಮಧು ಟಿಕೆಟ್‌ ಪಕ್ಕಾ ಆಗುತ್ತಲೇ ಟ್ರಬಲ್‌ ಶೂಟರ್‌ ಡಿ.ಕೆ. ಶಿವಕುಮಾರ್‌ ಕ್ಷೇತ್ರದ ಉಸ್ತುವಾರಿ ತೆಗೆದುಕೊಳ್ಳಬೇಕೆಂದು ಸಿಎಂಗೆ ಮನವಿ ಮಾಡಿದ್ದರು. ಉಸ್ತುವಾರಿ ತೆಗೆದುಕೊಳ್ಳದಿದ್ದರೂ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಮಾತಿನಂತೆ ಬಂದ ಡಿಕೆಶಿ ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿಗೆ ಭೇಟಿ ಕೊಟ್ಟು, “ರಾಷ್ಟ್ರ ನಾಯಕರು ಒಂದಾಗಿದ್ದಾರೆ. ನಾವು ಆಗುವುದರಲ್ಲಿ ತಪ್ಪೇನಿಲ್ಲ. ಒಂದೇ ಕಾರಿನಲ್ಲಿ ಹೋಗಿ ಪ್ರಚಾರ ಮಾಡಿ, ಇಲ್ಲ ಬೇರೆ ಗಾಡಿ ಹತ್ತಿ’ ಎಂದು ತಾಕೀತು ಮಾಡಿದ್ದರು.

ದೇಶಕ್ಕಾಗಿ ಒಂದಾಗೋಣ ಎಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹಾಗೂ ಆರ್‌.ಎಂ. ಮಂಜುನಾಥ ಗೌಡ ಒಂದೇ ಕಾರಿನಲ್ಲಿ ತೆರಳಿ ಪ್ರಚಾರ ಮಾಡಿದರು. ಆದರೆ ಭದ್ರಾವತಿಯಲ್ಲಿ ಪ್ರತ್ಯೇಕವಾಗಿಯೇ ಪ್ರಚಾರ ಮಾಡುತ್ತೇವೆ ಎಂದಿದ್ದರು.

Advertisement

ಆದರೆ ಪ್ರತ್ಯೇಕವಾಗಿಯೂ ಪ್ರಚಾರ ಮಾಡಲಿಲ್ಲ. ಇದನ್ನೆಲ್ಲ ಗಮನಿಸುತ್ತಿದ್ದ ಡಿಕೆಶಿ ಶುಕ್ರವಾರ (ಏ.19) ಆಗಮಿಸುತ್ತಿದ್ದಂತೆ ತಡರಾತ್ರಿ ಸಭೆ ನಡೆಸಿ ಹಾಲಿ ಮತ್ತು ಮಾಜಿ ಶಾಸಕರ ಮನವೊಲಿಸಿ ಕೈ ಕುಲುಕಿಸಿದರು. ಇದು ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಭದ್ರಾವತಿ ಜನರಿಗೇ ಶಾಕ್‌: ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸಿನ ಮೇಲೆ ರಾಜಕಾರಣ ಮಾಡಿಕೊಂಡು ಬಂದಿದ್ದ ಎಂ.ಜೆ. ಅಪ್ಪಾಜಿ ಗೌಡ ಹಾಗೂ ಬಿ.ಕೆ. ಸಂಗಮೇಶ್‌ 30 ವರ್ಷಗಳಿಂದ ಮುಖಾಮುಖೀಯಾಗುತ್ತಿದ್ದಾರೆ.

ಇಬ್ಬರೂ ಪಕ್ಷೇತರರಾಗಿಯೇ ಖಾತೆ ತೆರೆದವರು. ಇಬ್ಬರ ನಡುವಿನ ಜಗಳಗಳು ತಾಲೂಕಿನ ಜನರನ್ನೇ ಬೆಚ್ಚಿಬೀಳಿಸಿವೆ. ಈ ಇಬ್ಬರೂ ಘಟಾನುಘಟಿ ನಾಯಕರು ಈಗ ಒಂದೇ ವೇದಿಕೆ ಏರಿರುವುದು ಟ್ರಬಲ್‌ ಶೂಟರ್‌ ಡಿಕೆಶಿ ಚಾಣಾಕ್ಷತನಕ್ಕೆ ಸಾಕ್ಷಿಯಾಗಿದೆ.

ಶಿವಕುಮಾರ್‌ ರಾಜ್ಯದ ಬೇರೆ ಕಡೆಯೂ ಪ್ರವಾಸದಲ್ಲಿರುವುದರಿಂದ ಸಹೋದರ ಡಿ.ಕೆ. ಸುರೇಶ್‌ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಲ್ಲದೇ 15ಕ್ಕೂ ಹೆಚ್ಚು ಸಚಿವರು ಹಾಗೂ ಶಾಸಕರು ಸಹ ಪ್ರತಿ ತಾಲೂಕಿನ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ಭೇದಿಸುತ್ತಾರಾ ಬಿಜೆಪಿ ಕೋಟೆ: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಏಳರಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಯಡಿಯೂರಪ್ಪ ಸಿಎಂ ಆದಾಗ ಮಾಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳು, ಸಂಘಟನೆ ಬಲ ಬಿಜೆಪಿಗೆ ಶ್ರೀರಕ್ಷೆಯಾಗಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಎಸ್‌.ಎಂ. ಕೃಷ್ಣ ಸೇರಿ ಅನೇಕರು ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಕೆಶಿ ಬಿಜೆಪಿ ಭದ್ರಕೋಟೆ ಹೇಗೆ ಭೇದಿಸುತ್ತಾರೆ ಕಾದುನೋಡಬೇಕಿದೆ.

ಯಡಿಯೂರಪ್ಪಗೆ ಟಾಂಗ್‌: ಡಿಕೆಶಿ ಚುನಾವಣಾ ರಣತಂತ್ರ ರೂಪಿಸಿದಷ್ಟೇ ಅಲ್ಲದೇ ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ಕೂಡ ನಡೆಸುತ್ತಿದ್ದಾರೆ. ನೀರಾವರಿ ತಂದಿಲ್ಲ, ಅಚ್ಛೇ ದಿನ್‌ ಬಂದಿಲ್ಲ, ನಿಮ್ಮ ಮುಖಕ್ಕೆ ಏಕೆ ಮತ ಕೇಳುತ್ತಿಲ್ಲ, ಯಡಿಯೂರಪ್ಪ ಡೈರಿ ಹೀಗೆ ಅನೇಕ ವಿಷಯಗಳು ಪ್ರಸ್ತಾಪವಾಗುತ್ತಿವೆ.

* ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next