ಮಂಗಳೂರು: ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಾತುರ್ಮಾಸ ವ್ರತ ಕೈಗೊಂಡಿದ್ದ ಶ್ರೀ ಕಾಶೀಮಠ ಸಂಸ್ಥಾನಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ದಿಗ್ವಿಜಯ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.
ದೇಶದ ವಿವಿಧೆಡೆಯ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಕೇರಳದ ಗಜಪಡೆ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು. ನೆತ್ತಿಪಟ್ಟೆಂ, ಕೊಂಡಮಾಟೆ ಎನ್ನುವ ಕೇರಳದ ಸಾಂಪ್ರದಾಯಿಕ ಶೈಲಿಯ ವಸ್ತ್ರಾಭರಣಗಳನ್ನು ಧರಿಸಿದ್ದ ಆನೆಯ ಮೇಲೆ ಮಾವುತರ ಕೇರಳದ ಬಣ್ಣಬಣ್ಣದ ಕೊಡೆ ಗಳನ್ನು ಹಿಡಿದು ವಿಶೇಷ ಪ್ರದರ್ಶನ ನೀಡಿದರು. ಉಳಿದಂತೆ ಅಶ್ವಪಡೆ, ವಿಶೇಷ ಸ್ಯಾಕೊÕàಫೋನ್ ತಂಡ, ಪಂಚವಾದ್ಯ, ಕೇರಳ ಚೆಂಡೆ, ಆಕರ್ಷಕ ನಾಸಿಕ್ ಬ್ಯಾಂಡ್ ತಂಡ, ತಾಲೀಮು, ಹುಲಿವೇಷ ತಂಡಗಳು, ವಿವಿಧ ಚಿತ್ರಣಗಳ 20ಕ್ಕೂ ಆಧಿಕ ಸ್ತಬ್ಧಚಿತ್ರಗಳು ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ, ಶ್ರೀ ಮಹಾಮ್ಮಾಯ ದೇವಸ್ಥಾನ ರಸ್ತೆ, ಗದ್ದೆಕೇರಿ, ಮಂಜೇಶ್ವರ ಗೋವಿಂದ ಪೈ ವೃತ್ತ, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರ ಜಂಕ್ಷನ್, ಬಸವನಗುಡಿ ರಸ್ತೆ, ಚಮ್ಮಾರಗಲ್ಲಿ, ಕೆಳರಥಬೀದಿ, ರಥಬೀದಿಯಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಸಮಾಪನಗೊಂಡಿತು. ಹಾದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪಂಜಿನ ಬೆಳಕು ಕೂಡ ಮೆರವಣಿಗೆಗೆ ಮೆರುಗು ನೀಡಿತು.
ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ ಕಾಮತ್, ಚಾತುರ್ಮಾಸ ಸಮಿತಿ ಅಧ್ಯಕ್ಷ ಮುಂಡ್ಕೂರು ರಾಮದಾಸ್ ಕಾಮತ್, ಪದ್ಮನಾಭ ಪೈ, ಸಿ.ಎಲ್. ಶೆಣೈ, ಜಯರಾಜ್ ಪೈ, ಪ್ರಶಾಂತ್ ರಾವ್, ಡಾ| ಉಮಾನಂದ ಮಲ್ಯ, ನಾಮದೇವ್ ಮಲ್ಯ, ಸುರೇಶ್ ವಿ. ಕಾಮತ್, ಗಣಪತಿ ಪೈ, ಗುರುದತ್ ಕಾಮತ್, ಬಿ.ಆರ್. ಭಟ್, ಮಾರೂರ್ ಶಶಿಧರ್ ಪೈ, ಶಾಸಕ ಡಿ. ವೇದವ್ಯಾಸ ಕಾಮತ್, ಕೊಚ್ಚಿನ್ ತಿರುಮಲ ದೇವಸ್ಥಾನದ ಜಗನ್ನಾಥ ಶೆಣೈ, ಜಿಎಸ್ಬಿ ಸೇವಾ ಮಂಡಲದ ಆರ್.ಜಿ. ಭಟ್, ರಘುವೀರ್ ಭಂಡಾರ್ಕರ್, ದಿನೇಶ್ ಕಾಮತ್ ಕೋಟೇಶ್ವರ ಮೊದಲಾದವರಿದ್ದರು.