Advertisement

ನಾನಾ ಮುಖಗಳು ಈಗ ನಾಕು ಮುಖವಾಯ್ತು!

11:03 AM Jan 12, 2018 | |

ಕುಶಾನ್‌ ಗೌಡ ಅವರಿಗೆ ರಾತ್ರಿ ಎರಡು ಗಂಟೆಗೆ ಒಂದು ಕಥೆ ತಲೆಗೆ ಬಂತಂತೆ. ಈ ಕಥೆಯನ್ನು ಬೆಳೆಸಿಕೊಂಡು ಹೋದರೆ ಒಂದು ಸಿನಿಮಾ ಮಾಡಬಹುದೆಂದು ಆಲೋಚಿಸಿ ಪೆನ್ನು, ಪೇಪರು ಹಿಡಿದು ಕಥೆ ಬರೆದೇ ಬಿಟ್ಟರು. ಸ್ವತಃ ಅವರಿಗೆ ಇದು ಸಿನಿಮಾವಾಗುತ್ತದೆ, ಜನ ಇಷ್ಟಪಡುವ ಲಕ್ಷಣಗಳು ಇವೆ ಎಂದು ಗೊತ್ತಾಗಿ ಆ ಕಥೆಯನ್ನು ಸ್ನೇಹಿತ ದರ್ಶನ್‌ ರಾಗ್‌ಗೆ ಹೇಳಿದರಂತೆ. ಸ್ನೇಹಿತನ ಅನೇಕ ವರ್ಷಗಳ ಸಿನಿಮಾ ಆಸೆ ಈಡೇರಲಿ ಎಂದು ದರ್ಶನ್‌ ರಾಗ್‌ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅದರ ಪರಿಣಾಮ ಈಗ “ನಾಕುಮುಖ’ ಎಂಬ ಸಿನಿಮಾವೊಂದು ಸೆಟ್ಟೇರಲು ಸಿದ್ಧವಾಗಿದೆ. ಈ ಮೂಲಕ ಕುಶಾನ್‌ ಗೌಡ ಅವರ ಬಹುದಿನಗಳ ಆಸೆ ಈಡೇರುತ್ತಿದೆ. ಈ ಚಿತ್ರವನ್ನು ನಿರ್ದೇಶನ ಮಾಡುವ ಜೊತೆಗೆ ಪ್ರಮುಖ ಪಾತ್ರದಲ್ಲೂ ಕುಶಾನ್‌ ಅವರು ನಟಿಸಿದ್ದಾರೆ.

Advertisement

ಎಲ್ಲಾ ಓಕೆ, “ನಾಕುಮುಖ’ ಎಂದರೆ ಏನು, ಈ ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಅದಕ್ಕೂ ಕುಶಾನ್‌ ಗೌಡ ಉತ್ತರಿಸುತ್ತಾರೆ. “ಅವಕಾಶಕ್ಕಾಗಿ ನಾನು ಚಿತ್ರರಂಗದಲ್ಲಿ ಸಾಕಷ್ಟು ಸುತ್ತಿದ್ದೇನೆ. ಈ ಸಂದರ್ಭದಲ್ಲಿ ನಾನು ನಾನಾ ಮುಖಗಳನ್ನು ನೋಡಿದೆ. ಈಗ “ನಾಕುಮುಖ’ ಎಂದು ಟೈಟಲ್‌ ಇಟ್ಟಿದ್ದೇನೆ. ಯಾರು ಹೇಗೆ ಬೇಕಾದರೂ ತಿಳ್ಕೊàಬಹುದು’ ಎಂದು ಚಿತ್ರದ ಟೈಟಲ್‌ ಬಗ್ಗೆ ಹೇಳುತ್ತಾರೆ. “ನಿರ್ದೇಶಕರುಗಳು ಕಲಾವಿದರನ್ನು ಶಿಲೆಯಂತೆ ಕೆತ್ತಿ ಪರಿಪೂರ್ಣ ಮಾಡುತ್ತಾರೆಂಬ ಮಾತಿದೆ. ಆದರೆ, ನನ್ನನ್ನು ನಾನೇ ಕೆತ್ತಿಕೊಳ್ಳಲು ಹೊರಟಿದ್ದೇನೆ. ಸ್ವಲ್ಪ ಅಂಕು-ಡೊಂಕು ಇರಬಹುದು. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ’ ಎಂಬುದು ಕುಶಾನ್‌ ಮಾತು. 

“ನಾಕುಮುಖ’ ಚಿತ್ರ ಸಸ್ಪೆನ್ಸ್‌-ಥ್ರಿಲ್ಲರ್‌ ಹಿನ್ನೆಲೆಯಲ್ಲಿ ಸಾಗುತ್ತದೆಯಂತೆ. ಹುಡುಗಿಯೊಬ್ಬಳ ರೇಪ್‌ ಅಂಡ್‌ ಮರ್ಡರ್‌ ಮೂಲಕ ಆರಂಭವಾಗುವ ಕಥೆ ಮುಂದೆ ಹುಡುಗಿಯನ್ನು ಕೊಲೆ ಮಾಡಿದ ನಾಲ್ವರ ಸಾವಿನೊಂದಿಗೆ ಸಾಗುತ್ತದೆಯಂತೆ. ಆ ನಾಲ್ವರು ಕಿರಾತರಕರನ್ನು ಸಾಯಿಸುವವರು ಯಾರು ಎಂಬುದು ಚಿತ್ರದ ಸಸ್ಪೆನ್ಸ್‌ ಅಂತೆ. ಚಿತ್ರದಲ್ಲಿ ಕುಶಾನ್‌ ಗೌಡ ಜೊತೆ ಕುಮಾರ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಅಮೃತಾ ಅಯ್ಯರ್‌ ನಾಯಕಿ. ಸಾಮಾನ್ಯವಾಗಿ ನಾಯಕಿಯರಿಗೆ ಒಳ್ಳೆಯ ಪಾತ್ರ ಸಿಗೋದಿಲ್ಲ ಎಂಬ ಮಾತಿನ ನಡುವೆಯೇ ಈ ಚಿತ್ರದಲ್ಲಿ ಅಮೃತಾಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಕುಶಾನ್‌ ಅವರ ಪ್ರತಿಭೆ ನೋಡಿ ಸಿನಿಮಾಕ್ಕೆ ದುಡ್ಡು ಹಾಕಲು ಮುಂದಾಗಿದ್ದಾಗಿ ಹೇಳಿಕೊಂಡರು ದರ್ಶನ್‌ ರಾಗ್‌. ಚಿತ್ರಕ್ಕೆ ಹರಿಬಾಬು ಸಂಗೀತವಿದೆ. ಕುಮಾರ್‌ ಕೂಡಾ ತಂಡ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅಂದಹಾಗೆ, ಇತ್ತೀಚೆಗೆ ಚಿತ್ರದ ಟೈಟಲ್‌ ಸಾಂಗ್‌ ಬಿಡುಗಡೆಯಾಗಿದ್ದು, ನಿರ್ದೇಶಕ ಸುನಿ ಬಿಡುಗಡೆ ಮಾಡಿ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next