Advertisement

ಅಧಿಕಾರದಲ್ಲಿದ್ದಾಗ ಶೆಟ್ಟರ್‌ಗೆ ಸ್ವಾಭಿಮಾನ ಇರಲಿಲ್ಲವೇ?: ಈಶ್ವರಪ್ಪ

12:05 AM Apr 21, 2023 | Team Udayavani |

ಹುಬ್ಬಳ್ಳಿ: ಜಗದೀಶ ಶೆಟ್ಟರ್‌ಗೆ ಬಿಜೆಪಿಯಲ್ಲಿದ್ದು ಅಧಿಕಾರದ ಮಜಾ ಅನುಭವಿಸಿಕೊಳ್ಳುವಾಗ ಇದ್ದಿದ್ದ ಸ್ವಾಭಿಮಾನಕ್ಕೆ ಈಗ ಒಮ್ಮೆಲೇ ಧಕ್ಕೆ ಬಂದಿತೇ? ಒಂದು ಸೀಟಿನ ಸಲುವಾಗಿ ಪಕ್ಷದ ತತ್ವ, ಸಿದ್ಧಾಂತ ಮರೆತು ಕಾಂಗ್ರೆಸ್‌ ಸೇರಿ ರಾಜ್ಯದ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹರಿಹಾಯ್ದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವತ್ತೂ ಲಿಂಗಾ ಯತರಿಗೆ ಅವಮಾನ ಮಾಡಿಲ್ಲ. ಪಕ್ಷದ ನಾಯಕರು ರಾಜ್ಯದ ಯಾವ ನಾಯಕರ ಮನೆಗೆ ಹೋಗಿರಲಿಲ್ಲ. ಜಗದೀಶ ಶೆಟ್ಟರ್‌ ಮನೆಗೆ ಮಾತ್ರ ಹೋಗಿ ಒಳ್ಳೆಯ ಸ್ಥಾನಮಾನ ಕೊಡುವುದಾಗಿ, ಅವರ ಕುಟುಂಬಸ್ಥರಿಗೆ ಟಿಕೆಟ್‌ ಕೊಡುವುದಾಗಿ ಹೇಳಿದ್ದರು. ಆದರೆ ಶೆಟ್ಟರ್‌ ಮುಸ್ಲಿಂ ಟೋಪಿ ಹಾಕಿಕೊಳ್ಳಲು ಕಾಂಗ್ರೆಸ್‌ಗೆ ಹೋಗಿದ್ದಾರೆ. ಇದು ದುರದೃಷ್ಟಕರ. ತುಂಬಾ ನೋವಾಗಿದೆ. ಆ ಮೂಲಕ ಅವರು ಲಿಂಗಾಯತರಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಬಿಜೆಪಿಗೆ ಅನ್ಯಾಯ ಎಸಗಿದ್ದಾರೆ. ಈಗ ಪಕ್ಷ ತೊರೆದ ಮೇಲೆ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಪಕ್ಷದಲ್ಲಿ ಅಧಿಕಾರ ಅನುಭವಿಸುವಾಗ ಯಾಕೆ ಇಂತಹ ಮಾತನ್ನಾಡಲಿಲ್ಲ ಎಂದರು.

ಅವರೇನು ಮನೆ ಅಳಿಯನೆ?
ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ನೀಡಿಲ್ಲ ಎನ್ನುವುದು ಸತ್ಯಕ್ಕೆ ದೂರವಾದದ್ದು. ಬಿಜೆಪಿ ನನ್ನನ್ನು ಚೆನ್ನಾಗಿ ನಡೆಸಿಕೊಂಡಿಲ್ಲ ಎನ್ನುವುದಕ್ಕೆ ಅವರೇನು ಮನೆ ಅಳಿಯನೆ? ಇಲ್ಲಿವರೆಗೆ ಪಕ್ಷದಲ್ಲಿರುವ ಯಾವ ವ್ಯಕ್ತಿಯೂ ಇಂತಹ ಹೇಳಿಕೆ ನೀಡಿಲ್ಲ. ಪಕ್ಷ ಇವರಿಗೆ ಎಲ್ಲ ಸ್ಥಾನಮಾನ ನೀಡಿತ್ತು. ಈಗ ಕಾಂಗ್ರೆಸ್‌ಗೆ ಹೋಗಿದ್ದಾರೆ. ಅಲ್ಲಿ ಸಿದ್ದರಾಮಯ್ಯ ಗುಂಪೋ, ಡಿಕೆಶಿ ಗುಂಪೋ ಅಥವಾ ಸ್ವಂತ ಗುಂಪು ಕಟ್ಟು ತ್ತಾರೋ ನೋಡಬೇಕು ಎಂದರು.

ಹಿಂದೆ ವಿಧಾನಸೌಧದಲ್ಲಿ ಹಿಂದೂಗಳ ಹತ್ಯೆ, ಗೋಹತ್ಯೆ ಕಾಯ್ದೆ, ಪಿಎಫ್‌ಐ ಬ್ಯಾನ್‌ ಮಾಡುವ ವಿಚಾರವಾಗಿ ಇವರೇ ಧ್ವನಿ ಎತ್ತಿದ್ದರು. ಈಗ ಕಾಂಗ್ರೆಸ್‌ ಸೇರಿದ್ದಾರೆ. ಈ ಬಗ್ಗೆ ಮಾತನಾಡುತ್ತಾರಾ? ಕಾಂಗ್ರೆಸ್‌ನವರು ಬಿಜೆಪಿ ತಂದಿರುವ ಎಲ್ಲ ಕಾಯ್ದೆ ಹಾಗೂ ನೀಡಿದ ಮೀಸಲಾತಿ ಹಿಂತೆಗೆಯುತ್ತೇವೆ ಎಂದಿದ್ದಾರೆ. ಇದಕ್ಕೆ ಶೆಟ್ಟರ್‌ ಒಪ್ಪು³ತ್ತಾರಾ? ಅಧಿಕಾರದ ವ್ಯಾಮೋಹಕ್ಕೆ ಕಾಂಗ್ರೆಸ್‌ ಸೇರಿದ್ದಾರೆ. ಶೆಟ್ಟರ್‌ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅದರೊಂದಿಗೆ ಅವರು ಕೂಡ ಬೆಳೆದಿದ್ದಾರೆ. ಪಕ್ಷದಿಂದ ಲಾಭ ಪಡೆದಿದ್ದಾರೆ. ಅವರಿಗೆ ಪಕ್ಷದಿಂದ ಅನ್ಯಾಯವಾಗಿಲ್ಲ ಎಂದರು.

ಅರವಿಂದ ಬೆಲ್ಲದ, ಲಿಂಗರಾಜ ಪಾಟೀಲ್‌, ಸಂಜಯ ಕಪಟಕರ ಮುಂತಾದವರಿದ್ದರು.

Advertisement

ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲಿಸುವುದೇ ನಮ್ಮ ಗುರಿ
ಶಿವಮೊಗ್ಗ: ರೋಚಕ ತಿರುವಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಎನ್‌. ಚನ್ನಬಸಪ್ಪ ಅವರು ಗುರುವಾರ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ತಮ್ಮ ನಾಯಕ ಕೆ.ಎಸ್‌. ಈಶ್ವರಪ್ಪ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದ ಬಳಿಕ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಸಂಖ್ಯೆಯಲ್ಲಿದ್ದ ಬೆಂಬಲಿಗರು ಹಾಗೂ ಕಾರ್ಯಕರ್ತರ ಜತೆಗೆ ಮೆರವಣಿಗೆಯಲ್ಲಿ ಸಾಗಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಬಿಜೆಪಿಯಲ್ಲಿ ಕಾರ್ಯಕರ್ತರು, ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಆಗುವ ಎಲ್ಲ ಲಕ್ಷಣಗಳಿವೆ. ಕಳೆದ ಬಾರಿ 46 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆವು. ಈ ಬಾರಿ 60 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ. ನಾನು ರಾಜ್ಯಾದ್ಯಂತ ಚುನಾವಣ ಪ್ರಚಾರದಲ್ಲಿ ತೊಡಗಬೇಕಿದೆ. ಶಿವಮೊಗ್ಗಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.
ಅಭ್ಯರ್ಥಿ ಚನ್ನಬಸಪ್ಪ ಮಾತನಾಡಿ, ಹಿರಿಯರಾದ ಈಶ³ರಪ್ಪನವರ ಮಾರ್ಗದರ್ಶನದಲ್ಲಿ ಈ ಚುನಾವಣೆ ನಡೆಸುತ್ತೇನೆ. ಕಾರ್ಯಕರ್ತರೆಲ್ಲ ಉತ್ಸಾಹದಿಂದಿದ್ದಾರೆ. ಹೇಗೆ ಗೆಲ್ಲಬೇಕೆಂಬುದು ಈಶ್ವರಪ್ಪನವರಿಗೆ ಕರಗತವಾಗಿದೆ. ಅವರ ಹಾದಿಯಲ್ಲೇ ಸಾಗುತ್ತೇನೆ. ಸುಮಾರು 60 ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವನ್ನು ಮಾದರಿ ನಗರವನ್ನಾಗಿಸುವ ಪಥಕ್ಕೆ ಕೊಂಡೊಯ್ಯುವುದು ಹಾಗೂ ಅನೇಕ ಅಭಿವೃದ್ಧಿ ಕೆಲಸ ಮಾಡಲಾಗುವುದು. ಪಕ್ಷದ ಗೆಲುವು ಎಂದರೆ ನಮ್ಮ ಕಾರ್ಯಕರ್ತರ ಗೆಲುವಾದಂತೆ. ಹು-ಧಾ. ಕೇಂದ್ರ ವಿಧಾನಸಭಾ ಮತ ಕ್ಷೇತ್ರವು ಈಗ ರಾಷ್ಟ್ರೀಯ ವಿಷಯವಾಗಿದೆ.
– ಮಹೇಶ ಟೆಂಗಿನಕಾಯಿ, ಹು-ಧಾ ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next