Advertisement

ಡಯಾಲಿಸಿಸ್‌ ನೌಕರರ ಮುಷ್ಕರ ಹಿಂದೆಗೆತ; ನಿಟ್ಟುಸಿರು ಬಿಟ್ಟ ಕಿಡ್ನಿ ರೋಗಿಗಳು

03:38 PM Jun 27, 2023 | Team Udayavani |

ಕುಂದಾಪುರ: ರಾಜ್ಯಾದ್ಯಂತ ಸರಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಚಿಕಿತ್ಸೆ ಸ್ಥಗಿತಗೊಳ್ಳುವ ಆತಂಕ ತಾತ್ಕಾಲಿಕವಾಗಿ ದೂರವಾಗಿದೆ. ಡಯಾಲಿಸಿಸ್‌ ಹೊಣೆ ಹೊತ್ತ ಸಂಜೀವಿನಿ ಸಂಸ್ಥೆಯ ಸಿಬಂದಿ ಸರಕಾರದ ಸಕಾಲಿಕ ಮಧ್ಯಪ್ರವೇಶದಿಂದ ಜೂ.26ರಿಂದ ಪ್ರತಿಭಟನೆಗೆ ಮುಂದಾದವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

Advertisement

ಪ್ರತಿಭಟನೆ ಮಾಡುವ ಬಗ್ಗೆ ಮನವಿ
ಡಯಾಲಿಸಿಸ್‌ ಸಿಬಂದಿಗೆ
ಕಳೆದ ಎರಡು ವರ್ಷಗಳಿಂದ ಸರಿಯಾದ ವೇತನ ಮತ್ತು ಸವಲತ್ತು ಕೊಡದ ಕಾರಣ ಜೂ.26ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುವ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಇಂತಹ ಮನವಿಗಳನ್ನು ಈ ಹಿಂದಿನ ಸರಕಾರ ಇದ್ದಾಗಲೂ ಸಲ್ಲಿಸಲಾಗಿತ್ತು. ಪ್ರಯೋಜನ ಆಗಿರಲಿಲ್ಲ. ಈ ಬಾರಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಕಾರಣ ಮುಷ್ಕರ ರದ್ದಾಗಿದೆ.

ಡಯಾಲಿಸಿಸ್‌
ರಾಜ್ಯಾದ್ಯಂತ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ 167 ಡಯಾಲಿಸಿಸ್‌ ಕೇಂದ್ರಗಳಲ್ಲಿ ಮೊದಲು ಬಿಆರ್‌ಎಸ್‌, ಅನಂತರ ಸಂಜೀವಿನಿ ಸಂಸ್ಥೆ ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿದೆ. 900 ಡಯಾಲಿಸಿಸ್‌ ಸಿಬಂದಿ 2017 ಎಪ್ರಿಲ್‌ನಿಂದ ಇವೆರಡರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಿಬಂದಿಗೆ ಸರಿಯಾದ ಸಂಬಳ ಕೊಡದ ಹೊರಗುತ್ತಿಗೆ ಸಂಸ್ಥೆಗಳು, ಆರೋಗ್ಯ ಇಲಾಖೆಯ ವಿರುದ್ಧ ಕಳೆದ ವರ್ಷ ಅ.20 ರಂದು ಪ್ರತಿಭಟನೆ ನಡೆದಿತ್ತು.

ಆರೋಗ್ಯ ಇಲಾಖೆ ಅಧಿಕಾರಿಗಳು, ಅಂದಿನ ಆರೋಗ್ಯ ಸಚಿವರು
2 ತಿಂಗಳ ಒಳಗೆ ಬಾಕಿ ಇಟ್ಟ ವೇತನ ಮಾಡಿಸಿಕೊಡುವ ಭರವಸೆ ಪತ್ರ ನೀಡಿದ್ದರು. ಪತ್ರಕ್ಕೆ 8 ತಿಂಗಳಾದರೂ ವೇತನ, ಸೌಲಭ್ಯ ಬರಲಿಲ್ಲ.

ಬಾಕಿ ವಿವರ
ಬಿಆರ್‌ಎಸ್‌ ಸಂಸ್ಥೆಯಿಂದ 2021ರ ಜೂನ್‌, ಜುಲೈಯ ಪೂರ್ಣ ವೇತನ, ಬಿಆರ್‌ಎಸ್‌ನಿಂದ 2020 ನವಂಬರ್‌ನಿಂದ 2021 ಜುಲೈವರೆಗೆ 9 ತಿಂಗಳ ಇಎಸ್‌ಐ, ಪಿಎಫ್. ಸಂಜೀವಿನಿ ಸಂಸ್ಥೆಯಿಂದ ಮಾಸಿಕ 2 ಸಾವಿರ ರೂಗಳಂತೆ 12 ತಿಂಗಳ ಅರಿಯರ್ಸ್‌, 2022 ಜನವರಿಯಿಂದ ಇಂದಿನವರೆಗೆ 17 ತಿಂಗಳ ಇಎಸ್‌ಐ, ಪಿಎಫ್, ಅನುಭವಿ ಸಿಬಂದಿಗೆ 2022 ಜನವರಿಯಿಂದ ಇಂದಿನವರಗೆ ಮಾಸಿಕ 3ರಿಂದ 5 ಸಾವಿರ ರೂ. ಹೆಚ್ಚುವರಿ ವೇತನ, ಮಾತೃತ್ವ ರಜೆಗೆ 6 ತಿಂಗಳ ವೇತನ ನೀಡಿಲ್ಲ.

Advertisement

ಸಂಕಷ್ಟ
ಸಿಬಂದಿ ಅನಾರೋಗ್ಯ ಸಮಯದಲ್ಲಿ ಇಎಸ್‌ಐ ಇಲ್ಲದೇ, ಹಣಹೊಂದಿಸಲಾಗದೇ ಮೃತಪಟ್ಟ ಘಟನೆಗಳೂ ನಡೆದಿವೆ. ಸಿಗಬೇಕಾದ ವೇತನಕ್ಕಾಗಿ ಕೊಟ್ಟಿರುವ ಭರವಸೆ ಪತ್ರ ಹಿಡಿದು 4 ಬಾರಿ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದರೂ ಪ್ರಯೋಜನಶೂನ್ಯವಾಗಿ ಜೂ.26ರಿಂದ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ಭರವಸೆ
ಸಚಿವ ದಿನೇಶ್‌ ಗುಂಡೂರಾವ್‌, ಏಜೆನ್ಸಿ , ಸಿಬಂದಿ, ಅಧಿಕಾರಿಗಳ ಸಭೆಯನ್ನು ಶನಿವಾರ ನಡೆಸಿ ಮುಷ್ಕರ ನಡೆಸದಂತೆ ಮನವಿ ಮಾಡಿದ್ದಾರೆ. ಏಜೆನ್ಸಿ ಗುತ್ತಿಗೆ ಅವಧಿ ಮುಗಿದ ಕಾರಣ ಪಾವತಿಯಲ್ಲಿ ಸಮಸ್ಯೆಯಾಗಿದೆ. ಸಂಜೀವಿನಿ ಸಂಸ್ಥೆ ಹಾಗೂ ಸಿಎಂ ಜತೆ ಮಾತನಾಡಲಾಗುವುದು. 15 ದಿನಗಳ ಬಳಿಕ ಮತ್ತೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದಿದ್ದು ಸಿಬಂದಿ ಮುಷ್ಕರ ನಡೆಸದೇ ಕಾರ್ಯನಿರ್ವಹಣೆ ಮುಂದುವರಿಸಲು ನಿರ್ಧರಿಸಿದ್ದಾರೆ.

ರೋಗಿಗಳಿಗೆ ಆಪ್ತ
ಮೂತ್ರಪಿಂಡ ಸಮಸ್ಯೆಯಿಂದ ಬಳಲುವವರಿಗೆ ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್‌ ಚಿಕಿತ್ಸೆ ಆಪ್ತವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ. ವಾರಕ್ಕೆರಡು ಬಾರಿ ಚಿಕಿತ್ಸೆ ಅನಿವಾರ್ಯ ಆದ ಕಾರಣ ಹಣದ ಹೊರೆ. ಖಾಸಗಿಯಲ್ಲೂ ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಮಾತ್ರ ಸಾಧ್ಯ. ಸರಕಾರಿ ಆಸ್ಪತ್ರೆಗಳಲ್ಲಿ ಸೀಮಿತ ರೋಗಿಗಳಿಗೆ ವ್ಯವಸ್ಥೆ ಇರುವುದು. ಇದನ್ನು ಹೆಚ್ಚುಗೊಳಿಸಲು ನಿರಂತರ ಬೇಡಿಕೆ ಇದೆ. ಆಯುಷ್ಮಾನ್‌ ಮೂಲಕ ಡಯಾಲಿಸಿಸ್‌ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಿದರೆ ಸಾರ್ವಜನಿಕರು ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ನಿರಾಯಾಸವಾಗಿ ಚಿಕಿತ್ಸೆ ಪಡೆಯಬಹುದು.

ಸದ್ಯ ಮುಷ್ಕರಕ್ಕೆ ಮುಂದಾಗಿಲ್ಲ
ಹೊರಗುತ್ತಿಗೆ ಪಡೆದ ಡಯಾಲಿಸಿಸ್‌ ಚಿಕಿತ್ಸೆ ನೀಡುವ ಸಿಬಂದಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದರೂ ಆರೋಗ್ಯ ಸಚಿವರ ಭರವಸೆಯಂತೆ ಸದ್ಯ ಮುಷ್ಕರಕ್ಕೆ ಮುಂದಾಗಿಲ್ಲ ಎಂದು ಗೊತ್ತಾಗಿದೆ. ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ, ಯಾವುದೇ ಮುಷ್ಕರ ಇಲ್ಲ.
-ಡಾ| ರಾಬರ್ಟ್‌ ರೆಬೆಲ್ಲೋ, ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ, ಕುಂದಾಪುರ ಉಪವಿಭಾಗ ಆಸ್ಪತ್ರೆ

Advertisement

Udayavani is now on Telegram. Click here to join our channel and stay updated with the latest news.

Next