Advertisement

ಧ್ರುವ ಹೊಸ ಚಿತ್ರ “ಮದಗಜ’

11:51 AM Dec 26, 2017 | |

ಧ್ರುವ ಸರ್ಜಾ ಅಭಿನಯದ ಮೂರನೆಯ ಚಿತ್ರ “ಭರ್ಜರಿ’ ಮೊನ್ನೆ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ನಾಲ್ಕನೆಯ ಚಿತ್ರ “ಪೊಗರು’ ಇತ್ತೀಚೆಗಷ್ಟೇ ಸೆಟ್ಟೇರಿದೆ. ಇನ್ನು ತಮ್ಮ ಐದನೇ ಚಿತ್ರದ ಕಾಲ್‌ಶೀಟ್‌ ಅವರು ನಿರ್ಮಾಪಕ ಉದಯ್‌ ಕೆ. ಮೆಹ್ತಾ ಅವರಿಗೆ ಕೊಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಆ ಚಿತ್ರದ ಹೆಸರು, ನಿರ್ದೇಶಕರು ಯಾರು ಎಂಬುದು ಇದುವರೆಗೂ ಗೊತ್ತಿರಲಿಲ್ಲ.

Advertisement

ಈಗ ಬಂದಿರುವ ಮಾಹಿತಿಯ ಪ್ರಕಾರ, ಚಿತ್ರಕ್ಕೆ “ಮದಗಜ’ ಎಂಬ ಹೆಸರನ್ನು ಇಡಲಾಗಿದ್ದು, “ಅಯೋಗ್ಯ’ ನಿರ್ದೇಶಿಸುತ್ತಿರುವ ಮಹೇಶ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಹೌದು, ಧ್ರುವ ಸರ್ಜಾ ಅಭಿನಯದ ಐದನೇ ಸಿನಿಮಾವನ್ನು ನಿರ್ದೇಶಿಸುವ ಅವಕಾಶ ಮಹೇಶ್‌ ಅವರಿಗೆ ಸಿಕ್ಕಿದೆಯಂತೆ. ಇದಕ್ಕೂ ಮುನ್ನ ಸುಮಾರು ಮೂರು ವರ್ಷಗಳ ಹಿಂದೆ ಧ್ರುವಗೆ ಒಂದು ಸಿನಿಮಾ ಮಾಡಬೇಕೆಂದು, ಕಥೆ ಹೇಳಿದ್ದರಂತೆ.

ಕಥೆ ಕೇಳಿದ ಧ್ರುವ ನಟಿಸುವುದಕ್ಕೆ ಒಪ್ಪಿದ್ದರಂತೆ. ಆ ಸಂದರ್ಭದಲ್ಲಿ ಚಿತ್ರಕ್ಕೆ ಇಟ್ಟಿದ್ದ ಹೆಸರು, “ಭರ್ಜರಿ’. “ಬಹದ್ದೂರ್‌’ ಚೇತನ್‌ ನಿರ್ದೇಶನದ ಹೊಸ ಚಿತ್ರಕ್ಕೆ ಆ ಹೆಸರು ಸೂಕ್ತ ಎಂದನಿಸಿ, ಮಹೇಶ್‌ ಅವರಿಂದ “ಭರ್ಜರಿ’ ಹೆಸರು ಕೇಳಿ ಪಡೆದಿದ್ದರಂತೆ. ಆಗಲೇ ತಮ್ಮ ಐದನೇ ಚಿತ್ರವನ್ನು ನಿರ್ದೇಶಿಸಬೇಕೆಂದು ಹೇಳಿದ್ದರಂತೆ. ಅದರಂತೆ ಈಗ ಅವರು ನಾಲ್ಕನೆಯ ಚಿತ್ರದಲ್ಲಿ ಸದ್ಯದಲ್ಲೇ ನಟಿಸಲಿದ್ದು,

ಆ ನಂತರ ಐದನೇ ಚಿತ್ರದ ಕೆಲಸ ಶುರು ಹಚ್ಚಿಕೊಳ್ಳುವುದಕ್ಕೆ ಮಹೇಶ್‌ಗೆ ಗ್ರೀನ್‌ ಸಿಗ್ನಲ್‌ ಸಹ ಕೊಟ್ಟಿದ್ದಾರೆ. ಅದಕ್ಕೆ ಸರಿಯಾಗಿ,  ಮೊನ್ನೆ ಭಾನುವಾರ ನರ್ತಕಿ ಚಿತ್ರಮಂದಿರದಲ್ಲಿ ನಡೆದ “ಭರ್ಜರಿ’ ಚಿತ್ರದ ಶತದಿನೋತ್ಸವದ ಸಂದರ್ಭದಲ್ಲಿ, ಧ್ರುವ ಅವರು ತಮ್ಮ ಐದನೇ ಚಿತ್ರವನ್ನು ಮಹೇಶ್‌ ನಿರ್ದೇಶಿಸಲಿದ್ದಾರೆ ಎಂದು ಧ್ರುವ ಸ್ಪಷ್ಟಪಡಿಸಿದ್ದಾರೆ.

“ಮದಗಜ’ ಒಂದು ಪಕ್ಕಾ ಮಾಸ್‌ ಚಿತ್ರವಾಗಲಿದೆ ಎನ್ನುತ್ತಾರೆ ಮಹೇಶ್‌. “ನಾನು ಮುಂಚಿನಿಂದ ಧ್ರುವ ಅವರ ಅಭಿಮಾನಿ. ಒಬ್ಬ ಅಭಿಮಾನಿ ತಮ್ಮ ಮೆಚ್ಚಿನ ನಟನನ್ನು ಹೇಗೆ ನೋಡುವುದಕ್ಕೆ ಇಷ್ಟಪಡುತ್ತಾನೋ, ಚಿತ್ರದ ಕಥೆಯೂ ಅದೇ ತರಹ ಇರಲಿದೆ. ಇದೊಂದು ಪಕ್ಕಾ ಮಾಸ್‌ ಚಿತ್ರವಾಗಲಿದೆ. ಈಗಾಗಲೇ ಕಥೆ ಪಕ್ಕಾ ಆಗಿದೆ.

Advertisement

ಮುಂದಿನ ದಿನಗಳಲ್ಲಿ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯಾಗಲಿದೆ’ ಎನ್ನುತ್ತಾರೆ ಮಹೇಶ್‌. “ಮದಗಜ’ ಚಿತ್ರ ಶುರುವಾಗುವುದು ಮುಂದಿನ ವರ್ಷವೇ. ಮೊದಲಿಗೆ ಧ್ರುವ “ಪೊಗರು’ ಚಿತ್ರವನ್ನು ಮುಗಿಸಬೇಕು. ಈ ಕಡೆ ಮಹೇಶ್‌ ಸಹ “ಅಯೋಗ್ಯ’ ಚಿತ್ರವನ್ನು ಪೂರೈಸಬೇಕು. ಇವೆರೆಡೂ ಮುಗಿದ ನಂತರ, “ಮದಗಜ’ ಪ್ರಾರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next