Advertisement

ಕಾಂಗ್ರೆಸ್ ನಿಂದ ಜನಹಿತ,ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ : ಧ್ರುವನಾರಾಯಣ್ ವಾಗ್ದಾಳಿ

07:20 PM Aug 13, 2022 | Team Udayavani |

ಹುಣಸೂರು:  ದೇಶ ಬಲಿಷ್ಟವಾಗಲು ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಕಾರಣವಾಗಿದೆ. ಅಲ್ಲದೆ ದೇಶ ಇಂದು ಆಹಾರ, ಆರ್ಥಿಕ ಸ್ವಾವಲಂಬನೆಗೂ ಸಹ ಪೂರಕವಾಗಿರುವ ಕಾಂಗ್ರೆಸ್ ಪಕ್ಷದ ಸಮರ್ಥ ಪ್ರಧಾನ ಮಂತ್ರಿಗಳನ್ನು ಸ್ಮರಿಸುವುದು, ಆ ಬಗ್ಗೆ ಜನರಿಗೆ ತಿಳಿಸುವಂತೆ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಸೂಚಿಸಿದರು.

Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹುಣಸೂರು ತಾಲೂಕು ಕೆಂಗಗಣ್ಣಸ್ವಾಮಿ ಗದ್ದಿಗೆಯಲ್ಲಿ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಿದ್ದ  ಬೃಹತ್ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು ,ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್  ನಿರ್ದೇಶನದ ಮೇರೆಗೆ ರಾಜ್ಯಾದ್ಯಂತ ಪಾದಯಾತ್ರೆ ಮೂಲಕ ಕಾಂಗ್ರೆಸ್ ಈ ದೇಶಕ್ಕೆ ನೀಡಿರುವ ಕೊಡುಗೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

1885ರಲ್ಲಿ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಉದಯವಾಯಿತು. ಸುಧೀರ್ಘ 62 ವರ್ಷಗಳ ಹೋರಾಟ, ತ್ಯಾಗ, ಬಲಿದಾನದ  ಫಲವಾಗಿ ಸ್ವಾತಂತ್ರ್ಯ ದಕ್ಕಿದೆ.ಆ ನಂತರದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ರವರು ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಎಲ್ಲ ರಂಗಗಳ ಪ್ರಗತಿಗೆ ಕಾರಣರಾದರು. ಇಂದಿರಾಗಾಂಧಿ ಅವಧಿಯಲ್ಲಿ ನಡೆದ ಸಮಗ್ರ ಅಭಿವೃದ್ದಿ ಹಾಗೂ ಕ್ಷೀರಕ್ರಾಂತಿ, ಜಗಜೀವನರಾಂರ ಹಸಿರುಕ್ರಾಂತಿ, ರಾಜೀವಗಾಂಧಿಯವರ ಮಾಹಿತಿ ತಂತ್ರಜ್ಞಾನ ಕ್ರಾಂತಿ, ಮನಮೋಹನ್ ಸಿಂಗರ ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತರಿ ಯೋಜನೆ ಹೀಗೆ ಹಲವಾರು ಜನಹಿತ ಕಾರ್ಯಕ್ರಮಗಳ ಮೂಲಕ ದೇಶದ ಜನತೆಗೆ ಕಾಂಗ್ರೆಸ್ ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಬಿಜೆಪಿ ಒಂದೇ ಒಂದು ಜನಹಿತ ಕಾರ್ಯಕ್ರಮ ನೀಡಿಲ್ಲ. ಪ್ರಮುಖವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಅಧ್ಯಕ್ಷತೆವಹಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಗ್ರಾಮೀಣ ಭಾರತದ ಅಸ್ಮಿತೆಯನ್ನು ಉಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದರೆ, ಬಿಜೆಪಿಯು ಕೇವಲ 7 ವರ್ಷಗಳಲ್ಲಿ ಇತಿಹಾಸವನ್ನೇ ತಿರುಚಲು ಹೊರಟಿದೆ. ಸುಳ್ಳುಗಳನ್ನೇ ನಿಜವಾಗಿಸಲು ಹೊರಟಿದ್ದು, ಇದು ಭಾರತದ ಅಸ್ಮಿತೆಗೆ ತೊಂದರೆಯಾಗಲಿದೆ. ಇಂದಿರಾಗಾಂಧಿಯವರ ಅವಧಿಯಲ್ಲಿ ಹರ್‌ ಘರ್ ತಿರಂಗವನ್ನು ಹಿಂದೆಯೇ ಆಚರಿಸಲಾಗಿತ್ತು. ಭಾರತದ  ಬಾವುಟಕ್ಕೆ ಬೆಲೆ ಕಟ್ಟುಲು ಸಾಧ್ಯವಿಲ್ಲ. ಆದರೆ ಬಿಜೆಪಿಯು ಅದೇ ಹೆಸರಿನಲ್ಲಿ ಬಾವುಟವನ್ನೇ ಮಾರಾಟಕ್ಕಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿ, ದೇಶಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಯನ್ನು ಕಾರ್ಯಕರ್ತರು ಮನವರಿಕೆ ಮಾಡಿಕೊಡಿರೆಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಹರ್ಷವರ್ಧನ್‌ರಮೇಶ್, ಕಾಂಗ್ರೆಸ್ ಅಧ್ಯಕ್ಷ ದೇವರಾಜ್ ಮತ್ತಿತರರು ಮಾತನಾಡಿದರು.

Advertisement

ಈ ವೇಳೆ ಕಾಂಗ್ರೆಸ್ ವಿವಿಧ ಘಟಕಗಳ ಅಧ್ಯಕ್ಷರಾದ ನಾರಾಯಣ್, ರಮೇಶ್, ಮಂಜುಳ, ಗೀತಾ, ರೇಣುಕಾ,  ನಗರಸಭಾ ಅಧ್ಯಕ್ಷೆ ಸಮಿನಾ ಪರ್ವಿನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ವೇತಾಮಂಜುನಾಥ್, ಮುಖಂಡರಾದ ಹಂದನಹಳ್ಳಿಸೋಮಶೇಖರ್, ರಾಜುಶಿವರಾಜೇಗೌಡ, ದೇವರಾಜು, ಕೆಂಪೇಗೌಡ, ಸುರೇಶ್, ಅಜ್ಗರ್, ರವಿಪ್ರಸನ್ನ ಸೇರಿದಂತೆ ಅನೇಕರಿದ್ದರು.

ಜ್ವರದಲ್ಲೂ ಪಾದಯಾತ್ರೆ:

ಕಳೆದ ಮೂರು ದಿನಗಳಿಂದ ಜ್ವರ ಬಾಧೆಯಿಂದ ಬಳಲುತ್ತಿರುವ ಶಾಸಕ ಮಂಜುನಾಥರು ಧೃತಿಗೆಡದೆ ಕಾರ್ಯಕರ್ತರೊಂದಿಗೆ ಹುಮ್ಮಸ್ಸಿನಿಂದಲೇ ಹೆಜ್ಜೆ ಹಾಕಿ ಮಲ್ಲೇಗೌಡನಕೊಪ್ಪಲಿನಲ್ಲಿ ವಿಶ್ರಾಂತಿ ಪಡೆದು, ರತ್ನಪುರಿವರೆಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಮಾರ್ಗ ಮದ್ಯೆ ಹಳ್ಳಿಗಳಲ್ಲಿ ಸಂಭ್ರಮದಿಂದ ಸ್ವಾಗತಿಸಿದ್ದಲ್ಲದೆ ಪಾನಕ, ಮಜ್ಜಿಗೆ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next