Advertisement

ಗೊಂದಲಕ್ಕೆ ಅವಕಾಶ ನೀಡದಿರಲಿ ಧೋನಿ

10:28 AM Jan 22, 2020 | Team Udayavani |

ಭಾರತದ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿ ದಿನ ಸಮೀಪಿಸುತ್ತಿರುವಂತೆ ಕಾಣುತ್ತಿದೆ. ಬಿಸಿಸಿಐ ಇತ್ತೀಚೆಗೆ ನೂತನ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಧೋನಿಯನ್ನು ಕೈ ಬಿಡಲಾಗಿದೆ. ಕಳೆದ 6 ತಿಂಗಳಿಂದ ಅವರು ಅಂತಾರಾ ಷ್ಟ್ರೀಯ ಕ್ರಿಕೆಟ್‌ ಆಡದಿರುವುದು ಮತ್ತು ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಅವರ ಹೆಸರು ಕಾಣದಿರುವುದು ಅವರು ನಿವೃತ್ತಿಯಾಗಬಹುದೇ ಎನ್ನುವ ಚರ್ಚೆ ಹುಟ್ಟು ಹಾಕಿದ್ದು, ಕ್ರಿಕೆಟ್‌ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣ ಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

2019ರ ಜುಲೈನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಆಡಿದ ವಿಶ್ವ ಕಪ್‌ ಕ್ರಿಕೆಟ್‌ ಪಂದ್ಯವೇ ಧೋನಿಯ ಇದುವರೆಗಿನ ಕೊನೆಯ ಕ್ರಿಕೆಟ್‌ ಪಂದ್ಯ. ಆನಂತರ ಅವರು ಸೈನ್ಯದ ರೆಜಿಮೆಂಟ್‌ಗೆ ಹೋಗಿದ್ದು, ಈ ವರೆಗೆ ಭಾರತದಲ್ಲಿ ನಡೆದ ನ್ಯೂಜಿಲ್ಯಾಂಡ್‌, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳನ್ನು ತಪ್ಪಿಸಿ ಕೊಂಡಿದ್ದಾರೆ. ಜುಲೈ 2019 ರಿಂದ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದಿರು ವುದರಿಂದ ಅವರು ಗುತ್ತಿಗೆಗೆ ಅರ್ಹರಲ್ಲ ಎನ್ನುವ ನಿಯಮದ ಅಡಿಯಲ್ಲಿ 2019 ಅಕ್ಟೋಬರ್‌ನಿಂದ ಸೆಪ್ಟೆಂಬರ್‌ 2020ರವರೆಗಿನ ಅವಧಿಯ ಸಂಭಾ ವನೆ ಕಳೆದುಕೊಳ್ಳುತ್ತಾರೆ. ಗುತ್ತಿಗೆ ಅವಧಿಯಲ್ಲಿ ಕನಿಷ್ಠ 3 ಟೆಸ್ಟ್‌ ಇಲ್ಲವೇ 8 ಏಕದಿನ ಪಂದ್ಯಗಳನ್ನು ಆಡಿರಬೇಕು. ಟಿ-20 ಪಂದ್ಯಗಳು ಹೆಚ್ಚಿದ್ದಾಗ ನಿರ್ದಿಷ್ಟ ಪಂದ್ಯಗಳಲ್ಲಿ ಭಾಗವಹಿಸಬೇಕು.

ವಿಶ್ವಕಪ್‌ ಮೊದಲು ಏಷ್ಯಾ ಕಪ್‌ ನಡೆಯಲಿದ್ದು, ಧೋನಿ ಕೆಲವು ಪಂದ್ಯಗಳನ್ನು ಆಡಬಹುದು. ವಿಚಿತ್ರವೆಂದರೆ, ಧೋನಿ ತಮ್ಮನ್ನು ಗುತ್ತಿಗೆ ಪಟ್ಟಿಯಿಂದ ಹೊರಗಿಟ್ಟ ದಿನವೇ ಜಾರ್ಖಂಡ್‌ ರಣಜಿ ತಂಡದೊಡನೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಿರುವುದು ಕ್ರಿಕೆಟ್‌ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಅವರು ಐಪಿಎಲ್‌ 13ನೇ ಆವೃತ್ತಿಗೆ ಸಿದ್ಧತೆ ಆರಂಭಿಸಿದ್ದಾರೆ ಯೇ ಎನ್ನುವ ಸಂದೇಹ ಮೂಡುತ್ತಿದೆ. ಧೋನಿಗೆ ಟಿ-20 ವಿಶ್ವಕಪ್‌ನಲ್ಲಿ ಆಡ ಬೇಕೆಂಬ ಆಸೆಯಿದೆ ಎನ್ನಲಾಗುತ್ತದೆ. ಈ ನಿಟ್ಟಿನಲ್ಲಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಟಿ20ಯಲ್ಲಿ ಜಾಗ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಐಪಿಎಲ್‌ನಲ್ಲಿ ವಿಫ‌ಲವಾದರೆ, ಅದೇ ಪಂದ್ಯಾವಳಿಯೇ ಅವರ ಕ್ರಿಕೆಟ್‌ ಬದುಕಿನ ಕೊನೆಯಾಗಬಹುದೇನೋ?

ಏನೇ ಆದರೂ 15 ವರ್ಷಗಳ ಕಾಲ ಟೆಸ್ಟ್‌ ಕ್ರಿಕೆಟ್‌ ಆಡಿ 2014ರಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾದ ಧೋನಿಗೆ ಕ್ರಿಕೆಟ್‌ ಆಟದ ಮತ್ತು ಆಡಳಿತದ ನಿಯಮಾವಳಿ ತಿಳಿದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅವರು ಹಣಕಾಸು ವಿಚಾರದಲ್ಲಿ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಕೆಲವು ನಿಯಮಾವಳಿಗಳ ಹಿಂದಿನ ಸೂತ್ರಧಾರರೂ ಇರಬಹುದು. ಅವರು ತಮ್ಮ ಇರುವಿಕೆ (where abouts), ಚಟುವಟಿಕೆಗಳ ಬಗ್ಗೆ, ಯೋಜನೆ ಬಗ್ಗೆ, ತಮ್ಮ ಕ್ರಿಕೆಟ್‌ ಭವಿಷ್ಯದ ಬಗ್ಗೆ ಕ್ರಿಕೆಟ್‌ ಆಡಳಿತ ಮಂಡಳಿಯೊಡನೆ ಸಂಪರ್ಕದಲ್ಲಿ ಇರಲಿಲ್ಲವೇ? ಅಥವಾ ಇದು ನಿರ್ಲಕ್ಷ್ಯದ ಪರಮಾವಧಿಯೋ? ಅವರೇ ತಮ್ಮನ್ನು ಸಂಪರ್ಕಿಸಲಿ ಎನ್ನುವ ಧೋರಣೆಯೋ?

ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಆಂತರಿಕ ನಿಯಮಾವಳಿಯಲ್ಲಿ ಕ್ರಿಕೆಟಿಗರು ನಿಯಂತ್ರಣ ಮಂಡಳಿಯೊಡನೆ ಸದಾ ಸಂಪರ್ಕದಲ್ಲಿ ಇರ ಬೇಕು ಮತ್ತು ಮುಂದಿನ ದಿನಗಳಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯಾವ ಳಿಗಳಿಗೆ ಲಭ್ಯರಿರುವ ಬಗ್ಗೆ ಮಾಹಿತಿಯನ್ನು ನೀಡಬೇಕು ಎನ್ನುವ ಕಟ್ಟಳೆ ಇರುತ್ತದೆ. ಇಂಥ ಮಾಹಿತಿ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಆಟಗಾರರ ಆಯ್ಕೆಗೆ, ಅವರಿಗೆ ಕೋಚಿಂಗ್‌ ನೀಡುವ, ಅರೋಗ್ಯ ತಪಾಸಣೆ ಮಾಡುವ, ಪ್ರವಾಸ ನಿಗದಿಪಡಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸಹಾಯ ವಾಗುತ್ತದೆ. ಹಾಗೆಯೇ ಅವರ ಹಣಕಾಸು ಬಜೆಟ್‌ನ್ನು ನಿರೂಪಿಸಲು ನೆರವಾಗುತ್ತದೆ. ಮಹೇಂದ್ರ ಸಿಂಗ್‌ ಧೋನಿಯವರು ಕಳೆದ ಆರು ತಿಂಗಳು ಕ್ರಿಕೆಟ್‌ ನಿಯಂತ್ರಣ ಮಂಡಳಿಯನ್ನು ಸಂಪರ್ಕಿಸಲಿಲ್ಲ ಎನ್ನುವುದಕ್ಕೆ ಹಲವು ವಿಶ್ಲೇಷಣೆ ಮಾಡಲಾಗುತ್ತಿದೆ. ಮೊದಲಿನಿಂದಲೂ ಧೋನಿ ಇದೇ ಧೋರಣೆಯನ್ನೇ ತೋರಿಸುತ್ತಾ ಬಂದಿದ್ದಾರೆ.

Advertisement

ಯಾವುದಾದರೂ ನಿರ್ದಿಷ್ಟ ಮಾದರಿ ಕ್ರಿಕೆಟ್‌ ಪಂದ್ಯಗಳಿಂದ ನಿವೃತ್ತಿಯಾಗುವ ಇಚ್ಛೆ ಇದ್ದರೆ ಅಥವಾ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತರಾಗುವ ಯೋಚನೆ ಇದ್ದರೆ ಅದನ್ನು ಬಿಚ್ಚು ಮನಸ್ಸಿನಿಂದ ಮತ್ತು ನೇರವಾಗಿ (ಎರಡು ದಶಕಗಳ ಕಾಲ ಕ್ರಿಕೆಟ್‌ ಅಡಲು ಅವಕಾಶ ನೀಡಿದ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ) ಹೇಳುವ ಸೌಜನ್ಯ ತೋರಿಸಬೇಕಿತ್ತು. ಕ್ರಿಕೆಟ್‌ ನಿಯಂತ್ರಣ ಮಂಡಳಿ ಒಂದು ಬಲ ಶಾಲಿ ಸಂಸ್ಥೆಯಾಗಿದ್ದು, ಎಷ್ಟೇ ದೊಡ್ಡವರಾಗಿರಲಿ, ಅನಿವಾರ್ಯತೆ ಎನಿ ಸಿರಲಿ, ಅದು ಒಬ್ಬರ ಎದುರು ಮಂಡಿ ಊರುವ ಮಟ್ಟಕ್ಕೆ ಇಳಿಯುವುದನ್ನು ನಿರೀಕ್ಷಿಸಲಾಗದು. ಅದಕ್ಕೂ ಮೇಲಾಗಿ ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಪ್ರತಿಭೆಗಳು ಸಾಧನೆಯ ಬ್ಯಾಗ್‌ ಹೊತ್ತು ಸದಾ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಬಾಗಿಲು ತಟ್ಟುತ್ತಿರುವಾಗ, ಮಂಡಳಿ ಯಾರಿಗೂ ಕಾಯು ವುದಿಲ್ಲ. ತನ್ನ ನಿಯಮಾವಳಿ ಪ್ರಕಾರ ಅದು ಕ್ರಮ ತೆಗೆದುಕೊಂಡಿದೆ.

ಕ್ರಿಕೆಟ್‌ನಲ್ಲಿ ಕೆಲವರನ್ನು ಅನಿವಾರ್ಯ, ಅವರಿಂದಲೇ ಬೆಳಗಾಗುತ್ತದೆ, ಅವರಿಲ್ಲದೇ ನಡೆಯದು ಎಂದು ದಶಕಗಳಿಂದ ಪಾಲಿಸಿಕೊಂಡು ಬರುತ್ತಿ ರುವ ಅಲಿಖೀತ ನಿಯಮಾವಳಿ ಇಂಥ ಸಮಸ್ಯೆಗಳಿಗೆ ಮೂಲ ಎಂದು ವಿಶ್ಲೇಷಕರು ಭಾವಿಸುತ್ತಾರೆ. ಪ್ರಚಲಿತ ಸಾಧನೆ ಮತ್ತು ಶಿಸ್ತು ಮಾನದಂಡ ವಾಗಿರಬೇಕೇ ವಿನಹ ಹಳೆಯ ಸಾಧನೆ ಮತ್ತು ಜನಪ್ರಿಯತೆ ಅಳತೆಗೋಲಾ ಗಿರಬಾರದು ಎನ್ನುವುದು ಇಂದಿನ ಚಿಂತನೆ. ಹಾಗೆಯೇ ಹಣ, ಹೆಸರು, ಬದುಕು ನೀಡುವ, ಉಜ್ವಲ ಭವಿಷ್ಯ ತೋರಿಸುವ ಮತ್ತು ಸಮಾಜದಲ್ಲಿ ಸ್ಟ್ಯಾಟಸ್‌ ನೀಡುವ ಕ್ರಿಕೆಟ್‌ ಆಟ ಕೆಲವರ ಸೊತ್ತಾಗದೇ, ಅವಕಾಶಕ್ಕಾಗಿ ಹಾತೊರೆಯತ್ತಿರುವವರಿಗೂ ನಿಲುಕಬೇಕು. ಭಾರತದ ಕ್ರಿಕೆಟ್‌ ಇತಿಹಾಸ ವನ್ನು ಮತ್ತು ಸದ್ಯದ ಚಿತ್ರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಇದು ಕೆಲವರ ಖಾಯಂ ಒಡ್ಡೋಲಗವಾಗಿರುವಂತೆ ಕಾಣುತ್ತದೆ. ಕಾಟಾಚಾರಕ್ಕೆ ಎನ್ನುವಂತೆ ಹೊಸಬರು ಕಾಣುತ್ತಾರೆ. ರಾಜಕಾರಣದಂತೆ, ಕ್ರಿಕೆಟ್‌ನಲ್ಲೂ ಅನೇಕರು ತಾವಾಗಿಯೇ ನಿವೃತ್ತರಾಗುವುದಿಲ್ಲ. ಸಾಧನೆಯ ಮಾನದಂಡ ದಲ್ಲಿ ಕೈಬಿಟ್ಟರೂ, ತಮಗೆ ಅನ್ಯಾಯವಾಗಿದೆ, ತಮ್ಮಲ್ಲಿ ಇನ್ನೂ ಕೆಲವು ವರ್ಷ ದ ಕ್ರಿಕೆಟ್‌ ಇತ್ತು ಎಂದು ಗೊಣಗುತ್ತಾರೆ. ನಿವೃತ್ತರಾದ ಬಹುತೇಕರು ಪರೋಕ್ಷ ಒತ್ತಡದಿಂದ ಹೊರಹೋದವರೇ.

ಗವಾಸ್ಕರ್‌ ಮತ್ತು ತೆಂಡೂಲ್ಕರ್‌ ಕೂಡಾ ಸ್ವಲ್ಪ ಇದೇ ರೀತಿಯ ಗೊಂದಲ ದಲ್ಲಿ ಸಿಲುಕಿಸಿದ್ದರು. ತೆಂಡೂಲ್ಕರ್‌ ವಿಚಾರದಲ್ಲಿ ಕ್ರಿಕೆಟ್‌ ಪರಿಣತರು, ನಿವೃತ್ತ ಕ್ರಿಕೆಟಿಗರು ತೀಕ್ಷ¡ವಾಗಿ ಪ್ರತಿಕ್ರಿಯಿಸಿದ್ದರು. ಕ್ರಿಕೆಟ್‌ ನಿಯಂತ್ರಣ ಮಂಡಳಿ ನಿವೃತಿ ನಿಟ್ಟಿನಲ್ಲಿ ತೆಂಡೂಲ್ಕರ್‌ರನ್ನು ಪರೋಕ್ಷವಾಗಿ ಕೇಳುವ ಯೋಚನೆ ಮಾಡಿತ್ತಂತೆ. ಕ್ರಿಕೆಟ್‌ನಲ್ಲಿ ಕೆಲವು ಹಿರಿಯ ಮತ್ತು ಜನಪ್ರಿಯ ಆಟಗಾರರು ಡಿಕ್ಟೇಟ್‌ ಮಾಡುತ್ತಾರೆ ಎನ್ನುವ ಆರೋಪ ಪಿಸು ಮಾತಿನಲ್ಲಿ ಕೇಳುತ್ತಿರುತ್ತದೆ. ಅದರ ಸತ್ಯಾಸತ್ಯತೆ ಏನೇ ಇರಲಿ ಈ ನಿಟ್ಟಿನಲ್ಲಿ ಸ್ವಲ್ಪ ಗೊಂದಲ ಇರುವುದು ನಿಜ. ಧೋನಿ ನಿವೃತ್ತಿಯ ಹೊಸ್ತಿಲಲ್ಲಿ ಈ ರೀತಿಯ ಗೊಂದಲಕ್ಕೆ ಅವಕಾಶ ನೀಡಬಾರದು.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next