Advertisement

Dharwad ಮಹಿಳೆ ಕೊಲೆ ಪ್ರಕರಣ; 24 ಗಂಟೆಯೊಳಗೆ ಆರೋಪಿ ಬಂಧನ

10:36 PM Jun 11, 2023 | Team Udayavani |

ಧಾರವಾಡ : ಕೆಲ ದಿನಗಳ ಹಿಂದೆಯಷ್ಟೇ ಕೊಲೆಯಾಗಿದ್ದ ಗೋವನಕೊಪ್ಪ ಗ್ರಾಮದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿರುವ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಕೊಲೆ ಮಾಡಿದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ರೂಪಾ ಸವದತ್ತಿ (43) ಹತ್ಯೆಗೀಡಾದ ಮಹಿಳೆ. ಗುರುವಾರ ಮನೆಯಿಂದ ಹೊರಗಡೆ ಹೋಗಿದ್ದ ರೂಪಾ, ರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಅವರಿಗಾಗಿ ಮನೆಯವರು ಶೋಧ ಕೂಡ ನಡೆಸಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ರೂಪಾ ಅವರ ಶವ ಗೋವನಕೊಪ್ಪ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದೆ. ಈ ಪ್ರಕರಣ ಬೇಧಿಸಿರುವ ಪೊಲೀಸರು, ಶನಿವಾರವೇ ಮಹಿಳೆಯ ದೂರದ ಸಂಬಂ‌ಧಿ ಹಾಗೂ ಅದೇ ಗ್ರಾಮದ
ರಾಕೇಶ ಜಗನ್ನಾಥ್ ಹೊಂಗಲ್‌ನನ್ನು (38) ಬಂಧಿಸಿದ್ದಾರೆ. ಎಸ್‌ಪಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎನ್.ನಾಗರಾಜ ನೇತೃತ್ವದಲ್ಲಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಮಂಜುನಾಥ ಕುಸಗಲ್, ಪಿಎಸ್‌ಐ ನೇತ್ರಾವತಿ ಪಾಟೀಲ ಒಳಗೊಂಡ ತನಿಖಾ ತಂಡವು, ಈ ಕೊಲೆ ಆರೋಪಿಯನ್ನು ಪತ್ತೆ ಮಾಡಿದೆ.

ಪತ್ತೆ ಮಾಡಿದ್ದು ಹೇಗೆ?
ರೂಪಾ ಹಾಗೂ ರಾಕೇಶ ಮಧ್ಯೆ ಅನೈತಿಕ ಸಂಬಂಧವಿತ್ತು. ಇದರ ಮಧ್ಯೆ ಕೆಲ ವಿಷಯವಾಗಿ ಇಬ್ಬರಲ್ಲೂ
ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ರೂಪಾಳನ್ನು ಗ್ರಾಮದ ಹೊರವಲಯದಲ್ಲಿ ಕರೆಸಿಕೊಂಡು, ಕಲ್ಲು ಎತ್ತು ಹಾಕಿ ಹತ್ಯೆ ಮಾಡಿದ್ದ. ಇದಲ್ಲದೇ ಮರುದಿನ ರೂಪಾಳ ಪತಿಯೊಂದಿಗೆ ಪೊಲೀಸ್ ಠಾಣೆಗೆ ಬಂದು ರೂಪಾ ಕಾಣೆ ಆಗಿರುವ ಬಗ್ಗೆ ದೂರು ನೀಡಿದ್ದ. ಇದಲ್ಲದೇ ಅವಳ ಶೋಧ ಕಾರ್ಯದ ಸಮಯದಲ್ಲಿ ಹತ್ಯೆ ಮಾರ್ಗವಾಗಿ ಹೋಗಿ, ಮೊದಲು ತಾನೇ ಶವ ಪತ್ತೆ ಮಾಡಿದ್ದ. ಈ ಹಿನ್ನಲೆಯಲ್ಲಿ ಈತನ ಬಗ್ಗೆ ಸಂಶಯಗೊಂಡಿದ್ದ ಪೊಲೀಸ ತನಿಖಾ ತಂಡವು, ಆತನ ಮೊಬೈಲ್ ನಂಬರ್ ಮೂಲಕ ಮಾಹಿತಿ ಜಾಲಾಡಿದ್ದಾರೆ. ಅದರ ಅನ್ವಯ ಹತ್ಯೆ ದಿನದಂದು ರಾಕೇಶನ ಮೊಬಲ್ ನಂಬರ್ ಹತ್ಯೆಯಾದ ಜಾಗದಲ್ಲಿ ಇದ್ದ ಬಗ್ಗೆ ಸುಳಿವು ಸಿಕ್ಕಿದೆ. ಈ ಸುಳಿವು ಬೆನ್ನತ್ತಿ ಪೊಲೀಸರು ರಾಕೇಶನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಅನೈತಿಕ ಸಂಬಂಧ ಹಾಗೂ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next