Advertisement

Dharwad;ವೀರಶೈವ ಮಹಾಸಭೆಗೆ ಸದ್ಯಕ್ಕಿಲ್ಲ ಆಡಳಿತಾತ್ಮಕ ಅಧಿಕಾರ; ಜಿಎಂಎಫ್‌ಸಿ ನ್ಯಾಯಾಲಯ ಆದೇಶ

04:36 PM Sep 06, 2024 | Team Udayavani |

ಧಾರವಾಡ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕದ ಚುನಾವಣೆಯಲ್ಲಿ ಅಧ್ಯಕ್ಷರು ಸೇರಿದಂತೆ ನೂತನವಾಗಿ ಆಯ್ಕೆಯಾಗಿರುವ 31 ಜನರು ಯಾವುದೇ ಆಡಳಿತಾತ್ಮಕ ಚಟುವಟಿಕೆ ನಡೆಸದಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದ್ದು, ಇದು ನನಗೆ ಕಾನೂನಿನಲ್ಲಿ ಸಿಕ್ಕ ಮೊದಲ ಜಯ ಎಂದು ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದ್ದಾರೆ.

Advertisement

ಶನಿವಾರ (ಸೆ.06) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ 700 ಕ್ಕೂ ಅಧಿಕ ಮತದಾರರನ್ನು ಅಕ್ರಮವಾಗಿ ನೋಂದಾಯಿಸಿಕೊಂಡು ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿತ್ತು. ಇದರ ವಿರುದ್ಧ ನಾನು ಅಂದಿನಿಂದಲೂ ಹೋರಾಟ ಮಾಡುತ್ತಿದ್ದೇನೆ. ಆದರೆ ಅಂದಿನ ಚುನಾವಣಾಧಿಕಾರಿಗಳು ನನ್ನ ಮಾತಿಗೆ ಬೆಲೆ ಕೊಡಲಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಅವರುಗಳು ನೇರವಾಗಿ ತಮ್ಮ ಖಾತೆಗಳಿಂದ ಲಕ್ಷಾಂತರ ರೂ.‌ ಹಣ ತುಂಬಿ ನಿಯಮ ಬಾಹಿರವಾಗಿ ತಮಗೆ ಬೇಕಾದವರನ್ನು ವೀರಶೈವ ಮಹಾಸಭೆ ಸದಸ್ಯರನ್ನಾಗಿ ಮಾಡಿಕೊಂಡು ಚುನಾವಣೆಯಲ್ಲಿ ಅಕ್ರಮ ಎಸಗಿದ್ದರು. ಇದನ್ನು ನ್ಯಾಯಾಲಯದಲ್ಲಿ ನಾನು ಪ್ರಶ್ನಿಸಿದ್ದೆ, ಇದೀಗ ನ್ಯಾಯಾಲಯ ನೂತನವಾಗಿ ಆಯ್ಕೆಯಾಗಿರುವ ಆಡಳಿತ ಮಂಡಳಿಗೆ ಪ್ರಕರಣ ಇತ್ಯರ್ಥವಾಗುವವರೆಗೂ ಯಾವುದೇ ರೀತಿಯ ಆಡಳಿತ ಚಟುವಟಿಕೆ ನಡೆಸದಂತೆ ತಡೆ ನೀಡಿದೆ ಎಂದು ಹುಣಸಿಮರದ ಹೇಳಿದರು.

ಬೆಲ್ಲದ-ವಿನಯ್ ವಿರುದ್ಧ ವಾಗ್ದಾಳಿ

ವೀರಶೈವ ಮಹಾಸಭೆ ಅಧಿಕಾರವನ್ನು ಜಿಲ್ಲೆಯ ರಾಜಕೀಯ ಮುಖಂಡರಾದ ವಿನಯ್ ಕುಲಕರ್ಣಿ ಮತ್ತು ಅರವಿಂದ ಬೆಲ್ಲದ ಇಬ್ಬರು ಕಬಳಿಸುವ ಹುನ್ನಾರ ಮಾಡಿದ್ದಾರೆ. ತಮ್ಮ ಸ್ವಂತ ಹಣ ಖರ್ಚು ಮಾಡಿ ತಮ್ಮ ಸಂಬಂಧಿಗಳಿಗೆ, ಲಿಂಗಾಯತರಲ್ಲದವರಿಗೆ ಮಹಾಸಭೆ ಸದಸ್ಯತ್ವ ಕೊಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರು ಪಡೆಸಿದ್ದೇನೆ. ಈ ಇಬ್ಬರ ಸಾಕಷ್ಟು ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಹೊರ ತೆಗೆಯುತ್ತೇನೆ ಎಂದು ಗುರುರಾಜ್ ತೀವ್ರ ವಾಗ್ದಾಳಿ ನಡೆಸಿದರು.

Advertisement

ತಾಂತ್ರಿಕವಾಗಿ ಈಗಲೂ ಧಾರವಾಡ ಜಿಲ್ಲಾ ವೀರಶೈವ-ಲಿಂಗಾಯತ ಮಹಾಸಭಾಕ್ಕೆ ನಾನೇ ಅಧ್ಯಕ್ಷನಾಗಿದ್ದೇನೆ. ಒಂದೆಡೆ ನ್ಯಾಯಾಲಯ ನೂತನ ಆಡಳಿತ ಮಂಡಳಿಯ ಕಾರ್ಯಚಟುವಟಿಕೆಗಳಿಗೆ ತಡೆ ನೀಡಿದೆ. ಇನ್ನೊಂದೆಡೆ ಮಹಸಾಭೆಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯುವವರೆಗೂ ಸಂಘದ ನಿಯಮಗಳ ಅನ್ವಯ ನಾನೇ ಅಧ್ಯಕ್ಷನಾಗಿದ್ದೇನೆ. ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಹಣಸಿಮರದ ಹೇಳಿದರು.

ಏನಿದು ವಿವಾದ?

ಧಾರವಾಡ ಜಿಲ್ಲಾ ವೀರಶೈವ-ಲಿಂಗಾಯತ ಮಹಾಸಭೆ ಐದು ವರ್ಷದ ಆಡಳಿತ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಜುಲೈ 21, 2024 ರಂದು ಚುನಾವಣೆ ನಡೆದಿತ್ತು. 2800 ಮತದಾರರನ್ನು ಒಳಗೊಂಡಿದ್ದ ಮಹಾಸಭೆಯ ಅಧ್ಯಕ್ಷ ಸೇರಿದಂತೆ 31 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 700 ಕ್ಕೂ ಅಧಿಕ ಮತದಾರರಿಗೆ ನೀಡಿದ ಮಹಾಸಭೆ ಸದಸ್ಯತ್ವ ಅಕ್ರಮವಾಗಿದೆ ಎಂಬ ಕೂಗು ಕೇಳಿ ಬಂದಿತ್ತು. ಈ ಬಗ್ಗೆ ಚುನಾವಣೆಗೂ ಮುಂಚೆಯೇ ಆರೋಪ ಮಾಡಿದ್ದ ಅಧ್ಯಕ್ಷ ಸ್ಥಾನದ ಸ್ಪರ್ಧಿ ಗುರುರಾಜ್ ಹುಣಸಿಮರದ, ಈ ಅಕ್ರಮದ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಅವರ ಮನವಿಯನ್ನು ಪುರಸ್ಕರಿಸಿದ ಜೆಎಂಎಫ್‌ಸಿ ನ್ಯಾಯಾಲಯ ಸದ್ಯಕ್ಕೆ ಆಯ್ಕೆಯಾಗಿರುವ ಧಾರವಾಡ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಘಟಕ ಯಾವುದೇ ರೀತಿಯ ಆಡಳಿತ ಚಟುವಟಿಕೆ ನಡೆಸದಂತೆ ಆದೇಶಿಸಿದೆ. ಮಹಾಸಭೆಯ ನಿಯಮಾವಳಿಗಳ ಅನ್ವಯ ಬರುವ ಅಕ್ಟೋಬರ್ ತಿಂಗಳಿನಿಂದ ಮುಂದಿನ ಐದು ವರ್ಷಗಳಿಗೆ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಬೇಕಿತ್ತು. ಇದೀಗ ನ್ಯಾಯಾಲಯ ಇದಕ್ಕೆ ತಡೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next