Advertisement

ನಾಳೆಯಿಂದ ಧಾರವಾಡ ಕೃಷಿ ಮೇಳ

11:07 AM Jan 17, 2020 | Suhan S |

ಧಾರವಾಡ: 2019ನೇ ಸಾಲಿನಲ್ಲಿ ನಡೆಯಬೇಕಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಜ.18ರಿಂದ 20ರವರೆಗೆ ನಡೆಯಲಿದೆ ಎಂದು ಕೃಷಿ ವಿವಿ ಕುಲಪತಿ ಡಾ| ಮಹಾದೇವ ಚೆಟ್ಟಿ ಹೇಳಿದರು.

Advertisement

ಕೃಷಿ ವಿವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳಿನಲ್ಲಿ ಕೃಷಿ ಮೇಳ ಆಯೋಜಿಸ ಲಾಗುತ್ತಿತ್ತು. ಆದರೆ ಕಳೆದ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಕಾಣಿಸಿಕೊಂಡಿದ್ದರಿಂದ ಮೇಳ ಮುಂದೂಡಲಾಗಿತ್ತು. ಇದೀಗ “ಪ್ರತಿ ಹನಿ -ಸಮೃದ್ಧ ತೆನಿ’ ಎನ್ನುವ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿತ್ತಿದೆ.  ಈ ವರ್ಷ 16 ಲಕ್ಷಕ್ಕೂ ಅಧಿಕ ಜನ ಕೃಷಿಮೇಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿರುವುದಾಗಿ ಹೇಳಿದರು. 4 ದಿನಗಳ ಬದಲು ಈ ವರ್ಷ 3ದಿನ ಮಾತ್ರ ಕೃಷಿಮೇಳ ನಡೆಯಲಿದ್ದು, ಬೀಜಮೇಳ ರದ್ದು ಮಾಡಲಾಗಿದೆ. ಮೇಳದಲ್ಲಿ 559 ವಿವಿಧ ಮಳಿಗೆಗಳು, ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಹಾಗೂ ಯುವ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಮೇಳದ ಮೊದಲನೇ ದಿನವಾದ ಜ.18ರಂದು ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಿಗ್ಗೆ 9:30ಗಂಟೆಗೆ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಾಗುವುದು. ಕೃಷಿಮೇಳವನ್ನು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಬೆಳಿಗ್ಗೆ 11:30ಗಂಟೆಗೆ ವಿದ್ಯುಕ್ತವಾಗಿ ಉದ್ಘಾಟಿಸುವರು. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ, ಗೃಹ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವರು ಎಂದರು.

106 ಜನರಿಗೆ ಶ್ರೇಷ್ಠ ಕೃಷಿಕ-ಕೃಷಿ ಮಹಿಳೆ ಪ್ರಶಸ್ತಿ: ಇನ್ನು ಒಟ್ಟು ಕೃಷಿ ವಿವಿ ವ್ಯಾಪ್ತಿಯಲ್ಲಿನ ಒಟ್ಟು 7 ಜಿಲ್ಲೆಗಳ ರೈತ ಮತ್ತು ರೈತ ಮಹಿಳೆಯರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಚಚಡಿ ಗ್ರಾಮದ ನಾಗರಾಜ ದೇಸಾಯಿ ಶ್ರೇಷ್ಠ ಕೃಷಿಕ ಹಾಗೂ ಗೋಕಾಕ ತಾಲೂಕಿನ ಸುಲದಳ್ಳಿ ಮಹಾದೇವಿ ತೋಟಗಿ ಅವರಿಗೆ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಲಭಿಸಿದೆ. ಧಾರವಾಡ ಜಿಲ್ಲೆಯ ಕಳಸ ಗ್ರಾಮದ ಮೃತ್ಯುಂಜಯ ನಾಗಶೆಟ್ಟಿ ಶ್ರೇಷ್ಠ ಕೃಷಿಕ ಹಾಗೂ ಮರೇವಾಡ ಗ್ರಾಮದ ಅನುರಾಧಾ ಅಮ್ಮಿನಭಾವಿ ಅವರು ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಮೂಡುರು ಗ್ರಾಮದ ಚಂದ್ರಪ್ಪ ತಿಪ್ಪಗೊಂಡರ ಶ್ರೇಷ್ಠ ಕೃಷಿಕ, ಹಿರೇಕೇರೂರು ತಾಲೂಕಿನ ಮಾವಿನತೋಪು ಗ್ರಾಮದ ಸೌಭಾಗ್ಯ ಬಸನಗೌಡರ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿಯ ಹೇಮಗಿರೀಶ ಹಾವಿನಾಳ ಶ್ರೇಷ್ಠ ಕೃಷಿಕ, ರೋಣ ತಾಲೂಕಿನ ಜೀಗೇರಿಯ ಶಾರದಾ ರಾಠೊಡ ಅವರು ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಅರವಿಂದ ಕೊಪ್ಪ ಅವರು ಶ್ರೇಷ್ಠ ಕೃಷಿಕ ಹಾಗೂ ತಾಜಾಪೂರದ ಹಸೀನಾಬೇಗಂ ಮೋಕಾಶಿ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರೇಗುದ್ದಿಯ ಗುರುಪಾದಸ್ವಾಮಿ ಅಡವಿಸ್ವಾಮಿಮಠ ಅವರು ಶ್ರೇಷ್ಠ ಕೃಷಿಕ ಹಾಗೂ ಮುಧೋಳ ತಾಲೂಕಿನ ರಂಜಣಗಿಯ ಲಕ್ಷ್ಮಿ ಹೊಸೂರ ಅವರು ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ನೇರೂರು ಗ್ರಾಮದ ಬಸವರಾಜ ಈರಪ್ಪಗೌಡ ಕಲಕೊಪ್ಪ ಅವರು ಶ್ರೇಷ್ಠ ಕೃಷಿಕ ಹಾಗೂ ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮದ ರಾಜೇಶ್ವರಿ ಹೆಗಡೆ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಇನ್ನುಳಿದಂತೆ ತಾಲೂಕುವಾರು 49 ಜನ ಶ್ರೇಷ್ಠ ಕೃಷಿಕ ಮತ್ತು 49 ಜನ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕುಲಪತಿ ಡಾ| ಚೆಟ್ಟಿ ತಿಳಿಸಿದರು. ಎರಡನೆಯ ದಿನವಾದ ಜ.19ರಂದು ಬೆಳಿಗ್ಗೆ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಕಬ್ಬು ಬೆಳೆಯ ಅ ಧಿಕ ಉತ್ಪಾದನಾ ತಂತ್ರಜ್ಞಾನ ಕಾರ್ಯಾಗಾರ ಏರ್ಪಡಿಸಲಾಗಿದೆ. 11:00 ಗಂಟೆಗೆ ಕೃಷಿ ಮೇಳ ವೇದಿಕೆಯಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ತಾಲೂಕು ಮಟ್ಟದ ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2:00 ಗಂಟೆಗೆ ಕೌಶಲ್ಯಾಧಾರಿತ ಗ್ರಾಮೀಣ ವಿಜ್ಞಾನ ತಾಂತ್ರಿಕತೆಗಳು ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಧ್ಯಾಹ್ನ 3:00ಗಂಟೆಗೆ ಕೃಷಿಮೇಳ ವೇದಿಕೆಯಲ್ಲಿ ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಗಳ ರೈತರಿಗೆ ತಾಲೂಕು ಮಟ್ಟದ ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೈಗೊಳ್ಳಲಾಗುವುದು. ನಾಡೋಜ ಚನ್ನವೀರ ಕಣವಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕೃಷಿ ಲೇಖನ ಪ್ರಶಸ್ತಿ ಪ್ರದಾನ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.

ರೈತ ಮೂರನೇ ದಿನವಾದ ಜ.20ರಂದು ಬೆಳಗ್ಗೆ 11:00ಗಂಟೆಗೆ ಕೃಷಿ ಮೇಳ ವೇದಿಕೆಯಲ್ಲಿ ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳ ರೈತರಿಗೆ ತಾಲೂಕು ಮಟ್ಟದ ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಮಧ್ಯಾಹ್ನ 3:00 ಗಂಟೆಗೆ ಕೃಷಿಮೇಳ ವೇದಿಕೆಯಲ್ಲಿ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಹಾಗೂ ಕೃಷಿಮೇಳದ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಕೃಷಿ ವಸ್ತು ಪ್ರದರ್ಶನದಲ್ಲಿ 130 ಹೈಟೆಕ್‌ ಮಳಿಗೆಗಳು, 300 ಸಾಮಾನ್ಯ ಮಳಿಗೆಗಳು, 16 ಯಂತ್ರೋಪಕರಣ ಮಳಿಗೆಗಳು, 23 ಆಹಾರ ಮಳಿಗೆಗಳು, 72 ಜಾನುವಾರು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಇಸ್ರೇಲ್‌ ಮಾದರಿ ಕೃಷಿ, ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ,ಕೃಷಿ ಪರಿಕರಗಳು, ಯಂತ್ರೋಪಕರಣಗಳು, ಹೈಟೆಕ್‌- ತೋಟಗಾರಿಕೆ, ಸಮಗ್ರ ಕೃಷಿ ಪದ್ಧತಿ, ಗೃಹ ವಿಜ್ಞಾನ, ಗುಡಿ ಕೈಗಾರಿಕೆಗಳು, ಬೇಕರಿ ಪದಾರ್ಥಗಳು, ಔಷಧಿಧೀಯ ಹಾಗೂ ಸುಗಂಧ ದ್ರವ್ಯ ಸಸ್ಯಗಳು, ಜಾನುವಾರುಗಳು ಹಾಗೂ ಇನ್ನಿತರೆ ಕೃಷಿ ಸಂಬಂಧಿತ ವಿಷಯಗಳ ಕುರಿತು ವಸ್ತು ಪ್ರದರ್ಶನ ಸೇರಿದಂತೆ ರೈತರ ಅನುಕೂಲಕ್ಕಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಎಂದು ಕುಲಪತಿ ಡಾ| ಮಹಾದೇವ ಬಿ.ಚೆಟ್ಟಿ ವಿವರಿಸಿದರು.

ವಿಸ್ತರಣಾ ನಿರ್ದೇಶಕ ಡಾ| ರಮೇಶ ಬಾಬು, ಶಿಕ್ಷಣ ನಿರ್ದೇಶಕ ಡಾ| ಎಸ್‌.ಬಿ. ಹೊಸಮನಿ, ಸಂಶೋಧನಾ ನಿರ್ದೇಶಕ ಡಾ| ಪಿ.ಎಲ್‌.ಪಾಟೀಲ ಸೇರಿದಂತೆ ವಿಶ್ವವಿದ್ಯಾಲಯದ ಹಿರಿಯ ಹಿರಿಯ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿದ್ದರು

ಕೃಷಿಮೇಳದಲ್ಲಿ ಏನೇನಿದೆ? :  ಕೃಷಿಮೇಳ ಉದ್ಘಾಟನೆ ನಂತರ ಮಧ್ಯಾಹ್ನ 2:00ಗಂಟೆಗೆ ಕೃಷಿಮೇಳ ವೇದಿಕೆಯಲ್ಲಿ ನೀರು, ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆ ಹೆಚ್ಚಿಸಲು ಇಸ್ರೇಲ್‌ ಆಧಾರಿತ ಕೃಷಿ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಧ್ಯಾಹ್ನ 3:00ಗಂಟೆ‌ಗೆ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಹತ್ತಿಯಲ್ಲಿ ಗುಲಾಬಿ ಬಣ್ಣದ ಕಾಯಿಕೊರಕ ಹಾಗೂ ಗೋವಿನ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next