Advertisement

ಸಿಎಂ ಹುದ್ದೆ ತಪ್ಪಿದರೂ ಸಿಹಿ ಬೆಲ್ಲದ ಆಸೆ

01:13 PM Jul 30, 2021 | Team Udayavani |

ವರದಿ: ಡಾ| ಬಸವರಾಜ ಹೊಂಗಲ್‌

Advertisement

ಧಾರವಾಡ: ಹುಬ್ಬಳ್ಳಿ ಪಡಸಾಲೆಯಲ್ಲಿ ರಾಜಕೀಯ ಮಾಡಿಕೊಂಡು ಬೆಳೆದ ಯುವ ನಾಯಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ದೊರೆಯಾದ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ ಶೆಟ್ಟರ ಸಚಿವ ಸ್ಥಾನ ತ್ಯಜಿಸಿದ್ದು, ಇದೀಗ ಧಾರವಾಡ ಜಿಲ್ಲೆಯ ಕೋಟಾದಡಿ ಸಚಿವ ಸ್ಥಾನಕ್ಕೆ ಭಾರಿ ಪೈಪೋಟಿ ಮತ್ತು ಲೆಕ್ಕಾಚಾರಗಳು ಆರಂಭವಾಗಿವೆ.

ಹೌದು. ಮಂತ್ರಿ ಸ್ಥಾನ ನಿಕ್ಕಿ ಎಂಬ ವಿಶ್ವಾಸದಲ್ಲಿರುವ ಮುಖ್ಯಮಂತ್ರಿ ಸ್ಥಾನವೇ ಕೈ ತಪ್ಪಿದ ಅರವಿಂದ ಬೆಲ್ಲದ, ನಾನು ಸಿಎಂ ಅಭ್ಯರ್ಥಿಯಲ್ಲ, ಸಚಿವ ಸ್ಥಾನಾಕಾಂಕ್ಷಿ ಹೀಗಾಗಿ ನನಗೆ ಸಚಿವ ಸ್ಥಾನ ನೀಡಬೇಕು ಎನ್ನುತ್ತಿರುವ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಷ್ಯ ಹಾಗೂ ಅದೇ ಉಪಪಂಗಡಕ್ಕೆ (ಲಿಂಗಾಯತ-ಸಾದರ) ಸೇರಿದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ವಯಸ್ಸಿನಲ್ಲಿ ಎಲ್ಲರಿಗಿಂತಲೂ ನಾನು ಹಿರಿಯ, ಇನ್ನೇನು ನನಗೆ ಮುಂದೆ ಅವಕಾಶವಿಲ್ಲ, ಕೊಡುವುದಾದರೆ ಇದೊಮ್ಮೆ ಸಚಿವ ಸ್ಥಾನ ಕೊಟ್ಟು ಬಿಡಿ ಎಂದು ಸದ್ದಿಲ್ಲದೇ ಪಕ್ಷದ ವರಿಷ್ಠರ ಗಮನ ಸೆಳೆಯುತ್ತಿರುವ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ. ಒಟ್ಟಿನಲ್ಲಿ ಸಿಎಂ ಸ್ಥಾನದ ನಂತರ ಇದೀಗ ರಾಜಕೀಯ ಲೆಕ್ಕಾಚಾರ ಜಿಲ್ಲೆಯ ಮಂತ್ರಿಗಿರಿಯ ಸುತ್ತ ಗಿರಕಿ ಹೊಡೆಯುತ್ತಿದೆ.

ರಾಜಕೀಯ ಚಟುವಟಿಕೆಗಳು ಇಷ್ಟು ಬಿರುಸಾಗಲು ಪ್ರಮುಖ ಕಾರಣವಾಗಿದ್ದು, ಮಾಜಿ ಸಿಎಂ ಹಾಗೂ ಬಿಎಸ್‌ವೈ ಸಂಪುಟದಲ್ಲಿ ಬೃಹತ್‌ ಕೈಗಾರಿಕಾ ಮಂತ್ರಿಯಾಗಿದ್ದ ಜಗದೀಶ ಶೆಟ್ಟರ ಅವರು ಸಂಪುಟದಿಂದ ಹೊರಗುಳಿಯುತ್ತೇನೆಂದು ಘೋಷಿಸಿರುವುದು. ಅವರು ಮಂತ್ರಿಗಿರಿಯ ತ್ಯಾಗಕ್ಕೆ ಜಿಲ್ಲೆಯ ಕಿರಿಯರು ಶತ ನಮನ ಸಲ್ಲಿಸಿ ತಾವು ಟೊಂಕ ಕಟ್ಟಿ ನಿಂತಿದ್ದು, ಧಾರವಾಡ ಪೇಢಾ ಯಾರು ಸವಿಯುತ್ತಾರೆಂಬ ಕುತೂಹಲ ಜಿಲ್ಲೆಯ ಜನರಲ್ಲಿ ಮೂಡಿದೆ.

ಸಿಎಂ ಹುದ್ದೆ ತಪ್ಪಿದ್ದರೂ ಸಿಹಿಬೆಲ್ಲದಾಸೆ: ಜಿಲ್ಲೆಯ ಲೆಕ್ಕದಲ್ಲಿ ಇದೀಗ ಮೊದಲ ಮಂತ್ರಿಮಂಡಲ ವಿಸ್ತರಣೆಯಲ್ಲಿಯೇ ತಮಗೆ ಸಚಿವ ಸ್ಥಾನ ಲಭಿಸುವುದು ಪಕ್ಕಾ ಎನ್ನುವ ವಿಶ್ವಾಸದಲ್ಲಿರುವುದು ಅರವಿಂದ ಬೆಲ್ಲದ ಅವರು. ಕಾರಣ ಸತತ 20 ವರ್ಷಗಳ ಕಾಲ ಅವರ ತಂದೆ ಚಂದ್ರಕಾಂತ ಬೆಲ್ಲದ ಅವರು ಬಿಜೆಪಿ ಪಕ್ಷ ಪ್ರತಿನಿಧಿಸಿದ್ದರೂ ಅವರಿಗೆ ಕೊನೆ ವರೆಗೂ ಯಾವುದೇ ಅವಕಾಶಗಳು ಸಿಕ್ಕಲೇ ಇಲ್ಲ. ಇನ್ನೊಂದೆಡೆ ಸ್ವತಃ ಅರವಿಂದ ಬೆಲ್ಲದ ಅವರು ಆರ್‌ಎಸ್‌ಎಸ್‌ ಮುಖಂಡರ ನೀಲಿಕಣ್ಣಿನ ಹುಡುಗ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಮತ್ತು ಲಿಂಗಾಯತ ಸಮುದಾಯದ ಉತ್ತಮ ನಾಯಕನನ್ನಾಗಿ ಬಿಂಬಿಸಲು ಸ್ವತಃ ಪಕ್ಷದ ವರಿಷ್ಠರೇ ತೀರ್ಮಾನಿಸಿದ್ದಾರೆ. ಹೀಗಾಗಿ ಅರವಿಂದ ಬೆಲ್ಲದ ಅವರನ್ನು ಸಿಎಂ ಸ್ಥಾನದಲ್ಲಿಯೇ ಕೂರಿಸಲು ಬಿಜೆಪಿ ಹೈಕಮಾಂಡ್‌ ಸಜ್ಜಾಗಿತ್ತು.ಅಷ್ಟೇಯಲ್ಲ, ದೆಹಲಿಯಲ್ಲಿ ಬೆಲ್ಲದ ಹೆಸರೇ ಸಿಎಂ ಸ್ಥಾನಕ್ಕೆ ಫೈನಲ್‌ ಕೂಡ ಆಗಿತ್ತು ಎನ್ನಲಾಗಿದೆ. ಆದರೆ ರಾಜ್ಯ ರಾಜಕಾರಣದಲ್ಲಿ ಉಂಟಾದ ಅಲ್ಲೋಲ ಕಲ್ಲೋಲದ ಮಧ್ಯೆ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಿತು. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದ್ದರೂ, ಗೃಹ, ಕೈಗಾರಿಕೆ ಅಥವಾ ಇನ್ಯಾವುದಾದರೂ ಉತ್ತಮ ಖಾತೆಯನ್ನು ನೀಡಿ ಬೆಲ್ಲದ ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವುದು ಪಕ್ಕಾ ಎನ್ನಲಾಗುತ್ತಿದೆ.

Advertisement

ಶಂಕರನಿಂದ ಪಾಟೀಲಗಿರಿಯ ಕಸರತ್ತು : ಜಿಲ್ಲೆಯಲ್ಲಿ ಸದ್ಯಕ್ಕೆ ಸಚಿವ ಸ್ಥಾನದ ಪಟ್ಟಿಯಲ್ಲಿ ಸೇರ್ಪಡೆಯಾಗಲು ಸಜ್ಜಾಗಿರುವ ಹೆಸರು ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರದ್ದು. ತಮ್ಮ ರಾಜಕೀಯ ಜ್ಞಾನದ ಪರಿಮಿತಿಯಲ್ಲೇ ಗಿರಕಿ ಹೊಡೆಯುತ್ತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಎಸ್‌ವೈ ಹಾಗೂ ಜಗದೀಶ ಶೆಟ್ಟರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಶಂಕರ ಪಾಟೀಲ, ಅವರು ಬಿಎಸ್‌ವೈ ಮತ್ತು ಶೆಟ್ಟರ ಬಣಗಳ ಮಧ್ಯೆ ಉಂಟಾದ ತಿಕ್ಕಾಟ ಹತ್ತಿಕ್ಕಲು ಈ ಹಿಂದೆ ಕೊಂಡಿಯಾಗಿ ಕೆಲಸ ಮಾಡಿದ್ದರು. ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದು, ರೈತ ಸಮುದಾಯ ಪ್ರತಿನಿಧಿಸುವ ವ್ಯಕ್ತಿ, ಹೇಗಿದ್ದರೂ ಬೆಲ್ಲದ ಇಂದಲ್ಲ ನಾಳೆ ದೊಡ್ಡ ಹುದ್ದೆ ಏರಿಯೇ ಏರುತ್ತಾರೆ, ಹೀಗಾಗಿ ನನಗೆ ಸದ್ಯಕ್ಕೆ ಸಚಿವ ಸ್ಥಾನ ಕರುಣಿಸಿಬಿಡಿ ಎನ್ನುತ್ತಿದ್ದಾರೆ ಮುನೇನಕೊಪ್ಪ ಅವರು.

ಅಮೃತ ಸಾ(ದ)ರದ ಲೆಕ್ಕಾಚಾರ: ಮೂರು ವರ್ಷಗಳ ಹಿಂದಷ್ಟೇ ಬಿಜೆಪಿ ಸೇರ್ಪಡೆಯಾಗಿ ಶಾಸಕರಾಗಿರುವ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಅಭಿಮಾನಿಗಳು ತಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕೇಳುತ್ತಿದ್ದಾರೆ. ಲಿಂಗಾಯತ ಸಾದರ ಸಮುದಾಯದವರು ಜಿಲ್ಲೆಯಲ್ಲಿ ಒಮ್ಮೆಯೂ ಸಚಿವರಾಗಿಲ್ಲ. ಅವರ ತಂದೆ ಎ.ಬಿ.ದೇಸಾಯಿ ಅವರು ಒಮ್ಮೆ ಅಲ್ಪಾವಧಿಗೆ ಶಾಸಕರಾಗಿದ್ದು ಬಿಟ್ಟರೆ ಅವರಿಗೂ ರಾಜಕೀಯ ಅಧಿಕಾರ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಧರ್ಮೇಂದ್ರ ಪ್ರಧಾನ ಅವರನ್ನು ಭೇಟಿಯಾಗಿ ಹೂಗುತ್ಛ ನೀಡಿ ಎಂದಿನಂತೆ, ನಾನು ವಿನಯ್‌ ಕುಲಕರ್ಣಿ ಅವರನ್ನು ಸೋಲಿಸಿದವನು ಎಂದು ಪರಿಚಯ ಮಾಡಿಕೊಂಡು ಬಂದಿದ್ದಾರೆ. ಅದೂ ಅಲ್ಲದೇ ದೇಸಾಯಿ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಲಿಂಗಾಯತ ಸಾದರ ಉಪ ಜಾತಿಗೆ ಸೇರಿದ್ದು, ತೆರೆಮರೆಯಲ್ಲೇ ಸಚಿವ ಸ್ಥಾನಕ್ಕೆ ಅವರು ಕಸರತ್ತು ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೆಸರಿಗೆ ಸಿಎಂ, ಸಚಿವನಾದರೂ ಆಗುವೆ?: ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರವಿಲ್ಲ ಎನ್ನುವ ಸೂತ್ರ ಜಾರಿಯಲ್ಲಿದೆ. ಆದರೂ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಅವರ ಅಭಿಮಾನಿಗಳು ತಮ್ಮ ಶಾಸಕರು ಸಚಿವರಾಗಲಿ ಎನ್ನುವ ಸಣ್ಣ ಕೂಗು ಇದ್ದು, ಧ್ವನಿ ಮಾತ್ರ ವರಿಷ್ಠರ ಕಿವಿಗೆ ಬಿದ್ದಂತಿಲ್ಲ. ಹೆಸರಲ್ಲೇ ಸಿಎಂ ಇದೆ ಅಷ್ಟು ಸಾಕು ಎನ್ನುವ ಶಾಸಕ ನಿಂಬಣ್ಣವರ, ಸಂತೋಷ ಲಾಡ್‌ ವಿರುದ್ಧ ಭರ್ಜರಿ ಜಯಗಳಿಸಿ ರಾಜ್ಯ ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದರು.

ಸಿಎಂ ಜಿಲ್ಲೆಯ ಅಪಾಯವೂ ಇದೆ: ಇನ್ನೊಂದು ಲೆಕ್ಕಾಚಾರ ಪ್ರಕಾರ ಸ್ವತಃ ಮುಖ್ಯಮಂತ್ರಿಗಳು ಧಾರವಾಡ ಜಿಲ್ಲೆಗೆ ಸೇರಿದ್ದು, ಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಮೊದಲೇ ಗಜಪ್ರಸವದಂತಾಗಿದ್ದು, ಇಡೀ ಮುಂಬೈ ಬಾಯ್ಸ ತಂಡದ ಜತೆಗೆ ಬಿಜೆಪಿಯಲ್ಲಿನ ಹೊಸಬರು, ಪ್ರಾದೇಶಿಕವಾರು ಲೆಕ್ಕಾಚಾರ, ಹೈಕಮಾಂಡ್‌ ಅಭಯವಿದ್ದವರು, ಆರ್‌ಎಸ್‌ಎಸ್‌ ಬೆಂಬಲಿತರು ಹೀಗೆ ಸಾಲು ಸಾಲು ಕೋಟಾಗಳಡಿ ಸಚಿವ ಸ್ಥಾನ ನೀಡಬೇಕಿರುವ ದೊಡ್ಡ ಸವಾಲು ನೂತನ ಮುಖ್ಯಮಂತ್ರಿಗಳಿಗೆ ಎದುರಾಗಿದೆ. ಈ ಎಲ್ಲದರ ನಡುವೆಯೇ ಧಾರವಾಡ ಜಿಲ್ಲೆಯವರೇ ಸ್ವತಃ ಮುಖ್ಯಮಂತ್ರಿ ಇರುವುದರಿಂದ ಮೊದಲ ವಿಸ್ತರಣೆಯಲ್ಲಿ ಯಾರಿಗೂ ಸಚಿವ ಸ್ಥಾನ ಬೇಡ ಎನ್ನಲೂಬಹುದು. ಆದರೆ ಉತ್ತರ ಕರ್ನಾಟಕದ ಬಿಜೆಪಿ,ಆರ್‌ಎಸ್‌ಎಸ್‌ನ ರಾಜಕೀಯ ಶಕ್ತಿ ಕೇಂದ್ರವಾಗಿರುವ ಧಾರವಾಡ ಜಿಲ್ಲೆಗೂ ಪ್ರಾತಿನಿಧ್ಯ ಅನಿವಾರ್ಯ ಎನ್ನುತ್ತಿದ್ದಾರಂತೆ ಬಿಜೆಪಿಯ ನಿರ್ಣಾಯಕ ಮುಖಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next