Advertisement

Dharwad: ಎರಡು ತಿಂಗಳಲ್ಲಿ ಬಿಜೆಪಿ ಹಗರಣದ ಮಾಹಿತಿ ನೀಡುವಂತೆ ಸಿಎಂ ತಾಕೀತು: ಸಚಿವ ಲಾಡ್

04:12 PM Sep 11, 2024 | Team Udayavani |

ಧಾರವಾಡ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿವೆ ಎನ್ನಲಾದ ಹಗರಣಗಳ ಕುರಿತು ತನಿಖೆ ನಡೆಸುವಂತೆ ಸಿಎಂ ಅವರು ಹಗರಣ ಪ್ರಕರಣಗಳ ಸಮನ್ವಯ ಸಮಿತಿ ರಚಿಸಿದ್ದು, ಅದರಲ್ಲಿ ನನ್ನನ್ನೂ ಸದಸ್ಯನನ್ನಾಗಿ ಮಾಡಿದ್ದಾರೆ. ಎರಡು ತಿಂಗಳಲ್ಲಿ ಹಗರಣಗಳ ತನಿಖೆ ನಡೆಸಿ ವರದಿ ನೀಡುವಂತೆ ಸಿಎಂ ತಾಕೀತು ಮಾಡಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

Advertisement

ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು ಎಂದಿದ್ದಾರೆ. ಈ ಸಮಿತಿಯಲ್ಲಿ ಪರಮೇಶ್ವರ, ಎಚ್.ಕೆ.ಪಾಟೀಲ ಸೇರಿದಂತೆ ಅನೇಕ ಹಿರಿಯ ನಾಯಕರಿದ್ದಾರೆ. ಅವರು ಸಭೆಗೆ ಕರೆದಾಗ ನಾನು ಹೋಗುತ್ತೇನೆ. ಅಲ್ಲಿನ ಆಗು ಹೋಗುಗಳ ಬಗ್ಗೆ ಮಾಹಿತಿ ಕೊಡುತ್ತ ಹೋಗುತ್ತೇವೆ ಎಂದರು.

ಅಮೇರಿಕಾದಲ್ಲಿ ಡಿಕೆಶಿ, ರಾಹುಲ್ ಗಾಂಧಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ನಮ್ಮ ನಾಯಕರು ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರಲ್ಲಿ ಕುತೂಹಲ ಏನಿಲ್ಲ. ಅವರಿಬ್ಬರು ಭೇಟಿಯಾಗಿದ್ದು ಖುಷಿಯ ವಿಚಾರ. ಅಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆದಿಲ್ಲ. ಅದರ ಬಗ್ಗೆ ಪದೇ ಪದೇ ನನ್ನ ಕೇಳಬೇಡಿ ಎಂದರು.

ಬಿಜೆಪಿಯವರಿಗೆ ಈ ಬಗ್ಗೆ ಕುತೂಹಲ ಇದೆ. ಹರಿಯಾಣ, ಮಹಾರಾಷ್ಟ್ರ, ಜಮ್ಮು, ಕಾಶ್ಮೀರ ಚುನಾವಣೆ ಆದ ಮೇಲೆ ಮೋದಿ ಸರ್ಕಾರ ಅಲ್ಲಾಡುತ್ತದೆ. ಈಗಾಗಲೇ ಬಿಜೆಪಿಯವರ ನಂಬರ್ ಕಡಿಮೆ ಇವೆ. ಸದ್ಯದ ಸರ್ವೆ ರಿಪೋರ್ಟ್ ಪ್ರಕಾರ ಕೆಲ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ಮಾಹಿತಿ ಇದೆ. ಹೀಗಾಗಿ ಸರ್ಕಾರ ಬೀಳುವ ಭಯ ಬಿಜೆಪಿಯವರಿಗಿದೆ. ನಮಗಲ್ಲ. ನಾವು 136 ಜನ ಶಾಸಕರಿದ್ದೇವೆ. ಐದು ವರ್ಷ ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಪತನವಾಗುವುದಿಲ್ಲ. ಸಿಎಂ ಬದಲಾವಣೆ ಇಲ್ಲ ಎಂದು ನಮ್ಮ ಹೈಕಮಾಂಡ್ ಜನರಲ್ ಸೆಕ್ರೆಟ್ರಿ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಎಲ್ಲ ಶಾಸಕರು, ಸಚಿವರು, ಸಂಸದರು, ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯ ಪರವಾಗಿದ್ದೇವೆ. ನಾವು ಸಿದ್ದರಾಮಯ್ಯ ಪರವಾಗಿ ಗಟ್ಟಿಯಾಗಿರುತ್ತೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದರು.

ಖಾನಾಪುರದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ ಅವರು ಸತೀಶ ಜಾರಕಿಹೊಳಿ ಅವರೇ ಸಿಎಂ ಆಗಲಿ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಲಾಡ್, ಅವರು ಆ ರೀತಿ ಹೇಳಿದ್ದಕ್ಕೆ ಬಿಜೆಪಿಯವರನ್ನೇ ಕೇಳಬೇಕು. ಅವರೇನು ನನ್ನ ಕಂಟ್ರೋಲ್‌ನಲ್ಲಿ ಇಲ್ಲ. ದೀಪಾವಳಿಗೆ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಲಾಡ್, ಕೇಂದ್ರ ಸರ್ಕಾರ ಶೀಘ್ರ ಪತನವಾಗಲಿದೆ. ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಎರಡು ವರ್ಷದಿಂದ ಅವರು ಹೇಳುತ್ತಲೇ ಬಂದಿದ್ದಾರೆ ಇದೇನು ಹೊಸದಾ ಎಂದು ಪ್ರಶ್ನಿಸಿದರು.

Advertisement

ಇದನ್ನೂ ಓದಿ: Chikkaballapur ನಗರಸಭೆ ಚುನಾವಣೆ; ಇಬ್ಬರು ಸದಸ್ಯರು ಕಾಣುತ್ತಿಲ್ಲ: ಜೆಡಿಎಸ್ ಅಳಲು!

Advertisement

Udayavani is now on Telegram. Click here to join our channel and stay updated with the latest news.

Next