Advertisement

ಕಿಲ್ಲರ್‌ ಕಟ್ಟಡ: ಸಾವಿನ ಸಂಖ್ಯೆ 15ಕ್ಕೇರಿಕೆ

12:06 AM Mar 23, 2019 | |

ಧಾರವಾಡ : ಕಿಲ್ಲರ್‌ ಕಟ್ಟಡ ದುರಂತದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿದ್ದು, ಶುಕ್ರವಾರ ನಾಲ್ಕು ಮಂದಿ ಅವಶೇಷಗಳಿಂದ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಈ ನಾಲ್ವರನ್ನು ಸೇರಿ ಒಟ್ಟು 54 ಜನರನ್ನು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕದಳ ರಕ್ಷಣೆ ಮಾಡಿದ್ದು, ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ.

Advertisement

ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ ನೇರವಾಗಿ ಜೆಸಿಬಿಗಳನ್ನು ಬಳಸಿ ಕಟ್ಟಡದ ಅವಶೇಷಗಳ ತೆರವು ಆರಂಭಿಸಿದ್ದರು. ಬೆಳಗ್ಗೆಯೇ ಮಾಜಿ ಸೈನಿಕ ಸುಬ್ಬಪ್ಪ ದಿಂಡಲಕೊಪ್ಪ (68) ಅವರ ಶವ ಹೊರ ತೆಗೆಯಲಾಯಿತು. ಅವರ ಬೆನ್ನ ಹಿಂದೆಯೇ ಜೀವಂತವಾಗಿ ಹೊರಬಂದ ಸಂಗನಗೌಡ ರಾಮನಗೌಡರ ಕಟ್ಟಡದ ಒಳಗಡೆ ಇನ್ನೂ ಕೆಲವಷ್ಟು ಜನರು ಜೀವಂತವಾಗಿದ್ದಾರೆ ಎಂಬ ಸುಳಿವು ಬೆನ್ನಟ್ಟಿದ ರಕ್ಷಣಾ ಸಿಬ್ಬಂದಿ, ದಿಲೀಪ್‌ ಕೊಕರೆ(35) ಮತ್ತು ಸಂಗೀತಾ(33) ದಂಪತಿಯನ್ನು ರಕ್ಷಿಸಿದರು.

ಇವರು ಹೊರಬಂದು ಇನ್ನೂ ಕೆಲವಷ್ಟು ಜನರು ಜೀವಂತವಿದ್ದಾರೆ ಎಂಬ ಮಾಹಿತಿ ನೀಡಿದಾಗ ಮತ್ತೆ ಸೂಕ್ಷ್ಮ ಕಾರ್ಯಾಚರಣೆಗೆ ಇಳಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಹೊನ್ನಮ್ಮ ಕಮಸೋಲ(45) ಎಂಬ ಮಹಿಳೆಯನ್ನು ಸಂಜೆ ವೇಳೆಗೆ ಜೀವಂತವಾಗಿ ರಕ್ಷಿಸಿ ಹೊರ ತಂದರು. ಅವರ ಕಾಲಿಗೆ ಬಲವಾದ ಏಟು ಬಿದ್ದಿದ್ದರಿಂದ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಕಟ್ಟಡ ಅವಶೇಷಗಳ ತಳ ಮಹಡಿಯಲ್ಲಿ ಇನ್ನೂ 15ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿರುವ ಶಂಕೆ ಇದೆ ಎಂದು ಎನ್‌ಡಿಆರ್‌ಎಫ್‌ ಸಿಬ್ಬಂದಿ ಹೇಳಿದ್ದು, ಶುಕ್ರವಾರ ರಾತ್ರಿ ಮತ್ತೆ ಚುರುಕು ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಚಿವರ ನೆನೆದ ಗಾಯಾಳುಗಳು: ಈ ಮಧ್ಯೆ ಮೂರು ದಿನಗಳ ಕಾಲ ಕಟ್ಟಡ ದುರಂತದ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಾಚರಣೆಗೆ ಬೆನ್ನೆಲುಬಾಗಿ ನಿಂತಿದ್ದ ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಅವರ ನಿಧನದಿಂದಾಗಿ ಅವರ ಅಭಿಮಾನಿಗಳು ಮತ್ತು ಅವರಿಂದ ಸಾಂತ್ವನದ ನುಡಿ ಕೇಳಿದ ಗಾಯಾಳುಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮೊದಲ ದಿನ ಗಾಯಾಳುಗಳ ಆರೋಗ್ಯ ವಿಚಾರಸಿದ್ದ ಸಚಿವರು, ಪ್ರತಿಯೊಬ್ಬರ ಬಗ್ಗೆ ತೋರಿಸಿದ್ದ ಕಾಳಜಿ ನೆನೆದು, ಸಂತಾಪ ವ್ಯಕ್ತಪಡಿಸಿದರು.

2 ಲಕ್ಷ ಪರಿಹಾರ ವಿತರಣೆ
ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಧಾರವಾಡ ಡೀಸಿ ದೀಪಾ ಚೋಳನ್‌ ಶುಕ್ರವಾರ ಬೆಳಗ್ಗೆ 2 ಲಕ್ಷ ರೂ.ಚೆಕ್‌ ವಿತರಿಸಿದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ|ರಾಜಕುಮರ್‌ ಖತ್ರಿ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು,
ಕಟ್ಟಡ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಹೆಚ್ಚಳದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳವ ಭರವಸೆ ನೀಡಿದರು.

Advertisement

ಆರೋಪಿಗಳು ಪೊಲೀಸ್‌ ವಶಕ್ಕೆ
ಗುರುವಾರ ಕೊಲ್ಲಾಪೂರದಲ್ಲಿ ಬಂಧನಕ್ಕೆ ಒಳಗಾಗಿದ್ದ ಕಿಲ್ಲರ್‌ ಕಟ್ಟಡದ ಎಂಜಿನಿಯರ್‌ ವಿವೇಕ್‌ ಪವಾರ್‌ಗೆ ಮಾ.25ರವರೆಗೆ ಪೊಲೀಸ್‌ ಕಸ್ಟಡಿಗೆ ವಹಿಸುವಂತೆ ಇಲ್ಲಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಇನ್ನುಳಿದಂತೆ ಗುರುವಾರ ತಡರಾತ್ರಿ ಪೊಲೀಸರಿಗೆ ಶರಣಾದ ಕಟ್ಟಡ ಮಾಲೀಕರಾದ ಗಂಗಾಧರ ಶಿಂತ್ರಿ, ಬಸವರಾಜ ನಿಗದಿ, ರವಿ ಸಬರದ, ಮಹಾಬಳೇಶ್ವರ ಪುರದಗುಡಿ ಅವರು ಕೂಡ ಪೊಲೀಸ್‌ ವಶದಲ್ಲಿದ್ದು ಅವರನ್ನು ಪೊಲೀಸರು ಶೀಘ್ರವೇ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಧಾರವಾಡದಲ್ಲಿ ಕಟ್ಟಡ ದುರಂತ ನಡೆದಿರುವುದು ವಿಷಾದನೀಯ ಸಂಗತಿ. ಮೃತರ ಕುಟುಂಬಗಳಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಈ ಘಟನೆಯಲ್ಲಿ ಗಾಯಗೊಂಡ ಎಂಟು ಜನರಿಗೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ● ಡಾ|ವಿರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ
 

Advertisement

Udayavani is now on Telegram. Click here to join our channel and stay updated with the latest news.

Next