Advertisement
“ರಾಮಾ ರಾಮಾ ರೇ..’ ಚಿತ್ರದ ಯಶಸ್ಸು ಧರ್ಮಣ್ಣ ಅವರಿಗೂ ಸಾಕಷ್ಟು ಹೆಸರು ತಂದು ಕೊಟ್ಟಿತು. ಆ ನಂತರ ನಿಧಾನವಾಗಿ ಒಂದೊಂದೆ ಚಿತ್ರಗಳ ಪಾತ್ರಗಳು ಧರ್ಮಣ್ಣ ಅವರನ್ನು ಹುಡುಕಿಕೊಂಡು ಬರಲು ಶುರುವಾದವು. “ರಾಮಾ ರಾಮಾ ರೇ..’ ಚಿತ್ರದ ನಂತರ ತೆರೆಗೆ ಬಂದ “ಮುಗುಳು ನಗೆ’, “ಲಂಬೋದರ’, , “ಸ್ಟ್ರೈಕರ್’, “ಪಡ್ಡೆಹುಲಿ’, “ಕನ್ನಡ್ ಗೊತ್ತಿಲ್ಲ’, “ಭರಾಟೆ’, “ಅಳಿದು ಉಳಿದವರು’, “ಕಾಣದಂತೆ ಮಾಯವಾದನು’ ಹೀಗೆ ಸುಮಾರು ಮೂರು ವರ್ಷಗಳಲ್ಲಿ ಧರ್ಮಣ್ಣ ಅಭಿನಯಿಸಿರುವ 15ಕ್ಕೂ ಹೆಚ್ಚು ಚಿತ್ರಗಳು ತೆರೆಕಂಡಿವೆ. ಸದ್ಯ “ಇನ್ಸ್ಪೆಕ್ಟರ್ ವಿಕ್ರಮ…’, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್’, “ಐ ಯಾಮ್ ಪ್ರಗ್ನೆಂಟ್’, “ಗ್ರಾಮಾಯಣ’ ಹೀಗೆ ಏಳೆಂಟು ಚಿತ್ರಗಳು ತೆರೆಗೆ ಬರಲು ರೆಡಿಯಾಗುತ್ತಿವೆ. ಈಗಾಗಲೇ ಸುಮಾರು ಐದಾರು ಚಿತ್ರಗಳ ಮಾತುಕತೆ ನಡೆಯುತ್ತಿದ್ದು, ಆ ಚಿತ್ರಗಳು ಕೂಡ ಈ ವರ್ಷದಲ್ಲೇ ಶುರುವಾಗುವ ಸಾಧ್ಯತೆ ಇದೆ.
ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟರಾಗಿ ಬಂದವರು ಆನಂತರ ಹೀರೋಗಳಾಗಿ ಮಿಂಚಿದ ಹತ್ತಾರು ಉದಾಹರಣೆಗಳಿವೆ. ಕೋಮಲ್, ಶರಣ್, ಚಿಕ್ಕಣ್ಣ, ರಂಗಾಯಣ ರಘು, ಸಾಧುಕೋಕಿಲ ಹೀಗೆ ಈ ಸಾಲಿನಲ್ಲಿ ಹಲವು ಹೆಸರುಗಳು ಸಿಗುತ್ತವೆ. ಈ ಸಾಲಿಗೆ ಮುಂದೆ ಏನಾದ್ರೂ ಧರ್ಮಣ್ಣ ಕಡೂರು ಸೇರಿಕೊಳ್ಳುತ್ತಾರಾ? ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿದೆ, “ಹೀರೋ ಆಗಿ ಅಲ್ಲ. ಆದ್ರೆ ಒಳ್ಳೆಯ ಪಾತ್ರ ಮಾಡುವ ಆಸೆಯಂತೂ ಖಂಡಿತ ಇದೆ. ನನಗೆ ಪಾತ್ರವಷ್ಟೇ ಮುಖ್ಯ. ನನಗೆ ನನ್ನ ಸಾಮರ್ಥ್ಯ ಹಾಗೂ ವೀಕ್ ನೆಸ್ ಎರಡೂ ಗೊತ್ತಿದೆ. ಪಾತ್ರ ನನಗೆ ಸೂಟ್ ಆದರೆ ಮಾಡುತ್ತೇನೆ. ಕೆಲವು ಸಿನಿಮಾಗಳನ್ನು ಕಥೆ ಹೇಳುವಾಗಲೇ ಓಪನ್ ಆಗಿ “ನಾನ್ ಮಾಡೋಕ್ಕೆ ಆಗಲ್ಲ’ ಅಂಥ ಹೇಳಿದ್ದು ಇದೆ. ಸದ್ಯಕ್ಕೆ ಒಂದಷ್ಟು ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ಒಂದೆರಡು ಮೈನ್ ಲೀಡ್ ಕಾಮಿಡಿ ಸಿನಿಮಾಗಳ ಆಫರ್ ಬಂದರೂ, ಸದ್ಯಕ್ಕೆ ಬೇಡ ಅಂತ ನಾನೇ ಒಪ್ಪಲಿಲ್ಲ. ಡೇಟ್ ಕ್ಲಾಶ್ ಆದ ಕಾರಣ ಕೆಲವು ಸಿನಿಮಾಗಳನ್ನು ಮಾಡಲಾಗಲಿಲ್ಲ. ಮುಂದೇನಾದ್ರೂ ಆ ಥರದ ಅವಕಾಶ ಬಂದ್ರೆ ನೋಡೋಣ…’ ಎಂದು ಮುಗುಳು ನಗೆ ಬೀರುತ್ತಾರೆ.