Advertisement

ಮಾಸ್ಕ್ ಧರಿಸದ ಮಕ್ಕಳಿಗೆ ಶಾಲೆಗೆ ಪ್ರವೇಶ ನೀಡಬೇಡಿ : ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ

12:40 PM Jan 11, 2022 | Team Udayavani |

ಧಾರವಾಡ : ಜಿಲ್ಲೆಯ ಶಾಲೆ – ಕಾಲೇಜುಗಳಲ್ಲಿ ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು. ಎಲ್ಲ ಶಾಲೆಗಳಲ್ಲಿ ಸುಮಾರು 100 ಜನರನ್ನು ಕೋವಿಡ್‌ ತಪಾಸಣೆ ಮಾಡಬೇಕು. ಈ ಪೈಕಿ 5ಕ್ಕಿಂತ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಕಂಡು ಬಂದರೆ 5 ದಿನಗಳ ಕಾಲ ಶಾಲೆ ಮುಚ್ಚಬೇಕು ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.

Advertisement

ನಗರದ ಡಿಸಿ ಕಚೇರಿ ನೂತನ ಸಭಾಂಗಣದಲ್ಲಿ ಕೋವಿಡ್‌ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ನ‌ ರೂಪಾಂತರಗೊಂಡ ವೈರಾಣು ಹರಡುವಿಕೆಯಲ್ಲಿ ಕ್ರಮೇಣವಾಗಿ ಹೆಚ್ಚಳ ಕಂಡು ಬರುತ್ತಿದೆ. ಜಿಲ್ಲೆಯ ಸರ್ಕಾರಿ-ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಸರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಲ್ಲ ತಾಲೂಕು ಆಸ್ಪತ್ರೆಗಳನ್ನು ಸಿದ್ಧ ಮಾಡಿಕೊಳ್ಳಬೇಕು. ತಾಲೂಕು ಕೇಂದ್ರಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಸ್ಥಾಪಿಸಲು ಸ್ಥಳ ಗುರುತಿಸಬೇಕು. ತುರ್ತು ಚಿಕಿತ್ಸಾವಾಹನ, ಔಷಧ ಮತ್ತಿತರೆ ಉಪಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಹಕಾರ ನೀಡಲಿದ್ದು, ಆಯುಷ್‌ ವೈದ್ಯರನ್ನು ಸೇವೆಗೆ ಬಳಸಿಕೊಳ್ಳಲಾಗುವುದು ಎಂದರು.

ಕೋವಿಡ್‌ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದ್ದು, ಅದರಲ್ಲೂ ಹುಬ್ಬಳ್ಳಿಯ ಕಿಮ್ಸ್‌ಗೆ ಸುತ್ತಲಿನ 7-8 ಜಿಲ್ಲೆಗಳ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಹೀಗಾಗಿ ಅಗತ್ಯ ಪ್ರಮಾಣದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಲಕ್ಷಣ ರಹಿತ ಹಾಗೂ ಸಾಧಾರಣ ಲಕ್ಷಣಗಳಿರುವ ಸೋಂಕಿತರನ್ನು ಮನೆಗಳಲ್ಲಿ ಪ್ರತ್ಯೇಕವಾಗಿ ಅಥವಾ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ವಹಿಸಬೇಕು ಎಂದರು.

ಇದನ್ನೂ ಓದಿ : ಭಂಡತನ, ಬಂಡೆತನ ಬೇಡ.. ಎಲ್ಲದಕ್ಕೂ ಸಮರ್ಥವಾಗಿ ಉತ್ತರ ಕೊಡ್ತೀವಿ:ಅಶ್ವತ್ಥನಾರಾಯಣ್ ಟಾಂಗ್

ಜಿಲ್ಲೆಯ ಎಲ್ಲ ಆಸ್ಪತ್ರೆಗಳು ಪ್ರತಿ ನಿತ್ಯ ತಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆಯನ್ನು ನಿಗದಿತ ಸ್ಪ್ರೆಡ್‌ ಶೀಟ್‌ನಲ್ಲಿ ದಾಖಲಿಸಬೇಕು. ಶಾಲೆ, ಕಾಲೇಜುಗಳಲ್ಲಿ ಮಕ್ಕಳು ಮಾಸ್ಕ್ ಧರಿಸಿಕೊಂಡು ಬರುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸದವರನ್ನು ಹೊರ ಹಾಕಬೇಕು. ಶೇ.50 ಹಾಜರಾತಿ ನಿಯಮ ಪಾಲಿಸಬೇಕು. ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಮಹಾನಗರ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆಗಳು ದಂಡ ವಿಧಿಸಿ ಜನಜಾಗೃತಿ ಮೂಡಿಸಬೇಕು ಎಂದರು. ಜಿಲ್ಲಾ ಸಿಇಒ ಡಾ| ಬಿ.ಸುಶೀಲಾ ಮಾತನಾಡಿ, ತಾಲೂಕು ಮಟ್ಟದಲ್ಲಿ ಆರೋಗ್ಯ ಅಧಿಕಾರಿಗಳು ತಪಾಸಣೆ, ಲಸಿಕೆ ಮೊದಲಾದ ಕಾರ್ಯಗಳಲ್ಲಿ ನಿಗದಿತ ಗುರಿ ಸಾಧಿಸಲು ನಿರ್ಲಕ್ಷಿಸಿದರೆ ಶಿಸ್ತು ಕ್ರಮ ವಹಿಸಲಾಗುವುದು ಎಂದರು.

Advertisement

ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಡಿಸಿಪಿ ಸಾಹಿಲ್‌ ಬಾಗ್ಲಾ, ಅಪರ ಜಿಲ್ಲಾ ಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಯಶವಂತ ಮದೀನಕರ, ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ|ಅರುಣ ಕುಮಾರ ಚವ್ಹಾಣ, ಡಾ|ರಾಜಶೇಖರ ದ್ಯಾಬೇರಿ, ಡಾ|ಲಕ್ಷ್ಮೀಕಾಂತ ಲೋಕರೆ, ಡಾ|ಎಸ್‌.ಎಂ.ಹೊನಕೇರಿ, ಡಾ|ಎಸ್‌.ಎಂ.ನಿಂಬಣ್ಣವರ, ಡಾ|ಸುಜಾತಾ
ಹಸವಿಮಠ, ಡಾ|ಶಶಿ ಪಾಟೀಲ, ಡಾ|ತನುಜಾ ನಾಯ್ಕ, ಡಾ|ಸಂಪತ್‌ ಸಿಂಗ್‌ ಇದ್ದರು.

ಕೋವಿಡ್‌ ನಿಯಮ ಉಲ್ಲಂಘನೆ; 13,500 ದಂಡ ವಸೂಲಿ
ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ ಕೋವಿಡ್‌ -19ರ ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 56 ಜನರಿಗೆ 13,500 ರೂ. ದಂಡ ವಿಧಿಸಲಾಗಿದೆ. ಪಾಲಿಕೆಯಿಂದ ಇದುವರೆಗೆ ಒಟ್ಟು 75,94,850 ರೂ. ದಂಡ ವಿಧಿಸಿದಂತಾಗಿದೆ. ಪಾಲಿಕೆಯ ವಲಯಗಳ ವ್ಯಾಪ್ತಿಯಲ್ಲಿ ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಮಾಸ್ಕ್
ಧರಿಸದೆ ತಿರುಗಾಡುತ್ತಿದ್ದ 46 ಜನರಿಗೆ 11,500ರೂ. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 10 ಜನರಿಗೆ 2 ಸಾವಿರ ರೂ. ದಂಡ ವಿಧಿಸಿದ್ದಾರೆಂದು ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

144 ಜನರಲ್ಲಿ ಕೋವಿಡ್‌ ಸೋಂಕು ಪತ್ತೆ
ಧಾರವಾಡ: ಜಿಲ್ಲೆಯಲ್ಲಿ ಸೋಮವಾರ ಮತ್ತೆ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಬರೋಬ್ಬರಿ 144  ಜನರಲ್ಲಿ ಸೋಂಕು ಪತ್ತೆ ಆಗುವ ಮೂಲಕ ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 62,076 ಕ್ಕೆ ಏರಿದೆ. ಇನ್ನು 41 ಜನ ಸೋಂಕಿತರು ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 60,317ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 432ಕ್ಕೆ ಏರಿದ್ದು, ಈ ಪೈಕಿ ನಾಲ್ವರು ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಸೋಂಕಿತರ ಸಾವಿನ ಸಂಖ್ಯೆ 1325ಕ್ಕೆ ನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next