Advertisement

ಮಾದಪ್ಪನ ಭಕ್ತರ ಸಾವಿಗ್ಯಾರು ಹೊಣೆ?

01:59 PM Feb 27, 2022 | Team Udayavani |

ರಾಮನಗರ: ಶಿವರಾತ್ರಿಯಂದು ಮಲೇ ಮಹದೇಶ್ವರ ಸ್ವಾಮಿಯ ದರ್ಶನಕ್ಕೆಂದು ತೆರಳುತ್ತಿರುವ ಸಾವಿರಾರು ಮಂದಿ ಪೈಕಿ ಏಳೆಂಟು ಯಾತ್ರಿಕರು ಶುಕ್ರವಾರ ಬೆಳ್ಳಂಬೆಳಗ್ಗೆ ಕಾವೇರಿ ನದಿಯಲ್ಲಿ ಕೊಚ್ಚಿ ಹೋ ಗಿರುವ ಶಂಕೆ ನಡುವೆ ಇಬ್ಬರು ಮಹಿಳೆಯರ ಶವಗಳು ಪತ್ತೆಯಾಗಿವೆ.

Advertisement

ಈ ಘಟನೆಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯನ್ನು ಜನರು ದೋಷಿಸುತ್ತಿದ್ದಾರೆ.ಧಾರ್ಮಿಕ ವಿಚಾರಕ್ಕೆ ಪಾದಯಾತ್ರೆ ನಡೆಸುತ್ತಿರುವ ಭಕ್ತವೃಂದಕ್ಕೆ ತೊಂದರೆ ಕೊಡುವುದು ಸರಿಯಲ್ಲ ಎಂದುಕಾವೇರಿ ವನ್ಯ ಜೀವಿ ಅರಣ್ಯ ಪ್ರದೇಶ ಮತ್ತು ಅರಣ್ಯಇಲಾಖೆಯ ಅಧಿಕಾರಿಗಳು ಭಾವನೆ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಈ ಭಾವನೆ ಗೌರವಿಸುವುದಾಗಿ ಪ್ರತಿಕ್ರಿಯಿಸಿರುವ ಕೆಲವು ನಾಗರಿಕರು, ಹಲವಾರು ವರ್ಷಗಳಿಂದ ಭಕ್ತರು ಮಹದೇಶ್ವರ ನ ದರ್ಶನಕ್ಕೆ ಅರಣ್ಯದ ಮೂಲಕ ಸಾಗಿ, ಕಾವೇರಿ ನದಿ ದಾಟಿ ಹೋ ಗುತ್ತಿರುವುದು ವಾಡಿಕೆ. ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಇವರ ರಕ್ಷಣೆಗೆ ಯಾವ ಕ್ರಮ ಕೈಗೊಂಡಿದೆ?ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ಹೋಗುವುದುಂಟು. ಕನಕಪುರ ತಾಲೂಕಿನ ಉಯ್ಯಂಬಳ್ಳಿ ಮಾರ್ಗವಾಗಿ ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದ ಮೂಲಕ ಕಾವೇರಿ ನದಿ ದಾಟಿ ಮಹದೇಶ್ವರ ಬೆಟ್ಟ ತಲುಪುವುದು ಸುಲಭದ ಹಾದಿ. ಕನಕಪುರದ ಮೂಲಕ ರಸ್ತೆ ಮಾರ್ಗದಲ್ಲಿ ಮಳವಳ್ಳಿ, ಕೊಳ್ಳೆಗಾಲ, ಹನೂರು ಮೂಲಕ ಮಲೆ ಮಹದೇಶ್ವರ ಸ್ವಾಮಿಬೆಟ್ಟಕ್ಕೆ ಹೋಗಲು ಸುಮಾರು 150 ಕಿ.ಮೀ ಕ್ರಮಿಸಬೇಕು. ಹೀಗಾಗಿ ಭಕ್ತರು ಕನಕಪುರದಿಂದ ಕೇವಲ 60-70 ಕಿಮೀ ಕ್ರಮಿಸಿ ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ.

ಕಾಡು, ನದಿ ದಾಟಬೇಕು: ಕನಕಪುರ ತಾಲೂಕು ಏಳಗಳ್ಳಿ ಗ್ರಾಮದಲ್ಲಿ ತಾಯಿ ಮುತ್ತಮ್ಮ ದೇವಿ ದರ್ಶನ ಪಡೆದು, ಬಳಿಕ ಉಯ್ಯಂಬಳ್ಳಿ ಮೂಲಕ ಸಂಗಮದ ಕಡೆ ಮಹದೇಶ್ವರ ಸ್ವಾಮಿ ಪಾದಯಾತ್ರಿಗಳು ಸಾಗುತ್ತಾರೆ. ಹೆಗ್ಗನೂರು ದೊಡ್ಡಿ ಗ್ರಾಮದ ಕಳೆಯುತ್ತಲೆ ಅರಣ್ಯಪ್ರದೇಶ ಆರಂಭವಾಗುತ್ತದೆ. ಅರಣ್ಯ ಪ್ರದೇಶದಲ್ಲೇ ಸಾಗಿಸಂಗಮದ ಬಳಿಯ ಬೊಮ್ಮಸಂದ್ರ ಗ್ರಾಮದ ಬಳಿಕಾವೇರಿ ನದಿಯನ್ನು ದಾಟಿ ನದಿಯ ಇನ್ನೊಂದು ದಡಸೇರುತ್ತಾರೆ. ಅಲ್ಲಿಂದ ತಾಳ ಬೆಟ್ಟ 30 ಕಿ.ಮೀ. ತಾಳ ಬೆಟ್ಟದಿಂದ 20 ಕಿ.ಮೀ. ಕ್ರಮಿಸಿದರೆ ಮಲೆಮಹದೇಶ್ವರಸ್ವಾಮಿಯ ದರ್ಶನ ಪ್ರಾಪ್ತಿಯಾಗುತ್ತದೆ. ಇದು ಕಾಲ್ನಡಿಗೆಯ ಯಾತ್ರಿಕರಿಗೆ ಸುಲಭದ ಹಾದಿ. ಇದು ಹಲವಾರುದಶಕಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಕಾವೇರಿನದಿ ಪಾತ್ರದಲ್ಲೇ ಸುಮಾರು 1 ರಿಂದ 2 ಕಿ.ಮೀ.ವರೆಗೆ ನಡೆಯಬೇಕಿರೋದು ಅನಿವಾರ್ಯ.

Advertisement

ಅನಾಹುತಕ್ಕೆ ಹೊಣೆ ಯಾರು?: ಈ ಹಿಂದೆ ಮಹದೇಶ್ವರನ ಭಕ್ತರು ನೀರಿನಲ್ಲಿ ಕೊಚ್ಚಿ ಹೋದ ಉದಾಹರಣೆಗಳು ಇಲ್ಲ. ಆದರೆ, ಈ ಬಾರಿ ಅನಾಹುತ ಸಂಭವಿಸಿದ್ದು, ಹಲವಾರು ಪ್ರಶ್ನೆಗಳಿಗೆ ಎಡೆ ಮಾಡಿ ಕೊಟ್ಟಿದೆ. ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಸಾವಿರಾರು ಮಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಆಡಳಿತಗಳ ಸಹಕಾರ ಪಡೆಯದೆ ಅನುವು ಮಾಡಿಕೊಟ್ಟಿದ್ದು ಹೇಗೆ?ಸಾವಿರಾರು ಮಂದಿ ನದಿ ದಾಟಿ ಅರಣ್ಯದ ಮೂಲಕಯಾತ್ರೆ ನಡೆಸುವ ವಿಚಾರ ತಿಳಿದೂ ಜಿಲ್ಲಾಡಳಿತ,ಪೊಲೀಸ್‌ ಇಲಾಖೆಯ ಅಧಿಕಾರಿಗಳು ಯಾವ ಕ್ರಮಕೈಗೊಂಡಿದ್ದಾರೆ. ಅಧಿಕಾರಿಗಳು ಜಂಟಿ ಸಭೆ ನಡೆಸಿಯಾತ್ರಿಕರ ರಕ್ಷಣೆಗೆ ಧಾವಿಸುವ ವಿಚಾರದಲ್ಲಿ ಪೂರ್ವ ವ್ಯವಸ್ಥೆ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಬೇಕಿದೆ ಎಂಬುದು ನಾಗರಿಕರು ಆಗ್ರಹ.

ಜಿಲ್ಲಾಡಳಿತದ ಬಳಿಯಿಲ್ಲ  ಸಾವಿನ ಲೆಕ್ಕ :

ಕನಕಪುರ: ಮಾದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ನಡೆದುಕೊಂಡು ಹೋಗುವ ಪದ್ಧತಿ ಬಹಳ ಕಾಲದಿಂದಲೂ ಇದೆ. ಕಳೆದ ಒಂದೆರಡು ದಶಕಗಳಿಂದಪಾದಯಾತ್ರೆ ಮೂಲಕ ಹೋಗುವ ಭಕ್ತರ ಸಂಖ್ಯೆಇಮ್ಮಡಿಯಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದಮಹಾಶಿವರಾತ್ರಿ ಸಂದರ್ಭದಲ್ಲಿ ಲಕ್ಷಾಂತರ ಜನ ಪಾದಯಾತ್ರೆ ಮಾಡುತ್ತಾರೆ.

ದುರಂತಕ್ಕೆ ಯಾರು ಹೊಣೆ? :  ಪ್ರತಿ ವರ್ಷದಂತೆಭಕ್ತರ ಅನುಕೂಲಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳುಒಂದು ದಡದಿಂದ ಮತ್ತೂಂದು ದಡಕ್ಕೆ ಭಕ್ತರಿಗೆಅನುಕೂಲಕ್ಕೆ ಹಗ್ಗ ಕಟ್ಟಿದರು ಪ್ರತಿವರ್ಷದಂತೆ ಭಕ್ತರು ಶುಕ್ರವಾರ ಬೆಳಗ್ಗೆ ಮೂರು ಗಂಟೆಗೆ ಪಾದಯಾತ್ರೆ ಆರಂಭಿಸಿದರು. ಕಾವೇರಿ ನದಿ ದಾಟುವಾಗ ರಕ್ಷಣೆಗೆಂದು ಕಟ್ಟಿದ್ದ ಹಗ್ಗ ತುಂಡಾಗಿದೆ.

ರಕ್ಷಣೆ ಸಿಗದೆ ಹಲವಾರು ಭಕ್ತರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮತ್ತೂಂದೆಡೆ ವಿದ್ಯುತ್‌ ಉತ್ಪಾದಿಸಲು ರಾತ್ರಿಯಿಂದಬೆಳಗ್ಗೆವರೆಗೂ ಹೆಚ್ಚು ನೀರು ಹರಿ ಬಿಡಲಾಗುತ್ತದೆ.ನೀರಿನ ಹರಿವು ಹೆಚ್ಚಾಗಿ ಈ ಘಟನೆ ನಡೆದಿದೆ ಎಂದುಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆಈ ಘಟನೆಯಲ್ಲಿ ಕೆಲವರು ಈಜಿ ದಡ ಸೇರಿದರೆ, ಇನ್ನು ಕೆಲವರನ್ನ ಜೊತೆಗಿದ್ದ ಭಕ್ತರು ರಕ್ಷಣೆಮಾಡಿದ್ದಾರೆ. ಆದರೆ, ಎಷ್ಟು ಜನ ಕೊಚ್ಚಿ ಹೋಗಿದ್ದಾರೆ..? ಎಷ್ಟು ಜನ ದಡ ತಲುಪಿದರು?

ಎಷ್ಟು ಜನ ನೀರುಪಾಲಾಗಿದ್ದಾರೆ ಎಂಬ ಯಾವುದೇ ಮಾಹಿತಿ ಜಿಲ್ಲಾಡಳಿತಕ್ಕಾಗಲಿ? ಪೊಲೀಸ್‌ಇಲಾಖೆಗಾಗಲಿ ಮಾಹಿತಿ ಇಲ್ಲದಿರುವುದು ದುರ್ದೈವ.ಘಟನೆ ನಡೆದು ಎರಡು ದಿನ ಕಳೆದರು ಘಟನೆಯ ಬಗ್ಗೆ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಇದ್ದರೂ ಬಹಿರಂಗಪಡಿಸುತ್ತಿಲ್ಲ.

ಈ ಸಂಬಂಧ ನಿನ್ನೆ ಯಾವುದೇ ಘಟನೆಯೂ ನಡೆದಿಲ್ಲ ಎಂದು ಪೊಲೀಸ್‌ ಇಲಾಖೆ ತಿಪ್ಪೆ ಸಾರಿಸಿತ್ತು. ದುರಂತದ ಘಟನೆ ಗಂಭೀರತೆ ಪಡೆದುಕೊಂಡ ನಂತರ ಖಾಕಿ ಇಲಾಖೆ ಎಚ್ಚೆತ್ತುಕೊಂಡಿದೆ. ಜಿಲ್ಲಾಡಳಿತ ಶನಿವಾರ ಕಾರ್ಯಾಚರಣೆ ಆರಂಭಿಸಿದ್ದಾರೆ.

ದುರಂತ ಇದೇ ಮೊದಲು: ಕಾವೇರಿ ವನ್ಯಜೀವಿಸಂರಕ್ಷಣಾ ಕಾಯ್ದೆಯಡಿ ಕಾವೇರಿ ವನ್ಯಜೀವಿಧಾಮದಲ್ಲಿ ನೂರಾರು ಜನರು ಗುಂಪು ಕಟ್ಟಿಕೊಂಡುಓಡಾಡಲು ಅವಕಾಶವಿಲ್ಲ. ಆದರೂ, ಅರಣ್ಯಇಲಾಖೆ ಅಧಿಕಾರಿಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು ಎಂಬ ಹಿನ್ನೆಲೆಯಲ್ಲಿ ಅವಕಾಶ ಕೊಟ್ಟಿದ್ದರು. ಹಲವಾರು ವರ್ಷಗಳಿಂದ ಸಂಗಮದ ಮಾರ್ಗವಾಗಿ ಮಾದಪ್ಪನ ಬೆಟ್ಟಕ್ಕೆ ಯಾತ್ರಿಗಳು ಕಾಲ್ನಡಿಗೆಯಲ್ಲೇ ಯಾತ್ರೆ ಕೈಗೊಳ್ಳುತ್ತಾರೆ.ಆದರೆ, ಈವರೆಗೆ ಇಂತಹ ಯಾವುದೇದುರ್ಘ‌ಟನೆಗಳು ಸಂಭವಿಸಿರಲಿಲ್ಲ.

ಘಟನೆ ಸಂಭವಿಸಿದ ಬಳಿಕ ಜಿಲ್ಲಾ ಮತ್ತು ತಾಲೂಕು ಆಡಳಿತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಘಟನೆ ನಡೆದಿದ್ದು ಯಾವಾಗ?ಘಟನೆಯಲ್ಲಿ ಎಷ್ಟು ಜನ ಕೊಚ್ಚಿಹೋಗಿದ್ದಾರೆ? ಎಷ್ಟು ಜನ ಕಾಣೆಯಾಗಿದ್ದಾರೆ? ಎಷ್ಟು ಜನ ದಡ ಸೇರಿದ್ದಾರೆಮೃತದೇಹಗಳ ಗುರುತು ಪತ್ತೆ ಸಂಪೂರ್ಣ ಮಾಹಿತಿಕಲೆ ಹಾಕಿ ಕಾಣೆಯಾದವರ ಬಗ್ಗೆ ಕಾರ್ಯಾಚರಣೆನಡೆಸಬೇಕಿತ್ತು. ಆದರೆ, ಸಾತನೂರು ಠಾಣಾಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕೆಲ ಅರಣ್ಯಇಲಾಖೆ ಅಧಿಕಾರಿಗಳು ಮಾತ್ರ ತೆಪ್ಪಗಳ ಮೂಲಕ ಕಾರ್ಯಾಚರಣೆ ನಡೆಸಿದೆ. ಜಿಲ್ಲಾಡಳಿತವಾಗಲಿ ಯಾವುದೇ ಉನ್ನತ ಮಟ್ಟದ ಪೊಲೀಸ್‌ ಇಲಾಖೆ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಜಿಲ್ಲಾಡಳಿತದ ನಡೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಭಕ್ತರ ಸಾವಿನ ಹೊಣೆ ಹೊರುತ್ತಾ ಸರ್ಕಾರ ? :

ಕನಕಪುರ: ಮಹದೇಶ್ವರನ ದರ್ಶನಕ್ಕೆ ತೆರಳಿ ಸಂಗಮದ ಕಾವೇರಿ ನದಿಯಲ್ಲಿ ನೀರುಪಾಲಾದಘಟನೆಯಲ್ಲಿ ಮತ್ತೂಂದು ಮಹಿಳೆಯ ಮೃತದೇಹಶನಿವಾರ ಪತ್ತೆಯಾಗಿದೆ.

ಮಹಾಶಿವರಾತ್ರಿ ಅಂಗವಾಗಿ ಮಲೆ ಮಾದಪ್ಪನ ಬೆಟ್ಟಕ್ಕೆ ತೆರಳಲು, ಸಂಗಮದ ಮಾರ್ಗವಾಗಿ ಕಾಲುದಾರಿಯಲ್ಲಿ ಕಾಲ್ನಡಿಗೆಪಾದಯಾತ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಸಂಗಮದಬೊಮ್ಮಸಂದ್ರದ ಬಳಿ ಕಾವೇರಿ ನದಿ ದಾಟುವಾಗರಕ್ಷಣೆಗೆ ಇದ್ದ ಹಗ್ಗ ತುಂಡರಿಸಿ ಸುಮಾರು 20ಕ್ಕೂಹೆಚ್ಚು ಮಾದಪ್ಪನ ಭಕ್ತರು ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂಬ ಶಂಕೆ ಇದೆ. ನದಿಯಲ್ಲಿ ಕೊಚ್ಚಿಹೋದವರ ಪೈಕಿ ಕೆಲವರು ತಾವಾಗಿಯೇ ದಡ ಸೇರಿರಬಹುದು. ಇನ್ನು ಕೆಲವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂಬ ವದಂತಿ ಹರಡಿತ್ತು.

ತೆಪ್ಪಗಳ ಮೂಲಕ ಕಾರ್ಯಾಚರಣೆ: ಶುಕ್ರವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕುಠಾಣೆ ವ್ಯಾಪ್ತಿಯಲ್ಲಿ ಕಾವೇರಿ ವನ್ಯಜೀವಿ ಧಾಮದಕಾವೇರಿ ನದಿಯಲ್ಲಿ ವೃದ್ಧೆ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಶನಿವಾರ ಘಟನೆಸಂಬಂಧ ಸಂಗಮದ ಕಾವೇರಿ ನದಿಯಲ್ಲಿ 20 ಪೊಲೀಸರು,5-6 ಮಂದಿ ಅರಣ್ಯ ಇಲಾಖೆ ಅಧಿಕಾರಿಗಳು ತೆಪ್ಪಗಳ ಮೂಲಕ ಕಾರ್ಯಾಚರಣೆ ನಡೆಸಿದರು. ಶನಿವಾರ ಮತ್ತೂಂದು ಮಹಿಳೆಯ ಮೃತದೇ ಹ ಕಾವೇರಿ ನದಿಯ ತಟದಲ್ಲಿ ಪತ್ತೆಯಾಗಿದೆ.ಆದರೆ, ಮಹಿಳೆಯ ಗುರುತು ಮಾತ್ರ ಪತ್ತೆಯಾಗಿಲ್ಲ.

ಹೆಚ್ಚುತ್ತಿದೆ ಭಕ್ತರ ಸಂಖ್ಯೆ: ಪ್ರತಿವರ್ಷ ಮಹಾಶಿವರಾತ್ರಿಯಂದು ಮಲೆ ಮಾದಪ್ಪನ ಬೆಟ್ಟಕ್ಕೆಕಾಲ್ನಡಿಗೆಯಲ್ಲಿ ಪಾದಯಾತ್ರೆ ಮೂಲಕ ಮಾದಪ್ಪನಬೆಟ್ಟ ತಲುಪಿ ಒಂದು ರಾತ್ರಿ ಜಾಗರಣೆ ಮಾಡಿದೇವರ ದರ್ಶನ ಪಡೆದರೆ ಇಷ್ಟಾರ್ಥಗಳುಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ಹಾಗಾಗಿಪ್ರತಿ ವರ್ಷ ಈ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆಹೆಚ್ಚಾಗುತ್ತಿದ್ದು ಕಾಲ್ನಡಿಗೆಯಲ್ಲಿ ಯಾತ್ರೆ ಕೈಗೊಳ್ಳುವಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಭಕ್ತರ ನಂಬಿಕೆಅದೇನೆ ಇರಲಿ, ಜೀವ ರಕ್ಷಣೆ ಹೊಣೆಗಾರಿಕೆಜಿಲ್ಲಾಡಳಿತಕ್ಕೆ ಸೇರಿದ್ದು.

ನಿರ್ಲಕ್ಷ್ಯ ಸಲ್ಲದು :

ಮೇಕೆದಾಟು ಕಾಂಗ್ರೆಸ್‌ ನಾಯಕರ ಪಾದಯಾತ್ರೆಗೆ ಜಿಲ್ಲಾಡಳಿತ ಕೈಗೊಳ್ಳುವ ಭದ್ರತೆ, ಸುರಕ್ಷತೆ ಕ್ರಮ, ಈಭಕ್ತರ ಪಾಲಿಗೇಕಿಲ್ಲ. ವಿವಿಐಪಿಗಳಿಗೆ ಸಿಗುವ ರಕ್ಷಣೆಶ್ರೀಸಾಮಾನ್ಯರಿಗೇಕಿಲ್ಲ..? ಮೇಕೆದಾಟುಪಾದಯಾತ್ರೆಗೆ ಜಿಲ್ಲಾಡಳಿತ ಕೈಗೊಂಡಿರುವಸುರಕ್ಷಾ ಕ್ರಮದಲ್ಲಿ ಅರ್ಧ ಭಾಗವನ್ನಾದರೂಮಾದಪ್ಪನ ಭಕ್ತರ ರಕ್ಷಣೆಗೆ, ಭದ್ರತೆಗೆಕೈಗೊಂಡಿದ್ದರೇ ಈ ಅವಘಡ ಸಂಭವಿಸುತ್ತಿರಲಿಲ್ಲ.ಕಾಲ್ನಡಿಗೆ ಯಾತ್ರೆ ಕೈಗೊಳ್ಳುವವರ ಸುರಕ್ಷತೆಗೆಜಿಲ್ಲಾಡಳಿತ ಪರ್ಯಾಯ ಕ್ರಮ, ಪರ್ಯಾಯ ಮಾರ್ಗ ಮಾಡಲಿ ಎಂಬುದೇ ಉದಯವಾಣಿ ಪತ್ರಿಕೆಯ ಆಶಯ.

ಭಕ್ತರ ಸಾವಿಗೆ 10 ಲಕ್ಷ  ಪರಿಹಾರ ನೀಡಿ  :

ರಾಮನಗರ: ಅರಣ್ಯದ ಮೂಲಕ ಸಾಗಿ, ಕಾವೇರಿ ನದಿ ದಾಟಿ ಮಲೆ ಮಹದೇಶ್ವರನ ದರ್ಶನಕ್ಕೆಹೋಗುವ ಭಕ್ತರಿಗೆ ಧಾರ್ಮಿಕ ದತ್ತಿ ಇಲಾಖೆ ಸೇರಿದಂತೆ, ಸಂಬಂಧಿಸಿದ ಇಲಾಖೆಗಳು ಯಾವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ದಿವ್ಯ ನಿರ್ಲಕ್ಷವಹಿಸಿದ್ದಾರೆ ಎಂದು ಧಮ್ಮ ದೀವಿಗೆ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಮಲ್ಲಿಕಾರ್ಜುನ ದೂರಿದ್ದಾರೆ.

ಈ ಸಂಬಂಧ ಲಿಖಿತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್‌ಇಲಾಖೆ, ಅರಣ್ಯ ಇಲಾಖೆ ವೈಫ‌ಲ್ಯಗಳನ್ನು ಖಂಡಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಈ ದಿವ್ಯ ನಿರ್ಲಕ್ಷದಿಂದ ಸಾವು ನೋವುಗಳು ಸಂಭವಿಸಿವೆ. ಇದಕ್ಕೆಲ್ಲ ಕಾರಣರಾದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಂಸದರೂ ಎಲ್ಲಿದ್ದಾರೆ?: ದೇವರು, ಧರ್ಮ, ಧಾರ್ಮಿಕತೆಯ ಹೆಸರಿನಲ್ಲಿ ಸಂದರ್ಭಾನುಸಾರಪ್ರಚಾರಕ್ಕಾಗಿ ಬಡಬಡಾಯಿಸುವ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾಕ್ಷೇತ್ರಗಳ ಸಂಸದರು ಈ ವಿಚಾರದಲ್ಲಿ ಗಮನ ಹರಿಸಿಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್‌ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲೇ ಈ ಘಟನೆ ನಡೆದಿದ್ದರೂ ಸ್ಥಳ ಪರಿಶೀಲನೆಗೆ ಧಾವಿಸಿಲ್ಲ ಎಂದು ದೂರಿದ್ದಾರೆ.

ಶ್ರೀಸಾಮಾನ್ಯರ ಜೀವಕ್ಕಿಲ್ವಾ ಬೆಲೆ? : ಜಿಲ್ಲಾಡಳಿತಮತ್ತು ಪೊಲೀಸ್‌ ಇಲಾಖೆಗಳು ರಾಜಕೀಯ ರ್ಯಾಲಿ, ಮೆರವಣಿಗೆ, ಪಾದಯಾತ್ರೆ ಮುಂತಾದರಾಜಕೀಯ ಸಭೆಗಳಿಗೆ, ಗಣ್ಯರ ರಕ್ಷಣೆಗೆಪ್ರೋಟೋಕಾಲ್‌ಗ‌ಳು ಪ್ಲಟೂನ್‌ಗಳನ್ನು, ಮೀಸಲುಪಡೆಗಳನ್ನು ನಿಯೋಜಿಸುತ್ತವೆ. ಎಸ್ಪಿ, ಎಡಿಜಿಪಿ,ಐಜಿಪಿ ಮುಂತಾದ ಹಿರಿಯ ಅಧಿಕಾರಿಗಳು ಸಹಧಾವಿಸಿ ಬರುತ್ತಾರೆ. ಆದರೆ ದೇವರ ದರ್ಶನಕ್ಕೆಸಾಗುವ ಸಾವಿರಾರು ಮಂದಿ ಭಕ್ತರು ಮತ್ತುಸಾರ್ವಜನಿಕರ ಜೀವಗಳು ಮುಖ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲೆ ಮಹದೇಶ್ವರ ಸ್ವಾಮಿ ದೇವರ ದರ್ಶನಕ್ಕೆತೆರಳುತ್ತಿದ್ದ ಭಕ್ತರ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಕೊಡಬೇಕು.

ಯಾತ್ರಿಕರು ಸಾಮಾನ್ಯವಾಗಿ ನದಿ ದಾಟುವ ಸ್ಥಳದಲ್ಲಿ ಅನಾಹುತ ನಡೆದಿಲ್ಲ. ಎಲ್ಲ ಯಾತ್ರಿಕರು ಸುರಕ್ಷಿತವಾಗಿ ಸಾಗುತ್ತಿದ್ದಾರೆ. 20 ತೆಪ್ಪಗಳು ಪೊಲೀಸ್‌ ಮತ್ತು ಅರಣ್ಯಇಲಾಖೆ ಸಿಬ್ಬಂದಿ ಸದಾ ಸ್ಥಳದಲ್ಲೇ ಮೊಕ್ಕಾಂ ಹೂಡಿರುತ್ತಾರೆ. ರಾಮನಗರ ಮತ್ತು ಚಾಮರಾಜನಗರ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ತಲಾ ಒಂದು ಮಹಿಳೆಯ ಶವ ಪತ್ತೆಯಾಗಿದೆ. ಬಹುಶಃಇವರು ರಾತ್ರಿ ವೇಳೆ ನದಿ ದಾಟಲು ಪ್ರಯತ್ನಿಸಿದ್ದಾರೆ. ಅಲ್ಲದೆ ಸಾಮಾನ್ಯವಾಗಿ ಎಲ್ಲರೂ ನದಿದಾಟುವ ಸ್ಥಳದಲ್ಲಿ ಸಾಗದೆ ಬೇರೆ ಹಾದಿಯಲ್ಲಿ ಸಾಗುವಾಗ ಈ ಅನಾಹುತ ಸಂಭವಿಸಿರಬಹುದು. ತನಿಖೆಯಿಂದ ಎಲ್ಲ ಮಾಹಿತಿ ದೃಢಪಡಬೇಕಾಗಿದೆ. – ಕೆ.ಸಂತೋಷ್‌ ಬಾಬು, ರಾಮನಗರ ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next