Advertisement

ಚಿಗುರೊಡೆದ ಬೇಡಿಕೆ ಈಡೇರಿಕೆ ಕನಸು

02:28 PM Oct 14, 2022 | Team Udayavani |

ಸುಳ್ಯ: ಮಂಡೆಕೋಲು ಗ್ರಾಮದಲ್ಲಿ ಆರ್‌ಟಿಸಿಯಲ್ಲಿ ಸರಕಾರಿ ಜಾಗವೆಂದು ದಾಖಲಾಗಿದ್ದರೂ ಕೆಲಸ ಕಾರ್ಯಕ್ಕೆ ಮುಂದಾಗುವ ವೇಳೆ ಅರಣ್ಯ ಇಲಾಖೆ ಆಕ್ಷೇಪದಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಶನಿವಾರ (ಅ.15ರಂದು) ಮಂಡೆಕೋಲಿನಲ್ಲಿ ನಡೆಯುವ ದ.ಕ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಮಂಡೆಕೋಲು ಗ್ರಾಮದ ಜನರು ಕಾಯುತ್ತಿದ್ದಾರೆ.

Advertisement

ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಮಂಡೆ ಕೋಲು ಗ್ರಾಮ ಕೇರಳದ ರಾಜ್ಯದ ಕಾಸರಗೋಡು ಜಿಲ್ಲೆ ಹಾಗೂ ದ.ಕ. ಗಡಿ ಭಾಗದ ಗ್ರಾಮ. ಬಹುತೇಕ ಪ್ರದೇಶ ಅರಣ್ಯ ಪ್ರದೇಶದಿಂದ ಕೂಡಿದ್ದು, ಅಭಿವೃದ್ಧಿ ಹೊಂದುತ್ತಿದ್ದರೂ, ಇನ್ನಷ್ಟು ಬೇಡಿಕೆಗಳು ಗ್ರಾಮಸ್ಥರಲ್ಲಿ ಇವೆ. ಈ ಗ್ರಾಮ ಕೃಷಿ ಇಲ್ಲಿನ ಪ್ರಮುಖ ಬೆಳೆ. ಧಾರ್ಮಿಕ ಆಚರಣೆಯಲ್ಲೂ ಮಂಡೆಕೋಲು ವಿಶೇಷವಾಗಿ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಅವರ ಹುಟ್ಟೂರು ಕೂಡಾ.

ಅರಣ್ಯ ಇಲಾಖೆ ಆಕ್ಷೇಪ: ಅಭಿವೃದ್ಧಿಗೆ ತೊಡಕು

ಮಂಡೆಕೋಲು ಗ್ರಾ.ಪಂ.ನಲ್ಲಿ ಸರಕಾರಿ ಜಾಗವಿದ್ದರೂ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಆಕ್ಷೇಪ ಇರುವುದು ತೊಡಕಾಗಿದೆ. ಗ್ರಾಮದಲ್ಲಿ ಸುಮಾರು 65 ಎಕ್ರೆ ಸರಕಾರಿ ಜಾಗ ಇದೆ ಎನ್ನುತ್ತಾರೆ ಗ್ರಾ. ಪಂ.ನವರು. ಇದು ಭಾಗಶಃ ಅರಣ್ಯದಲ್ಲಿದ್ದು, ಅರಣ್ಯ ಇಲಾಖೆಯ ಜಾಗ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಇದರಿಂದಾಗಿ ಗ್ರಾ.ಪಂ. ತನ್ನ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಜಾಗಗಳನ್ನು ಕಾದಿರಿಸಿದ್ದರೂ, ಅರಣ್ಯ ಇಲಾಖೆಯ ಆಕ್ಷೇಪದಿಂದ ಅಭಿವೃದ್ಧಿಗೆ ತೊಡಕಾಗಿದೆ. ಈ ಬಗ್ಗೆ ಸಮಸ್ಯೆ ಪರಿಹಾರಕ್ಕೆ ಈ ಮೊದಲೇ ಸಂಬಂಧಿಸಿದವರಿಗೆ ಮನವಿ ಸಲ್ಲಿಸಲಾಗಿದ್ದು, ಪೂರಕ ಕ್ರಮದ ಭರವಸೆ ದೊರೆತಿದೆ. ಕಾರ್ಯಗತವಾಗಿಲ್ಲ. ಅರಣ್ಯ ಇಲಾಖೆ ಸಮಸ್ಯೆಯಿಂದ ಕೆಲವು ಭಾಗದ ಜನರಿಗೆ ಅಕ್ರಮ ಸಕ್ರಮದಲ್ಲೂ ಜಾಗ ದೊರೆಯುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಅಲೆದಾಟ, ಕಿರಿಕಿರಿ

Advertisement

ಮಂಡೆಕೋಲಿನ ಮುರೂರು ಎಂಬಲ್ಲಿ ಹಿಂದೆ ಅರಣ್ಯ ಚೆಕ್‌ ಪೋಸ್ಟ್‌ ಇದ್ದು, ಇದೀಗ ಪೊಲೀಸ್‌ ಚೆಕ್‌ ಪೋಸ್ಟ್‌ ಕಾರ್ಯಚರಿಸುತ್ತಿದೆ. ಮಂಡೆಕೋಲಿನ ಜನರು ಈ ರಸ್ತೆಯಲ್ಲಿ ಸಂಚಾರದಲ್ಲಿ ತಪಾಸಣೆ ನೆಪದಲ್ಲಿ ಕಿರಿಕಿರಿ ಅನುಭವಿಸಬೇಕಾಗಿದೆ ಎಂಬ ದೂರು ಗ್ರಾಮಸ್ಥರದ್ದು. ಈ ಚೆಕ್‌ ಪೋಸ್ಟ್‌ ಮಂಡೆಕೋಲಿನ ಗಡಿ ಭಾಗ ಪರಪ್ಪೆ ಎಂಬಲ್ಲಿ ಆದಲ್ಲಿ ಒಳಿತು ಎಂಬುದು ಆಗ್ರಹ. ಪರಪ್ಪೆ-ಪಂಜಿಕಲ್ಲು ತೂಗುಸೇತುವೆ ಸಂಪರ್ಕ ಅಂತರ್‌ ರಾಜ್ಯ ರಸ್ತೆಯಲ್ಲಿ ಅಪಘಾತ ನಡೆದಲ್ಲಿ ಸುಳ್ಯ ಠಾಣೆಯಲ್ಲಿ ದೂರು ದಾಖ ಲಾದರೂ ಆದೂರು ಠಾಣೆಗೆ ಪ್ರಕರಣ ವರ್ಗಾ ವಣೆಗೊಂಡು ಸಮಸ್ಯೆ ಯಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಇತರ ಬೇಡಿಕೆ

ಸಮರ್ಪಕ ನೆಟ್‌ ವರ್ಕ್‌, ಕಾಡು ಪ್ರಾಣಿಗಳ ಹಾವಳಿ ತಡೆ, ಸರಿಯಾದ ವಿದ್ಯುತ್‌, ಉಪ ಆರೋಗ್ಯ ಕೇಂದ್ರ, ಕುಡಿಯುವ ನೀರು ಸೇರಿ ವಿವಿಧ ಬೇಡಿಕೆ ಮುಂದಿಡುತ್ತಿದ್ದಾರೆ.

ರಸ್ತೆ, ಸೇತುವೆ ಬೇಡಿಕೆ

ಮಂಡೆಕೋಲು ಗ್ರಾಮದ ಮುರೂರು-ಮಂಡೆಕೋಲು ಸಂಪರ್ಕದಲ್ಲಿ ತೋಡೊಂದಕ್ಕೆ ಸೇತುವೆ ನಿರ್ಮಾಣಗೊಂಡಿದ್ದರೂ ಇಲ್ಲಿ ಸುಮಾರು 1 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದೆ. ಇದು ಕಾಸರಗೋಡು, ಜಾಲೂÕರು ಸಂಪರ್ಕ ರಸ್ತೆಯಾಗಿದೆ. ಮಂಡೆಕೋಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸಂಪರ್ಕಿಸುವ 2 ಕಿ.ಮೀ. ರಸ್ತೆ ಅಭಿವೃದ್ಧಿಯಾಗಬೇಕಿದೆ. ಕಲ್ಲಡ್ಕ ಪರಪ್ಪೆ ಎಂಬಲ್ಲಿನ ಕಾಲನಿ ಸಂಪರ್ಕಿಸುವಲ್ಲಿ ಕಾಯರ್ತೋಡಿ ಎಂಬಲ್ಲಿಗೆ ಸೇತುವೆ ಬೇಡಿಕೆ ಈಡೇರದ ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಮಂಡೆಕೋಲು-ಮೈತಡ್ಕ ಸಂಪರ್ಕ ರಸ್ತೆ, ಪೇರಾಲು-ಮೈತಡ್ಕ ಸಂಪರ್ಕ ರಸ್ತೆ ಅಭಿವೃದ್ದಿಯಾಬೇಕಿದೆ. ಇದರ ಜತೆಗೆ ಗ್ರಾಮದ ವಿವಿಧ ಭಾಗಗಳ ರಸ್ತೆ ಅಭಿವೃದ್ಧಿಯ ಬೇಡಿಕೆ ಇದೆ. ರಸ್ತೆ ಅಭಿವೃದ್ಧಿಗೊಳಿಸುವಂತೆ ಇತ್ತೀಚೆಗೆ ಚುನಾವಣೆ ಬಹಿಷ್ಕಾರಕ್ಕೂ ಇಲ್ಲಿನವರು ಮುಂದಾಗಿದ್ದರು. ಆಗ ಅಭಿವೃದ್ಧಿ ಭರವಸೆ ನೀಡಲಾಗಿದ್ದು ಅದು ಶೀಘ್ರ ಅನುಷ್ಠಾನಕ್ಕೆ ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next