Advertisement

ಬಿಜೆಪಿಯಿಂದ ಅಭಿವೃದ್ಧಿ ಫೋಸು

01:50 PM Jan 20, 2021 | Team Udayavani |

ಕಲಬುರಗಿ: ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ನೀಡಿದ ಕೊಡುಗೆ ಏನು ಎನ್ನುವುದು ಎಲ್ಲರಿಗೂ ತಿಳಿದಿದ್ದರೂ ಬಿಜೆಪಿಗರು ಏನನ್ನೂ ಮಾಡದೇ ತಾವೇ ಅಭಿವೃದ್ಧಿಪರರು ಎಂದು ಫೋಸು ಕೊಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಟೀಕಿಸಿದರು.

Advertisement

ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚಿನ ಆರ್ಥಿಕ ನೆರವು ನೀಡಿತ್ತು. ಹತ್ತಾರು ಹೊಸ ಯೋಜನೆ ನೀಡಿತ್ತು. ಇದ್ಯಾವುದನ್ನು ಗಮನಿಸದೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಬಂದು, ಅನೇಕ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯಕ್ಕೆ ಹೆಚ್ಚು ನೆರವು ನೀಡುತ್ತಲೇ ಬಂದಿದೆ. ಇದು ಅವರಿಗೆ ಗೊತ್ತಿಲ್ಲವೇನು? ಅಲ್ಲದೇ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡುವುದರಲ್ಲಿ ಬಿಜೆಪಿ ನಂಬರ್‌ ಒನ್‌ ಸ್ಥಾನದಲ್ಲಿದೆ ಎಂದು ವಾಗ್ಧಾಳಿ ನಡೆಸಿದರು.

ಕಲಬುರಗಿ ಮಟ್ಟಿಗೆ ಹೇಳುವುದಾದರೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ), ಇಎಸ್‌ಐಸಿ ಮೆಡಿಕಲ್‌ ಸಂಕೀರ್ಣ, ರೈಲ್ವೆ ವಿಭಾಗ, ವಾಡಿ-ಕಲಬುರಗಿ ರೈಲು ಮಾರ್ಗ, ಎರಡು ರಾಷ್ಟ್ರೀಯ ಹೆದ್ದಾರಿಗಳು ಹೀಗೆ ಹತ್ತಾರು ಯೋಜನೆಗಳು ಕಲಬುರಗಿ ಭಾಗಕ್ಕೆ ನೀಡಿರುವಾಗ ಇಡಿ ರಾಜ್ಯಕ್ಕೆ ಎಷ್ಟೊಂದು ಯೋಜನೆಗಳನ್ನು ನೀಡಿರಬೇಕು ಎನ್ನುವುದನ್ನು ನೀವೇ ಯೋಚಿಸಿ ಎಂದರು.

ಇದನ್ನೂ ಓದಿ:ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

Advertisement

ಯುಪಿಎ ಸರ್ಕಾರ ಹತ್ತು ವರ್ಷದಲ್ಲಿ ರಾಜ್ಯಕ್ಕೆ ಏನು ಕೊಡುಗೆ ನೀಡಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವಿಟ್‌ ಮೂಲಕ ಉತ್ತರ ನೀಡಿದ್ದಾರೆ. ಅದನ್ನು ಒಮ್ಮೆ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಗಮನಿಸಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಲು ರೂಪಿಸಬೇಕಾದ ತಂತ್ರಗಾರಿಕೆ ಕುರಿತು ಆಯಾ ಕ್ಷೇತ್ರದವರೊಂದಿಗೆ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿ ಯಾರೆಂದು ಅಂತಿಮವಾಗಿಲ್ಲ. ಜ. 20ರಂದು ಸಭೆ ನಡೆಸಿ ವರಿಷ್ಠರಿಗೆ ವರದಿ ಸಲ್ಲಿಸುವೆ ಎಂದು ತಿಳಿಸಿದರು.

ಪ್ರತಿ ಬ್ಲಾಕ್‌ ಮಟ್ಟದಲ್ಲಿ ತಿಂಗಳಿಗೆರಡು ಸಭೆ ನಡೆಸಬೇಕು. ಶಾಸಕರು ಭಾಗಿಯಾಗಬೇಕು. ಬ್ಲಾಕ್‌ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರು ಎರಡು ವಾರಕ್ಕೊಂದು ಪತ್ರಿಕಾಗೋಷ್ಠಿ ನಡೆಸಬೇಕು. ಗ್ರಾ.ಪಂ ಹಾಗೂ ವಾರ್ಡ್‌ ಸಮಿತಿ ರಚಿಸಲು ಸೂಚಿಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ಭರವಸೆ ಈಡೇರಿಸಿಲ್ಲ, ಚಾಲಕರು, ಟೈಲರ್‌ಗಳು ಸೇರಿದಂತೆ ಇನ್ನಿತರ ಶ್ರಮಿಕ ವರ್ಗದವರಿಗೆ ಇನ್ನೂ ಪರಿಹಾರ ನೀಡಿಲ್ಲ. ಈ ವಿಷಯಗಳನ್ನು ಮುಂದಿರಿಸಿಕೊಂಡು ಹೋರಾಟಕ್ಕೆ ಅಣಿಯಾಗುತ್ತಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಯಲಿವೆ ಎಂದು ವಿವರಿಸಿದರು.

ದೆಹಲಿ ರೈತರ ಹೋರಾಟ ಬೆಂಬಲಿಸಿ ಜ. 20ರಂದು ರಾಜಭವನ ಚಲೋ ನಡೆಯಲಿದ್ದು ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ಡಾ| ಅಜಯಸಿಂಗ್‌, ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್‌ ಖರ್ಗೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next