Advertisement

ಆಡಳಿತ-ವಿಪಕ್ಷ ಸದಸ್ಯರ ಪ್ರತಿಷ್ಠೆಗೆ ಅಭಿವೃದ್ಧಿ ಬಲಿ

10:41 AM Jul 22, 2019 | Team Udayavani |

ನಾಗರಾಜ ತೇಲ್ಕರ್‌
ದೇವದುರ್ಗ:
ತಾಲೂಕು ಪಂಚಾಯಿತಿ ಆಡಳಿತ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ ಸದಸ್ಯರು ಮತ್ತು ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆಯಿಂದಾಗಿ ವರ್ಷವೇ ಗತಿಸಿದರೂ ಸಭೆ ನಡೆದಿಲ್ಲ. ಹೀಗಾಗಿ ತಾಲೂಕಿನ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆ ಆಗಿದೆ.

Advertisement

13ನೇ ಹಣಕಾಸು ಯೋಜನೆಯ ಬಡ್ಡಿ 1.37 ಕೋಟಿ ರೂ. ಬಳಕೆ ಆಗದೇ ಸರ್ಕಾರಕ್ಕೆ ಮರಳಿ ಹೋಗಿದೆ. ತಾಲೂಕು ಪಂಚಾಯಿತಿಯಿಂದ ವಾಣಿಜ್ಯ ಮಳಿಗೆ ನಿರ್ಮಿಸಿ ನಾಲ್ಕು ವರ್ಷವಾದರೂ ಮಳಿಗೆಗಳನ್ನು ಹರಾಜು ಮಾಡಿ ಬಾಡಿಗೆಗೆ ನೀಡಿಲ್ಲ. ಇದರಿಂದ ತಾಪಂ ಆದಾಯಕ್ಕೂ ಕೊಕ್ಕೆ ಬಿದ್ದಿದೆ.

ನಡೆಯದ ಸಭೆ: ತಾಲೂಕು ಪಂಚಾಯಿತಿ ನಡಾವಳಿ ಪ್ರಕಾರ ಮೂರು ತಿಂಗಳಿಗೊಮ್ಮೆ ಸಾಮಾನ್ಯ ಸಭೆ ನಡೆಸಬೇಕು. ಆದರೆ ವರ್ಷವಾದರೂ ಒಂದೇ ಒಂದು ಸಭೆ ನಡೆಸಿಲ್ಲ. ಬಿಜೆಪಿ, ಕಾಂಗ್ರೆಸ್‌ ಸದಸ್ಯರ ಹೊಂದಾಣಿಕೆ ಕೊರತೆ ಮತ್ತು ಅಧಿಕಾರಿಗಳ ಮಧ್ಯದ ಸಮನ್ವಯ ಕೊರತೆ ಇದಕ್ಕೆ ಕಾರಣವೆನ್ನಲಾಗಿದೆ. ಮೂರು ತಿಂಗಳಿಗೊಮ್ಮೆ ಸಭೆ ಕರೆಯುವಂತೆ ಕಾಂಗ್ರೆಸ್‌ ಆಗ್ರಹಿಸುತ್ತಿದ್ದರೂ ಇದಕ್ಕೆ ಬಿಜೆಪಿ ಸದಸ್ಯರು ಸ್ಪಂದಿಸುತ್ತಿಲ್ಲ.

ಟೆಂಡರ್‌ ವಿಳಂಬ: ತಾಲೂಕು ಪಂಚಾಯಿತಿ ಅನುದಾನದಲ್ಲಿ ರಾಜ್ಯ ಹೆದ್ದಾರಿ ರಸ್ತೆ ಪಕ್ಕದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಾಲ್ಕು ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ನಾಲ್ಕು ವರ್ಷವಾದರೂ ಹರಾಜು ನಡೆಸಿ ಮಳಿಗೆಗಳನ್ನು ಬಾಡಿಗೆಗೆ ನೀಡಿಲ್ಲ. ಹಲವು ಬಾರಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಳಿಗೆಗಳನ್ನು ಬಾಡಿಗೆಗೆ ನೀಡಲು ಆಗ್ರಹಿಸಿದರೂ ಪ್ರಯೋಜನವಾಗಿಲ್ಲ. ಮಳಿಗೆಗಳನ್ನು ಬಾಡಿಗೆ ನೀಡಿದ್ದರೆ ತಾಲೂಕು ಪಂಚಾಯಿತಿಗೆ ಲಕ್ಷಾಂತರ ರೂ. ಆದಾಯ ಬರುತ್ತಿತ್ತು. ಆದರೆ ಇದಕ್ಕೂ ಕೊಕ್ಕೆ ಬಿದ್ದಿದೆ. ಹಳೆ ಆರೇಳು ಮಳಿಗೆಗಳಿಂದ ತಿಂಗಳಿಗೆ ಬರುವ ಬಾಡಿಗೆ ಹಣದ ಲೆಕ್ಕಪತ್ರದಲ್ಲೂ ಗೊಂದಲ ಇದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದರೂ ಸೂಕ್ತ ಮಾಹಿತಿ ನೀಡಿಲ್ಲ ಎಂದು ಸದಸ್ಯರು ದೂರಿದ್ದಾರೆ.

ಹೊಂದಾಣಿಕೆ ಕೊರತೆ: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ತಾಪಂ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಪ್ರತಿಷ್ಠೆ, ಹಾಗೂ ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆ ಹಿನ್ನೆಲೆಯಲ್ಲಿ ತಾಲೂಕಿನ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ರಸ್ತೆ ದುಸ್ಥಿತಿ, ಚರಂಡಿ, ವಿದ್ಯುತ್‌, ಬೀದಿ ದೀಪ, ಶೌಚಾಲಯ ಕೊರತೆ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸೇರಿ ಸಮಸ್ಯೆಗಳಿವೆ. ತಾಲೂಕಿನಲ್ಲಿ ಬರ ಆವರಿಸಿದೆ. ಇಂತಹ ಸಮಸ್ಯೆಗಳ ಸಭೆಯಲ್ಲಿ ಚರ್ಚೆ ನಡೆಸಬೇಕಾದ ಸದಸ್ಯರಲ್ಲಿ ಹೊಂದಾಣಿಕೆ ಇಲ್ಲದ್ದರಿಂದ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಇನ್ನು ಗ್ರಾಮೀಣ ಜನರು ಸಮಸ್ಯೆಗಳ ಪಟ್ಟಿ ಹೊತ್ತುಕೊಂಡು ತಾಲೂಕು ಪಂಚಾಯಿತಿಗೆ ಬಂದರೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂಂದು ಗ್ರಾಮಸ್ಥರು ದೂರಿದ್ದಾರೆ.

Advertisement

ವರ್ಷಗಳಿಂದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಕರೆದಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಶಾಸಕರ ನಿರ್ದೇಶನದಂತೆ ಆಡಳಿತ ನಡೆಯುತ್ತಿದೆ.
ಗೋವಿಂದ ನಾಯಕ,
ಚಿಕ್ಕಗುಡ್ಡ ಕ್ಷೇತ್ರದ ತಾಪಂ ಸದಸ್ಯ

ಕೆಲ ಕಾರಣಗಳಿಂದ ಸಭೆ ಕರೆಯುವುದು ವಿಳಂಬವಾಗಿದೆ. ತಾಪಂ. ಅಧ್ಯಕ್ಷರ ಸೂಚನೆ ಮೇರೆಗೆ ವಾರದಲ್ಲಿ ಸಭೆ ಕರೆಯಲಾಗುವುದು.
ಹಾಲಸಿದ್ದಪ್ಪ ಪೂಜೇರಿ,
ತಾಪಂ ಕಾ.ನಿ. ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next