Advertisement

ಕರ್ಕಿಹಳ್ಳಿ-ಪರ್ತಾಪುರ ಗ್ರಾಮಸ್ಥರ ಸ್ಥಳಾಂತರ

03:28 PM Aug 11, 2019 | Naveen |

ದೇವದುರ್ಗ: ಕೃಷ್ಣಾ ನದಿಗೆ ಶನಿವಾರ ಸುಮಾರು 5.75 ಲಕ್ಷ ಕ್ಯೂಸೆಕ್‌ ನೀರು ಬಿಟ್ಟ ಪರಿಣಾಮ ತಾಲೂಕಿನ ನದಿ ತೀರದ ಕರ್ಕಿಹಳ್ಳಿ ಮತ್ತು ಪರ್ತಾಪುರ ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಈ ಗ್ರಾಮಗಳ ಗ್ರಾಮಸ್ಥರನ್ನು ತಾಲೂಕು ಆಡಳಿತ ಬಸ್‌ ಮೂಲಕ ಪಟ್ಟಣದಲ್ಲಿ ತೆರೆದ ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು.

Advertisement

ಕರ್ಕಿಹಳ್ಳಿ ಮತ್ತು ಪರ್ತಾಪುರ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಎರಡೂ ಗ್ರಾಮಗಳ ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಜಾನುವಾರುಗಳು ಮೇವು, ನೀರಿಗಾಗಿ ಪರದಾಡುವಂತಾಗಿದೆ.

ಕರ್ಕಿಹಳ್ಳಿ ಗ್ರಾಮದ ಸುಮಾರು 150 ಕುಟುಂಬಗಳ 250ಕ್ಕೂ ಹೆಚ್ಚು ಜನರನ್ನು ಶನಿವಾರ ಬೆಳಗ್ಗೆ ಬಸ್‌ ಮೂಲಕ ದೇವದುರ್ಗ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದ ಗಂಜಿ ಕೇಂದ್ರಕ್ಕೆ ಕರೆತರಲಾಯಿತು. ಮಧ್ಯಾಹ್ನದ ವೇಳೆಗೆ

ಪರ್ತಾಪುರ ಗ್ರಾಮದ 300 ಜನರನ್ನು ದೇವದುರ್ಗ ಬಾಲಕಿಯರ ಕಾಲೇಜಿನಲ್ಲಿ ತೆರೆದ ಗಂಜಿ ಕೇಂದ್ರಕ್ಕೆ ಕರೆತರಲಾಯಿತು.

ಊಟಕ್ಕಾಗಿ ಪರದಾಟ: ಪಟ್ಟಣದ ಹೊರವಲಯದ ಮೊರಾರ್ಜಿ ವಸತಿ ನಿಲಯದ ಗಂಜಿ ಕೇಂದ್ರದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೇ ಕರ್ಕಿಹಳ್ಳಿ ಗ್ರಾಮದ 150 ಕುಟುಂಬಗಳನ್ನು ಸ್ಥಳಾಂತರಿಸಿದ್ದರಿಂದ ಮಧ್ಯಾಹ್ನದವರೆಗೂ ಸಂತ್ರಸ್ತರು ಊಟದ ವ್ಯವಸ್ಥೆ ಇಲ್ಲದೇ ಮಹಿಳೆಯರು, ಮಕ್ಕಳು ಪರದಾಡಬೇಕಾಯಿತು. ಮನೆಯಿಂದ ತಂದ ರೊಟ್ಟಿಗೆ ಖಾರದ ಪುಡಿ ಹಾಕಿಕೊಂಡು ಬಾಲಕನೊಬ್ಬ ತಿನ್ನುವ ದೃಶ್ಯ ಕಂಡುಬಂತು. ಮಧ್ಯಾಹ್ನದ ವೇಳೆಗೆ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಾಡಲು ತಾಲೂಕು ಆಡಳಿತ ಮುಂದಾಯಿತು.

Advertisement

ಜಾನುವಾರುಗಳೊಂದಿಗೆ ಬಂದ ಸಂತ್ರಸ್ತರು: ಶನಿವಾರ ಬೆಳಗ್ಗೆ ಕರ್ಕಿಹಳ್ಳಿ ಗ್ರಾಮದ ಕೆಲ ಸಂತ್ರಸ್ತರು ತಮ್ಮೊಂದಿಗೆ ಬಸ್‌ನಲ್ಲಿ ಕುರಿ-ಮೇಕೆಗಳೊಂದಿಗೆ ಬಂದರೆ, ಪುರುಷರು ಜಾನುವಾರುಗಳನ್ನು ಹೊಡೆದುಕೊಂಡು ಬರುತ್ತಿದ್ದರು. ವಸತಿ ನಿಲಯದ ಆವರಣದಲ್ಲಿ ಕುರಿ-ಮೇಕೆಗಳನ್ನು ಕಟ್ಟಿದ್ದು ಕಂಡುಬಂತು.

ಹದಗೆಟ್ಟ ಆಶ್ರಯ ಮನೆ: 2009ರಲ್ಲಿ ಕರ್ಕಿಹಳ್ಳಿ ಗ್ರಾಮದ ಆಸರೆ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿ ತಾಲೂಕು ಆಡಳಿತ ಸೌಲಭ್ಯ ಕಲ್ಪಿಸದ್ದರಿಂದ ಗ್ರಾಮಸ್ಥರು ವಾಸಕ್ಕೆ ಹಿಂದೇಟು ಹಾಕಿದ ಪರಿಣಾಮ ಈಗ ಮನೆಗಳು ಪಾಳುಬಿದ್ದು ಹಾಳಾಗಿವೆ.

ಹೆಚ್ಚಿನ ಕೆಟ್ಟೆಚ್ಚರ: ಕೃಷ್ಣಾ ನದಿಗೆ ದಿನೇದಿನೇ ನೀರು ಹರಿವಿನ ಪ್ರಮಾಣ ಹೆಚ್ಚುತ್ತಿದೆ. ಶನಿವಾರ 5.75 ಲಕ್ಷ ಕ್ಯೂಸೆಕ್‌ ಬಿಟ್ಟಿದ್ದರೆ ಇದು ಇನ್ನೂ 6.5 ಲಕ್ಷ ಕ್ಯೂಸೆಕ್‌ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ತಾಲೂಕಿನಾದ್ಯಂತ ಜಿಲ್ಲಾ ಮತ್ತು ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ. ಹೇರುಂಡಿ ಗ್ರಾಮದ ಹತ್ತಿರಕ್ಕೆ ನೀರು ನುಗ್ಗಿದ್ದು, ಬೆಳೆ ಜಾಲವೃತವಾಗಿವೆ. ಮತ್ತೂಮ್ಮೆ ಪ್ರವಾಹ ಭೀತಿ ಶುರುವಾಗಿದೆ. ಪರತಾಪುರು, ಲಿಂಗದಹಳ್ಳಿ, ನಿಲವಂಜಿ, ಬಾಗೂರು, ಚಿಂಚೋಡಿ, ವೀರಗೋಟ, ಗೂಗಲ್ ಸೇರಿ ಇತರೆ ನದಿತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಪೂರ್ವ ತಯಾರಿಲ್ಲ: ಒಂದೆಡೆ ಕೃಷ್ಣಾ ನದಿ ಉಕ್ಕಿ ಹರಿದು ಗ್ರಾಮಗಳಿಗೆ ನುಗ್ಗುತ್ತಿದ್ದರೆ, ಇನ್ನೊಂದೆಡೆ ತಾಲೂಕು ಆಡಳಿತ ಯಾವುದೇ ಪೂರ್ವ ತಯಾರಿ ಇಲ್ಲದೇ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ಸಂತ್ರಸ್ತರನ್ನು ಸ್ಥಳಾಂತರಿಸುತ್ತಿದೆ. ಇದು ಸಂತ್ರಸ್ತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಇನ್ನೊಂದೆಡೆ ಸ್ಥಳಾಂತರಗೊಂಡ ಸಂತ್ರಸ್ತರಿಗೆ ತಮ್ಮ ಜಮೀನು, ಮನೆ, ಜಾನುವಾರುಗಳದ್ದೇ ಚಿಂತೆ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next