Advertisement

ಜ್ಞಾನ, ತಾಂತ್ರಿಕತೆಯ ಮೇಲೆ ದೇಶದ ಭವಿಷ್ಯ ನಿರ್ಧಾರ

09:14 PM Oct 28, 2019 | Lakshmi GovindaRaju |

ಚಿಕ್ಕಬಳ್ಳಾಪುರ: ದೇಶದ ಆರ್ಥಿಕ ಪ್ರಗತಿ ಜೊತೆಗೆ ಇಂದು ಸಮಾಜದ ಸಮಗ್ರ ಬೆಳವಣಿಗೆಗೆ ತಾಂತ್ರಿಕತೆಯ ಅಭಿವೃದ್ಧಿ ಮೇಲೆ ನಿಂತಿದ್ದು, ಜ್ಞಾನ ಹಾಗೂ ತಾಂತ್ರಿಕತೆ ಒದಗಿಸುವ ಶಿಕ್ಷಣ ಸಂಸ್ಥೆಗಳು ನಿಜವಾಗಿ ದೇಶಕ್ಕೆ ನಾಯಕತ್ವ ರೂಪಿಸುವ ಹೆಚ್ಚು ಹೊಣೆಗಾರಿಕೆ ಹೊಂದಿವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ತಿಳಿಸಿದರು.

Advertisement

ನಗರದ ಹೊರ ವಲಯದ ಮುದ್ದೇನಹಳ್ಳಿಯಲ್ಲಿರುವ ವಿಟಿಯು ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ವಿಟಿಯು ಸ್ನಾತಕೋತ್ತರ ಕೇಂದ್ರದ ಮೂಲ ಸೌಕರ್ಯ ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಪ್ರಾಮಾಣಿಕ ಪ್ರಯತ್ನ ಅಗತ್ಯ: ತಂತ್ರಜ್ಞಾನ ಹಾಗೂ ಜ್ಞಾನ ದೇಶದ ಭವಿಷ್ಯವನ್ನು ನಿರ್ಧರಿಸಲಿವೆ. ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಎಷ್ಟೇ ಒತ್ತು ಕೊಟ್ಟರೂ ಸಾಲದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಅಮೂಲ್ಯ. ಶಿಕ್ಷಕರು ಕೂಡ ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.

ವಿದ್ಯಾರ್ಥಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಬಹಳ ಮುಖ್ಯ. ತಾವು ಕಲಿತ ಜ್ಞಾನವನ್ನು ಸಮಾಜದ ಸಮಸ್ಯೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ಸಮಾಜಕ್ಕೆ ಧಾರೆ ಎರೆಯಬೇಕು. ಇತ್ತೀಚೆಗೆ ಕಾಲ ಕಳೆದು ಪದವಿ ಪಡೆಯುವರ ಸಂಖ್ಯೆ ಹೆಚ್ಚಾಗಿದೆ. ಅದು ನಿಜವಾದ ವಿದ್ಯಾರ್ಥಿ ಲಕ್ಷ್ಮಣವಲ್ಲ. ಕ್ಯಾಂಪಸ್‌ನಲ್ಲಿ ಇದ್ದು ಕಲಿತರೆ ಅದು ಬದುಕಿಗೆ ನೆರವಾಗುತ್ತದೆ ಎಂದರು.

ಅದ್ಭುತ ಕಟ್ಟಡ: ಮುದ್ದೇನಹಳ್ಳಿಯಲ್ಲಿರುವ ವಿಟಿಯು ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆಯಬೇಕಿದೆ. ಇಲ್ಲಿನ ವಿಟಿಯು ಸ್ನಾತಕೋತ್ತರ ಕೇಂದ್ರದ ಕಟ್ಟಡಗಳು ಅದ್ಭುತವಾಗಿ ಮೂಡಿ ಬಂದಿವೆ. ಆದರೆ ಇದಕ್ಕೆ ಬೆಂಬಲವಾಗಿ ಬೇಕಾದ ಮೂಲ ಸೌಕರ್ಯಗಳ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ.

Advertisement

ಇಲ್ಲಿ ಭವ್ಯವಾದ ಕಟ್ಟಡ ಕಟ್ಟಲು ಸರ್‌ ಎಂ.ವಿಶೇಶ್ವರಯ್ಯನವರು ತವರು ಮುದ್ದೇನಹಳ್ಳಿ ಇದೆ. ಆದ್ದರಿಂದ ಇಲ್ಲಿ ವಿಟಿಯು ಸ್ನಾತಕೋತ್ತರ ಕೇಂದ್ರವನ್ನು ತೆರೆಯಲಾಗಿದೆ. ಸರ್‌ಎಂವಿಗೆ ಗೌರವ ಸಲ್ಲುವ ರೀತಿಯಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆ ರಾಷ್ಟ್ರಕ್ಕೆ ಮಾದರಿ ಆಗುವ ರೀತಿಯಲ್ಲಿ ಬೆಳೆಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ, ರಿಜಿಸ್ಟ್ರಾರ್‌ ಡಾ.ಎ.ಎಸ್‌.ದೇಶಪಾಂಡೆ, ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌, ಡಿಸಿಎಂ ಆಪ್ತ ಕಾರ್ಯದರ್ಶಿ ಪ್ರದೀಪ್‌, ತಾಪಂ ಇಒ ಹರ್ಷವಧನ್‌ ಸೇರಿದಂತೆ ಮುದ್ದೇನಹಳ್ಳಿ ವಿಟಿಯುನ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಸಚಿವರು, ವಿಟಿಯು ಕೈಗೊಂಡಿರುವ ಶೈಕ್ಷಣಿಕ ಕಾರ್ಯಕ್ರಮಗಳು, ಪರೀಕ್ಷಾ ವಿಧಾನ, ವಿಟಿಯುನಲ್ಲಿ ಲಭ್ಯವಿರುವ ಸಂಶೋಧನಾ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಂವಾದದಲ್ಲಿ ವಿಟಿಯು ಸಮಸ್ಯೆಗಳ ಅನಾವರಣ: ಉನ್ನತ ಶಿಕ್ಷಣ ಸಚಿವ ಇಲಾಖೆ ಕಾರ್ಯಭಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ವಿಟಿಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮ, ಮೂಲ ಸೌಕರ್ಯಗಳಿಂದ ಬಳಲುತ್ತಿರುವ ವಿಟಿಯು ಅವ್ಯವಸ್ಥೆಗಳ ಆಗರ ಅನಾವರಣಗೊಂಡಿತು.

ಸ್ನಾತಕೋತ್ತರ ಕೇಂದ್ರ ಆರಂಭಗೊಂಡು 6 ವರ್ಷ ಕಳೆದಿದೆ. ಇದುವರೆಗೂ ಸುಮಾರು ಜನ ಬಂದು ನಮಗೆ ಭರವಸೆ ಕೊಟ್ಟು ಹೋಗುತ್ತಿದ್ದಾರೆ. ನೀವು ಬಂದು ಹೋದರೂ ನಮಗೆ ರಸ್ತೆ ಸರಿ ಹೋಗುತ್ತದೆ ಎನ್ನುವುದು ಏನು ಖಾತ್ರಿ ಎಂದು ವಿದ್ಯಾರ್ಥಿಯೊಬ್ಬ ಡಿಸಿಎಂರನ್ನು ಪ್ರಶ್ನಿಸಿದರು.

ಕಾಲೇಜು ಕಟ್ಟಡ ಚೆನ್ನಾಗಿದೆ. ಆದರೆ ಸರಿಯಾದ ರಸ್ತೆ ಇಲ್ಲ. ಬಸ್‌ ನಿಲ್ದಾಣ ಬಿಡಿ ಕನಿಷ್ಠ ಮಳೆ, ಗಾಳಿ ಬಿಸಿಲಿನಿಂದ ಆಶ್ರಯ ಪಡೆಯಲು ತಂಗುದಾಣ ಇಲ್ಲ. ಬೇಸಿಗೆ ಬಂದರೆ ಕಾಲೇಜಿನಲ್ಲಿ ಹನಿ ನೀರು ಸಿಗಲ್ಲ. ವಿದ್ಯುತ್‌ ಸಮಸ್ಯೆ ಹೇಳ ತೀರದಾಗಿದೆ. ಸರಿಯಾದ ಕ್ಯಾಂಟೀನ್‌ ವ್ಯವಸ್ಥೆ ಇಲ್ಲ. ಆರೋಗ್ಯದಲ್ಲಿ ಏರುಪೇರು ಆದರೆ ವೈದ್ಯಕೀಯ ಚಿಕಿತ್ಸೆ ಸಿಗಲ್ಲ.

ಎಲ್ಲಾ ಮಕ್ಕಳಿಗೆ ಹಾಸ್ಟೆಲ್‌ ಸೌಕರ್ಯ ಇಲ್ಲ. ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಮೊದಲು ದುರಸ್ತಿ ಮಾಡದಿರೆ ಸಾಕು ಎಂದರು. ಸುಮಾರು ವಿದ್ಯಾರ್ಥಿಗಳು, ಉಪನ್ಯಾಸಕರು, ಭದ್ರತಾ ಸಿಬ್ಬಂದಿ ಬಿದ್ದು ಗಾಯಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಸಂಕಷ್ಟವನ್ನು ಉನ್ನತ ಶಿಕ್ಷಣ ಸಚಿವರ ಮುಂದೆ ತೆರೆದಿಟ್ಟರು.

ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡುವಂತೆ ನಮಗೂ ಉಚಿತವಾಗಿ ಲ್ಯಾಟ್‌ಟಾಪ್‌ ನೀಡಬೇಕು ಹಾಗೂ ವಿಟಿಯು ವಿಧಿಸುವ ಶುಲ್ಕ ಸಂಪೂರ್ಣ ಉಚಿತ ಮಾಡಿದರೆ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಶುಲ್ಕ ಕಡಿತಗೊಳಿಸಬೇಕೆಂದು ವಿದ್ಯಾರ್ಥಿಗಳು ಕೋರಿದರು. ಎಲ್ಲಾ ಸಮಸ್ಯೆಗಳ ಬಗ್ಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವುದಾಗಿ ಸಚಿವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next