Advertisement

ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

07:16 AM Jun 21, 2020 | Lakshmi GovindaRaj |

ಮಾಲೂರು: ಪಡಿತರ ಅಕ್ಕಿಯನ್ನು ಖರೀದಿ ಮಾಡಿ, ಕಾಳ ಸಂತೆಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವ ಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಟ್ಟಣದ ದೊಡ್ಡ ಮಸೀದಿ ಬಳಿ ನಡೆದಿದೆ.

Advertisement

ಬಂಧಿತ  ನಸ್ರುಲ್ಲಾಖಾನ್‌(45) ಪಡಿತರ ಧಾನ್ಯವನ್ನು ಕೆಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಖರೀದಿ ಮಾಡಿ ಬಂಗಾರಪೇಟೆಯ ರೈಸ್‌ಮೀಲ್‌ಗ‌ಳಿಗೆ ರವಾನೆ ಮಾಡಿ, ಅಲ್ಲಿಂದ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.  ದಾಸ್ತಾನು ಮಾಡಿದ್ದ ಮಳಿಗೆ ಬಳಿ ಅಕ್ಕಿಯನ್ನು ಲಾರಿಗೆ ತುಂಬುವಾಗ ಅನುಮಾನಗೊಂಡ ಕರವೇ ಕಾರ್ಯಕರ್ತರು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಉದಾಸೀನ ಮಾಡಿದ ಅಧಿಕಾರಿಗಳು, ಪ್ರಕರಣ ತೀವ್ರ  ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿ ತನಿಖೆ ನಡೆಸಿದರು. ತಲಾ 50 ಕೆ.ಜಿ.ಯ 121 ಮೂಟೆ ಅಕ್ಕಿ ಆಹಾರ ಇಲಾಖೆಗೆ, ಆರೋಪಿ ನಸ್ರುಲ್ಲಾಖಾನ್‌ನನ್ನು ಪಿಎಸ್‌ಐ ಆಂಜಿನಪ್ಪ ಮತ್ತು ಸಿಬ್ಬಂದಿ ವಶಕ್ಕೆ ನೀಡಲಾಯಿತು. ಆದರೆ,  ಪೊಲೀಸ್‌ ವಾಹನದಲ್ಲಿ ಕೂತಿದ್ದ ಆರೋಪಿ ಪರಾರಿಯಾಗಿದ್ದು, ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಕರವೇ ಕಾರ್ಯಕರ್ತರು ಸ್ಥಳದಲ್ಲಿಯೇ ಪ್ರತಿಭಟಿಸಿದರು.

ಈ ವೇಳೆ ವೃತ್ತ ನಿರೀಕ್ಷಕ ಕೆ.ನಾಗರಾಜು ತಪ್ಪಿಸಿ ಕೊಂಡವನ ಬಂಧಿಸುವುದಾಗಿ ಭರವಸೆ ನೀಡಿದರು. ಆಹಾರ ಇಲಾಖೆ ನಿರೀಕ್ಷಕ ಚಂದ್ರಮೋಹನ್‌, ಮಂಜುನಾಥಗೌಡ, ಕರವೇ ಮುರಳೀಧರ, ಲತಾ ಬಾಯಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next