Advertisement

ನ.ಪಂ.ನಿಂದ ಬೆಲೆಬಾಳುವ ಗಿಡಗಳ ನಾಶ 

02:58 PM Dec 03, 2017 | Team Udayavani |

ಸುಳ್ಯ: ಸುಳ್ಯ ನಗರ ಪಂಚಾಯತ್‌ನ ಸ್ವಚ್ಛ ಭಾರತ್‌ ಮಿಷನ್‌ ರಾಯಭಾರಿ ಸ್ಥಾನಕ್ಕೆ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರು ಶನಿವಾರ ರಾಜೀನಾಮೆ ನೀಡಿದ್ದಾರೆ.

Advertisement

ತಮ್ಮ ಮನೆ ಸಮೀಪ ಸುಮಾರು 60 ಸಾವಿರ ರೂ. ವೆಚ್ಚದಲ್ಲಿ ಬೆಲೆಬಾಳುವ 49 ಬೋಗನ್‌ವಿಲ್ಲಾ ಗಿಡಗಳನ್ನು ನೆಡಲಾಗಿತ್ತು. ಪಂ. ಎಂಜಿನಿಯರ್‌ ಶಿವಕುಮಾರ್‌ ಅವರ ಆದೇಶದಂತೆ ಈ ಗಿಡಗಳನ್ನು ಕಡಿಯಲಾಗಿರುವುದರಿಂದ ಬೇಸತ್ತು ಈ ರಾಜೀನಾಮೆ ನೀಡಿರುವುದಾಗಿ ರಾಜೀನಾಮೆ ಪತ್ರದಲ್ಲಿ ಅವರು ವಿವರಿಸಿದ್ದಾರೆ.

ರಾಜೀನಾಮೆ ಪತ್ರವನ್ನು ಪುತ್ರ ಕೆ.ಸಿ. ಅಕ್ಷಯ್‌ ಹಾಗೂ ಮೆಡಿಕಲ್‌ ಕಾಲೇಜು ಆಡಳಿತಾಧಿಕಾರಿ ಜಗದೀಶ್‌ ಅಡ್ತಲೆ,
ಆಯುರ್ವವೇದ ಕಾಲೇಜು ಆಡಳಿತಾಧಿಕಾರಿ ಡಾ| ಲೀಲಾಧರ್‌, ಧನಂಜಯ ಮದುವೆಗದ್ದೆ ಅವರ ನೇತೃತ್ವದಲ್ಲಿ 50ಕ್ಕೂ ಅಧಿಕ ಮಂದಿಯ ನಿಯೋಗ ನ.ಪಂ. ಮುಖ್ಯಾಧಿಕಾರಿಯಾಗಿರುವ ಗೋಪಾಲ ನಾಯ್ಕ ಅವರ ಕಚೇರಿಗೆ ತೆರಳಿ ಹಸ್ತಾಂತರಿಸಿತು. ಈ ಪತ್ರವನ್ನು ಸಂಸದರು, ಕೇಂದ್ರ ಹಾಗೂ ರಾಜ್ಯ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಕಳುಹಿಸಲಾಗಿದೆ. ಪತ್ರ ಸ್ವೀಕರಿಸಿದ ಮುಖ್ಯಾಧಿಕಾರಿಗಳು ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಗಂಟೆಗೂ ಕಾಲ ಕಾದರು
ರಾಜೀನಾಮೆ ಪತ್ರ ನೀಡುವ ಬಗ್ಗೆ ಆಗಮಿಸುವುದಾಗಿ ಮುಖ್ಯಾಧಿಕಾರಿಯವರಲ್ಲಿ ಬೆಳಗ್ಗೆ ನಿಯೋಗ ತಿಳಿಸಿತ್ತು. ಮುಖ್ಯಾಧಿಕಾರಿಗಳು ಸಂಜೆ 3.15ಕ್ಕೆ ಬರುವಂತೆ ತಿಳಿಸಿದರು. ನಿಯೋಗ ತೆರಳಿದ್ದ ವೇಳೆ ಅಧಿಕಾರಿ ಹೊರಹೋಗಿದ್ದರು. ನಿಗದಿತ ಸಮಯಕ್ಕೆ ಆಗಮಿಸಿ ಫೋನಾಯಿಸಿದಾಗ ಕರ್ತವ್ಯ ನಿಮಿತ್ತ ಹೊರಹೋಗಿರುವುದಾಗಿ ತಿಳಿಸಿ, ಒಂದೂವರೆ ಗಂಟೆಗಳ ಕಾಲ ಕಾಯಿಸಿದರು.

ನನ್ನ ಬಳಿ ಚರ್ಚಿಸಿಲ್ಲ
ಗಿಡನೆಡುವ ವಿಚಾರವಾಗಿ ತನ್ನ ಬಳಿ ಚರ್ಚಿಸಿಲ್ಲ. ನೆಟ್ಟಿದ್ದ ಗಿಡವನ್ನು ತೆರವುಗೊಳಿಸುವಂತೆಯೂ ತಾನು ಸೂಚಿಸಿಲ್ಲ. ಮುಂದೆ ಆಡಳಿತ ಮಂಡಳಿ ಸಭೆಯಲ್ಲಿರಿಸಿ ಚರ್ಚಿಸಲಾಗುವುದು.
ಗೋಪಾಲ್‌ ನಾಯ್ಕ
  ನ.ಪಂ. ಮುಖ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next