Advertisement

ನಿಷೇಧವಿದ್ದರೂ ತಾಲೂಕಿನಲ್ಲಿ ಪ್ಲಾಸ್ಟಿಕ್‌ ಬಳಕೆ ನಿಂತಿಲ್ಲ

08:41 PM Oct 12, 2019 | Lakshmi GovindaRaju |

ಚನ್ನರಾಯಪಟ್ಟಣ: ಪ್ಲಾಸ್ಟಿಕ್‌ ಕೈಚೀಲ, ಪ್ಲಾಸ್ಟಿಕ್‌ ಲೋಟ ಸೇರಿದಂತೆ ಪ್ಲಾಸ್ಟಿಕ್‌ ವಸ್ತುಗಳನ್ನು ವರ್ತಕರು ಮಾರಾಟ ಮಾಡಬಾರದು ಹಾಗೂ ಸಾರ್ವಜನಿಕರು ಬಳಕೆ ಮಾಡಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಷೇಧ ಹೇರಿದ್ದರೂ ತಾಲೂಕಿನಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿದೆ.

Advertisement

ಪಟ್ಟಣದಲ್ಲಿ ಪ್ಲಾಸ್ಟಿಕ್‌ ಬಳಸದಂತೆ ವರ್ತಕರ ಸಭೆ ಕರೆದು ಪುರಸಭೆ ಆದೇಶಿಸಿದ್ದರೂ ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ವರ್ತಕರು ಪ್ಲಾಸ್ಟಿಕ್‌ ಕೈಚೀಲವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಇನ್ನು ತಾಲೂಕಿನ ಹೋಬಳಿ ಕೇಂದ್ರದಲ್ಲಿ ಪ್ಲಾಸ್ಟಿಕ್‌ ದಾಳಿ ಮಾಡದೇ ಇರುವುದರಿಂದ ವರ್ತಕರು ನಿರ್ಭೀತವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಬೇಕಾಗಿರುವ ತಾಲೂಕು ಆಡಳಿತ ಮೌನಕ್ಕೆ ಶರಣಾಗಿದೆ.

ಪುರಸಭೆ ವತಿಯಿಂದ ಪಟ್ಟಣದ 23 ವಾರ್ಡ್‌ಗಳಲ್ಲಿ ಆಟೋ ಪ್ರಚಾರ, ಭಿತ್ತಿ ಪತ್ರ ವಿತರಣೆ ಮಾಡುವ ಮೂಲಕ ಸಾರ್ವಜನಿಕರು ಪ್ಲಾಸ್ಟಿಕ್‌ ತ್ಯಜಿಸಬೇಕು ಎಂದು ಸೂಚಿಸುತ್ತಿದ್ದಾರೆ. ಇಷ್ಟಲ್ಲದೇ ಪೌರಕಾರ್ಮಿಕರು ಹಾಗೂ ವಿವಿಧ ಸಂಘ ಸಂಸ್ಥೆ ಸಹಯೋಗದಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅಂಗಡಿ ಮಾಲೀಕರ ಹಾಗೂ ನಾಗರಿಕರಿಗೆ ಮಾಹಿತಿ ನೀಡಿದರೂ ಎಚ್ಚೆತ್ತುಕೊಳ್ಳದೇ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿದೆ.

ಎಲ್ಲೆಲ್ಲಿ ಹೆಚ್ಚು ಬಳಕೆ: ಪಟ್ಟಣದಲ್ಲಿರುವ ಹೋಟೆಲ್‌, ಬೇಕರಿ, ಮದ್ಯ ಹಾಗೂ ಮಾಂಸದ ಅಂಗಡಿ ಸೇರಿದಂತೆ ತರಕಾರಿ ಮಾರಾಟ ಮಾಡುವವರು ಪ್ಲಾಸಿಕ್‌ ಕೈ ಚೀಲ ಬಳಕೆ ಮಾಡುತ್ತಿದ್ದಾರೆ. ಮದ್ಯದ ಅಂಗಡಿಗಳಲ್ಲಿ ಸಾವಿರಾರು ಪ್ಲಾಸ್ಟಿಕ್‌ ಲೋಟಗಳು ಬಳಕೆಯಾಗುತ್ತಿದ್ದು ರಾತ್ರಿ ವೇಳೆ ರಸ್ತೆಗೆ ಅವುಗಳನ್ನು ಸುರಿಯಲಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕಾಗಿರುವ ಪುರಸಭೆ ಹಾಗೂ ಅಬಕಾರಿ ಇಲಾಖೆ ಕಣ್ಣು ಮುಚ್ಚಿ ಕೂತಿದೆ. ಒಮ್ಮೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ದಂಡ ಹಾಕಿದರೆ ಸ್ವಲ್ಪ ಮಟ್ಟಿಗೆ ನಿಯಂತ್ರಣ ಮಾಡಬಹುದು.

ಶ್ರವಣಬೆಳಗೊಳದಲ್ಲಿ ಪ್ಲಾಸ್ಟಿಕ್‌ ಹಾವಳಿ: ವಿಶ್ವಕ್ಕೆ ಅಹಿಂಸಾ ಸಂದೇಶ ಸಾರಿದ ಏಕಶಿಲಾ ಮೂರ್ತಿ ಜೈನರ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಶ್ರವಣಬೆಳಗೊಳದಲ್ಲಿಯೂ ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯಿತಿ ವಿಫ‌ಲವಾಗಿದೆ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಕಂಡು ಬರುತ್ತಿದೆ. ಚಂದ್ರಗಿರಿ ಹಾಗೂ ವಿಂದ್ಯಗಿರಿ ಬೆಟ್ಟದ ಮೇಲಿಯೂ ಪ್ಲಾಸ್ಟಿಕ್‌ ಕೈ ಚೀಲ, ಪ್ಲಾಸ್ಟಿಕ್‌ ನೀರಿನ ಬಾಟಲಿ, ಲೋಟಗಳು ಕಂಡುಬರುತ್ತಿವೆ. ಮದ್ಯದ ಅಂಗಡಿಯವರು ತಮ್ಮ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬೆಟ್ಟದ ತಪ್ಪಲಿನಲ್ಲಿ ಸುರಿಯುತ್ತಾರೆ ಈ ಬಗ್ಗೆ ಜಿಲ್ಲಾಡಳಿತವೇ ಕ್ರಮಕ್ಕೆ ಮುಂದಾಗಬೇಕು.

Advertisement

ಪುರಾತತ್ವ ಇಲಾಖೆ ಮೌನ: ಪ್ರಧಾನಿ ನರೇಂದ್ರ ಮೋದಿ ಗಾಂಧಿ ಜಯಂತಿ ಯಂದು ಭಾರತ ಪ್ಲಾಸ್ಟಿಕ್‌ ಮುಕ್ತ ದೇಶವಾಗಬೇಕೆಂಬ ಉದ್ದೇಶದಿಂದ ಪ್ಲಾಸ್ಟಿಕ್‌ ನಿಷೇಧದ ಅಭಿಯಾನಕ್ಕೆ ಚಾಲನೆ ನೀಡಿದರು. ಆದರೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಪುರಾತತ್ವ ಇಲಾಖೆಯು ಪ್ಲಾಸ್ಟಿಕ್‌ ಬಳಕೆ ಮಾಡುವವರನ್ನು ನಿಯಂತ್ರಿಸುವಲ್ಲಿ ವಿಫ‌ಲವಾಗಿದೆ. ತನ್ನ ವ್ಯಾಪ್ತಿಗೆ ಬರುವ ಬೆಟ್ಟಗಳಲ್ಲಿ ಪ್ಲಾಸ್ಟಿಕ್‌ ಕೈಚೀಲ ಹಿಡಿದು ತೆರಳುವ ಪ್ರವಾಸಿಗರಿಗೆ ಪ್ಲಾಸ್ಟಿಕ್‌ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೆ ವಿಂದ್ಯಗಿರಿ ಚಂದ್ರಗಿರಿ ಪ್ಲಾಸ್ಟಿಕ್‌ ಮಯವಾಗಲಿದೆ.

ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ: ಉಪವಿಭಾಗಾಧಿಕಾರಿ ಡಾ. ಎಚ್‌.ಎಲ್‌.ನಾಗರಾಜು ಪುರಸಭೆಯಲ್ಲಿ ಎರಡು ಸಭೆ ಮಾಡಿ ತಾಲೂಕಿನಲ್ಲಿ ಪ್ಲಾಸ್ಟಿಕ್‌ ಸಂಪೂರ್ಣ ನಿಯಂತ್ರಣ ಮಾಡಲು ಏಳು ತಂಡ ರಚಿಸಿದ್ದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿ ಎಂ.ಕುಮಾರ್‌, ತಹಶೀಲ್ದಾರ್‌ ಜೆ.ಬಿ.ಮಾರುತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಕಿರಣಕುಮಾರ್‌, ಅಬಕಾರಿ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಆಹಾರ ನಿರೀಕ್ಷಕ ಸೇರಿದಂತೆ ಏಳು ತಂಡವಿದ್ದರೂ ಗೋದಾಮುಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್‌ ವಶಕ್ಕೆ ಪಡೆಯುವಲ್ಲಿ ತಂಡಗಳು ವಿಫ‌ಲವಾಗಿವೆ.

ಬೀದಿ ನಾಟಕಗಳ ಮೂಲಕ ಜಾಗೃತಿ: ಪ್ಲಾಸ್ಟಿಕ್‌ ನಿಷೇಧ ಕುರಿತು ಮಾಹಿತಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‌ ಗ್ರಾಮಗಳಲ್ಲಿ ಬೀದಿ ನಾಟಕ, ದಸರಾ ರಜೆ ಮುಗಿದ ಮೇಲೆ ಪ್ರತಿ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮೂಲಕ ಜಾಗೃತಿ ಜಾಥಾ, ಕರಪತ್ರ ವಿತರಣೆ ಮಾಡಿಸಲಾಗುವುದು ಎಂದರು. ತಾಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ 5 ಗ್ರಾಪಂಗಳನ್ನು ಪ್ಲಾಸ್ಟಿಕ್‌ ನಿಷೇಧ ಜಾಗೃತಿ ಜಾಥಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲಿಗೆ ಆಟೋ ಟಿಪ್ಪರ್‌ ಮೂಲಕ ಪ್ರತಿ ಮನೆಬಾಗಿಲಿಗೆ ತೆರಳಿ ಕಸ ಸಂಗ್ರಹಣೆ ಮಾಡಲಾಗುವುದು. ಪ್ರತಿ ಮನೆಗೆ ಎರಡು ಬಕೆಟ್‌ ನೀಡಿ ಒಣಕಸ ಹಾಗೂ ಹಸಿಕಸ ವಿಂಗಡಿಸಿ ಮಾಹಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚು ದಂಡ ವಸೂಲಿ ಹಾಗೂ ಪ್ಲಾಸ್ಟಿಕ್‌ ವಶ ಪಡಿಸಿಕೊಂಡಿರುವುದು ಚನ್ನರಾಯಪಟ್ಟಣದಲ್ಲಿ. ಅಕ್ರಮ ಪ್ಲಾಸ್ಟಿಕ್‌ ಬಳಕೆದಾರರಿಂದ ಪುರಸಭೆ ಈ ವರೆಗೆ ಸುಮಾರು 58 ಸಾವಿರ ರೂ. ದಂಡ ವಸೂಲಿ ಮಾಡಿ ನಾಲ್ಕು ಟನ್‌ ಪಾಸ್ಲಿಕ್‌ ಉತ್ಪನ್ನಗಳನ್ನು ವಶಕ್ಕೆ ಪಡೆದಿದೆ. ಒಂದೆರಡು ತಿಂಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಸಂಪೂರ್ಣ ನಿಯಂತ್ರಣವಾಗಲಿದೆ.
-ಎಂ.ಕುಮಾರ್‌ ಪುರಸಭೆ ಮುಖ್ಯಾಧಿಕಾರಿ.

ಪಟ್ಟಣದಲ್ಲಿ ಮಾತ್ರ ಪ್ಲಾಸ್ಟಿಕ್‌ ಬಳಕೆ ನಿಯಂತ್ರವಾದರೆ ಸಾಲುವುದಿಲ್ಲ. ಗ್ರಾಮೀಣ ಭಾಗದಲ್ಲಿಯೂ ನಿಯಂತ್ರಣ ಆಗಬೇಕಿದೆ. ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರಮಿಸಿದರೆ ಮಾತ್ರ ತಾಲೂಕು ಪ್ಲಾಸ್ಟಿಕ್‌ ಮುಕ್ತ ವಾಗಲಿದೆ.
-ಹರ್ಷವರ್ಧನ್‌, ಸಾಮಾಜಿಕ ಕಾರ್ಯಕರ್ತ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next