Advertisement

ನಿಷೇಧವಿದ್ದರೂ ಜೈಲಿಗೆ ಎಗ್ಗಿಲ್ಲದೆ ಸಾಗುತ್ತಿದೆ ಹೊರಗಿನ ಆಹಾರ 

11:19 AM Oct 17, 2017 | Team Udayavani |

ಮಂಗಳೂರು: ವಿಚಾರಣಾಧೀನ ಕೈದಿಗಳಿಗೆ ಹೊರಗಿನಿಂದ ಊಟ, ತಿಂಡಿ ಪೂರೈಕೆ ಮಾಡುವುದನ್ನು ನಿಷೇಧಿಸಿದ್ದರೂ ಮಂಗಳೂರಿನ ಜಿಲ್ಲಾ ಕಾರಾಗೃಹ ಇದಕ್ಕೆ  ಅಪವಾದವಾಗಿದೆ. ಏಕೆಂದರೆ ಈ ಜೈಲಿಗೆ ಹೊರಗಿನಿಂದ ಬೇಯಿಸಿದ ಆಹಾರ ಎಗ್ಗಿಲ್ಲದೆ ಪೂರೈಕೆಯಾಗುತ್ತಿದೆ. 

Advertisement

ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳಿಗೆ ಹೊರಗಿನಿಂದ ಹಣ್ಣು ಹಂಪಲುಗಳ ಸರಬರಾಜಿಗೆ ಮಾತ್ರ ಅವಕಾಶ ಇದೆ. 
ಆದರೆ  ಸೋಮವಾರ ದಿನ ಮಂಗಳೂರು ಜೈಲಿನ ವಿಚಾರಣಾಧೀನ ಕೈದಿಗಳಿಗೆ ಅವರ ಸಂಬಂಧಿಕರಿಂದ ಅಥವಾ ಸಂದರ್ಶಕರಿಂದ ಅನ್ನ, ಸಾಂಬಾರು, ಪುಂಡಿ (ಕಡುಬು), ಮೀನಿನ ಸಾಂಬಾರು, ಉಪ್ಪಿನಕಾಯಿ ಇತ್ಯಾದಿಗಳು ಪೂರೈಕೆಯಾಗಿವೆ ಶನಿವಾರ ಮತ್ತು ರವಿವಾರ ರಜೆ ಇದ್ದ ಕಾರಣ ಸೋಮವಾರ ಸಂದರ್ಶಕರ ಸಂಖ್ಯೆ ಜಾಸ್ತಿ ಇತ್ತು. ಮಧ್ಯಾಹ್ನ 11.30ರಿಂದ 12.30ರ ವರೆಗಿನ ಸಂದರ್ಶಕರ ಭೇಟಿ ಅವಧಿಯಲ್ಲಿ ಸುಮಾರು 75 ಮಂದಿ ಭೇಟಿ ನೀಡಿದ್ದು, ಅವರಲ್ಲಿ 5- 6 ಮಂದಿ ಬೇಯಿಸಿದ ಆಹಾರವನ್ನು ಜೈಲಿನೊಳಕ್ಕೆ ಸಾಗಾಟ ಮಾಡಿದ್ದಾರೆ. ಹಣ್ಣು ಹಂಪಲು, ಬಿಸ್ಕತ್ತು ಮತ್ತು ಇತರ ಬೇಕರಿ ಐಟಂಗಳು, ಬಟ್ಟೆ ಬರೆಯ ಜತೆಗೆ ಸಿಗರೇಟು ಮತ್ತು ಬೀಡಿ ಸಾಕಷ್ಟು  ಪ್ರಮಾಣದಲ್ಲಿ  ಪೂರೈಕೆ ಮಾಡಿದ್ದಾರೆ. 

ಸಂದರ್ಶಕರು ತರುವ ಎಲ್ಲ ಆಹಾರ ಮತ್ತು ಇತರ ವಸ್ತುಗಳನ್ನು ಜೈಲಿನ ಗೇಟ್‌ ಬಳಿ ಇರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಸಿಬಂದಿ ತಪಾಸಣೆ ಮಾಡುತ್ತಾರೆ. ಬಳಿಕ ಸಂದರ್ಶಕರ ದೇಹದ ತಪಾಸಣೆಯನ್ನೂ ನಡೆಸಿ ಒಳಗೆ ಕಳುಹಿಸುತ್ತಾರೆ. 
ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ಸೇವನೆಯನ್ನು ಸರಕಾರ ನಿಷೇಧಿಸಿದೆ. ಆದರೆ ಜೈಲಿನಲ್ಲಿ ಇದನ್ನು ನಿಷೇಧಿಸಿಲ್ಲ. ಜೈಲಿನಲ್ಲಿ ತಂಬಾಕು ಬಳಕೆಗೆ ಅವಕಾಶವಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಸಾರ್ವಜನಿಕ ಸ್ಥಳದಲ್ಲಿ ನಿಷೇಧಿಸಿರುವ ತಂಬಾಕು ಉತ್ಪನ್ನಗಳಿಗೆ ಜೈಲಿನಲ್ಲಿ ಅವಕಾಶ ಕಲ್ಪಿಸಿರುವುದು ವಿಪರ್ಯಾಸ.

ಮಹಿಳೆಯರ ತಪಾಸಣೆಗೆ ಸಿಬಂದಿ ಇಲ್ಲ
ವಿಚಾರಣಾಧೀನ ಕೈದಿಗಳ ಭೇಟಿಗೆ ಬರುವ ಪುರುಷ ಸಂದರ್ಶಕರ ಅಂಗ ತಪಾಸಣೆಗೆ ಕೆ.ಐ.ಎಸ್‌.ಎಫ್‌. ಪುರುಷ ಸಿಬಂದಿ ಇದ್ದಾರೆ. ಆದರೆ ಮಹಿಳಾ ಸಂದರ್ಶಕರ ಅಂಗ ತಪಾಸಣೆಗೆ ಬೇಕಾದ ಮಹಿಳಾ ಪೊಲೀಸ್‌ ಸಿಬಂದಿ ಇಲ್ಲ. ಹಾಗಾಗಿ ಮಹಿಳಾ 
ಸಂದರ್ಶಕರು ತರುವ ವಸ್ತುಗಳನ್ನು ಮಾತ್ರ ತಪಾಸಣೆ ಮಾಡಲಾಗುತ್ತಿದ್ದು, ಅಂಗ ತಪಾಸಣೆ ಮಾಡಲಾಗುತ್ತಿಲ್ಲ. 

ಭದ್ರತೆಯ ದೃಷ್ಟಿಯಿಂದ ಹಾಗೂ ಕೈದಿಗಳ ಕೈಗೆ ಸಿಗುವ ಮಾದಕ ವಸ್ತು, ಮೊಬೈಲ್‌ ಇತ್ಯಾದಿಗಳನ್ನು ಸಂಪೂರ್ಣವಾಗಿ ತಡೆಗಟ್ಟ ಬೇಕಾದರೆ ಮಹಿಳಾ ಸಂದರ್ಶಕರ ತಪಾಸಣೆಗೆ ಮಹಿಳಾ ಪೊಲೀಸರನ್ನ ನೇಮಕ ಮಾಡುವ ಆವಶ್ಯಕತೆ ಇದೆ. 
ಕೆ.ಐ.ಎಸ್‌.ಎಫ್‌ ಸಿಬಂದಿ 23 ರಿಂದ 17ಕ್ಕೆ ಇಳಿಕೆ ಜೈಲಿನ ಭದ್ರತೆಗಾಗಿ ನಿಯೋಜಿಸಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ 23 ಸಿಬಂದಿ ಪೈಕಿ 17 ಮಂದಿ ಮಾತ್ರ ಈಗ ಇದ್ದಾರೆ. ಕೆಲವು ಮಂದಿ ಬಿಟ್ಟು ಹೋಗಿದ್ದಾರೆ. ಜೈಲಿನ ಒಳಗೆ, ಹೊರಗಿನ ಗೇಟ್‌ ಬಳಿ ಹಾಗೂ ಜೈಲಿನ ಸುತ್ತ ರಸ್ತೆಯಲ್ಲಿ  ನಾಲ್ಕು ಕಡೆ ಸರದಿ ಪ್ರಕಾರ ಕೆಐಎಸ್‌ಎಫ್‌ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

4 ತಿಂಗಳಿಂದ ವೇತನ ಇಲ್ಲ
ಜೈಲಿನ ಭದ್ರತೆಗೆ 15 ಮಂದಿ ಗೃಹ ರಕ್ಷಕರನ್ನು ನೇಮಿಸಲಾಗಿದ್ದು, ಅವರು ಸರದಿ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ದಿನಕ್ಕೆ 325 ರೂ. ನಂತೆ ವೇತನ ನೀಡಲಾಗುತ್ತಿದೆ. ಆದರೆ ಕಳೆದ ನಾಲ್ಕು ತಿಂಗಳಿಂದ ಅವರಿಗೆ ವೇತನ ಪಾವತಿಯಾಗಿಲ್ಲ. 
ಈ ಬಗ್ಗೆ ಬಂದೀಖಾನೆ ಇಲಾಖೆಯ ಐ.ಜಿ. ಅವರಿಗೆ ಮತ್ತು ಮಂಗಳೂರಿನ ಐಜಿಪಿ ಅವರ ಗಮನಕ್ಕೆ ತರಲಾಗಿದೆ. ವೇತನ ಬಟವಾಡೆ ಆಗುವ ಕೆ- 2 (ಖಜಾನೆ-2) ಕಚೇರಿಯ ವೇತನ ಪಾವತಿ ವಿಭಾಗದಲ್ಲಿ  ಕಳೆದ 5 ತಿಂಗಳಲ್ಲಿ ನಾಲ್ವರು ಸಿಬಂದಿ ವರ್ಗಾವಣೆಗೊಂಡಿದ್ದಾರೆ. ಆನ್‌ಲೈನ್‌ ವ್ಯವಸ್ಥೆಯಲ್ಲಿ ವೇತನ ಬಿಡುಗಡೆಯಾಗಲು ನಿಗದಿತ ಸಿಬಂದಿಯ ಬೆರಳಚ್ಚು ಮುದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ನಿಗದಿತ ಹುದ್ದೆಗೆ ನೇಮಕಗೊಂಡ ಸಿಬಂದಿ ಪದೇ ಪದೇ ವರ್ಗಾವಣೆ ಆದ ಕಾರಣ ವೇತನ ಪಾವತಿಯಲ್ಲಿ ವಿಳಂಬವಾಗಿದೆ.
– ಡಾ| ಮುರಳಿ ಮೋಹನ ಚೂಂತಾರು ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌

ಆಹಾರವನ್ನು ಹೊರ ಹಾಕ್ತೇವೆ
ವಿಚಾರಣಾಧೀನ ಕೈದಿಗಳಿಗಾಗಿ ಹೊರಗಿನಿಂದ ಪೂರೈಕೆಯಾಗುವ ಅನ್ನ, ಸಾಂಬಾರು, ತಿಂಡಿ ಮತ್ತಿತರ ಬೇಯಿಸಿದ ಆಹಾರವನ್ನು ವಾಪಸ್‌ ಹೊರಗೆ ಸಾಗಿಸಿ ವಿಲೇವಾರಿ ಮಾಡಲಾಗುತ್ತದೆ. ಗೇಟ್‌ನಲ್ಲಿ ಸ್ವೀಕರಿಸದೆ ಇದ್ದರೆ ಆಹಾರವನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಇದರಿಂದಾಗಿ ಅಲ್ಲಿ ಅಸಹ್ಯ ವಾತಾವರಣ ಸೃಷ್ಟಿಯಾಗುತ್ತದೆ: ನಾಯಿಗಳ ಕಾಟವೂ ಇದೆ. ಆದ್ದರಿಂದ ಸಂದರ್ಶಕರು ತರುವ ಆಹಾರವನ್ನು ತಪಾಸಣೆ ಒಳಪಡಿಸಿ ಒಳಗೆ ಸಾಗಿಸಲು ಅನುಮತಿ ನೀಡಲಾಗುತ್ತದೆ. ಒಳಗೆ ರವಾನೆಯಾದ ಬಳಿಕ ಅದನ್ನು ಕೈದಿಗಳಿಗೆ ನೀಡದೆ ವಾಪಸ್‌ ಹೊರಗೆ ಸಾಗಿಸಿ ವಿಲೇ ಮಾಡುತ್ತಿದ್ದೇವೆ. ಜೈಲಿನ ಒಳಗೆ ತಂಬಾಕು ನಿಷೇಧಿ ಸಿಲ್ಲ. ಜೈಲು ಕೈಪಿಡಿಯಲ್ಲಿಅದಕ್ಕೆ ಅವಕಾಶ ಇದೆ. ಕೈದಿಗಳನ್ನು  ನೋಡಲು ಬರುವವರು ತರುವ ಸಿಗರೇಟು, ಬೀಡಿಗಳನ್ನು ಒಳಗೆ ರವಾನಿಸಲು ಅನುಮತಿ ನೀಡಲಾಗುತ್ತದೆ.
– ಪರಮೇಶ್ವರಪ್ಪ, ಜೈಲು ಅಧೀಕ್ಷಕರು

ಹಿಲರಿ ಕಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next