Advertisement

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

02:43 PM Sep 14, 2024 | Team Udayavani |

ಇತ್ತೀಚೆಗೆ ಪೂರ್ಣಗೊಂಡ 12ನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕಂಡ ಕೆಲವು ವಿಶಿಷ್ಟಗಳನ್ನು ಹಂಚಿಕೊಳ್ಳುವ ಬರಹವಿದು. ಜತೆಗೆ ಜೀವನಕ್ಕೆ ಹತ್ತಿರ ಎನ್ನಬಹುದಾದ ಒಂದಷ್ಟು ಸಾಮ್ಯತೆಗಳನ್ನೂ ಗುರುತಿಸುವ ಒಂದು ಅಂಶವನ್ನು ಸೂಕ್ಷ್ಮವಾಗಿ ತಿಳಿಸುವ ಒಂದು ಯತ್ನ.

Advertisement

ಅಕ್ಕ ಸಮ್ಮೇಳನದಲ್ಲಿ ಕಂಡು ಬಂದ ನಾಲ್ಕು ವಿವಿಧ ರಚನೆಗಳು ಜನಮನ ಸೂರೆಗೊಂಡಿದ್ದವು. ಅವುಗಳು ಯಾವುವು ಎಂದರೆ ತಾಯಿ ಭುವನೇಶ್ವರಿಯ ಮೂರ್ತಿರೂಪ, ಬೇಲೂರು ಚೆನ್ನಕೇಶವನ ದೇವಸ್ಥಾನ, ಮೈಸೂರು ಅರಮನೆ ಮತ್ತು “ಐ ಲವ್‌ ಕನ್ನಡ’ ಎಂಬ ಫಲಕ. ಈ ನಾಲ್ಕೂ ರಚನೆಗಳು ಪೈಪೋಟಿಗೆ ಬಿದ್ದಂತೆ ನೂರಾರು ಚಿತ್ರಗಳಿಗೆ ಸಾಕ್ಷಿಯಾಗಿದೆ. ಮೂರು ಪ್ರಮುಖ ಆಕರ್ಷಣೆಗಳು ನೋಂದಣಿಗೆ ಬರುತ್ತಿದ್ದಂತೆಯೇ ಕಣ್ಣಿಗೆ ಬೀಳುವಂಥದ್ದಾಗಿದ್ದರೆ “ಐ ಲವ್‌ ಕನ್ನಡ’ ಎಂಬ ವಿಶಿಷ್ಟ ಫಲಕವು ಭೋಜನ ಶಾಲೆಯ ಹಾದಿಯಲ್ಲಿ ಇರಿಸಲಾಗಿತ್ತು.

ಇನ್ನೊಂದರ್ಥದಲ್ಲಿ ಹೇಳುವುದಾದರೆ, ನಾಲ್ಕೂ ರಚನೆಗಳನ್ನು ಯಾವುದೇ ಕಾರಣಕ್ಕೂ “ನೋಡಲೇ ಇಲ್ಲ, ಕಣ್ಣಿಗೆ ಬೀಳಲಿಲ್ಲ’ ಎನ್ನುವ ಹಾಗೆ ಇರಲಿಲ್ಲ. ಸಮ್ಮೇಳನಕ್ಕೆ ಬರುವವರಿಗೆಲ್ಲ ಕಣ್ಣಿಗೆ ಬೀಳಲೇಬೇಕು ಎನ್ನುವಂತೆ ಇರಿಸಲಾಗಿದ್ದ ಮೇಲೆ ತಪ್ಪುವುದು ಎಂತು? ಮನುಜರಾಗಿ ಭುವಿಗೆ ಬಂದ ಮೇಲೆ ಒಂದೋ ದೈಹಿಕವಾಗಿ ಕಣ್ಣಿಗೆ ಬೀಳುವಂತಿರಲಿ ಅಥವಾ ಮಾಡುವ ಕೆಲಸಗಳಿಂದ ಕಣ್ಣಿಗೆ ಬೀಳುವಂತೆ ಇದ್ದರೇನೇ ಮುಂದಿನ ಪೀಳಿಗೆಗೆ ಒಬ್ಬರ ಬಗ್ಗೆ ಅರಿವು ಮೂಡಲು ಸಾಧ್ಯ. ಕಣ್ಣಿಗೆ ಕಾಣುವಂತೆಯೇ ಬದುಕಬೇಕೇ? ಇಲ್ಲವಾದರೆ ಬದುಕೇ ಅಲ್ಲವೇ? ಹೀಗೆಯೇ ಬದುಕಬೇಕು ಎಂಬುದು ನಿಯಮವಲ್ಲ ನಿಜ ಆದರೆ ಇದ್ದುದಕ್ಕೆ ಒಂದು ಸಾಕ್ಷಿ ಎಂತಾದರೂ ನಮ್ಮ ಮೇಲೆ ನಾವೇ ಬೆಳಕು ಚೆಲ್ಲಿಕೊಂಡರೆ ಅಡ್ಡಿಯಿಲ್ಲ.

ಅಕ್ಕ ಸಮ್ಮೇಳನವು ರಿಚ್ಮಂಡ್‌ ಮತ್ತು ಕಾವೇರಿ ಕನ್ನಡ ಸಂಘಗಳ ಸಹಯೋಗದಲ್ಲಿ ನಡೆದಿತ್ತು. ಬೇಲೂರು ಚೆನ್ನಕೇಶವ ದೇವಸ್ಥಾನ ಮತ್ತು ತಾಯಿ ಭುವನೇಶ್ವರಿಯ ಪ್ರತಿಮೆಯ ರಚನೆಗಳು ಕಾವೇರಿ ಸಂಘದ ಶ್ರಮದ ಫಲವಾದರೆ “ಮೈಸೂರು ಅರಮನೆ’ ಮತ್ತು “ಐ ಲವ್‌ ಕನ್ನಡ’ ನಮ್ಮೂರಿನ “ಎಂಜಿನಿಯರ್’ಗಳ ಕೊಡುಗೆ. ಏನಿವು ? ಮೈಸೂರು ಅರಮನೆ ಎಂದರೆ ಏನಿದರ ಹಿಂದಿನ ಶ್ರಮದ ಕೆಲಸ ಮತ್ತು ಹೇಗೆ?

Advertisement

ಮಂಗಳೂರು ಮೂಲದ ಮಿಥುನ್‌ ಆಚಾರ್ಯ ಹಾಗೂ ಮೈಸೂರು ಮೂಲದ ಕಾಂತರಾಜ್‌ ಸಾಲಿಗ್ರಾಮ ಅವರ ಮನಗಳಲ್ಲಿ ಅಕ್ಕ 12 ಉಸ್ತುವಾರಿ ತಂಡದವರು ಮೂಡಿಸಿದ ಆಲೋಚನೆಗಳು, ಹಲವಾರು ಶ್ರಮಜೀವಿಗಳಿಂದ ರೂಪ ಪಡೆದು ಕೊನೆಗೆ ದೀಪದಿಂದ ಅಲಂಕರಿಸಿಕೊಂಡು ನಿಂತಾಗ ಆ ರಚನೆಯು ಹನ್ನೆರಡೂವರೆ ಅಡಿ ಎತ್ತರ, ಸುಮಾರು 28 ಅಡಿ ಅಗಲ ಮತ್ತು ಆರು ಅಡಿ ಆಳದ್ದಾಗಿತ್ತು…..

ಅಂದಾಜು ಮಾರ್ಚ್‌ ತಿಂಗಳ ಆಸುಪಾಸಿನಲ್ಲಿ ಮನದಲ್ಲಿ ಮೂಡಿದ ಆಲೋಚನೆಯು ರೂಪಗೊಳ್ಳುವುದಕ್ಕೆ ಐದು ತಿಂಗಳ ಶ್ರಮ ಹಿಡಿದಿತ್ತು. ಹಗಲಿನಲ್ಲಿ ಹೊಟ್ಟೆಯ ಪಾಡಿನ ಕೆಲಸವಾದರೆ ಸಂಜೆಯ ಅನಂತರ ಈ ರಚನೆಯು ಕರ್ತವ್ಯ ಕೂಗು ಎಂಬಂತೆ ಕೂಗಿ ಕರೆಯುತ್ತಿತ್ತು. ಹೆಚ್ಚು ಕಮ್ಮಿ ಆರಂಭದಲ್ಲಿ ಬೆಳಗಿನ ಜಾವ ಒಂದು ಗಂಟೆಯ ವರೆಗೆ ಕೆಲಸ ಮಾಡುತ್ತಿದ್ದುದು ಕೊನೆ ಕೊನೆಯಲ್ಲಿ ಒಂದೆರಡು ಘಂಟೆ ಮಾತ್ರ ನಿದ್ರಿಸುವ ಸ್ಥಿತಿಗೆ ಬಂದಿದ್ದು ತಂಡದ ಅವಿರತ ಶ್ರಮದ ಕುರುಹಾಗಿತ್ತು.

ವಾಸಕ್ಕೆ ಒಂದು ಮನೆಯಾಗಿ ದೊಡ್ಡದಾಗಿಯೇ ಇದ್ದರೂ, ಮಕ್ಕಳ ಆಟಕ್ಕೆ ಅಥವಾ ಹತ್ತಾರು ಮಂದಿ ಸೇರಲಿಕ್ಕೆ ಹಿರಿದಾದ ಬೇಸ್ಮೆಂಟ್‌ ಇದ್ದರೂ ಇಂಥಾ ಒಂದು ಕೆಲಸಕ್ಕೆ ಮಿಥುನ್‌ ಅವರ ಮನೆಯ ಬೇಸ್ಮೆಂಟ್‌ ತಾಣವಾಗಬಹುದು ಎಂಬ ಕಲ್ಪನೆಯೂ ಇದ್ದಿರಲಿಕ್ಕಿಲ್ಲ. ಆರಂಭದಲ್ಲಿ ಯಾವುದೇ ರಚನೆಯ ಕೆಲಸಕ್ಕೆ ಬೇಕಿರುವ ಬ್ಲೂ ಪ್ರಿಂಟ್‌ ತಯಾರಾದ ಮೇಲೆ ಬೇಸ್ಮೆಂಟ್‌ ಎಂಬುದು ರಚನೆಯ ಕೆಲಸದ ಕಾರ್ಖಾನೆಯೇ ಆಗಿತ್ತು. “ಬೇಸ್ಮೆಂಟ್‌’ನ ಹಿಂಬಾಗಿಲು ಸ್ವಯಂ ಸೇವಕರ ಹೆಬ್ಬಾಗಿಲು ಆಗಿತ್ತು. ಬಹುಶ: ಈ ಐದೂ ತಿಂಗಳು ಆ ಬಾಗಿಲು ಹೆಚ್ಚಿನ ವೇಳೆಯಲ್ಲಿ ಮುಚ್ಚಿದ್ದೇ ಇಲ್ಲ ಎಂದುಕೊಳ್ಳಬಹುದು.

ಹಗಲಿನಲ್ಲಿ ಸಮಯವಿದ್ದವರು ಬಂದು ಸಹಾಯ ಮಾಡುವವರು ಮಧ್ಯಾಹ್ನದ ಮೇಲೆ ಬಂದು ಕೈಗೂಡಿಸುವವರು ಮತ್ತು ಇರುಳಿನಲ್ಲಿ ಮುಖ್ಯ ಹಸ್ತರು ಕೆಲಸ ಮಾಡುವುದು ಎಂದೆಲ್ಲ ಇದ್ದು, ಬಹುಶ: ಈ ರಾತ್ರಿಯ ಪಾಳಿಯವರು ಮಾಲಗಿದ್ದ ಸಮಯದಲ್ಲಿ ಈ ಬಾಗಿಲಿಗೂ ವಿಶ್ರಾಂತಿ ಸಿಗುತ್ತಿತ್ತೇನೋ. ಈ ಅಹರ್ನಿಶಿ ದುಡಿತದ ಫಲವೇ ಅಕ್ಕ ಸಮ್ಮೇಳನದ ಎಲ್ಲರ ಅಕ್ಕರೆಯ ಕುಡಿಯಾಗಲು ಕಾರಣ ಎಂದರೆ ಅತಿಶಯೋಕ್ತಿಯಲ್ಲ.

ಈ ಅಲಂಕಾರ ತಂಡದ ಲೀಡ್‌ ಆದ ಕಾಂತರಾಜ್‌ ಮತ್ತು ವಿನ್ಯಾಸಕರಾದ ಮಿಥುನ್‌ ಅವರ ಪ್ರಕಾರ ಈ ರಚನೆಯಲ್ಲಿ ಯಾವುದೇ ಅಂಗಡಿಯಲ್ಲಿ ಸಿಗುವ ಸಿದ್ಧಪಡಿಸಿದ ವಸ್ತುವಿನ ಬಳಕೆಯಾಗಿಲ್ಲ. ಕಚ್ಚಾ ವಸ್ತುಗಳನ್ನೇ ತಂದು, ಅದನ್ನು ಬೇಕಾದ ರೀತಿಯಲ್ಲಿ ತಿದ್ದಿ ತೀಡಿ ಬಳಸಲಾಗಿದೆ.

ಉದಾಹರಣೆಗೆ ಅದೊಂದು ಕಾರ್ಡ್‌ ಬೋರ್ಡ್‌ ಆಗಿದ್ದು ಅದರ ಮೇಲೆ ವಿನ್ಯಾಸವನ್ನು ರಚಿಸಿ, ಅನಂತರ ಅದನ್ನು ಕತ್ತರಿಸಿ, ಚಿತ್ರಿಸಿ, ಬಳಿಕ ಬಣ್ಣ ತುಂಬಿದ್ದು ಒಂದು ಕೆಲಸವಾದರೆ, ಅದರ ಮೇಲಿನ ಕುಸುರಿ ಕೆಲಸಗಳ columnಗಳೇ ಮೊದಲಾದ ಚಿಕ್ಕಚಿಕ್ಕ ರಚನೆಗಳೇ ಸಾವಿರಾರು ಇವೆ. ಇನ್ನು ಹಲವಾರು ಕೆಲಸಗಳ ಹಿಂದಿರುವ ಹರ್ಷ ಮತ್ತಿತರ ಸ್ವಯಂಸೇವಕರ ಕಥೆಗಳೂ ನೂರಾರು.

ಉದಾಹರಣೆಗೆ, Core Team ಸ್ವಯಂ ಸೇವಕರಲ್ಲಿ ಒಬ್ಬರಾದ ಮುರುಗೈಶ್‌ ಅವರಿಗೆ ತಿಂಗಳ ಹಿಂದೆ ಸರ್ಜರಿ ಆಗಿತ್ತು. “ಸರ್ಜರಿ ಆಗಿ ನಾಲ್ಕಾರು ದಿನಗಳ ವಿಶ್ರಾಂತಿಯ ಅನಂತರ ಅರಮನೆಯ ಕೆಲಸ ಮುಂದುವರೆಸಿದ್ದೆ. ಕನ್ನಡ ಸೇವೆಯನ್ನು ತಪ್ಪಿಸಿಕೊಳ್ಳುವುದು ಹೇಗೆ?’ ಎಂದು ಅವರು ನುಡಿದಾಗ ಸಂಘದ ಪರವಾಗಿ ಶ್ಲಾಘಿಸಿದ್ದೆ. Core Teamನ ಮತ್ತೋರ್ವ ಸ್ವಯಂ ಸೇವಕರು ಸುಚಿತ್‌. ಮದುವೆಯಾಗಿ ಕೇವಲ ಒಂದು ವರ್ಷ ಆಗಿರುವ ನವತರುಣ.

ಎರಡು ಕಾರ್ಯಕ್ರಮಗಳಲ್ಲಿ ಭಾಗಿಯೂ ಆಗಿದ್ದು, ಅರಮನೆಯ ಕೆಲಸದಲ್ಲಿ ಸಾಕಷ್ಟು ದುಡಿದಿದ್ದರು. ಪ್ರಮುಖ ಭೂಮಿಕೆಯ ಮತ್ತೋರ್ವ ಸದಸ್ಯ ಸುಧೀಂದ್ರ ಸತ್ಯ ಸಹ ಎರಡು-ಮೂರು ಕಾರ್ಯಕ್ರಮಗಳಲ್ಲಿ ಭಾಗಿಯೂ ಆಗಿ, ಇತರ ಕೆಲಸಗಳಲ್ಲಿ ಸ್ವಯಂ ಸೇವೆಯನ್ನೂ ಮಾಡುತ್ತಾ ಅರಮನೆಯ ರಚನೆಯ ಕೆಲಸದಲ್ಲೂ ತೊಡಗಿಸಿಕೊಂಡಿದ್ದು ಉತ್ತಮ ಅಭಿರುಚಿ ಎನ್ನಬಹುದು.

ಒಂದೇ ಮಾತಿನಲ್ಲಿ ಹೇಳುವುದಾದರೆ ತಂಡದ ಎಲ್ಲರ ನಿಸ್ವಾರ್ಥ ಸೇವೆ ಎಂಬುದು ಅಲ್ಲಿ ಸಾಕಾರಗೊಂಡಿತ್ತು. ಇಷ್ಟಲ್ಲದೇ ಬಿಡುವು ಸಿಕ್ಕಾಗಲೆಲ್ಲ ಹಲವಾರು ಕೆಲಸಗಳಲ್ಲಿ ಭಾಗಿಯಾಗಿ ದುಡಿದ ಕೈಗಳಿಗೆ ಲೆಕ್ಕವಿಲ್ಲ. ಇದೆಲ್ಲದರ ಹಿಂದೆ ಕಾಣದ ಕೈಗಳು ಹಲವಾರು. ಇವರು ಯಾರು ಎಂದಿರಾ? ಒಬ್ಬೊಬ್ಬರ ಸಂಸಾರದ ಹಿಂದಿನ ಸ್ತ್ರೀಶಕ್ತಿ. ಮಕ್ಕಳನ್ನು ನೋಡಿಕೊಂಡು, ಅವರ ತರಬೇತಿ ತರಗತಿಗಳಿಗೆ ಕರೆದುಕೊಂಡು ಹೋಗೋದು, ತಾವೇ ಕಾರ್ಯಕ್ರಮಗಳಿಗೆ ರಿಹರ್ಸಲ್‌ ಮಾಡುವುದು, ಹೊತ್ತಿಗೆ ಸರಿಯಾಗಿ ಊಟ-ತಿಂಡಿ ವ್ಯವಸ್ಥೆ ಇತ್ಯಾದಿಗಳು ಉಲ್ಲೇಖಿಸದೇ ಹೋದಲ್ಲಿ ಅಪರಾಧವೇ ಆದೀತು.

ಇಂಥಾ ಒಂದು ಕೆಲಸವೂ ಮೂರು ಹಂತಗಳನ್ನು ಹೊಂದಿರುತ್ತದೆ. ಮುಂಚಿನ, ಆಗಿನ ಮತ್ತು ಮುಂದಿನ ಕೆಲಸಗಳು ಎನ್ನಬಹುದು. ಹೀಗೆಂದರೆ ಏನು? ಕಾರ್ಯಕ್ರಮದ ಮುಂಚಿನ ದಿನಗಳು ಅರ್ಥಾತ್‌ ಐದು ತಿಂಗಳ ಕೆಲಸವೂ ಒಂದು ಭಾಗ. ಕಾರ್ಯಕ್ರಮದ ದಿನ ಮುನ್ನಾ ದಿನ, ಆ ರಚನೆಯ ಭಾಗಗಳನ್ನು ಹೊತ್ತ ಟ್ರಕ್‌ ಅನ್ನುಓಡಿಸಿಕೊಂಡು ಬಂದು, ಜಾಗರೂಕತೆಯಿಂದ ಇಳಿಸಿ, ಜೋಡಿಸಿದ್ದು. ಕಾರ್ಯಕ್ರಮದ ಮೂರೂ ದಿನಗಳು ಬಹುಶ: ಲೀಡ್‌ ಆದವರು ಹೆಚ್ಚಿನ ವೇಳೆ ಅರಮನೆಯ ಸುತ್ತಲಲ್ಲೇ ಓಡಾಡಿಕೊಂಡಿದ್ದರು ಎನ್ನಬಹುದು.

ರಚನೆಯ ಕೆಲಸಕ್ಕೆ ತೆಗೆದುಕೊಂಡ ಅವಧಿ, ಎಷ್ಟು ಎತ್ತರವಿದೆ, ಎಷ್ಟು ಅಗಲವಿದೆ ಎಂಬೆಲ್ಲ ಪ್ರಶ್ನೆಗಳನ್ನು ಅದೆಷ್ಟು ಬಾರಿ ವಿವರಿಸಿದ್ದರೋ ಗೊತ್ತಿಲ್ಲ. ಸಾಕಷ್ಟು ಚಿತ್ರಗಳು, ವೀಡಿಯೋಗಳೂ ಇದ್ದವು. ಅಲ್ಲಿಗೆ ರವಿವಾರ ಸಂಜೆಯೂ ಆಗಿತ್ತು. ಮಧ್ಯರಾತ್ರಿ ದಾಟಿದ ವೇಳೆಗೆ ಕಾರ್ಯಕ್ರಮಗಳೂ ಮುಗಿಯಿತು ಎನ್ನಿ. ಹುಟ್ಟಿದ ಸೂರ್ಯ ತಾ ಬೆಳಕ ನೀಡುತ್ತಾ ಪ್ರಜ್ವಲಿಸಿದ ಮೇಲೆ ಇಳಿಯಲೇ ಬೇಕು. ಹದಿನೈದು ದಿನಗಳ ವೃದ್ಧಿಸಿದ ಚಂದ್ರ ಅನಂತರ ಕ್ಷೀಣಿಸಲೇಬೇಕು. ಮಾನವರಾದ ನಾವೂ ಸಹ ಒಂದು ವಯೋಮಾನದ ಅನಂತರ ಶಕ್ತಿಗುಂದುತ್ತೇವೆ.

ಅಂಕಗಳು ಮುಗಿದ ಮೇಲೆ ತೆರೆ ಹಾಕಲೇಬೇಕು. ಈ ಅರಮನೆಯ ರಚನೆಯ ಕಥೆಯೂ ಇದೇ ಆಗಿತ್ತು. ಸೋಮವಾರದ ಸೂರ್ಯನು ಉದಯಿಸುತ್ತಿದ್ದಂತೆ, ಯಾವ ಸ್ಥಳದಲ್ಲಿ ಆ ಅರಮನೆಯು ಮೆರೆದಿತ್ತೋ ಅಲ್ಲಿಂದ ಹೊರಡಲೇಬೇಕಿತ್ತು. ಮುಂದಿನ ಯಾವುದೋ ಕಾರ್ಯಕ್ರಮಕ್ಕೆ ಇಲ್ಲಿನ ರಂಗವೂ ಸಿದ್ಧಗೊಳ್ಳಲೇಬೇಕು ಅಲ್ಲವೇ? ಹಿಂದಿನ ದಿನದ ನಾಟಕದಲ್ಲಿ ತಾ ಭೀಮನಾಗಿದ್ದೆ ಎಂದು ಮರುದಿನವೂ ಬೀದಿಯಲ್ಲಿ ಗದೆಯನ್ನು ಇರಿಸಿಕೊಂಡು ಓಡಾಡಲಾಗದು. ವೈಭವ ಮುಗಿದಿತ್ತು. ರಚನೆಯೂ ಪದರ ಪದರವಾಗಿ ಮುದುಡಿತ್ತು. ಮನಗಳೂ ಮುದುಡಿದ್ದವು ನಿಜ.

ಹದಿನಾರಡಿ ಎತ್ತರದ, ಬಹುಶ: ಇಪ್ಪತ್ತಡಿ ಅಗಲದ ಈ ರಚನೆಯನ್ನು ಎಲ್ಲಿ ಇರಿಸಿಕೊಳ್ಳುವುದೂ ಕಷ್ಟದ ಕೆಲಸವೇ. ನಿಜ. ಸದ್ಯಕ್ಕಂತೂ ಸೆಪ್ಟಂಬರ್‌ ತಿಂಗಳ ಕೊನೆಯಲ್ಲಿ ಫೆಸ್ಟಿವಲ್‌ ಆಫ್‌ ಇಂಡಿಯಾ ಎಂಬ ವಾರ್ಷಿಕ ಕಾರ್ಯಕ್ರಮವಿರುತ್ತದೆ. ಅಲ್ಲಿ ಮತ್ತೆ ಅರಮನೆಯ ರಚನೆಯನ್ನು ಮತ್ತೆ ಜೋಡಿಸಿ ಪ್ರದರ್ಶಿಸಬೇಕು ಎಂಬ ಪ್ಲಾನಿಂಗ್‌ ನಡೆದಿದೆ. ಅದಾದ ಅನಂತರ ಏನು? ಇನ್ನೂ ಗೊತ್ತಿಲ್ಲ. ಒಂದಲ್ಲ ಒಂದು ದಿನ ವಿದಾಯ ಹೇಳಲೇಬೇಕು.

ಕೆಲಸ ಚಿಕ್ಕದಾಗಲಿ, ದೊಡ್ಡದಾಗಲಿ ಎಲ್ಲರ ಕೆಲಸವೂ ಬಲು ಮುಖ್ಯ ಮತ್ತು ಎಲ್ಲಕ್ಕೂ ಸ್ಥಾನವಿದೆ. ಇರುವಾಗ, ಮೆರೆವಾಗ ನಾನೇ ಎಂಬ ಭಾವವನ್ನು ತೊಲಗಿಸಿಕೊಂಡು, “ನಾನೂ ಸಹ ವೈಭವದ ಒಂದು ಭಾಗ’ ಎಂದು ಅರಿತಾಗ ಬಾಳು ಸಾರ್ಥಕ ಎಂಬ ಪಾಠವನ್ನು ರಚನೆಯು ಕಲಿಸಿದೆ. ಇದೊಂದು ಜೀವವಿಲ್ಲದ್ದು ಎಂದು ಹೇಳಲಾದೀತೇ? ಅರಮನೆಯ ಈ ರಚನೆಯು ಆರಂಭದ ದಿನದಿಂದ ಈವರೆಗೂ ನಮ್ಮೊಡನೆ ಇದ್ದು ನಮ್ಮ ದೈನಂದಿನ ಭಾಗವೇ ಆಗಿತ್ತು. ದಿನನಿತ್ಯದಲ್ಲಿ ನಾನಾ ಸವಾಲುಗಳು ಒಂದೆಡೆ, ಸಮಯಕ್ಕೆ ಸರಿಯಾಗಿ ಒಪ್ಪಿಕೊಂಡ ಕೆಲಸವು ಪೂರ್ಣಗೊಳ್ಳುವುದೇ? ಎಂಬ ಆತಂಕ ಮತ್ತು ಒತ್ತಡ ಇತ್ಯಾದಿಗಳಿಂದ, ಈ ಯಾನದ ಅನುಭವವು ಸಾಕಷ್ಟು ಪಾಠ ಕಲಿಸಿದೆ. ಮುಂದಿನ ಕೆಲಸಗಳಿಗೆ ಮನವನ್ನು ಅಣಿಮಾಡಿಕೊಳ್ಳಲೇಬೇಕು.

* ಶ್ರೀನಾಥ್‌ ಭಲ್ಲೇ, ರಿಚ್ಮಂಡ್‌

Advertisement

Udayavani is now on Telegram. Click here to join our channel and stay updated with the latest news.

Next