Advertisement

ರೈತರ ಮನೆಯಲ್ಲಿ ಪುಣ್ಯಕೋಟಿ ನಿನಾದ|ದೇಸೀ ಗೋ ತಳಿ ಸಂರಕ್ಷಣೆಗಾಗಿ ವಿಶಿಷ್ಟ ಯೋಜನೆ 

07:37 PM Sep 13, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಸಮಾಜದಲ್ಲಿ ಸಂಪ್ರದಾಯ, ಪರಂಪರೆ, ದೇಸಿಯತೆ ಪ್ರಸರಣ ಹಾಗೂ ದೇಶಪ್ರೇಮ ಬಿತ್ತುವ ಕಾಯಕದಲ್ಲಿ ತೊಡಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ದೇಸೀ ಹಸುಗಳ ಸಂರಕ್ಷಣೆ- ಸಂವರ್ಧನೆ ನಿಟ್ಟಿನಲ್ಲಿ ರೈತರ ಮನ-ಮನೆಗಳಲ್ಲಿ ಪುಣ್ಯಕೋಟಿಯ ನಿನಾದಕ್ಕೆ ಮುಂದಾಗಿದೆ.

ಆರ್‌ ಎಸ್‌ಎಸ್‌ ಮಾರ್ಗದರ್ಶನದ ಪುಣ್ಯಕೋಟಿ ಗೋ ಸಂಶೋಧನಾ ಮತ್ತು ಪ್ರಶಿಕ್ಷಣ ಟ್ರಸ್ಟ್‌ ಇಂತಹ ಮಹತ್ವದಕಾರ್ಯಕ್ಕೆ ಮುಂದಡಿ ಇರಿಸಿದೆ. ಮಾಯವಾಗಿರುವ ಗೋ ಆಧಾರಿತ ಕೃಷಿ ಮರಳುವಂತೆ ಮಾಡುವ, ನಶಿಸುತ್ತಿರುವ ದೇಸೀ ಗೋ ಸಂತತಿಯ ವೃದ್ಧಿಗೆ ರೈತರು ಮನಸ್ಸು ಮಾಡಬೇಕು. ಇದು ಆಗಬೇಕೆಂದರೆ ದೇಸೀ ಗೋವುಗಳ ಅಗತ್ಯತೆ, ಪ್ರಯೋಜನ ಕುರಿತಾಗಿ ಅವರಿಗೆ ಮನನ ಜತೆಗೆ ಯುವಕರ ಮನದೊಳಗೆ ದೇಸೀ ಗೋವುಗಳ ಮಹತ್ವ ಅಚ್ಚೊತ್ತುವ ಕಾರ್ಯ ಮಾಡಬೇಕು. ಇದನ್ನು ಮನಗಂಡಿರುವ ಪುಣ್ಯಕೋಟಿ ಸಂಶೋಧನಾ ಮತ್ತು ಪ್ರಶಿಕ್ಷಣ ಟ್ರಸ್ಟ್‌ ಮಹತ್ವದ ಯೋಜನೆ ರೂಪಿಸಿದೆ.

ದೇಶದಲ್ಲಿ ಪ್ರಸ್ತುತ ಸುಮಾರು 31 ದೇಸೀ ಹಸು ತಳಿ ಉಳಿದಿದ್ದು, ಜೆರ್ಸಿ, ಎಚ್‌ಎಫ್‌ ಆಕಳುಗಳ ಅಬ್ಬರಕ್ಕೆ ಇದ್ದ ತಳಿಗಳಲ್ಲಿಯೂ ಕೆಲವು ನಶಿಸುವ ಅಂಚಿಗೆ ತಲು ಪಿವೆ. ದೇಸೀ ಹಸುಗಳ ಸಂತತಿ ಉಳಿಸಿ, ಬೆಳೆಸಬೇಕೆಂಬ ನಿಟ್ಟಿನಲ್ಲಿ ಟ್ರಸ್ಟ್‌ ಪ್ರಮುಖ ಹೆಜ್ಜೆಯನ್ನಿಟ್ಟಿದೆ.

ದೇಶದ ಆರೋಗ್ಯ-ರೈತರ ಹಿತ ಚಿಂತನೆ: ದೇಶದ ಆರೋಗ್ಯ, ರೈತರ ಹಿತ, ಸುಸ್ಥಿರ ಕೃಷಿ ದೃಷ್ಟಿಯಿಂದ ದೇಸೀ ಗೋವುಗಳ ಸಾಕಣೆ, ಗೋ ಆಧಾರಿತ ಕೃಷಿ ಕಾಯಕ ಮುಖ್ಯ ಎಂಬ ಜಾಗೃತಿ ಕಾರ್ಯಕ್ಕೆ ಟ್ರಸ್ಟ್‌ ಒತ್ತು ನೀಡಿದೆ. ದೇಸೀ ಗೋವುಗಳ ಸಾಕಣೆ ಹಾಗೂ ಗೋ ಆಧಾರಿತಕೃಷಿ ಕುರಿತಾಗಿ ರೈತರು, ಯುವಕರಿಗೆ ಪ್ರೇರಣೆ, ತರಬೇತಿ, ಮಾರ್ಗದರ್ಶನ ಕಾರ್ಯವನ್ನು ಟ್ರಸ್ಟ್‌ ಆರಂಭಿಸಿದ್ದು, ಕೆಲವು ಕಡೆ ಗೋ ಆಧಾರಿತ ಕೃಷಿ ಪ್ರಯೋಗದ ಮೂಲಕ ರೈತರಿಗೆ ಅದರ ಮಹತ್ವದ ಮನವರಿಕೆಗೆ ಯೋಜಿಸಲಾಗಿದೆ.

Advertisement

ಹಾಲು-ಉತ್ಪನ್ನಗಳಿಗೆ ಮಾರುಕಟ್ಟೆ: ಜೆರ್ಸಿ ಹಾಗೂ ಎಚ್‌ಎಫ್‌ ಆಕಳುಗಳಿಗೆ ಹೋಲಿಸಿದರೆ ದೇಸೀ ಹಸು ಗಳು ಹಾಲು ನೀಡುವಿಕೆ ಪ್ರಮಾಣ ಕಡಿಮೆ. ಇದೇ ಉದ್ದೇಶಕ್ಕೆ ರೈತರು ದೇಸೀ ಹಸುಗಳ ಬದಲು ಜೆರ್ಸಿ, ಎಚ್‌ಎಫ್‌ಗಳನ್ನು ಸಾಕುತ್ತಾರೆ. ರೈತರು ದೇಸೀ ಹಸು ಸಾಕಣೆಗೆ ಮುಂದಾದರೆ ದೇಸೀ ಹಸುಗಳ ಹಾಲು, ಗೋಮೂತ್ರ, ಸಗಣಿ ಬಳಸಿ ಮಾಡಬಹುದಾದ ವಿವಿಧ ಉತ್ಪನ್ನಗಳ ತಯಾರಿಕೆಗೆ ಅಗತ್ಯ ಕಚ್ಚಾ ಸಾಮಗ್ರಿಗಳನ್ನು ನೀಡಿ ಸಿದ್ಧ ಉತ್ಪನ್ನಗಳನ್ನು ಖರೀದಿ ಸಲು ನಿರ್ಧರಿಸಲಾಗಿದೆ. ರೈತರಿಂದ ದೇಸೀ ಹಸುಗಳ ಹಾಲು ಪ್ರತಿ ಲೀ.ಗೆ 60 ರೂ.ನಂತೆ ಮಾರಾಟವಾ ದರೂ ರೈತರಿಗೆ ಜೆರ್ಸಿ, ಎಚ್‌ಎಫ್‌ ಆಕಳುಗಳ ಹಾಲಿನಿಂದ ಎಷ್ಟು ಆದಾಯ ಬರುತ್ತದೆಯೋ ಅದಕ್ಕೆ ಸರಿಸಮಾನ ರೀತಿಯಲ್ಲಿ ಆದಾಯ ಬರಲಿದೆ.

ದೇಸೀ ಹಸುಗಳ ಮೂತ್ರ, ಸಗಣಿಬಳಸಿ ಗೋಆರ್ಕ, ಜೀವಾಮೃತ, ಘನಾಮೃತ, ಸೊಳ್ಳೆ ಬತ್ತಿ, ಅಗ್ನಿಹೋತ್ರ, ಹೋಮಕ್ಕೆ ಬೇಕಾಗುವ ಭರಣಿ, ಫಿನಾಯಿಲ್‌ ಹೀಗೆ ವಿವಿಧ ಉತ್ಪನ್ನಗಳ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ನೀಡಿ, ಸಿದ್ಧ ಉತ್ಪನ್ನ  ಖರೀದಿಸುವ, ರೈತರಿಗೆ ಮಾರುಕಟ್ಟೆ ಒದಗಿಸಲು ಟ್ರಸ್ಟ್‌ ನಿರ್ಧರಿಸಿದೆ. ಈಗಾಗಲೇ ಕೆಲವು ರೈತರಿಂದ ದೇಸೀ ಹಸುಗಳ ಹಾಲು ಖರೀದಿ, ಹುಬ್ಬಳ್ಳಿಯಲ್ಲಿ ಅನೇಕರಿಗೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next