Advertisement

ಲೋಪಕ್ಕೆ ಅಮಾನತು: ಜಿಲ್ಲಾಧಿಕಾರಿ ಎಚ್ಚರಿಕೆ

02:08 PM Jan 31, 2018 | Team Udayavani |

ಪುತ್ತೂರು: ಚುನಾವಣಾ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಇದನ್ನು ಸೇವೆ ಎಂದು ಪರಿಗಣಿಸಬೇಕು. ಉದ್ದೇಶಪೂರ್ವಕ ಯಾವುದೇ ತಪ್ಪು ಎಸಗಿ ದರೆ ಅಮಾನತು ಮಾಡಲಾಗುವುದು. ಇದಕ್ಕೆ ಯಾರಿಗೂ ರಿಯಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರು ಎಚ್ಚರಿಕೆ ನೀಡಿದರು.

Advertisement

ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ಪುರಭವನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಕೆಲಸಕ್ಕೆಂದು ನಿಯೋಜನೆ ಗೊಂಡವರು ಪಕ್ಷ, ವ್ಯಕ್ತಿ, ಸಂಬಂಧ ಎಲ್ಲವನ್ನೂ ಮರೆತುಬಿಡಿ. ನೀತಿ ಸಂಹಿತೆ ಘೋಷಣೆ ಆಗುತ್ತಿದ್ದಂತೆ ನೀವೆಲ್ಲರೂ ಚುನಾವಣಾ ಆಯೋಗಕ್ಕೆ ನಿಯೋಜನೆಗೊಳ್ಳುತ್ತೀರಿ. ಚುನಾವಣಾ ಕರ್ತವ್ಯವನ್ನು ಸೇವೆ ಎಂದು ಪರಿಗಣಿಸಬೇಕು. ಲೋಪ ಆಗದಂತೆ ಎಚ್ಚರಿಕೆ ವಹಿಸಿ. ಅಚಾತುರ್ಯದಿಂದಾಗಿರುವ ತಪ್ಪಿನ ಬಗ್ಗೆ ಭಯ ಬೇಡ. ಆದರೆ ಉದ್ದೇಶಪೂರ್ವಕ ನಡೆಯುವ ತಪ್ಪಿಗೆ ಯಾವುದೇ ರಿಯಾಯಿತಿ ನೀಡುವುದಿಲ್ಲ. ಈ ಬಗ್ಗೆ ದೂರು ಬಂದರೆ ತನಿಖೆ ನಡೆಸಲಾಗುವುದು. ಬಳಿಕ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಅಮಾನತು ಮಾಡಲಾಗುವುದು ಎಂದರು.

ಗ್ರಾ.ಪಂ.ನ ಬಿಲ್‌ ಕಲೆಕ್ಟರ್‌ನಿಂದ ಹಿಡಿದು ಸಹಾಯಕರವರೆಗೆ ಎಲ್ಲರಿಗೂ ಈ ಬಗ್ಗೆ ಮಾಹಿತಿ ನೀಡಿ. ಚುನಾವಣೆ ಪ್ರಕ್ರಿಯೆಗೆ ಭಂಗ ತರುವ ಸಿಬಂದಿಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಮುಂದಿನ 3-4 ತಿಂಗಳು ಎಲ್ಲ ಸಮಸ್ಯೆ ಬದಿಗಿಟ್ಟು ಕೆಲಸ ಮಾಡಿ ಎಂದರು.ದಕ್ಷಿಣ ಕನ್ನಡದಲ್ಲಿ ಉತ್ತಮ ಚುನಾವಣೆ ನಡೆಯುತ್ತದೆ. ಮುಂಬರುವ ಚುನಾವಣೆಯನ್ನು ಯಶಸ್ವಿ ಮಾಡಲು ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು.

ಮತದಾನ ಕೇಂದ್ರಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಈಗಿನಿಂದಲೇ ಕೇಂದ್ರಗಳ ಮೇಲೆ ಕಣ್ಣಿಡಿ. ಅಲ್ಲಿನ ಸೂಕ್ಷ್ಮತೆ, ಜನರ ಮನಸ್ಥಿತಿ, ಅಪಾಯದ ಸ್ಥಿತಿಗಳಿದ್ದರೆ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಿ. ಮತದಾನದ ದಿನ ಯಾವುದೇ ರೀತಿಯ ಲೋಪ ಆಗಬಾರದು. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ. ಕೇಂದ್ರದ ರಸ್ತೆ, ಮೆಟ್ಟಿಲು, ರ್‍ಯಾಂಪ್‌, ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಿ. ಬೂತ್‌ ಹಂತದಲ್ಲಿ ನಮ್ಮ ಕಣ್ಣು ಮತ್ತು ಕಿವಿ ನೀವೇ ಆಗಿದೀªರಿ. ಆದ್ದರಿಂದ ಶಿಸ್ತುಬದ್ಧವಾಗಿ ಕೆಲಸ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ವಿವಿ ಪ್ಯಾಟ್‌
ಮತಯಂತ್ರದ ಜತೆಗೆ ಈ ಬಾರಿ ವಿವಿ ಪ್ಯಾಟ್‌ ಇರಲಿದೆ. ಮತದಾರ ಮತದಾನ ಮಾಡಿದ ಕೂಡಲೇ ಅದು ಮುದ್ರಣವಾಗಿ ಕಾಣಸಿಗುತ್ತದೆ. ಬಳಿಕ ಅದು ತುಂಡರಿಸಿ, ಮೆಷಿನ್‌ ಒಳಗಡೆ ಬೀಳುತ್ತದೆ. ಮತ ಎಣಿಕೆ ದಿನ ಗೊಂದಲ ಮೂಡಿದರೆ, ಈ ಮುದ್ರಣವನ್ನು ಮತ್ತೂಮ್ಮೆ ಎಣಿಕೆ ಮಾಡಲು ಅವಕಾಶವಿದೆ. ಇಲ್ಲಿ ಗೊಂದಲಕ್ಕೆ ಅವಕಾಶವೇ ಇಲ್ಲ ಎಂದರು. ಎಪಿಕ್‌ ಕಾರ್ಡ್‌ ಜತೆ ಉಳಿದ 12 ಗುರುತು ಚೀಟಿಗಳಲ್ಲಿ ಯಾವುದನ್ನು ತಂದರೂ ಮತ ಚಲಾಯಿಸಬಹುದು. ಸ್ಲಿಪ್‌ನಲ್ಲಿ ಇರುವ ಫೂಟೋ, ಹೆಸರಿಗೆ ಇದು ಹೊಂದಾಣಿಕೆ ಆಗಬೇಕಷ್ಟೇ ಎಂದು ಅಧಿಕಾರಿಗಳಿಗೆ ತಿಳಿಸಲಾಯಿತು. ಈ ಬಾರಿ ದಕ್ಷಿಣ ಕನ್ನಡದಲ್ಲಿ ಶೇ. 85ರಿಂದ 90ರ ವರೆಗೆ ಮತದಾನ ನಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದರು.

Advertisement

ಜಿಲ್ಲಾ ಕೇಂದ್ರದಿಂದ ಪ್ರತಿ ತಾಲೂಕಿನ ತಹಶೀಲ್ದಾರ್‌ಗೆ ಮಾಹಿತಿ ರವಾನೆ ಆಗುತ್ತದೆ. ಇಲ್ಲಿಂದ ಬೂತ್‌ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಕಳುಹಿಸಲಾಗುತ್ತದೆ. ಎಲ್ಲರೂ ತಂಡವಾಗಿ ಕೆಲಸ ನಿರ್ವಹಿಸಬೇಕು. ಕೊರತೆಗಳನ್ನು ಮೊದಲೇ ತಿಳಿದುಕೊಳ್ಳಿ. ಮತದಾನ ಹೆಚ್ಚು ಮಾಡಲು ಕಾರ್ಯಕ್ರಮ ನಡೆಯುತ್ತಿದೆ. ಇನ್ನಷ್ಟು ಪರಿಣಾಮಕಾರಿ ಕೆಲಸ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ, ತಹಶೀಲ್ದಾರ್‌ ಅನಂತಶಂಕರ ಉಪಸ್ಥಿತರಿದ್ದರು

‘ನಿಗಾ ವಹಿಸಿ’
ಸುಳ್ಯ : ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಲೋಪ ಬಾರದ ಹಾಗೆ ಅಧಿಕಾರಿಗಳು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಸೂಚನೆ ನೀಡಿದ್ದಾರೆ.

ಅವರು ಚುನಾವಣೆ ಹಿನ್ನೆಲೆಯಲ್ಲಿ ಕೆವಿಜಿ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮತದಾರರ ಪಟ್ಟಿಗೆ ಸಂಬಂಧಿಸಿ, ಫೆಬ್ರವರಿಯಲ್ಲಿ ಬರುವ ಅಂತಿಮ ಪಟ್ಟಿಯನ್ನು ಪರಿಶೀಲಿಸಬೇಕು. ಮತದಾರರ ಹೆಸರು ಬಿಟ್ಟು ಹೋಗಿದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಂಡು, ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮತದಾನದ ಸಂದರ್ಭ ಬೇಕಾದ ಅಗತ್ಯ ಮೂಲ ಸೌಕರ್ಯಗಳ ಜೋಡಣೆಗೆ ಕ್ರಮ ಕೈಗೊಳ್ಳಬೇಕು. ಮತದಾನ ಪ್ರಕ್ರಿಯೆಗೆ ಯಾವುದೇ ಲೋಪ ಉಂಟಾಗಬಾರದು. ಸೂಕ್ಷ್ಮ ಮತಗಟ್ಟೆ ಸಹಿತ ಆಯಾ ಮತಗಟ್ಟೆ ಬಗ್ಗೆ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು. ಶಾಂತಿಯುತ ಮತದಾನಕ್ಕೆ ಧಕ್ಕೆ ಬಾರದ ಹಾಗೆ ಕ್ರಮ ಕೈಗೊಳ್ಳಬೇಕು. ಮತದಾನದಲ್ಲಿ ಪಾಲ್ಗೊಳ್ಳುವ ಎಲ್ಲ ಸಿಬಂದಿ ತಂಡವಾಗಿ ಕೆಲಸ ನಿರ್ವಹಿಸಬೇಕು. ತಾಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಆಗಬೇಕು. ಇದಕ್ಕೆ ನಮ್ಮ ಕಡೆಯಿಂದ ಪೂರ್ಣ ಸಿದ್ಧತೆ ನಡೆಸಬೇಕು ಎಂದು ವಿವರಿಸಿದರು.

ಮತದಾನದ ಸಂದರ್ಭ ಬೇರೆ ಕಡೆಗಳಿಂದ ಕರ್ತವ್ಯಕ್ಕೆ ಬರುವ ಸಿಬಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ವಸತಿ, ಶೌಚಾಲಯ ಮೊದಲಾದ ಪ್ರಾಥಮಿಕ ಸೌಲಭ್ಯಗಳು ಆಯಾ ಮತಗಟ್ಟೆಯ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಅಂಗವಿಕಲತೆ ಉಳ್ಳವರು ಕರ್ತವ್ಯಕ್ಕೆ ಬಂದರೆ ಅವರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಸಭೆಯಲ್ಲಿ ಪಿಡಿಒಗಳು, ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಭಾಗವಹಿಸಿದ್ದರು. ಸುಮಾರು 1 ತಾಸಿನ ಕಾಲ ಚುನಾವಣೆ ಸಂಬಂಧಿತ ಸೂಚನೆಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next