Advertisement

ಆರೋಗ್ಯ ಇಲಾಖೆಯಿಂದ ಯುದ್ಧಕಾಲೇ ಶಸ್ತ್ರಾಭ್ಯಾಸ!

10:35 PM Sep 14, 2021 | Team Udayavani |

ಕೊರೊನಾ ಸಾಂಕ್ರಾಮಿಕ ಭಾರತಕ್ಕೆ ಕಾಲಿಟ್ಟು ಒಂದೂವರೆ ವರ್ಷವೇ ಕಳೆದಿದೆ. ನಿಯಂತ್ರಣ ಕಾರ್ಯವೂ ನಡೆಯುತ್ತಿದೆ. ಆದರೆ ಈ ಸಾಂಕ್ರಾಮಿಕ ಐದಾರು ರಾಜ್ಯಗಳಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಆ ಪೈಕಿ ಕರ್ನಾಟಕ ರಾಜ್ಯವೂ ಒಂದು. ಪ್ರಸಕ್ತ ಕರ್ನಾಟಕಕ್ಕಿಂತಲೂ ನೆರೆಯ ಕೇರಳ ರಾಜ್ಯದಲ್ಲಿ ಹೆಚ್ಚು ಪ್ರಕರಣಗಳಿದ್ದು, ನಿಯಂತ್ರಿಸಲು ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ಕರ್ನಾ ಟಕದ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗಿದೆ. ಕೊರೊನಾ ಅಥವಾ ಇನ್ಯಾವುದೇ ಸಾಂಕ್ರಾಮಿಕ ರೋಗದ ನಿಯಂತ್ರಣ ಆ ರಾಜ್ಯದ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಮೇಲೆ ಅವಲಂಬಿತವಾಗಿದೆ. ಇಲಾಖೆಯ ಎಲ್ಲ ವಿಭಾಗಗಳು, ಮುಖ್ಯವಾಗಿ ಸಿಬಂದಿ ಶಾಖೆ ಪ್ರಮಾಣಬದ್ಧವಾಗಿ ರಲೇಬೇಕು. ಕರ್ನಾಟಕದ ಆರೋಗ್ಯ ಇಲಾಖೆಯ ಸ್ಥಿತಿಗತಿ ಹೇಗಿದೆ ಎಂಬ ಅವಲೋಕನ ಇಲ್ಲಿ ಪ್ರಸ್ತುತ.

Advertisement

ರಾಜ್ಯದಲ್ಲಿ ವಿವಿಧೋದ್ದೇಶ ಆರೋಗ್ಯ ಕಾರ್ಯ ಕರ್ತರ ಯೋಜನೆ ಊರ್ಜಿತದಲ್ಲಿದೆ. ಈ ಯೋಜನೆ ಯಂತೆ ಕ್ಷೇತ್ರ ಮಟ್ಟದಲ್ಲಿ ಅರ್ಥಾತ್‌ ತಳಮಟ್ಟದಲ್ಲಿ ಪ್ರತೀ 5-10 ಸಾವಿರ ಜನಸಂಖ್ಯೆಗೆ ಸಾರ್ವಜನಿಕ ಆರೋಗ್ಯ ಶಿಕ್ಷಣ ಪಡೆದ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ಆರೋಗ್ಯ ಕಾರ್ಯಕರ್ತರು ಇರಬೇಕು. ಆದರೆ ರಾಜ್ಯ ದಲ್ಲಿ ಈ ಸಿಬಂದಿ ಸಂಖ್ಯೆ ಪ್ರಮಾಣಬದ್ಧವಾಗಿಲ್ಲ. ಕಾಲ ಕಾಲಕ್ಕೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಇಲಾಖೆಯನ್ನು ಸಜ್ಜುಗೊಳಿಸುವ ಪರಿಪಾಠ ಕೈ ಬಿಟ್ಟು ದಶಕಗಳೇ ಕಳೆದಿವೆ. ಲಭ್ಯ ಅಂಕಿ ಅಂಶದ ಪ್ರಕಾರ ವರ್ಗವಾರು ಸಿಬಂದಿ ವಿವಿರ ಈ ಕೆಳಗಿನಂತಿದೆ.

ಈ ಪ್ರಕಾರ ಮಂಜೂರಾದ ಹುದ್ದೆಗಳಲ್ಲಿ ಶೇ. 30 ರಿಂದ 40ರಷ್ಟು ಹುದ್ದೆಗಳು ಖಾಲಿ ಇವೆ. ಆರೋಗ್ಯ ಇಲಾಖೆ ಆವಶ್ಯಕ ಸೇವಾ ಇಲಾಖೆ. ಇಲಾಖೆ ಎದುರಿಸಬೇಕಾದ ಸಮಸ್ಯೆಗಳಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಬಹಳ ಮುಖ್ಯವಾದುದು ಹಾಗೂ ಶ್ರಮಭರಿತವಾದುದು. ಈ ಬಗ್ಗೆ ತಳಮಟ್ಟದ ಕಾರ್ಯಕರ್ತರ ಸೇವೆ ಅಗತ್ಯ. ಅದರಲ್ಲಿಯೂ ಆರೋಗ್ಯ ಕಾರ್ಯಕರ್ತರ ಸೇವೆ ಅತೀ ಅಗತ್ಯ. ಯಾಕೆಂದರೆ ಸಮರೋಪಾದಿಯಲ್ಲಿ ಕೈಗೊಳ್ಳುವ ನಿಯಂತ್ರಣ ಕಾರ್ಯದ ತುರ್ತು ಕರೆಗೆ ತಕ್ಕಂತೆ ಕ್ಷೇತ್ರ ಪರ್ಯಟನೆ ಹಾಗೂ ಸಾರ್ವಜನಿಕ ಸಂಪರ್ಕದಂಥ ಕೆಲಸಗಳಿಗೆ ನಿಯೋಜಿಸಲು ಯುಕ್ತವಾದ ಸಿಬಂದಿ ವರ್ಗವೆಂದರೆ ಆರೋಗ್ಯ ಕಾರ್ಯಕರ್ತರು ಎಂಬುದು ಇಲಾಖೆ ಈತನಕ ಕಂಡುಕೊಂಡ ಸತ್ಯ. ರೋಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬಹುದು. ಆದರೆ ರೋಗ ಹರಡುವುದನ್ನು ತಡೆಗಟ್ಟಬೇಕಾದುದು ಕ್ಷೇತ್ರದಲ್ಲಿ. ಅರ್ಥಾತ್‌ ಎಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತದೋ ಅಲ್ಲಿ. ಹಾಗಾಗಿ ಆರೋಗ್ಯ ಕಾರ್ಯಕರ್ತರ ಸೇವೆ ಅಲ್ಲಿ ಅಗತ್ಯವೆಂಬುದು ನಿರ್ವಿವಾದ. ಕರ್ನಾಟಕದಲ್ಲಿ ಈ ಹುದ್ದೆಗಳು ಅನುಮೋದನೆಗೊಂಡ ಸಂಖ್ಯೆಯಷ್ಟೇ ಕಾರ್ಯನಿರತ ಸ್ಥಿತಿಯಲ್ಲಿದ್ದಿದ್ದರೆ ಕೊರೊನಾ ನಿಯಂತ್ರಣದ ಮೂರು ಪ್ರಮುಖ ಸೂತ್ರಗಳಾದ ಟೆಸ್ಟಿಂಗ್‌, ಟ್ರೇಸಿಂಗ್‌ ಹಾಗೂ ಟ್ರೀಟಿಂಗ್‌ ಅನ್ನು ಸಮರ್ಪಕವಾಗಿ ನಡೆಸಬಹುದಾಗಿತ್ತು. ಮುಖ್ಯವಾಗಿ ಟ್ರೇಸಿಂಗ್‌ ಅನ್ನುಸಮರ್ಪಕವಾಗಿ ಕ್ಲಪ್ತ ಕಾಲದಲ್ಲಿ ನಡೆಸಿ ಸೋಂಕಿನ ನಿಯಂತ್ರಣವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದಾಗಿತ್ತು ಅಥವಾ ನಿರ್ಮೂಲನೆಯನ್ನೇ ಮಾಡಬಹುದಾಗಿತ್ತು.

ಈಗ ಕೊರೊನಾ ನಿಯಂತ್ರಣದಲ್ಲಿ ದೇಶದ ಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂಬ ಪರಾಮರ್ಶೆ ಅಗತ್ಯ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ| ಸೌಮ್ಯ ಸ್ವಾಮಿನಾಥನ್‌ ಅವರು ವ್ಯಕ್ತಪಡಿಸಿದ ಅಭಿಪ್ರಾಯದಂತೆ ಭಾರತದಲ್ಲಿ ಕೊರೊನಾ ಎಂಡೆಮಿಕ್‌ ಹಂತ ತಲುಪಿದೆ. ಇಲ್ಲಿ ಈ ಪಾರಿಭಾಷಿಕ ಪದಗಳ ತಾಂತ್ರಿಕ ವ್ಯಾಖ್ಯಾನ ಪ್ರಸ್ತುತವೆನಿಸೀತು. 1. ಎಪಿಡೆಮಿಕ್‌-ಅಂದರೆ ಒಬ್ಬ ರಿಂದೊಬ್ಬರಿಗೆ ಹರಡುವ ಅರ್ಥಾತ್‌ ಸಾಂಕ್ರಾಮಿಕ ರೋಗ ಸಮುದಾಯದಲ್ಲಿ ಒಮ್ಮಿಂದೊಮ್ಮೆಗೆ ಕಾಣಿ ಸಿಕೊಂಡು ಸಾವು ನೋವು ಸಂಭವಿಸುತ್ತದೆ. 2. ಪೆಂಡೆಮಿಕ್‌- ಅಂದರೆ ಸಾಂಕ್ರಾಮಿಕ ರೋಗ ದೇಶದಿಂದ ದೇಶಕ್ಕೆ ಹಾಗೂ ವಿಶ್ವವ್ಯಾಪಿ ಹರಡುವ ಸ್ವರೂಪದ್ದು, 3. ಎಂಡೆಮಿಕ್‌- ಅಂದರೆ ವರ್ಷದ ಎಲ್ಲ ಕಾಲಗಳಲ್ಲಿಯೂ ಸಮುದಾಯದಲ್ಲಿ  ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗ. ಆ ಹಂತಕ್ಕೆ ತಲುಪುವಷ್ಟರಲ್ಲಿ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುವುದರಿಂದ ರೋಗ ಗಂಭೀರ ಸ್ಥಿತಿಗೆ ಹೋಗುವುದು ಕಡಿಮೆ. ಪರಿಣಾಮವಾಗಿ ಸಾವು ಕಡಿಮೆಯಾಗಬಹುದು. ಆದರೆ ಕಾಯಿಲೆ ಸದಾ ಸಮುದಾಯದಲ್ಲಿರುತ್ತದೆ. ಕಾಯಿಲೆಯನ್ನು ಸಂಪೂರ್ಣ ವಾಗಿ ನಿವಾರಿಸಲು ನಿರ್ಮೂಲನ ಯೋಜನೆಯನ್ನೇ ಹಮ್ಮಿಕೊಳ್ಳಬೇಕಾದೀತು ಎಂದು ಡಾ| ಸೌಮ್ಯ ಸ್ವಾಮಿ ನಾಥನ್‌ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ.

ಸರಕಾರ ಆರೋಗ್ಯ ಇಲಾಖೆಗೆ ವಿಶಿಷ್ಟ ಸ್ಥಾನ ಕಲ್ಪಿಸಬೇಕು. ಇತರ ಇಲಾಖೆಗಳ ಸಾಲಿಗೆ ಸೇರಿಸಿ, ಇಲಾಖೆಯ ಕಾರ್ಯಪ್ರಾಶಸ್ತ್ಯದ ಔಚಿತ್ಯವನ್ನೇ ಕೆಡಿಸಬಾರದು. ಇಲಾಖೆ ಸದಾ ಸಿದ್ಧತೆಯಲ್ಲಿರುವಂತೆ ಸಜ್ಜುಗೊಳಿಸಬೇಕು. ರೋಗ ಬಂದ ಅನಂತರ ಅಗತ್ಯ ಪರಿಕರಗಳ ಪೂರೈಕೆ ಹಾಗೂ ಸಿಬಂದಿ ನೇಮಕಾತಿಗೆ ತೊಡಗುವುದಲ್ಲ. ವಾರಗಳ ಹಿಂದೆ ಯಷ್ಟೇ ಯುದ್ಧಕಾಲೇ ಶಸ್ತ್ರಾಭ್ಯಾಸವೆಂಬಂತೆ ಸಿಬಂದಿ ನೇಮಕಾತಿಗೆ ಇಲಾಖೆ ಒಂದು ಪ್ರಕಟನೆ ಹೊರಡಿ ಸಿದೆ. ಅದೂ ಗುತ್ತಿಗೆ ಆಧಾರದಲ್ಲಿ! ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಮಾಡಿ ನೇರ ಕರ್ತವ್ಯಕ್ಕೆ ನಿಯೋಜಿಸಲಾಗುವ ಹುದ್ದೆಗಳೆಂದರೆ ವೈದ್ಯರು, ಲಿಪಿಕಾ ನೌಕರರು ಹಾಗೂ ಗ್ರೂಪ್‌ ಡಿ ನೌಕರರು ಮಾತ್ರ. ಇಲಾಖೆಯ ಮಿಕ್ಕೆಲ್ಲ ಪಾರಾಮೆಡಿಕಲ್‌ ಸಿಬಂದಿಗೆ ಒಂದಲ್ಲ ಒಂದು ಬಗೆಯ ಹಾಗೂ ನಿರ್ದಿಷ್ಟ ಅವಧಿಯ ತರಬೇತಿ ನಿಗದಿತವಾಗಿದೆ. ಈ ವಿಶಿಷ್ಟ ಕೋರ್ಸ್‌ನ ತಾಂತ್ರಿಕ ತರಬೇತಿ ನೀಡುವ ಕೆಲವು ಖಾಸಗಿ ತರಬೇತಿ ಕೇಂದ್ರಗಳಿವೆ. ಅವುಗಳ ಸಂಖ್ಯೆ ಕಡಿಮೆ. ಅಲ್ಲದೆ ಅವುಗಳು ಸರಕಾರ ಈಗಾಗಲೇ ನಿಗದಿಪಡಿಸಿದ ಗುಣಮಟ್ಟದ ತರಬೇತಿ ಸಂಸ್ಥೆಗಳಲ್ಲ. ಹಾಗಾಗಿ ಈ ತುರ್ತು ನೇಮಕಾತಿಯಲ್ಲಿ ಸರಕಾರ ನಿಗದಿಪಡಿಸಿದ ಗುಣಮಟ್ಟದ ತರಬೇತಿ ಹೊಂದಿದ ಅಭ್ಯರ್ಥಿಗಳ ಲಭ್ಯತೆ ಅಸಾಧ್ಯ. ಅಲ್ಲದೆ ಅನುಮೋದನೆಗೊಂಡ ಹುದ್ದೆಗ ಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಯಾಕೆ ಮಾಡ ಬೇಕು? ಇದರಿಂದ ನೌಕರಶಾಹಿಯಲ್ಲಿ ನಿರಂತರ ದಕ್ಷತೆ ಉಳಿಯುವುದಿಲ್ಲ. ಸರಕಾರ ಈ ವಿಚಾರಗಳ ಬಗ್ಗೆ ಗಂಭೀರವಾಗಿ ಚಿಂತಿಸುವುದಿಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

Advertisement

ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಆರೋಗ್ಯ ಇಲಾಖೆಯನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸಜ್ಜು ಗೊಳಿಸುವ ಸಂಕಲ್ಪ ಮಾಡಬೇಕು. ಅನುಮೋದನೆ ಗೊಂಡ ಎಲ್ಲ ಹುದ್ದೆಗಳು ಕಾರ್ಯನಿರತವಾಗು ವಂತೆ ಖಾಯಂ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ತಳಮಟ್ಟದ ಮೂಲ ಸೌಕರ್ಯವನ್ನು ಸಕಾಲದಲ್ಲಿ ಒದಗಿಸಿ ಇಲಾಖೆಯ ಬಲವರ್ಧನೆ ಮಾಡಿ ಸಾರ್ವಜನಿಕ ಹಿತಾಸಕ್ತಿಯನ್ನು ಪ್ರದರ್ಶಿಸಬೇಕು.

ಹುದ್ದೆ ಮಂಜೂರು     ಕಾರ್ಯ ನಿರತ ಖಾಲಿ ಹುದ್ದೆ

 ಕಿ.ಆ.ಸ. (ಮ)   9,706     7,360     2,346

 ಹಿ.ಆ.ಸ. (ಮ)  1,406     570         836

 ಕಿ.ಆ.ಸ. (ಪು)    5,921     3,625     2,296

 ಹಿ.ಆ.ಸ. (ಪು)   1,227     850         387

 

ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next