Advertisement

ಡೆಂಗ್ಯೂ ಜ್ವರ: ಮುನ್ನೆಚ್ಚರಿಕೆಯೇ ಆರಂಭಿಕ ಔಷಧ

03:49 AM May 18, 2019 | Team Udayavani |

ಪುತ್ತೂರು: ವರ್ಷಗಳಿಂದ ಮುಂಗಾರು ಪೂರ್ವ ಹಾಗೂ ಮುಂಗಾರಿನ ಆರಂಭದಲ್ಲಿ ಡೆಂಗ್ಯೂ ಜ್ವರ ಬಾಧೆ ತೀವ್ರವಾಗಿ ಕಾಡಿದೆ. ಜನರಲ್ಲಿ ಒಂದಷ್ಟು ಜಾಗೃತಿಯ ಪರಿಣಾಮವಾಗಿ ಜ್ವರ ಬಾಧಿತರ ಪ್ರಮಾಣ ಎರಡು ವರ್ಷಗಳಲ್ಲಿ ಇಳಿಕೆಯನ್ನೂ ಕಂಡಿದೆ. ಈಡೀಸ್‌ ಈಜಿಪ್ತೆ ಎನ್ನುವ ಹೆಣ್ಣು ಸೊಳ್ಳೆಯಿಂದ ಹರಡುವ ಈ ರೋಗವನ್ನು ಮುನ್ನೆಚ್ಚರಿಕೆ ಕ್ರಮಗಳಿಂದ ಮಾತ್ರ ನಿಯಂತ್ರಿಸಲು ಸಾಧ್ಯ.

Advertisement

ಮಳೆ ಹಾಗೂ ಬಿಸಿಲಿನ ಆಟದ ಹವಾಮಾನದಲ್ಲಾಗುವ ವೈಪರಿತ್ಯಗಳಿಂದ ಸೊಳ್ಳೆಯ ಮೂಲಕ ಡೆಂಗ್ಯೂನಂತಹ ರೋಗ ಕಾಣಿಸಿಕೊಳ್ಳುತ್ತದೆ. ಸುಮಾರು ಮೂರು ದಿನಗಳಿಂದ ವಾರದವರೆಗೆ ಕಾಡುವ ಈ ವೈರಲ್ ಸೋಂಕು, ಗುಣವಾಗಲು ಮತ್ತೂಂದು ವಾರ ತೆಗೆದುಕೊಳ್ಳುತ್ತದೆ. ಉಲ್ಬಣಗೊಂಡರೆ ಮಾರಾಣಾಂತಿಕವಾಗಿಯೂ ಪರಿಣಮಿಸುತ್ತದೆ. ಸೂಕ್ತ ಮುಂಜಾಗರೂಕತೆ, ಜ್ವರ ಬಾಧಿಸಿದಲ್ಲಿ ಸೂಕ್ತ ಚಿಕಿತ್ಸೆ, ವಿಶ್ರಾಂತಿ ಅತಿ ಅಗತ್ಯ ಎನ್ನುವುದು ವೈದ್ಯರ ಅಭಿಪ್ರಾಯ.

ಜ್ವರದ ಲಕ್ಷ್ಮಣ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸೊಳ್ಳೆಗಳಿಂದ ಹರಡುವ ಈ ರೋಗ ಮಾರಕವಾಗಿಯೂ ಪರಿಣಮಿಸಬಹುದಾಗಿದ್ದು, ಮೂಳೆ ಗಂಟುಗಳಲ್ಲಿ ಅತಿ ನೋವು, ತಲೆನೋವು, ತೀವ್ರ ಜ್ವರ, ವಾಂತಿ, ಚರ್ಮದಲ್ಲಿ ಗುಳ್ಳೆಗ‌ಳು ಏಳುವುದು, ಜೀರ್ಣಶಕ್ತಿ ಕಡಿಮೆ, ತುರಿಕೆ ಇದರ ಸಾಮಾನ್ಯ ಲಕ್ಷಣ. ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಮಾತ್ರ ಈ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬಹುದು.

ಇಲಾಖೆಯ ಜಾಗೃತಿ
ಡೆಂಗ್ಯೂ ಜ್ವರ ಬಾಧಿಸದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಆರೋಗ್ಯ ಇಲಾಖೆಯೂ ಪ್ರತಿ ವರ್ಷ ಮುನ್ನೆಚ್ಚರಿಕಾ ಪ್ರಯತ್ನ ನಡೆಸುತ್ತಿದೆ. ಡೆಂಗ್ಯೂ ಜ್ವರದಿಂದ ಪಾರಾಗಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕರಪತ್ರಗಳ ಮೂಲಕ ಪ್ರಚಾರ ನಡೆಸಲಾಗುತ್ತದೆ.

2019ರಲ್ಲಿ ಈಗಾಗಲೇ ಕೋಡಿಂಬಾಳ ಪರಿಸರದಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮನೆ ಮನೆಗಳನ್ನು ಸಂಪರ್ಕಿಸಿ ಜಾಗೃತಿ ಕ್ರಮಗಳನ್ನು ಕೈಗೊಂಡಿದ್ದಾರೆ. ಮಳೆ ಆರಂಭವಾದ ಕೂಡಲೇ ಆರೋಗ್ಯ ಇಲಾಖೆಯ ಕಾರ್ಯಕರ್ತರು, ಸಿಬಂದಿ, ಆಶಾ ಕಾರ್ಯಕರ್ತೆಯರು ಲಾರ್ವ ಸರ್ವೆ ನಡೆಸಲಿದ್ದು, ಫಾಗಿಂಗ್‌ ಕೆಲಸ ಮಾಡಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಿಶ್ರಾಂತಿಯೂ ಬೇಕು
ಡೆಂಗ್ಯೂ ಜ್ವರ ಕಡಿಮೆಯಾದರೂ ಮೈಕೈ ನೋವು, ಸುಸ್ತು ಬೇಗನೇ ಕಡಿಮೆಯಾಗುವುದಿಲ್ಲ. ಈ ಕಾರಣದಿಂದ ವಿಶ್ರಾಂತಿಯೂ ಅಗತ್ಯ. ಆದರೆ ಹೆಚ್ಚು ಭಯಭೀತರಾಗದೆ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು. ಡೆಂಗ್ಯೂ ಜ್ವರ ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಷ್ಟೇ ತತ್‌ಕ್ಷಣದ ರಕ್ಷಣಾ ದಾರಿ ಎನ್ನುವುದು ಆರೋಗ್ಯ ಇಲಾಖೆಯ ಮನವಿ.

ರಕ್ಷಣೆ ಹೇಗೆ
·ಹಗಲು ಹೊತ್ತು ಮಾತ್ರ ಸೊಳ್ಳೆ ಕಚ್ಚುವುದರಿಂದ ಮುಖ್ಯವಾಗಿ ಸೂರ್ಯೋದಯ, ಸೂರ್ಯಾಸ್ತಮಾನದ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು.
·ಮಳೆಗಾಲದಲ್ಲಿ ಕುದಿಸಿ ತಣಿಸಿದ ಶುದ್ಧ ಕುಡಿಯುವ ನೀರನ್ನೇ ಬಳಸುವುದು.
·ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸುವುದು.
·ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಬಳಸುವುದು.
·ಹಳೆಯ ಟಯರು, ಎಳನೀರಿನ ಚಿಪ್ಪು, ಅಡಿಕೆ ಹಾಳೆಗಳಲ್ಲಿ ನೀರು ಶೇಖರಣೆಯಾಗಿರದಂತೆ ಗಮನಹರಿಸುವುದು.
·ಮೈ ಪೂರ್ತಿ ಮುಚ್ಚುವ ಬಟ್ಟೆ ಧರಿಸುವುದು.
·ಸೊಳ್ಳೆ ನಾಶಕ ಹೊಗೆ ಹಾಕುವುದು.

ನಿಯಂತ್ರಣಕ್ಕೆ ಬಂದಿದೆ
ಮಳೆಗಾಲದ ಆರಂಭದಲ್ಲಿ ಬಿಟ್ಟು ಬಿಟ್ಟು ಮಳೆ ಬಂದಾಗ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತದೆ. ಕೋಡಿಂಬಾಳ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ಮಳೆಯಾದ ಮತ್ತು ಅನಂತರ ಬಿಸಿಲು ಕಾಣಿಸಿಕೊಂಡ ಕಾರಣ ಕೆಲ ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು, ನಿಯಂತ್ರಣಕ್ಕೆ ಬಂದಿದೆ. ಎಲ್ಲಿಯೂ ಸೊಳ್ಳೆಗಳು ಉತ್ಪತ್ತಿಯಾಗಲು ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜ್ವರದ ಲಕ್ಷಣಗಳು ಕಂಡುಬಂದರೆ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು. ಸೊಳ್ಳೆಗಳಿಂದ ಲಾರ್ವ ಉತ್ಪತ್ತಿಯಾಗದಂತೆ ಇಲಾಖೆಯಿಂದಲೂ ಕ್ರಮ ಕೈಗೊಳ್ಳಲಾಗುತ್ತದೆ.
– ಡಾ| ಅಶೋಕ್‌ ಕುಮಾರ್‌ ರೈ ತಾ| ಆರೋಗ್ಯಾಧಿಕಾರಿ, ಪುತ್ತೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next