Advertisement

ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ

10:32 PM Jun 13, 2020 | Sriram |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರ ನಡುವೆ ಸದ್ದಿಲ್ಲದೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಪ್ರಕರಣಗಳ ಸಂಖ್ಯೆ ಏರಿಕೆ?
ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದೆ. ಆದರೂ ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಕರಣಗಳ ಸಂಖ್ಯೆ ಕೊಂಚ ಏರಿಕೆಯಾಗಿದೆ. 2020 ಜನವರಿ ತಿಂಗಳಿನಿಂದ ಮೇ ವರೆಗೆ ಒಟ್ಟು 72 ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಇದೇ ಸಮಯಕ್ಕೆ 2018ರಲ್ಲಿ 41 ಪ್ರಕರಣ ಕಂಡುಬಂದಿದ್ದವು. ಈ ಬಾರಿ ಜನವರಿಯಿಂದ ಮೇ ಅಂತ್ಯಕ್ಕೆ 53 ಪ್ರಕರಣಗಳು ಕಂಡುಬಂದಿವೆ. ಪ್ರಸಕ್ತ ಸಾಲಿನಲ್ಲಿ 1,058 ಮಂದಿಯ ರಕ್ತದ ಮಾದರಿ ಸಂಗ್ರಹಿಸಿದ್ದು, ಅವರಲ್ಲಿ 72 ಜನರಿಗೆ ಡೆಂಗ್ಯೂ ಪತ್ತೆಯಾಗಿದೆ. ಜನವರಿ ಮತ್ತು ಮೇ ತಿಂಗಳಲ್ಲಿ ಕ್ರಮವಾಗಿ 23, 24 ಪ್ರಕರಣಗಳು ಪತ್ತೆಯಾಗಿವೆ.

ಎಲ್ಲೆಲ್ಲಿ ಪ್ರಕರಣ ಜಾಸ್ತಿ?
ಉಡುಪಿಯ ಮಲ್ಪೆ ಭಾಗದಲ್ಲಿ ಮಲೇರಿಯಾ ಪ್ರಕರಣ, ಹನುಮಂತ ನಗರ, ಕೊಡಂಕೂರು, ನಿಟ್ಟೂರು ಪ್ರದೇ ಶ  ಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಉಡುಪಿ ಮತ್ತು ಮಲ್ಪೆಯಲ್ಲಿ ವಲಸೆ ಮತ್ತು ಕಟ್ಟಡ ಕಾರ್ಮಿ ಕರು ಹೆಚ್ಚಿನ ಮಂದಿ ವಾಸಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಇದು ಮುಖ್ಯವಾಗಿ ವಲಸೆ ಹೋಗುವ ಜನರಿಂದ ಹರಡುವುದು ಹೆಚ್ಚು.

ಸೊಳ್ಳೆಗಳಿಂದ ರಕ್ಷಣೆ ಹೇಗೆ?
ಡೆಂಗ್ಯೂ ಹರಡುವ ಸೊಳ್ಳೆ ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚಿದರೆ,ಮಲೇರಿಯಾ ಹರಡುವ ಸೊಳ್ಳೆ ರಾತ್ರಿ ಸಮಯದಲ್ಲಿ ಕಚ್ಚುತ್ತದೆ.

ಔಷಧ ಲೇಪಿಸಿದ ಸೊಳ್ಳೆ ಪರದೆಗಳ ಬಳಕೆ, ಮಕ್ಕಳು/ ವೃದ್ಧರು ಹಗಲು ಮಲಗುವಾಗಲೂ ಸೊಳ್ಳೆ ಪರದೆ ಉಪ ಯೋಗಿಸುವುದು, ಸೊಳ್ಳೆ ಪ್ರವೇಶಿಸದಂತೆ ಸಂಜೆ ಹೊತ್ತು ಕಿಟಿಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚುವುದು ಅಥವಾ ಜಾಲರಿ ಅಳವಡಿಸುವುದು ಮುಂತಾದ ಕ್ರಮ ಅನುಸರಿಸುವ ಮೂಲಕ ಇವುಗಳಿಂದ ರಕ್ಷಣೆ ಪಡೆಯಬಹುದು. ಡೆಂಗ್ಯೂನಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಪಾಯ ಹೆಚ್ಚು. ಹೀಗಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು, ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ.

Advertisement

ಜಾರಿಯಾಗದ ಬೈಲಾ!
ಉಡುಪಿ ನಗರದಲ್ಲಿಯೂ ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಸಿವಿಕ್‌ ಬೈಲಾ ಕಟ್ಟುನಿಟ್ಟಾಗಿ ಜಾರಿಗೆ ತರುವ ಕುರಿತು ಆರೋಗ್ಯ ಇಲಾಖೆಯಿಂದ ನಗರಸಭೆಗೆ ಮನವಿ ಹೋಗಿದ್ದು, ಅದರ ಅನ್ವಯ ಕಳೆದ ಜುಲೈ ತಿಂಗಳಿನಲ್ಲಿ ನಗರಸಭೆ ಅಧಿಕಾರಿಗಳು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಬೈಲಾ ಜಾರಿಯಾಗಿಲ್ಲ. ಬೈಲಾ ಜಾರಿಯಾದರೆ ನಗರಸಭೆ ವ್ಯಾಪ್ತಿಯ ಮನೆ, ಕಟ್ಟಡ ಆವರಣಗಳಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಅಂಶಗಳು ಕಂಡುಬಂದರೆ ಆ ಜಾಗದ ಮಾಲಕರಿಗೆ ಮೊದಲ ಹಂತದಲ್ಲಿ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ಅದೇ ತಪ್ಪು ಕಂಡುಬಂದರೆ ಅಂತಹವರಿಗೆ ಸ್ಥಳದಲ್ಲಿಯೇ ಭಾರೀ ದಂಡ ವಿಧಿಸಲಾಗುತ್ತದೆ.

ಉತ್ಪತ್ತಿ ತಾಣಗಳ ಬಗ್ಗೆ ಪರಿಶೀಲನೆ
ಮಲೇರಿಯಾ ಮತ್ತು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಬಹುದಾದ ಪ್ರದೇಶಕ್ಕೆ ತೆರಳಿ ಕಟ್ಟಡ ಸ್ಥಳ, ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಹೆಚ್ಚು ಪ್ರಕರಣ ಕಂಡು ಬರುವ ಪ್ರದೇಶಗಳಿಗೆ ಸೊಳ್ಳೆ ಉತ್ಪತ್ತಿ ಸ್ಥಳ ಪತ್ತೆ ಹಚ್ಚಿ ಅಲ್ಲಿ ಫಾಗಿಂಗ್‌ ಮಾಡಲಾಗುತ್ತದೆ.
-ಡಾ| ಪ್ರಶಾಂತ್‌ ಭಟ್‌, ಮಲೇರಿಯಾಧಿಕಾರಿ, ಉಡುಪಿ ಜಿಲ್ಲೆ.

Advertisement

Udayavani is now on Telegram. Click here to join our channel and stay updated with the latest news.

Next