Advertisement

ನೈಜ ಅಭಿವೃದ್ಧಿಯತ್ತ ಹೊರಟಿದೆಯೇ ದೇಶ?

12:28 PM Sep 13, 2017 | Team Udayavani |

ಹಣಕ್ಕೆ ಅದರದ್ದೇ ಆದ ವಿಶಿಷ್ಟ ಗುಣಗಳಿವೆ. ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಯಾವುದೇ ಮಧ್ಯವರ್ತಿಗಳಿಲ್ಲದೆ ವ್ಯವಹರಿಸುವುದು ಬಹಳ ಸುಲಭ. ಹಣವೇ ಸರ್ವಸ್ವ. ತೆರಿಗೆ ವಂಚಿಸಿದ ಹಣ ಕಪ್ಪು. ತೆರಿಗೆ ನೀಡಿ ಬಳಸಿದ ಹಣ ಬಿಳಿ. ಕಪ್ಪು ಹಣ ದೇಶಕ್ಕೆ ಮಾರಕ. ಕಪ್ಪು ಹಣದ ನಿರ್ಮೂಲನೆ, ಸಮಾನಾಂತರ ಆರ್ಥಿಕತೆಯನ್ನು ತೊಡೆದು ಹಾಕುವುದಕ್ಕೋಸ್ಕರ ಹೊಸ ಹೊಸ ವಿಧಾನಗಳನ್ನು ಬಳಸದೆ ವಿಧಿಯಿಲ್ಲ.

Advertisement

ದೇಶದೊಳಗಿನ ಕಪ್ಪು ಹಣವನ್ನು ಬಯಲಿಗೆ ತಿಳಿಯಲು,ಪ್ರಯತ್ನಗಳೇನೋ ನಡೆಯುತ್ತಲೇ ಇವೆ. ಕಪ್ಪು ಹಣ ಎಷ್ಟಿದೆ?
ಯಾರಲ್ಲಿದೆ? ಆ ಹಣವನ್ನು ಗಳಿಸಿದವರು ಅದನ್ನು ಬಚ್ಚಿಡಲು, ಉಳಿಸಿಕೊಳ್ಳಲು ದಾರಿ ಕಂಡುಕೊಳ್ಳದೆ ಬಿಡುವವರಲ್ಲ. 500
ರೂಪಾಯಿ ಮತ್ತು 1000 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ಸುಮಾರು 10 ತಿಂಗಳುಗಳೇ ಕಳೆದಿವೆ. ಈ ನೋಟು ಅಮಾನ್ಯತೆ ಎಂಬುದು ಇತ್ತೀಚಿನ ದಿನಗಳಲ್ಲಿ ದೇಶವು ಕಂಡ ಅತಿ ದೊಡ್ಡ ಆರ್ಥಿಕ ಸುಧಾರಣಾ ನೀತಿ. ಅಮಾನ್ಯತೆಯನ್ನು ವಿವರಿಸುವುದು ಅತಿ ಸುಲಭ.

ಹಳೆಯ ನೋಟುಗಳನ್ನು ಹಿಂಪಡೆದು ಅದರ ಬದಲಿಗೆ ಹೊಸ ನೋಟುಗಳನ್ನು ಚಲಾವಣೆಗೆ ತರುವ ಪ್ರಕ್ರಿಯೆ ಎಂದರೆ
ತಪ್ಪಾಗಲಿಕ್ಕಿಲ್ಲ. ಇದ್ದಕ್ಕಿದ್ದ ಹಾಗೆ ನಮ್ಮಲಿಇರುವ ಹಣ ಕಾಗದದ ಚೂರಾಗಿ ಮಾರ್ಪಟ್ಟರೆ ಸ್ಥಿತಿ ಶೋಚನೀಯ. ಹಣಕ್ಕಾಗಿ ಗಂಟೆಗಟ್ಟಲೆ ಕಾಯುವುದು, ಎಟಿಎಂನ ಎದುರು ಕ್ಯೂ ನಿಲ್ಲುವುದು ಎಲ್ಲವೂ 10 ತಿಂಗಳ ಹಿಂದೆ ನಾವು ಕಂಡ ದೃಶ್ಯ, ಅನುಭವಿಸಿದ ರೀತಿ ಯಾವತ್ತೂ ನೆನಪಿಡುವಂಥದ್ದು. ಪ್ರಾಯಶಃ ಈ ರೀತಿಯ ಆರ್ಥಿಕ ನೀತಿಯನ್ನು ಮತ್ತು ಅದರ ಪರಿಣಾಮವನ್ನು ನಾವಂತೂ ಈ ಹಿಂದೆಯೂ ಅನುಭವಿಸಿದ್ದಿಲ್ಲ, ಮುಂದೆಯೂ ಅನುಭವಿಸುವ ಅವಕಾಶ ಸಿಗಲಿಕ್ಕಿಲ್ಲವೇನೋ? ಇದೊಂದು ಅಪರೂಪದ
ಅನುಭವ. ನೋಟು ಅಮಾನ್ಯತೆಯನ್ನು ದೇಶವು ಈ ಹಿಂದೆಯೂ ಕಂಡಿದೆ. ಆದರೆ ಈ ಬಾರಿಯ ಅಮಾನ್ಯತೆಯ ಅನುಭವದ ವಿಶಿಷ್ಟತೆಯೇ ಬೇರೆ. ಯಾಕೆಂದರೆ ಹಿಂದೆಲ್ಲ ಹಣ ಎಂಬುದು ಈಗಿನಂತೆ ಅಷ್ಟೊಂದು ಪ್ರಾಮುಖ್ಯವನ್ನು ಪಡೆದಿರಲಿಲ್ಲ. ಆದರೆ ಇವತ್ತು ಹಣವೇ ಎಲ್ಲವೂ. ಹಣ ಇಲ್ಲದಿದ್ದರೆ ಏನೂ ಇಲ್ಲ. ಇಂದು ಹಣವಿಲ್ಲದಿದ್ದರೆ ಬದುಕಲಸಾಧ್ಯ ಪರಿಸ್ಥಿತಿ.

ಕುತೂಹಲ
ಅಮಾನ್ಯತೆಯ ಪರಿಣಾಮದಿಂದಾಗಿ ಒಟ್ಟು ಚಲಾವಣೆಯ ಲ್ಲಿದ್ದ 15.44 ಲಕ್ಷ ಕೋಟಿ ರೂ.ಗಳಲ್ಲಿ ಎಷ್ಟು ಹಣ ವಾಪಾಸು
ಬರಬಹುದು, ಎಷ್ಟು ಅಳಿಯಬಹುದು, ಎಷ್ಟು ಕಪ್ಪು, ಎಷ್ಟು ಬಿಳಿ, ಸರಕಾರಕ್ಕೆ, ದೇಶಕ್ಕೆ ಏನೆಲ್ಲ ಲಾಭವಾಯಿತು ಎಂಬೆಲ್ಲ
ಚರ್ಚೆಗಳು ಕಳೆದು ಹಲವು ತಿಂಗಳಿನಿಂದ ನಡೆಯುತ್ತಲೇ ಇವೆ.

ಇನ್ನೂ ಇದಕ್ಕೆ ಸಮರ್ಪಕವಾದ ಉತ್ತರ ಸಿಕ್ಕಿದಂತೆ ಕಾಣುವುದಿಲ್ಲ. ಚಲಾವಣೆಯಲ್ಲಿದ್ದ ಒಟ್ಟು ಹಣದಲ್ಲಿ ಸುಮಾರು 98.86ದಷ್ಟು ಹಣ ವಾಪಾಸು ಬ್ಯಾಂಕಿನ ತಿಜೋರಿಗೆ ಸೇರಿಕೊಂಡಿದೆ ಎಂಬ ಲೆಕ್ಕಾಚಾರ ಇತ್ತೀಚಿನದ್ದು. ಉಳಿದ ಮೊತ್ತವೂ ಮುಂದಿನ ಲೆಕ್ಕಾಚಾರದಲ್ಲಿ ವಾಪಾಸು ಬಂದರೂ ಬರಬಹುದೇನೋ? ಇನ್ನಷ್ಟು ಕಾಯಬೇಕೇನೋ? ಗಳಿಸಿದ ಹಣವನ್ನು ಉಳಿಸದೆ ಬಿಟ್ಟಾರೆಯೇ? ಒಂದಂತೂ ಸತ್ಯ. ಚಲಾವಣೆಯಲ್ಲಿರುವ ಹಣ ವಾಪಾಸು ಬರದೆ ಇದ್ದರೂ ಖಂಡಿತ ಲಾಭ. ಬಂದರೂ ತೊಂದರೆ ಇಲ್ಲದಂತಹ ಸ್ಥಿತಿ ಅಥವಾ ಬಂದರೂ ಲಾಭವೆನ್ನುವ ಸ್ಥಿತಿ.

Advertisement

ಚಲಾವಣೆಯಲ್ಲಿನ ಹಣ ವಾಪಾಸು ಬಂದರೆ ಆ ಹಣದ ಮೂಲ ತಿಳಿಯಲು ದಾರಿ ಸುಗಮವಾಗುತ್ತದೆ. ನೋಟು ಅಮಾನ್ಯತೆಯ ಮುನ್ನ ಭಾರಿ ಪ್ರಮಾಣದ ಹಣದ ಮೂಲ ಪತ್ತೆಯಾಗಿರಲಿಲ ಈಗ ಅದರ ಮೂಲ ಹಿಡಿಯಲು ದಾರಿ ಸಿಕ್ಕಿದೆ. ಅಲ್ಲದೆ ಹಣ ವನ್ನು ಮತ್ತೆ ಬಳಸುವಾಗ ತೆರಿಗೆ ನೀಡಬೇಕಾದ ಅನಿವಾರ್ಯತೆ ಇದ್ದೇ ಇದೆ. ಮರಳಿ ಬಂದ ಹಣದಲ್ಲಿ ಕಪ್ಪು ಎಷ್ಟು, ಬಿಳಿ ಎಷ್ಟು-ಎಂಬೆಲ್ಲ ಲೆಕ್ಕಾಚಾರ ಇನ್ನಷ್ಟೇ ಆಗಬೇಕಿದೆ. ಖಚಿತ ಉತ್ತರಕ್ಕೆ ಇನ್ನೆಷ್ಟು ಕಾಯಬೇಕೋ? ಮರಳಿ ಬಂದ ಹಣದ ಮೇಲೆ ಸರಕಾರದ
ಕಣ್ಣಿದೆ. ಈ ಹಣದ ಮೂಲಗಳ ಬಗ್ಗೆ ಶೋಧನೆ ಆರಂಭ ಗೊಂಡಿದೆ. ಒಟ್ಟು 18 ಲಕ್ಷ ಖಾತೆಗಳ ಮೇಲೆ ಆದಾಯ ತೆರಿಗೆ
ಇಲಾಖೆಯು ಕಣ್ಣಿಟ್ಟಿದೆ. ಈ ಖಾತೆಯಲ್ಲಿಟ್ಟಿರುವ ಹಣದಲ್ಲಿ ಕಪ್ಪು ಹಣ ಎಷ್ಟು, ಬಿಳಿ ಎಷ್ಟು, ತೆರಿಗೆ ಎಷ್ಟು ಬರಬಹುದು,
ದಂಡ ರೂಪದಲ್ಲಿ ಎಷ್ಟು ಹಣ ಸರಕಾರಕ್ಕೆ ಬರಬಹುದು ಎಂಬೆಲ್ಲ ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇವೆ. ನಾವಂತೂ ಈ ಅಂಶ ಗಳನ್ನು ತಿಳಿದುಕೊಳ್ಳಲು ಕಾತರರಾಗಿದ್ದೇವೆ. ಈ ಮಧ್ಯೆ 33 ಲಕ್ಷ ಮಂದಿ ಹೊಸತಾಗಿ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಿದ್ದಾರೆ.

ತೆರಿಗೆ ವ್ಯಾಪ್ತಿಯೂ ಹಿಗ್ಗಿದೆ. ಅಂದಾಜು ತೆರಿಗೆ 42%ದಷ್ಟು ಹೆಚ್ಚಿದೆ. ಡಿಜಿಟಲ್‌ ವ್ಯವಹಾರ ಹೆಚ್ಚಿದೆ. ಈ ಕ್ರಮದಿಂದಾಗಿ ಕರೆನ್ಸಿ ಚಲಾವಣೆಯ ಪ್ರಮಾಣ 20%ದಷ್ಟು ಕುಗ್ಗಿದೆ. ದೇಶದಲ್ಲಿ 2004ರ ಸಮಯದಲ್ಲಿ 500 ರೂ. ಮತ್ತು 1000
ರೂ. ಕರೆನ್ಸಿಗಳ ಚಲಾವಣೆಯ ಪ್ರಮಾಣ 1.5 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಈ ಮೊತ್ತವು ಸುಮಾರು ರೂ.15.5 ಲಕ್ಷ ಕೋಟಿಯಷ್ಟು ನೋಟು ಅಮಾನ್ಯತೆಯ ಸಮಯದಲ್ಲಿ ಜಿಗಿ ದಿತ್ತು. ಈ ಹಣದ ಪ್ರಮಾಣದ ಚಲಾವಣೆಯ ಪ್ರಮಾಣವನ್ನು ಕುಗ್ಗಿಸುವ ಆವಶ್ಯಕತೆಯೂ ಆ ಸಮಯದಲ್ಲಿತ್ತು. ಚಲಾವಣೆ ಯಲ್ಲಿ ಕುಗ್ಗಿದ ಹಣದ ಪ್ರಮಾಣದ ಜಾಗವನ್ನು ಡಿಜಿಟಲ್‌ ಹಣ ಆಕ್ರಮಿಸಿದೆ. ಡಿಜಿಟಲ್‌ ವ್ಯವಹಾರ  ಹೆಚ್ಚಾದಷ್ಟು ನಗದಿನ ಹರಿವು ಕುಗ್ಗತೊಡಗುವುದು. ದೇಶವು “ಕ್ಯಾಶ್‌’ನಿಂದ “ಕ್ಯಾಶ್‌ಲೆಸ್‌’ನತ್ತ ತಲುಪಲು ಸುಲಭವಾಗುತ್ತದೆ. ಹಣಕಾಸು ತಂತ್ರಜ್ಞಾನ ಕಂಪೆನಿಗಳ ವ್ಯವಹಾರ ನೋಟು ಅಮಾನ್ಯತೆಯ ಅನಂತರ ಹಿಗ್ಗಿದೆ.

ನೋಟು ಅಮಾನ್ಯತೆಯು ಡಿಜಿಟಲ್‌ ವ್ಯವಹಾರಕ್ಕೆ ಮುನ್ನುಡಿ ಬರೆದಿದೆ. ಡಿಜಿಟಲ್‌ ವ್ಯವಹಾರವು ಕಳೆದ 7 ತಿಂಗಳುಗಳಲ್ಲಿ
ಸುಮಾರು 70,000 ಕೋಟಿ ರೂ.ಗಳನ್ನು ತಲುಪಿದೆ. ನೋಟು ಅಮಾನ್ಯತೆಯ ಕ್ರಮವಿಲ್ಲದಿದ್ದರೆ ಈ ಮೊತ್ತದ ವ್ಯವಹಾರವನ್ನು ತಲುಪಲು ಅಂದರೆ, ವಾರ್ಷಿಕ 25% ಬೆಳವಣಿಗೆ ಸಾಧಿಸಲು ಸುಮಾರು ಮೂರು ವರ್ಷಗಳಷ್ಟು ಕಾಯಬೇಕಾಗುವುದು ಎಂದು ಅಂದಾಜು. ಈ ಪ್ರಯೋಗದ ಅನಂತರ ಪೇಟಿಎಂ, ಮೊಬಿಕ್ವಿಕ್‌ ಕಂಪೆನಿಗಳ ಡಿಜಿಟಲ್‌ ವ್ಯವಹಾರ ಸುಮಾರು 6 ಪಟ್ಟು ಹೆಚ್ಚಿದೆ.

ಮತ್ತೂಮ್ಮೆ ಇಂತಹ ಆರ್ಥಿಕ ನೀತಿ ದೇಶದಲ್ಲಿ ನೋಡಸಿಗದು. ಆದ್ದರಿಂದ ಈ ಅವಕಾಶವನ್ನು ಬಳಸಿಕೊಂಡು ಹಣಕಾಸಿನ ತಂತ್ರಜ್ಞಾನ ವ್ಯವಹಾರ ಸಂಸ್ಥೆಗಳು ಹೊಸ ಹೊಸ ಉತ್ಪನ್ನಗಳನ್ನು ಜನತೆಗೆ ನೀಡಿ ಡಿಜಿಟಲೀಕರಣದತ್ತ ಜನರು ವಾಲುವಂತೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಈ ಕಂಪೆನಿಗಳು ಪೇಮೆಂಟ್‌ ಬ್ಯಾಂಕುಗಳಾಗಿ ಬ್ಯಾಂಕುಗಳಿಗೆ
ಸ್ಪರ್ಧೆ ನೀಡುವಷ್ಟರ ಮಟ್ಟಿಗೆ ಬೆಳೆದಿವೆ. ಕ್ಯಾಶ್‌, ಚೆಕ್‌, ಕ್ರೆಡಿಟ್‌ ಕಾರ್ಡ್‌ ಹೀಗೆ ಯಾವುದರ ಅಗತ್ಯವಿಲ್ಲದೆ ಕೇವಲ ಸ್ಮಾರ್ಟ್‌ ಪೋನ್‌ ಮೂಲಕ ಪಾವತಿಸಬಹುದಾದ ಮೊಬೈಲ್‌ ವ್ಯಾಲೆಟ್‌ ಹೆಚ್ಚು ಜನಪ್ರಿಯವಾಗಿದೆ. ಇವತ್ತು ಮೊಬೈಲ್‌ ಎಂಬುದು ಬ್ಯಾಂಕು ಇದ್ದಂತೆ. ಸ್ಮಾರ್ಟ್‌ ಫೋನ್‌ ಮೂಲಕ ಬ್ಯಾಂಕಿಂಗ್‌ ವ್ಯವಹಾರ ನಡೆಸುವುದು ಸಾಧ್ಯವಾಗಿದೆ. 

ಸಮಸ್ಯೆಯೇನೆಂದರೆ ಈ ಬಗ್ಗೆ ತಿಳುವಳಿಕೆ ಇಲ್ಲದಿರುವುದೇ ಕ್ಯಾಶ್‌ಲೆಸ್‌ ಸಮಾಜದ ನಿರ್ಮಾಣಕ್ಕಿರುವ ಬಹು ದೊಡ್ಡ ತೊಡಕು. ಅಮಾನ್ಯತೆಯಂತಹ ಆರ್ಥಿಕ ನೀತಿಯು ಡಿಜಿಟಲ್‌ ವ್ಯವಹಾರಕ್ಕೆ ಒಪ್ಪಿಕೊಳ್ಳದೆ ಬೇರೆ ದಾರಿಯೇ ಇಲ್ಲವೆಂಬ ಸಂದಿಗ್ಧ ಸ್ಥಿತಿಯನ್ನು ತಂದೊಡ್ಡಿದೆ. ಈ ತಂತ್ರ ಎಷ್ಟು ಮೊತ್ತದ ಕಪ್ಪು ಹಣವನ್ನು ಅಳಿಸಿ ಹಾಕಿತು ಎಂಬ ಪ್ರಶ್ನೆಗೆ ಉತ್ತರ ಸಿಗುವವರೆಗೆ ನಾವು ಕಾಯಲು ಸಿದ್ಧರಿದ್ದೇವೆ. ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೆಷ್ಟು ಕಾಯಬೇಕೋ?

ಕಳೆದ ಹಲವು ವರ್ಷಗಳಿಂದ ದೇಶವು ಆರ್ಥಿಕವಾಗಿ ತ್ವರಿತ ಅಭಿವೃದ್ಧಿಯನ್ನು ಕಾಣುತ್ತಿದೆ. ಆದರೆ ಈ ಅಭಿವೃದ್ಧಿ ದೇಶಕ್ಕೆ
ಅತ್ಯವಶ್ಯಕವಾಗಿರುವ ಉದ್ಯೋಗ ಸೃಷ್ಟಿಸುವ ಅಭಿವೃದ್ಧಿಯಾಗಿ ಉಳಿದಿಲ್ಲ. ದಿನನಿತ್ಯ ನಾವು ಕೇಳುವುದು ಅಭಿವೃದ್ಧಿ ಜಾಸ್ತಿ, ಉದ್ಯೋಗ ನಾಸ್ತಿ ಎಂಬ ಕೂಗು. ನಮಗೆ ಬೇಕಾಗಿರುವುದು ಕೃತಕ ಅಲ್ಲದ ನೈಜ ಅಭಿವೃದ್ಧಿ. ನೋಟು ಅಮಾನ್ಯತೆಯು ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿಯ ಜತೆಗೆ ನೈಜ ಅಭಿವೃದ್ಧಿಯತ್ತ ದೇಶವನ್ನು ಕೊಂಡೊಯ್ಯುವುದೆಂಬ ಭರವಸೆಯೂ ನಮಗಿದೆ.
ಹಾಗಾದಲ್ಲಿ ಈ ನೀತಿಯು ದೇಶಕ್ಕಾಗುವ ದೀರ್ಘಾವಧಿ ಲಾಭವನ್ನು ಗಳಿಸುವಲ್ಲಿ ಸಫ‌ಲವಾದಂತೆ.

*ರಾಘವೇಂದ್ರ ರಾವ್ ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next