Advertisement

Democracy Day: ಉಭಯ ಜಿಲ್ಲೆಗಳಲ್ಲಿ ಲಕ್ಷ ಜನರಿಂದ ಮಾನವ ಸರಪಳಿ

01:50 AM Sep 12, 2024 | Team Udayavani |

ಮಣಿಪಾಲ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸೆ.15ರಂದು 9.30ಕ್ಕೆ ಜಿಲ್ಲೆಯಲ್ಲಿ 100 ಕಿ.ಮೀ. ಉದ್ದದ ಮಾನವ ಸರಪಳಿ ರಚನೆ ಮಾಡಲಿದ್ದೇವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರಕಾರಿ ನೌಕರರು ಸಹಿತ 1 ಲಕ್ಷ ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾಹಿತಿ ನೀಡಿದರು.

Advertisement

ಜಿಲ್ಲೆಯ ಗಡಿಭಾಗವಾದ ಬೈಂದೂರು ಶಿರೂರಿನಿಂದ ಹೆಜಮಾಡಿ ತನಕ ಸರಪಳಿ ಇರಲಿದೆ. ಉಡುಪಿಯ ಕಿನ್ನಿಮೂಲ್ಕಿ ಸ್ವಾಗತಗೋಪುರದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಬಾವುಟವನ್ನು ಹಿಡಿದು ಸಂಭ್ರಮಿಸಲಿದ್ದೇವೆ. ಮೊದಲಿಗೆ ಸಂವಿಧಾನ ಪೀಠಿಕೆ ಓದಿ, ಬಳಿಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಸಂದೇಶ ಸಾರಲಾಗುತ್ತದೆ. ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ ಎಂದು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಚಾರದಲ್ಲಿ ಬದಲಾವಣೆ
ಮಾನವ ಸರಪಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವುದರಿಂದ ಒಂದು ಗಂಟೆ ಕಾಲ ವಾಹನಗಳು ದ್ವಿಪಥದಲ್ಲಿ ಸಂಚರಿಸಲಿವೆ. ಉಡುಪಿಯಿಂದ ಬೈಂದೂರಿಗೆ ಹೋಗುವಾಗ ಚತುಷ್ಪಥ ರಸ್ತೆಯ ಬಲಭಾಗದಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಅಲ್ಲಿ ಮಾನವ ಸರಪಳಿ ಇರಲಿದೆ. ಸಮರ್ಥವಾಗಿ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.

ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ. ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಇದನ್ನು ನಿರ್ವಹಿಸಲಿದ್ದು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರತಿ 100 ಮೀಟರ್‌ಗೆ ಓರ್ವ ಸೆಕ್ಷನ್‌ ಆಫೀಸರ್‌, ಪ್ರತಿ 1 ಕಿ.ಮೀ.ಗೆ ಓರ್ವ ಏರಿಯಾ ಆಫೀಸರ್‌, ಪ್ರತಿ 5 ಕಿ.ಮೀ.ಗೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರ ನಿಯೋಜನೆಯಾಗಿದೆ. ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ, ತುರ್ತು ಸೇವೆಗೆ ಆ್ಯಂಬುಲೆನ್ಸ್‌ ಕೂಡ ಇರಲಿದೆ. ಜಿಲ್ಲೆಯ ವಿವಿಧ ಸಾಂಪ್ರದಾಯಿಕ ಕಲೆಗಳ ಅನಾವರಣವೂ ನಡೆಯಲಿದೆ. ಡ್ರೋನ್‌ ಶೂಟಿಂಗ್‌ ಮಾಡಲಿದ್ದೇವೆ ಎಂದರು.

ಗಿಡ ನೆಡುವ ಕಾರ್ಯಕ್ರಮ
ಮಾನವ ಸರಪಳಿ ಕಾರ್ಯಕ್ರಮ ಮುಗಿದ ಕೂಡಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಿದ್ದೇವೆ. ಎಲ್ಲಿಲ್ಲಿ ಸಾಧ್ಯವೋ ಅಲ್ಲೆಲ್ಲ ಅರಣ್ಯ ಇಲಾಖೆ ಸಹಕಾರದೊಂದಿಗೆ ಗಿಡ ನೆಡಲಿದ್ದೇವೆ ಎಂದರು. ಜಿಲ್ಲಾ ಪಂಚಾಯತ್‌ನ ಚೀಫ್ ಪ್ರೋಗ್ರಾಂ ಆಫೀಸರ್‌ (ಸಿಪಿಒ) ಡಾ| ಉದಯಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

ಸ್ವಚ್ಛತಾ ಹೀ ಸೇವಾ ಪ್ರಾಕ್ಷಿಕ
ಕೇಂದ್ರ ಹಾಗೂ ರಾಜ್ಯ ಸರಕಾದ ಸೂಚನೆಯಂತೆ ಸೆ.14ರಿಂದ ಅ.1ರ ವರೆಗೂ ಜಿಲ್ಲಾದ್ಯಂತ ಸ್ವಚ್ಛತಾ ಅಭಿಯಾನವು ಸ್ವಭಾವ್‌ ಸ್ವಚ್ಛತಾ– ಸಂಸ್ಕಾರ್‌ ಸ್ವಚ್ಛತಾ ಘೋಷವಾಕ್ಯದಡಿ ಕಾರ್ಯಕ್ರಮ ನಡೆಯಲಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆ , ಸ್ಪರ್ಧೆ, ವಾಕಥಾನ್‌, ಗಿಡ ನೆಡುವುದು ಇತ್ಯಾದಿ ನಡೆಯಲಿವೆ. ಸಫಾಯಿ ಮಿತ್ರಾ ಸುರûಾ ಶಿಬಿರಗಳು, ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ , ರೈಲು ನಿಲ್ದಾಣ, ಜಲಮೂಲಗಳ ಸ್ವತ್ಛತೆ ನಡೆಯಲಿದೆ. ಶಾಲೆಗಳಲ್ಲಿ ಮಕ್ಕಳಿಗೆ ಸ್ವತ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದರು.

ದಕ್ಷಿಣ ಕನ್ನಡ: 130 ಕಿ.ಮೀ. ಉದ್ದದ ಮಾನವ ಸರಪಳಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಲ್ಕಿ ತಾಲೂಕಿನ ಹೆಜಮಾಡಿ ಟೋಲ್‌ಗೇಟ್‌ನಿಂದ ಸುಳ್ಯ ತಾಲೂಕಿನ ಸಂಪಾಜೆ ಗೇಟ್‌ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ 130 ಕಿ.ಮೀ. ವರೆಗೆ 1 ಲಕ್ಷಕ್ಕೂ ಹೆಚ್ಚು ಜನರಿಂದ ಬೃಹತ್‌ ಮಾನವ ಸರಪಳಿ ನಿರ್ಮಿಸಲಾಗುವುದು.

ಇದನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ಸರಕಾರೇತರ ಸಂಸ್ಥೆಗಳು, ಸಾರ್ವಜನಿಕ ವಲಯ ಉದ್ಯಮಗಳು, ಖಾಸಗಿ ವಲಯ, ನಾಗರಿಕ ಸಮಾಜ ಮತ್ತು ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳು, ಹಾದು ಹೋಗುವ ಗ್ರಾಮ ಪಂಚಾಯತ್‌ ಅಥವಾ ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಾರ್ವಜನಿಕರು, ಸ್ವಸಹಾಯ ಸಂಘಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಎಲ್ಲ ಇಲಾಖೆಗಳ ಅಧಿಕಾರಿ ಸಿಬಂದಿ ಸೇರಿದಂತೆ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅತ್ಯಂತ ಯಶಸ್ವಿಯಾಗಿ ಆಚರಣೆಯಾಗುವಂತೆ ಕೈಜೋಡಿಸಬೇಕು.

ಮಾನವ ಸರಪಳಿ ಜತೆಗೆ ಜಿಲ್ಲಾದ್ಯಂತ ಗಿಡನೆಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಎಕ್ಸ್‌, ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್‌ನಲ್ಲಿ ಹ್ಯಾಶ್‌ಟ್ಯಾಗ್‌ #Karnataka Democracy Day 2024 ಉಪಯೋಗಿಸಿ ಹಂಚಿಕೊಳ್ಳ ಬಹುದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next