Advertisement

“ಶಾಲಾಶಿಕ್ಷಣ ಅನುದಾನ ಆಯೋಗ’ರಚನೆಗೆ ಆಗ್ರಹ

10:45 AM Aug 14, 2017 | Team Udayavani |

ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾದರಿಯಲ್ಲೇ “ಶಾಲಾಶಿಕ್ಷಣ ಅನುದಾನ ಆಯೋಗ’ ರಚನೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ನಿರ್ಧರಿಸಿದೆ.

Advertisement

ಭಾನುವಾರ ಶಾಸಕರ ಭವನದಲ್ಲಿ ರಾಜ್ಯ ಮಾಧ್ಯಮಿಕ ಶಿಕ್ಷಕರ  ಸಂಘದಿಂದ ಹಮ್ಮಿಕೊಂಡಿದ್ದ ಒಂದು ರಾಷ್ಟ್ರ, ಒಂದು ಶಿಕ್ಷಣ, ಒಂದು ವೇತನ ಜಾರಿಗೆ ಒತ್ತಾಯಿಸುವ ಬಗ್ಗೆ ಚರ್ಚಿಸಲು ನಡೆದ ದುಂಡು ಮೇಜಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯದ ಬೋಧಕರ
ಅರ್ಹತೆ, ವೇತನ ಇತ್ಯಾದಿ ನಿಗದಿ ಮಾಡುವ ಯುಜಿಸಿಯಂತೆಯೇ ಶಾಲಾ ಶಿಕ್ಷಕರ ಅರ್ಹತೆ, ಗುಣಮಟ್ಟ, ವೇತನದ ನಿಗದಿಗೆ ಶಾಲಾ ಶಿಕ್ಷಣ ಅನುದಾನ ಆಯೋಗ ರಚಿಸಬೇಕು ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ.

ದೇಶದ ಬಹುಪಾಲು ರಾಜ್ಯಗಳಲ್ಲಿ ಕೇಂದ್ರದ ವೇತನ ಶ್ರೇಣಿಯನ್ನೇ ಪಾಲನೆ ಮಾಡುತ್ತಿದ್ದಾರೆ. ಕರ್ನಾಟಕ ದಲ್ಲಿ ಪಾಲನೆ ಆಗದೇ ಇರುವುದ ರಿಂದ ರಾಜ್ಯದ ಶಿಕ್ಷಕರು ಕಡಿಮೆ ವೇತನ ಪಡೆಯುತ್ತಿದ್ದಾರೆ. ಸಮಾನ ಶಿಕ್ಷಣದ ಜತೆಗೆ ಸಮಾನ ವೇತನವೂ ಆಗಬೇಕು. ಶಿಕ್ಷಣದ ಸಂರಚನೆ
ವಿಚಾರದಲ್ಲಿ ದೇಶದಲ್ಲೇ ಏಕರೂಪತೆ ತರುವ ಕಾರ್ಯ ನಡೆಯುತ್ತಿದೆ. ಈ ವಿಚಾರವಾಗಿ ಸರ್ಕಾರಗಳು ಶಿಕ್ಷಕ ಸಮುದಾಯ, ಶಿಕ್ಷಣ ಸಂಸ್ಥೆ ಹಾಗೂ ತಜ್ಞರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವೃಂದ ಮತ್ತು ನೇಮಕಾತಿ ನಿಯಮ ರಚನೆ ಸಂಬಂಧಿಸಿದಂತೆ ದೇಶಾದ್ಯಂತ ಏಕರೂಪತೆ ಇರಬೇಕು. ಕೇಂದ್ರೀಯ ವಿದ್ಯಾಲಯ, ನವೋ ದಯ ವಿದ್ಯಾಲಯದ ಶಿಕ್ಷಕರ ನೇಮಕ ಸಂಬಂಧ ಕೇಂದ್ರದ ವೃಂದ ಮತ್ತು ನೇಮಕಾತಿ ನಿಯಮದ ಮಾದರಿಯಲ್ಲಿ ರಾಜ್ಯ ಸರ್ಕಾರದ ಸಿ ಆ್ಯಂಡ್‌ ಆರ್‌ ನಿಯಮ ರಚನೆಯಾಗ ಬೇಕು. ಇದಕ್ಕೆ ಶಿಕ್ಷಕರಿಂದ ಆಕ್ಷೇಪಣೆ ಗಳನ್ನು ಕರೆಯಬೇಕು ಎಂದು ಒತ್ತಾಯಿಸಿದರು.ಒಂದು ರಾಷ್ಟ್ರ, ಒಂದು ಶಿಕ್ಷಣ, ಒಂದು ವೇತನ ಜಾರಿಗೆ ಸಂಬಂಧಿಸಿ ದಂತೆ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಇನ್ನಷ್ಟು ಚರ್ಚೆ ಹಾಗೂ ಈ ಕುರಿತು ರಾಜ್ಯಮಟ್ಟದ ಸೆಮಿನಾರ್‌ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪೂರ್‌ ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾದ ಕ್ಯಾ.ಗಣೇಶ್‌ ಕಾರ್ಣಿಕ್‌, ರಾಮ ಚಂದ್ರಗೌಡ, ಎಸ್‌.ವಿ. ಸಂಕನೂರ್‌, ಅಮರನಾಥ ಪಾಟೀಲ್‌, ಪಿಯು ಉಪನ್ಯಾಸಕರ ಒಕ್ಕೂಟದ ಬಿ.ಕೆ. ಶಿವರಾಮ್‌, ಅನುದಾನ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗೋಪಿನಾಥ, ಜಾಲಮಂಗಲ ನಾಗರಾಜ, ಮಹಾವಿದ್ಯಾಲಯ ಶಿಕ್ಷಕರ ಸಂಘದ ರಾಜಣ್ಣ, ಪಿಯು ಪ್ರಾಂಶುಪಾಲರ ಸಂಘದ ಪ್ರಕಾಶ್‌, ಮಾಧ್ಯಮಿಕ  ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಕೇರಾ, ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next