Advertisement

ಮನಃಶಾಸ್ತ್ರಜ್ಞರಿಗೂ ಬೇಡಿಕೆ ಅಧಿಕ

10:52 PM Feb 04, 2020 | mahesh |

ಮನಃಶಾಸ್ತ್ರದಲ್ಲಿ ಪರಿಣತಿ ಪಡೆದಿರುವ ವೈದ್ಯರೇ ಮನೋವೈದ್ಯರು. ಅವರು ಪರಿಪೂರ್ಣ ರೀತಿಯಲ್ಲಿ ಮಾನಸಿಕ ಅನಾರೋಗ್ಯ, ಚಿಕಿತ್ಸೆಯ ಕುರಿತು ಅಧ್ಯಯನ ಮಾಡಿರುತ್ತಾರೆ. ಮಿದುಳಿನ ಕಾರ್ಯಗಳು, ಮಿದುಳು ಹಾಗೂ ದೇಹಕ್ಕಿರುವ ಸೂಕ್ಷ್ಮ ಸಂಬಂಧಗಳ ಬಗ್ಗೆಯೂ ಅವರು ಆಳವಾಗಿ ಅಭ್ಯಾಸ ಮಾಡಿರುತ್ತಾರೆ. ಚಿಕಿತ್ಸಾ ಸಂದರ್ಭದಲ್ಲಿ ಔಷಧಗಳೂ ಸೇರಿದಂತೆ ವಿವಿಧ ರೀತಿಯ ಚಿಕಿತ್ಸೆ ಕ್ರಮಗಳನ್ನು ಅನುಸರಿಸುತ್ತಾರೆ.

Advertisement

ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯ ಕೂಡ ಅತೀ ಮುಖ್ಯ ಎಂಬುದು ಇಂದಿನ ಜಗತ್ತಿಗೆ ಮನವರಿಕೆಯಾಗಿದೆ. ಹಿಂದೆಲ್ಲಾ ಮಾನಸಿಕ ಸಮಸ್ಯೆ ಅಷ್ಟು ಗಂಭೀರವಾಗಿ ಪರಿಗಣಿಸಲ್ಪಡುತ್ತಿರಲಿಲ್ಲ. ಆದರೆ ಪ್ರಸ್ತುತ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗುವವರ ಸಂಖ್ಯೆ ಅಧಿಕ. ಎಲ್ಲ ರೀತಿಯ ಮಾನಸಿಕ ಸಮಸ್ಯೆಗಳನ್ನು ಕಾಯಿಲೆ ಎಂಬುದಾಗಿ ಪರಿಗಣಿಸುವುದಿಲ್ಲವಾದರೂ ಆರಂಭಿಕ ಹಂತದಲ್ಲಿಯೇ ಯೋಗ್ಯ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಹಾಗಾಗಿ ಮನೋರೋಗ ತಜ್ಞರು, ಆಪ್ತಸಮಾಲೋಚಕರು ಸೇರಿದಂತೆ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಬೇಡಿಕೆಯೂ ಹೆಚ್ಚು.

ಮನಃಶಾಸ್ತ್ರ ಎಂಬುದು ವೈದ್ಯಕೀಯ ಕ್ಷೇತ್ರದ ಒಂದು ಪ್ರಮುಖ ಭಾಗ. ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ವಿಶೇಷ ಪರಿಣತಿ ಪಡೆದಿರುವ ತಜ್ಞರಲ್ಲಿ ಪ್ರಮುಖರೆಂದರೆ ಮನಃಶಾಸ್ತ್ರಜ್ಞರು, ಮನೋವೈದ್ಯರು, ಆಪ್ತ ಸಮಾಲೋಚಕರು, ಮನೋ-ಸಾಮಾಜಿಕ ಕಾರ್ಯಕರ್ತರು ಮತ್ತು ಸೈಕಿಯಾಟ್ರಿಕ್‌

ನರ್ಸ್‌ಗಳು.
ಮನಃಶಾಸ್ತ್ರದಲ್ಲಿ ಪರಿಣತಿ ಪಡೆದಿರುವ ವೈದ್ಯರೇ ಮನೋವೈದ್ಯರು. ಅವರು ಪರಿಪೂರ್ಣ ರೀತಿಯಲ್ಲಿ ಮಾನಸಿಕ ಅನಾರೋಗ್ಯ, ಚಿಕಿತ್ಸೆಯ ಕುರಿತು ಅಧ್ಯಯನ ಮಾಡಿರುತ್ತಾರೆ. ಮಿದುಳಿನ ಕಾರ್ಯಗಳು, ಮಿದುಳು ಹಾಗೂ ದೇಹಕ್ಕಿರುವ ಸೂಕ್ಷ್ಮ ಸಂಬಂಧಗಳ ಬಗ್ಗೆಯೂ ಅವರು ಆಳವಾಗಿ ಅಭ್ಯಾಸ ಮಾಡಿರುತ್ತಾರೆ. ಚಿಕಿತ್ಸಾ ಸಂದರ್ಭದಲ್ಲಿ ಔಷಧಗಳೂ ಸೇರಿದಂತೆ ವಿವಿಧ ರೀತಿಯ ಚಿಕಿತ್ಸಾ ಕ್ರಮಗಳನ್ನು ಅನುಸರಿಸುತ್ತಾರೆ.

ಕೋರ್ಸ್‌ಗಳು
ದ್ವಿತೀಯ ಪಿಯುಸಿ ಪೂರ್ಣಗೊಂಡ ಬಳಿಕ ಮೂರು ವರ್ಷದ ಪದವಿಯಾಗಿರುವ ಬಿಎ ಸೈಕಾಲಜಿ ಅಥವಾ ಬ್ಯಾಚುಲರ್‌ ಆಫ್ ಆರ್ಟ್ಸ್ ಇನ್‌ ಸೈಕಾಲಜಿಯನ್ನು ಮಾಡಬಹುದು. ಮನಃಶಾಸ್ತ್ರದಲ್ಲಿ ಪದವಿ (ಬಿಎ ಅಥವಾ ಬಿಎಸ್‌ಸಿ), ಸ್ನಾತಕೋತ್ತರ ಪದವಿ(ಎಂ.ಎ.), ಪಿಎಚ್‌.ಡಿ. ಅಥವಾ ಎಂ.ಫಿಲ್‌.(ಡಾಕ್ಟರಲ್‌ ಲೆವೆಲ್‌). ಅಲ್ಲದೆ ಮನಃಶಾಸ್ತ್ರಕ್ಕೆ ಸಂಬಂಧಿಸಿದ ಇತರೆ ವಿಶೇಷ ಕೋರ್ಸ್‌ಗಳನ್ನು ಕೂಡ ಮಾಡಲು ಅವಕಾಶವಿದೆ.

Advertisement

ಎಲ್ಲೆಲ್ಲಿ ಬೇಡಿಕೆ
ಸಾಮಾನ್ಯವಾಗಿ ಮನೋವೈದ್ಯರು ಹೆಚ್ಚಿನ ಎಲ್ಲ ರೀತಿಯ ಆಸ್ಪತ್ರೆಗಳಲ್ಲಿಯೂ ಸೇವೆ ಸಲ್ಲಿಸುತ್ತಾರೆ. ಆದರೆ ವಿಶೇಷವಾಗಿ ಮಾನಸಿಕ ಆಸ್ಪತ್ರೆಗಳಲ್ಲಿ ಅವರ ಸೇವೆ ಅಧಿಕ. ಇದಲ್ಲದೆ ವಿಶ್ವವಿದ್ಯಾಲಯಗಳ ವೈದ್ಯಕೀಯ ಕೇಂದ್ರ, ಸಮುದಾಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಉದ್ದಿಮೆ, ಸರಕಾರ, ರಕ್ಷಣಾ ವಲಯ, ನ್ಯಾಯಾಲಯ, ಜೈಲು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಕ್ಲಿನಿಕಲ್‌ ಸೈಕಾಲಜಿಸ್ಟ್‌ಗಳಾಗಿ ಆಸ್ಪತ್ರೆಯ, ಡ್ರಗ್‌ ರಿಹ್ಯಾಬಿಲಿಟೇಷನ್‌ ಸೆಂಟರ್‌ಗಳು, ಎನ್‌ಜಿಒ ಮೊದಲಾದೆಡೆ ಸೇವೆ ಸಲ್ಲಿಸುವ ಅವಕಾಶ ಹೊಂದಿರುತ್ತಾರೆ. ಇಂದಿನ ದಿನಗಳಲ್ಲಿ ಜೀವನಶೈಲಿ ಬದಲಾವಣೆ, ಕಾರ್ಯದೊತ್ತಡ ಮೊದಲಾದ ಕಾರಣಗಳಿಂದಾಗಿ ಕ್ಲಿನಿಕಲ್‌ ಸೈಕಾಲಜಿಸ್ಟ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಕೌನ್ಸೆಲಿಂಗ್‌ ಸೈಕಾಲಜಿಸ್ಟ್‌ಗಳು ತೆರಪಿ ಸೆಂಟರ್‌ಗಳು, ಖಾಸಗಿ ಸಂಸ್ಥೆಗಳು, ಕೆರಿಯರ್‌ ಸೆಂಟರ್‌ಗಳು, ಶಾಲೆ, ಎನ್‌ಜಿಒಗಳು ಹಾಗೂ ಇತರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಬಹುದಾಗಿದೆ.

ಸಂಸ್ಥೆಗಳು, ಉದ್ಯಮಿಗಳಲ್ಲಿ ಸೇವೆ ಸಲ್ಲಿಸುವ ಸೈಕಾಲಜಿಸ್ಟ್‌ಗಳು ವೈಯಕ್ತಿಕ, ಗುಂಪು ಹಾಗೂ ಸಂಸ್ಥೆಗಳ ಮಟ್ಟದಲ್ಲಿ ಉದ್ಯೋಗಿಗಳ ಕುರಿತು ಕೆಲಸ ಮಾಡುತ್ತಾರೆ. ಮಾನವ ಸಂಪನ್ಮೂಲ ಕೇಂದ್ರಗಳಲ್ಲಿಯೂ ಇವರಿಗೆ ಬೇಡಿಕೆ ಹೆಚ್ಚು. ಡೆವಲಪ್‌ಮೆಂಟಲ್‌/ ಚೈಲ್ಡ್‌ ಸೈಕಾಲಜಿಸ್ಟ್‌, ನ್ಪೋಟ್ಸ್‌ ì ಸೈಕಾಲಜಿಸ್ಟ್‌ಗಳಿಗೆ ಕೂಡ ಬೇಡಿಕೆ ಇದೆ.

ಸ್ಕೂಲ್‌ ಸೈಕಾಲಜಿಸ್ಟ್‌
ಇವರು ಮಕ್ಕಳ ಮತ್ತು ಹದಿಹರೆಯದವರ ಕಲಿಕೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಅಥವಾ ಶಿಕ್ಷಣ ನೀತಿಯನ್ನು ರೂಪಿಸುವ ಆಡಳಿತಾತ್ಮಕ ಸಂಸ್ಥೆಗಳಲ್ಲಿ ಇವರು ಕಾರ್ಯ ನಿರ್ವಹಿಸುತ್ತಾರೆ.

ನ್ಯೂರೋ-ಸೈಕಾಲಜಿಸ್ಟ್‌
ಇವರು ಮೆದುಳು ಮತ್ತು ಅದರ ನರ-ಮನಃಶಾಸ್ತ್ರೀಯ ಕಾರ್ಯಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡುತ್ತಾರೆ. ಉದಾಹರಣೆಗೆ, ಕಲ್ಪನೆ, ನೆನಪು ಮೊದಲಾದವು. ಮೆದುಳಿಗೆ ಸಂಬಂಧಿಸಿದ ಪೆಟ್ಟು ಅಥವಾ ಉಳಿದ ನರಸಂಬಂಧಿ ಕಾಯಿಲೆಗಳಾದ ಲಕ್ವ, ಚಿತ್ತ ವೈಕಲ್ಯ, ಟ್ಯೂಮರ್‌ ಮತ್ತು ವಯೋಸಹಜ ಮೆದುಳಿನ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಪುನಃಶ್ಚೇತನಕ್ಕೆ ಸಹಾಯ ಮಾಡುತ್ತಾರೆ.

ಔದ್ಯೋಗಿಕ ಸೈಕಾಲಜಿಸ್ಟ್‌
ಇವರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಂದ ಉತ್ತಮವಾದ ಉತ್ಪಾದಕತೆ ಪಡೆಯಲು ಮತ್ತು ಉದ್ಯೋಗಿಗಳ ವೃತ್ತಿ ಸಂತೃಪ್ತಿಯನ್ನು ಹೆಚ್ಚಿಸಲು ನೆರವಾಗುತ್ತಾರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಮನಃಶಾಸ್ತ್ರಜ್ಞರು ಉದ್ಯೋಗಿಗಳಿಗೆ ಸೂಕ್ತವಾದ ಕೌಶಲಗಳನ್ನು ಕಲಿಸುತ್ತಾರೆ. ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮತ್ತು ವೃತ್ತಿ ಅನಿಶ್ಚಿತತೆೆಯನ್ನು ಎದುರಿಸಲು ಸಹಾಯ ಮಾಡುತ್ತಾರೆ.

ಮನೋವಿಜ್ಞಾನಿ
ಮನಃಶಾಸ್ತ್ರದಲ್ಲಿ ಪದವಿಯನ್ನು ಪಡೆದಿರುವ ಹಾಗೂ ನಡವಳಿಕೆಗಳ ಕುರಿತು ಪರಿಣತಿ ಪಡೆದಿರುವವರನ್ನು ಮನೋವಿಜ್ಞಾನಿ ಎನ್ನುತ್ತಾರೆ. ಅವರು ವೈಜ್ಞಾನಿಕ ವಿಧಾನಗಳ ಮೂಲಕ ಭಾವನೆಗಳು, ಯೋಚನೆಗಳು ಮತ್ತು ಗ್ರಹಿಕೆಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಪತ್ತೆ ಹಚ್ಚುತ್ತಾರೆ. ಆಧಾರಗಳನ್ನಾಧರಿಸಿದ ಚಿಕಿತ್ಸೆಗಳನ್ನು ಉಪಯೋಗಿಸಿ ಸಮಸ್ಯೆಗಳನ್ನು ಉಪಶಮನಗೊಳಿಸಲು ಸಹಾಯ ಮಾಡುತ್ತಾರೆ.

ಫೊರೆನ್ಸಿಕ್‌ ಮನಃಶಾಸ್ತ್ರಜ್ಞರು
ಇವರು ಕಾನೂನಿಗೆ ಸಂಬಂಧಿಸಿದ ಅಪರಾಧ ಪತ್ತೆಯಲ್ಲಿ ನೆರವಾಗುತ್ತಾರೆ. ಅಪರಾಧಿಯ ನಡವಳಿಕೆಗೆ ಸಂಬಂಧಿಸಿದ ಮಾನಸಿಕ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಾರೆ. ಅಲ್ಲದೆ ಅಪರಾಧಿಗೆ ಚಿಕಿತ್ಸೆ ನೀಡುವ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇವರನ್ನು ಕ್ರಿಮಿನಲ್‌ ಸೈಕಾಲಜಿಸ್ಟ್‌, ಲೀಗಲ್‌ ಸೈಕಾಲಜಿಸ್ಟ್‌ ಅಥವಾ ಕ್ರಿಮಿನಾಲಜಿಸ್ಟ್‌ ಎಂದು ಕರೆಯುತ್ತಾರೆ.

ಆಪ್ತಸಮಾಲೋಚಕರು
ವ್ಯಕ್ತಿಗೆ ಮಾನಸಿಕ ಕಾಯಿಲೆಯಿಲ್ಲದಿದ್ದರೂ ಯಾವುದೋ ಭಾವನಾತ್ಮಕ ಸಮಸ್ಯೆಯಿದ್ದಲ್ಲಿ ಆಪ್ತ ಸಮಾಲೋಚಕರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸಂಬಂಧಗಳಲ್ಲಿ ಉಂಟಾಗುವ ಸಮಸ್ಯೆ, ನಡವಳಿಕೆಯ ಸಮಸ್ಯೆ ಮೊದಲಾದ ಹಲವು ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ನೆರವು ನೀಡುತ್ತಾರೆ. ಅಲ್ಲದೇ ಆಪ್ತ ಸಮಾಲೋಚಕರು ವ್ಯಕ್ತಿ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಲು ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ನೆರವಾಗುತ್ತಾರೆ.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next