ಶಹಾಬಾದ: ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವಲ್ಲಿ ಹಲವು ಯೋಜನೆ ಜಾರಿಗೆ ತರುತ್ತಿದೆ. ಇಂತಹ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಮೂಹ ಸಂಪನ್ಮೂಲ ಅಧಿಕಾರಿ ಶಿವಪುತ್ರ ಕರಣಿಕ್ ಹೇಳಿದರು.
ನಗರದ ಬಸವೇಶ್ವರ ನಗರ ಬಡಾವಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ- ಸಮವಸ್ತ್ರ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಪ್ರಾಥಮಿಕ ಶಿಕ್ಷಣ ಭವಿಷ್ಯದ ತಳಹದಿಯಾಗಿದೆ.
ಈ ಹಂತದಲ್ಲಿ ಉತ್ತಮ ಕಲಿಕೆಯಾದರೆ ಜೀವನದಲ್ಲಿ ಸಾಧನೆ ಮಾಡುವಲ್ಲಿ ಸುಲಭವಾಗುತ್ತದೆ ಎಂದು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಯಾರಿಗೂ ಕಡಿಮೆ ಇಲ್ಲದಂತೆ ತಮ್ಮ ಜ್ಞಾನ ವಿಸ್ತರಿಸಿಕೊಳ್ಳಬೇಕು. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವುದು ಒಳಿತು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಪ್ರೇಮಿಲಾ ಎಂ. ಮಾತನಾಡಿ, ಸರ್ಕಾರ ಮಕ್ಕಳಿಗಾಗಿ ಕ್ಷೀರಭಾಗ್ಯ, ಬಿಸಿಯೂಟ, ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಶೂ ಹಾಗೂ ಸೈಕಲ್ ನೀಡುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಅತಿಥಿಗಳಾಗಿ ಪಾಲಕರಾದ ರೇಣುಕಾ ಸದಾನಂದ, ಸಂಗೀತಾ ಮಲ್ಲಿಕಾರ್ಜುನ,ಚನ್ನಮ್ಮ ಸೈದಪ್ಪ, ಸಂಗೀತಾ ಸಿದ್ದಲಿಂಗಯ್ಯಸ್ವಾಮಿ, ನಸೀಮಾಬೇಗಂ, ಸಮೀನಾಬೇಗಂ, ನಾಗಮ್ಮ ಎಸ್ ಇದ್ದರು. ಶಿಕ್ಷಕಿ ಪ್ರೇಮಿಳಾ ಆರ್. ಸ್ವಾಗತಿಸಿದರು. ಶಿಕ್ಷಕಿ ಸುಲೋಚನಾ ನಿರೂಪಿಸಿದರು. ಶಿಕ್ಷಕಿ ಅಫೂಜನ್ ಬಾನು ವಂದಿಸಿದರು.