Advertisement

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಧಾರಾಕಾರ ಮಳೆ

10:53 PM May 30, 2022 | Team Udayavani |

ನವದೆಹಲಿ: ಬಿಸಿಗಾಳಿಯ ಬೇಗೆಯಿಂದ ತತ್ತರಿಸಿ ಹೋಗಿದ್ದ ರಾಷ್ಟ್ರ ರಾಜಧಾನಿ ನವದೆಹಲಿ ಸೋಮವಾರ ವಸ್ತುಶ ಹಾರಿ ಹೋಗಿದೆ. ಸಂಜೆಯ ವೇಳೆಗೆ ಗಾಳಿ ಮತ್ತು ಗುಡುಗು ಸಹಿತ ಸುರಿದ ಧಾರಾಕಾರ ಮಳೆಯಿಂದ ತಂಪಾಗಿದೆ.

Advertisement

ಮಳೆಯೊಂದಿಗೆ ಗಂಟೆಗೆ 50ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ. ಹಲವಾರು ಮರಗಳು ಮತ್ತು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಜಾಮಾ ಮಸೀದಿಯ ಡೋಮ್‌ನ ತುದಿ ತುಂಡಾಗಿ ಬಿದ್ದಿದೆ. ಇಬ್ಬರು ಗಾಯಾಳುಗಳಾಗಿದ್ದಾರೆ. ಗಾಳಿಯ ವೇಗ ಹೆಚ್ಚಿದ್ದರಿಂದಾಗಿ ವಿಮಾನಗಳ ಸಂಚಾರಕ್ಕೂ ತೊಂದರೆಯುಂಟಾಗಿದೆ. ಎಂಟು ವಿಮಾನಗಳ ಮಾರ್ಗ ಬದಲಾವಣೆ ಮಾಡಿದ್ದಾಗಿ ನವದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಬಿರುಸಾಗಿ ಬೀಸಿದ ಗಾಳಿಯಿಂದಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು ತೂಗುಯ್ನಾಲೆಯಂತೆ ಹೊಯ್ದಾಡಿದ ಘಟನೆಗಳೂ ನಡೆದಿವೆ. ಇಷ್ಟು ಮಾತ್ರವಲ್ಲದೆ ಕಚೇರಿಯಿಂದ ಮನೆಗೆ ತೆರಳುವ ಸಂದರ್ಭದಲ್ಲಿಯೇ ಧಾರಾಕಾರ ಮಳೆಯಾದ ಕಾರಣ ಕಿಲೋಮೀಟರ್‌ ದೂರಕ್ಕೆ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಚಾರ ಪೊಲೀಸರು ಅವುಗಳನ್ನು ತೆರವುಗೊಳಿಸುವಲ್ಲಿ ಹೈರಾಣಾಗಿ ಹೋಗಿದ್ದಾರೆ.

ಮಳೆಯಿಂದಾಗಿ ಕಳೆದ ಹಲವು ದಿನಗಳಿಂದ 40 ಡಿಗ್ರಿ ಸೆಲ್ಸಿಯೆಸ್‌ನಷ್ಟಿದ್ದ ತಾಪಮಾನವು ಸೋಮವಾರ ಸಂಜೆ ವೇಳೆಗೆ 26 ಡಿಗ್ರಿ ಸೆಲ್ಸಿಯೆಸ್‌ಗೆ ಕುಸಿದಿದ್ದು, ದೆಹಲಿ ವಾಸಿಗರಲ್ಲಿ ಹರ್ಷ ತಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next