Advertisement

ಬಸ್‌ ಚಾಲಕನಿಗೆ ಗುಂಡಿಕ್ಕಿ, ವಿದ್ಯಾರ್ಥಿ ಅಪಹರಣ

09:30 AM Jan 26, 2018 | Team Udayavani |

ಹೊಸದಿಲ್ಲಿ: ಶಾಲಾ ಬಸ್‌ನೊಳಕ್ಕೆ ನುಗ್ಗಿ ಚಾಲಕನ ಕಾಲಿಗೆ ಗುಂಡು ಹಾರಿಸಿ, ನರ್ಸರಿ ವಿದ್ಯಾರ್ಥಿಯನ್ನು ಅಪಹರಿಸಿದ ಘಟನೆಯೊಂದು ಗುರುವಾರ ಬೆಳಗ್ಗೆ ದಿಲ್ಲಿಯಲ್ಲಿ ನಡೆದಿದೆ. ಗಣರಾಜ್ಯ ದಿನದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ ಪೊಲೀಸ್‌ ಸರ್ಪಗಾವಲು ಹಾಕಿರುವ ನಡುವೆಯೇ ಇಂತಹುದೊಂದು ದುಷ್ಕೃತ್ಯ ನಡೆದಿರುವುದು ಇಡೀ ದಿಲ್ಲಿಯನ್ನೇ ಬೆಚ್ಚಿ ಬೀಳಿಸಿದೆ.

Advertisement

ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಬೆಳಗ್ಗೆ 7.45ರ ಸುಮಾರಿಗೆ ಪೂರ್ವ ದಿಲ್ಲಿಯಲ್ಲಿ ಮಗುವೊಂದನ್ನು ಹತ್ತಿಸಿಕೊಳ್ಳಲೆಂದು ಶಾಲಾ ಬಸ್‌ ನಿಂತಿದ್ದ ಸಂದರ್ಭದಲ್ಲಿ ಏಕಾಏಕಿ ಬೈಕಲ್ಲಿ ಬಂದ ದುಷ್ಕರ್ಮಿಗಳು ಬಸ್‌ನೊಳಕ್ಕೆ ನುಗ್ಗಿದ್ದಾರೆ. ಈ ವೇಳೆ ಬಸ್‌ನಲ್ಲಿ ಸುಮಾರು 14 ಮಕ್ಕಳಿದ್ದರು. ಹೆಲ್ಮೆಟ್‌ ಧರಿಸಿದ್ದ ಅಪಹರಣಕಾರರಲ್ಲಿ ಒಬ್ಬ 4 ವರ್ಷದ ಮಗುವನ್ನು ಎತ್ತಿಕೊಂಡರೆ, ಮತ್ತೂಬ್ಬ ದುಷ್ಕರ್ಮಿಯು ಚಾಲಕನ ತಲೆಗೆ ರೈಫ‌ಲ್‌ ಗುರಿಯಿಟ್ಟಿದ್ದ. ಅದೇ ಬಸ್‌ನಲ್ಲಿದ್ದ ಅಪಹೃತ ಮಗುವಿನ ಸಹೋದರಿಯು (3ನೇ ತರಗತಿ ವಿದ್ಯಾರ್ಥಿನಿ) ತಮ್ಮನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ಆದರೂ ಆಕೆಯಿಂದ ಬಿಡಿಸಿಕೊಂಡು ಮಗುವನ್ನು ಅಪಹರಿಸಲಾಯಿತು. ತಡೆಯಲು ಚಾಲಕ ಯತ್ನಿಸಿದಾಗ, ಕಾಲಿಗೆ ಗುಂಡು ಹೊಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next