Advertisement

ಹಳ್ಳಿ ಕಟ್ಟೆ ಮೇಲೆ ದಿಲ್ಲಿದರ್ಬಾರ್‌ ಮಾತು

02:20 PM Apr 13, 2019 | pallavi |
ಬೆಳಗಾವಿ: ವಿಧಾನಸಭೆ ಚುನಾವಣೆ ಮುಗಿದು ಒಂದು ವರ್ಷ ಕಳೆದ ಬೆನ್ನಲ್ಲೇ ಈಗ ಲೋಕ ಚುನಾವಣೆಯ ಚರ್ಚೆ ಬಿರುಸು ಪಡೆದುಕೊಂಡಿದೆ. ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಮಸ್ಯೆಗಳಿಗಿಂತ ರಾಷ್ಟ್ರದ ವಿಷಯಗಳೇ ಹೆಚ್ಚು ಚರ್ಚೆಯಾಗುತ್ತಿವೆ. ಹಳ್ಳಿ ಕಟ್ಟೆಗಳ ಮೇಲೆ ಕುಳಿತು ಜನ ತಮ್ಮ ಅಭ್ಯರ್ಥಿ ಮೇಲಿನ ಸಿಟ್ಟಿದ್ದರೂ ರಾಷ್ಟ್ರ ರಾಜಕಾರಣದ ವಿಷಯಗಳತ್ತ ಚಿತ್ತ ನೆಟ್ಟಿದ್ದಾರೆ.
ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಕೈ ಲಗ್ಗೆ ಇಟ್ಟು ಹಸ್ತಮಯವಾಗಿದೆ ಎಂಬುದು ಕಾಂಗ್ರೆಸ್‌ ಅಭಿಮತ. ಆದರೆ ಲೋಕಕ್ಕೂ ಹಾಗೂ ವಿಧಾನಸಭೆ ಚುನಾವಣೆ ಮಧ್ಯೆ ಭಿನ್ನ ವಿಚಾರಗಳು ಹರಿದಾಡುತ್ತಿವೆ. ಸದ್ಯ ಎಲ್ಲ ಕಡೆಗೂ ಲೋಕ ಚುನಾವಣೆಯದ್ದೇ ಚರ್ಚೆ. ಯಾರು ಗೆಲ್ಲುತ್ತಾರೆ ಎಂಬ
ಲೆಕ್ಕಾಚಾರದಲ್ಲಿ ಮಗ್ನವಾಗಿರುವ ಜನರು ಸತತ ರಾಜಕಾರಣದ ಬಗ್ಗೆಯೇ ಕನವರಿಸುತ್ತಿದ್ದಾರೆ.
ಅಲೆಯೇ ಪ್ಲಸ್‌ ಪಾಯಿಂಟ್‌: ಬಿಜೆಪಿ ಸಂಸದ ಸುರೇಶ ಅಂಗಡಿ ಮೂರು ಬಾರಿ ಆಯ್ಕೆಯಾದರೂ ಜನರಿಗೆ ಇವರ ಬಗ್ಗೆ ಬೇಸರವಿದೆ. ಮೂರೂ ಸಲ ಅಲೆಯ ಮೇಲೆ ಗೆದ್ದು ಬೀಗುತ್ತಿರುವ ಅಂಗಡಿ ಬಗ್ಗೆ ಜನರಿಗೆ ಅಸಮಾಧಾನವಿದೆ. ಆದರೆ ರಾಷ್ಟ್ರ ರಾಜಕಾರಣದಲ್ಲಿ ನಡೆದಿರುವ ಪ್ರಮುಖ ಬೆಳವಣಿಗೆಗಳೇ ಅಂಗಡಿಗೆ ಪ್ಲಸ್‌ ಪಾಯಿಂಟ್‌.
ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆದಿರುವುದೇ ಪ್ರಮುಖ ಅಂಶವಾಗಿದೆ. ಹಳ್ಳಿ ಹಳ್ಳಿಗಳಲ್ಲೂ ಇದೇ ಚರ್ಚೆಯ ವಿಷಯವಾಗಿದೆ. ಪಾಕಿಸ್ತಾನದ ಮೇಲೆ ದಾಳಿಯಿಂದ ಜನರ ಮೂಡ್‌ ಬದಲಾಗಿದೆ. ಜನಸಾಮಾನ್ಯರು ಇದನ್ನು ಹೆಚ್ಚೆಚ್ಚು ಚರ್ಚೆ ಮಾಡುತ್ತಿದ್ದಾರೆ. ಆದರೆ ರಫೇಲ್‌ ಯುದ್ಧ ವಿಮಾನ ಹಗರಣದ ಬಗ್ಗೆ
ಜನಸಾಮಾನ್ಯರಿಗೆ ಅಷ್ಟೊಂದು ಅರಿವು ಇಲ್ಲ. ರಫೇಲ್‌ ಎಂದರೆ ಏನು ಎಂಬ ತಿಳಿವಳಿಕೆಯೇ ಇಲ್ಲದಂತಾಗಿದೆ.
ಸಮಸ್ಯೆಗೆ ಪರಿಹಾರವೇ ಇಲ್ಲ: ಸಾಮಾನ್ಯವಾಗಿ ಲೋಕಸಭೆ ಚುನಾವಣೆ ವೇಳೆ ಅಭ್ಯರ್ಥಿಗಿಂತಲೂ ರಾಷ್ಟ್ರ ರಾಜಕಾರಣ ಮುಖ್ಯ ಎಂಬ ನಿಲುವು ಇಲ್ಲಿಯ ಜನರದ್ದು. ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ರೈತರು. ನಿತ್ಯದ ಕೂಲಿಯನ್ನೇ ನಂಬಿ ಬದುಕು ಸಾಗಿಸುತ್ತಿರುವವರು. ಇಂಥ ಸ್ಥಿತಿಯಲ್ಲಿ ಬದುಕಿಗೆ ಆಸರೆ ಆಗುವಂಥ ಕೆಲಸ ಆಗಬೇಕೆಂಬ ಬಯಕೆ. ಈವರೆಗೆ ಇಲ್ಲಿ ಕೆಲವೊಂದು ಕಾಮಗಾರಿಗಳು ನಡೆದಿದ್ದು ಬಿಟ್ಟರೆ ಶಾಶ್ವತ ಯೋಜನೆಗಳು ಒಂದೂ ಆಗಿಲ್ಲ. ಕ್ಷೇತ್ರದ ಪಶ್ಚಿಮ ಭಾಗ ಹಾಗೂ ಪೂರ್ವ ಭಾಗದಲ್ಲಿ ಜನ ನೀರಿನ ಸಮಸ್ಯೆಯಿಂದ ಪರದಾಡುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಶಿರೂರ ಡ್ಯಾಂದಿಂದ ಕುಡಿಯುವ ನೀರು ಬಂದಿದ್ದರೂ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ ಎಂಬುದೇ ಜನರ ಆರೋಪ.
ಮರಾಠಾ ಸಮುದಾಯದ ಮತಗಳೇ ಇಲ್ಲಿ ನಿರ್ಣಾಯಕ. ಪಶ್ಚಿಮ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಮರಾಠಿ ಭಾಷಿಕ ಮತದಾರರು ಇಲ್ಲಿದ್ದಾರೆ. ಎಂಇಎಸ್‌ ಇಲ್ಲಿ ಆಟಕ್ಕುಂಟು ಲೆಕ್ಕಿಲ್ಲ. 20-25 ವರ್ಷಗಳಿಂದ ಎಂಇಎಸ್‌ ಅನ್ನು ಜನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಈಗಲೂ ಅದರ ಹಣೆಬರಹ ಹೇಳತೀರದು. ಲಿಂಗಾಯತ, ಅಲ್ಪಸಂಖ್ಯಾತ, ದಲಿತ ಮತಗಳೂ ಮಹತ್ವ ಪಡೆದುಕೊಂಡಿವೆ.
ಬೆಳಗಾವಿ ಲೋಕಸಭೆಯಲ್ಲಿ ಬಿಜೆಪಿ ನೆಲೆಯೂರಿ ನಿಂತಿದೆ. 8 ವಿಧಾನಸಭೆ ಕ್ಷೇತ್ರಗಳ ಪೈಕಿ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಮತ ಪಡೆಯುವುದರಲ್ಲಿ ಬಿಜೆಪಿಯದ್ದು ಎತ್ತಿದ ಕೈ. ಸಂಸದ ಸುರೇಶ ಅಂಗಡಿ ಮೂರು ಬಾರಿ ಗೆಲುವಿನ ನಗೆ ಬೀರಿದ್ದು, ಇದಕ್ಕೆ ಕಡಿವಾಣ ಹಾಕಲು ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಟೊಂಕ ಕಟ್ಟಿ ನಿಂತಿದ್ದಾರೆ. ಹೆಬ್ಟಾಳಕರ ಕ್ಷೇತ್ರದ ಸುತ್ತಲೂ ತಿರುಗಾಡುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗಾಗಿ ಕ್ಷೇತ್ರ ಸುತ್ತುತ್ತಿದ್ದಾರೆ. ಕಾರ್ಯಕರ್ತರಿಂದ ಜೋರು ಪ್ರಚಾರ ಮಾಡಿಸುತ್ತಿದ್ದಾರೆ.
ಸಂಸದ ಅಂಗಡಿ ಕಳೆದ ಆರು ತಿಂಗಳಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈಗ ಒಂದೆರಡು ಬಾರಿ ಗ್ರಾಮೀಣ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಸಂಸದರು ಭೇಟಿ ಕೊಟ್ಟಿದ್ದಾರೆ. ಬೆಳಗ್ಗೆ 6 ಗಂಟೆಯ ಹೊತ್ತಿಗೆ ಹಳ್ಳಿಗಳಿಗೆ ಹೋಗಿ ಕಾರ್ಯಕರ್ತರೊಂದಿಗೆ ಹೊಟೇಲ್‌ನಲ್ಲಿ ಚಹಾ ಕುಡಿದು ಚರ್ಚಿಸಿದ್ದಾರೆ.
ಆದರೆ ಕಾಂಗ್ರೆಸ್‌ನಲ್ಲಿ ಶಾಸಕಿ ಹೆಬ್ಟಾಳಕರ ಬಿಟ್ಟರೆ ಯಾರೂ ಇತ್ತ ಸುಳಿದಿಲ್ಲ. ಅಭ್ಯರ್ಥಿ ಡಾ| ವಿ.ಎಸ್‌. ಸಾಧುನವರ ಕೂಡ ಗ್ರಾಮೀಣ ಭಾಗಕ್ಕೆ ಕಾಲಿಟ್ಟಿಲ್ಲ. ಕಾಂಗ್ರೆಸ್‌ನ ಪ್ರಚಾರ ಇನ್ನೂ ಸಪ್ಪೆಯಾಗಿಯೇ ಉಳಿದುಕೊಂಡಿದೆ.
ಇನ್ನೂ ಸ್ಟಾರ್‌ಪ್ರಚಾರಕರೇ ಸುಳಿದಿಲ್ಲ
ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪರವಾಗಿ ಇನ್ನೂ ಒಬ್ಬರೂ ಸ್ಟಾರ್‌ ಪ್ರಚಾರಕರು ಬಂದಿಲ್ಲ. ರಾಷ್ಟ್ರ
ಹಾಗೂ ರಾಜ್ಯದ ನಾಯಕರೂ ಬಂದಿಲ್ಲ. ಬಿಜೆಪಿ ಬೂತ್‌ ಸಭೆಗೆ ಕೇಂದ್ರ ಸಚಿವ ಡಾ| ಹರ್ಷವರ್ಧನ ಬಂದು ಹೋಗಿದ್ದು ಬಿಟ್ಟರೆ ಇನ್ನುಳಿದಂತೆ ಯಾರೂ ಬಂದಿಲ್ಲ. ಕಾಂಗ್ರೆಸ್‌ ನಲ್ಲಿ ಹೆಬ್ಟಾಳಕರ ಬಿಟ್ಟರೆ ಇನ್ನುಳಿದಂತೆ ಇನ್ನೂವರೆಗೆ ಯಾರೂ ಕ್ರಿಯಾಶೀಲರಾಗಿಲ್ಲ. ಸಾಧುನವರ ಹೊಸ ಮುಖವಾಗಿದ್ದರಿಂದ ಇಲ್ಲಿಯ ಜನರು ಇವರನ್ನು ಒಪ್ಪಿಕೊಳ್ಳಲು ಇನ್ನೂ ತುಸು ಸಮಯದ ಅಗತ್ಯವಿದೆ ಎನ್ನುತ್ತಾರೆ ಮತದಾರರು.
Advertisement

Udayavani is now on Telegram. Click here to join our channel and stay updated with the latest news.

Next