Advertisement

ಆಧಾರ್‌ ಲಿಂಕ್‌ ಮಾಡಲು ವಿಳಂಬ

12:27 PM Jul 22, 2019 | Team Udayavani |

ಕೋಲಾರ: ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡು ವಲ್ಲಿ ವಿಳಂಬ ಮಾಡಿರುವ ಬ್ಯಾಂಕ್‌ ಅಧಿಕಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್‌ ತೀವ್ರ ತರಾಟೆಗೆ ತೆಗೆದುಕೊಂಡು, ಇದರಿಂದ ವಿದ್ಯಾರ್ಥಿ ವೇತನ ಸಕಾಲಕ್ಕೆ ವಿತರಣೆಯಾಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿವಿಧ ಬ್ಯಾಂಕ್‌ ಹಾಗೂ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬ್ಯಾಂಕ್‌ ಅಧಿಕಾರಿಗಳು ಮಾಡುವ ತಪ್ಪಿಗೆ ನಾವೇಕೆ ಮುಖ್ಯ ಕಾರ್ಯದರ್ಶಿಗಳ ಮುಂದೆ ತಲೆ ತಗ್ಗಿಸಬೇಕು, ನಿಮ್ಮ ಕೈಯಲ್ಲಿ ಆಗಿಲ್ಲವೆಂದರೆ ಹೇಳಿ, ಕ್ರಮಕ್ಕೆ ಶಿಫಾರಸ್ಸು ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದರು.

ಆಗಲಿಲ್ಲ ಅಂದ್ರೆ ಹೇಳಿ: ಎಸ್‌ಬಿಐ 3,568, ಕೆನರಾ ಬ್ಯಾಂಕ್‌ 1,249 ವಿದ್ಯಾರ್ಥಿಗಳ ಆಧಾರ್‌ ಲಿಂಕ್‌ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೆ. ಇದಕ್ಕೆ ಸಮಸ್ಯೆ ಏನು ಎಂಬುದಾದರೂ ತಿಳಿಸಿ, ಸಿಬ್ಬಂದಿ ಕೊರತೆ ಇದ್ದರೆ ಹೇಳಿ ನಮ್ಮ ಸಿಬ್ಬಂದಿಯನ್ನು ಕಳುಹಿಸುತ್ತೇವೆ ಎಂದರು.

ಬಚ್ಚಿಟ್ಟುಕೊಳ್ಳಲು ಬರಲ್ಲ: ನಿಮ್ಮ ತಪ್ಪಿನಿಂದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಾಗೂ ಸಭೆಗಳಲ್ಲಿ ನಾವು ಉತ್ತರ ಕೊಡಲಿಕ್ಕೆ ಆಗುತ್ತಿಲ್ಲ. ನಿಮ್ಮ ಹಾಗೆ ಬಚ್ಚಿಟ್ಟುಕೊಳ್ಳೊದು ನಮಗೆ ಬರುವುದಿಲ್ಲ. ಬಡವರಿಗೆ ಸೇವೆ ಸಲ್ಲಿಸುವ ಮಾನೋಭಾವದಿಂದ ಕೆಲಸ ನಿರ್ವಹಿಸುತ್ತಿದ್ದೇವೆ, ಸಮಾಜದಲ್ಲಿ ಪ್ರತಿಷ್ಠಿತ ಬ್ಯಾಂಕ್‌ಗಳಾಗಿರುವ ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್‌ಗಳ ವಿಫಲ್ಯವೂ ಇದೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.

ಬ್ಯಾಂಕ್‌ನವರೇ ಹೊಣೆ: ಸರ್ಕಾರದಿಂದ ವಿವಿಧ ಯೋಜನೆಗಳಡಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡುತ್ತದೆ. ಅದನ್ನು ನೇರವಾಗಿ ಮಕ್ಕಳ ಬ್ಯಾಂಕ್‌ ಖಾತೆಗೆ ಹಾಕಲಾಗುವುದು. ಅರ್ಜಿ ಹಾಕಿರುವ ಮಕ್ಕಳ ಆಧಾರ್‌ ಲಿಂಕ್‌ ಅಗದೆ ಇರುವುದರಿಂದ ಸಾಕಷ್ಟು ಮಂದಿ ವಂಚನೆಗೆ ಒಳಗಾಗಿದ್ದಾರೆ. ಇದು ಮುಂದುವರಿದರೆ ಬ್ಯಾಂಕ್‌ಗಳೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿಸಿದರು.

Advertisement

ಅಂಚೆ ಇಲಾಖೆಯಲ್ಲಿ ಮಾಡಿಕೊಳ್ತೇವೆ: ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಎಸ್‌ಬಿಐ ತತ್ಸಾರ ತೋರುತ್ತಿದೆ. ಸಭೆಗಳಿಗೆ ಬರುವುದಿಲ್ಲ, ಮಾಹಿತಿ ಕೇಳಿದರೆ ಕೊಡುವುದಿಲ್ಲ, ಬ್ಯಾಂಕ್‌ಗೆ ಠೇವಣಿ ಬರೊದು ಇದ್ದರೆ ಊರಿಗಿಂತ ಮುಂಚೆ ಓಡಿ ಬರುತ್ತಾರೆ. ಆಗಿಲ್ಲವೆಂದು ಹೇಳಿದರೆ ಅಂಚೆ ಕಚೇರಿಯಲ್ಲಿ ಮಾಡಿಸಿಕೊಳ್ಳುತ್ತೇವೆ ಎಂದು ಹೇಳಿದರು.

ದಾಖಲೆ ಕೊಡುತ್ತಿಲ್ಲ: ಎಸ್‌ಬಿಐ ಅಧಿಕಾರಿ ಮಾತನಾಡಿ, ಕೆಲ ವಿದ್ಯಾರ್ಥಿಗಳ ಆಧಾರ್‌ ತಂಬು ಬರುತ್ತಿಲ್ಲ, ಇದರಿಂದ ಕೆಲ ತಾಂತ್ರಿಕ ದೋಷಗಳಿಂದ ವಿಳಂಬವಾಗುತ್ತಿದೆ. ಕೆಲ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಯಿಲ್ಲದಿದ್ದರೂ ದಾಖಲೆ ಕೊಡುತ್ತಿದ್ದಾರೆ. ಆಧಾರ್‌ ಸಂಖ್ಯೆಗೂ ಖಾತೆಗೂ ಲಿಂಕ್‌ ಆಗುತ್ತಿಲ್ಲ ಎಂದರು.

ಸಬೂಬು ಹೇಳ್ತಿದ್ದಾರೆ: ಇದಕ್ಕೆ ಮಧ್ಯ ಪ್ರವೇಶ ಮಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಾಜಿ ಮಾತನಾಡಿ, ಬ್ಯಾಂಕ್‌ ಖಾತೆಯಿಲ್ಲದ ಮಗುವಿನ ಖಾತೆ ಮಾಡಿಸಲು ಶಿಕ್ಷಕರ ಮೂಲಕ ಪೋಷಕರಿಗೆ ತಿಳಿಸಲಾಗಿದೆ. ಯಾರು ಸುಮ್ಮನೆ ಆಧಾರ್‌ ಕೊಡುತ್ತಿಲ್ಲ, ಇವರಿಗೆ ಮಾಡಲು ಕೈಯಲ್ಲಿ ಆಗದಿದ್ದರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್‌, ನಾನು ತುಂಬ ಸಹನೆಯಿಂದ ಹೇಳಿದ್ದೇನೆ, ಆದರೂ ನೀವು ಕೆಲಸ ಮಾಡಿಲ್ಲ ಎಂದರೆ ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಮುಂದಿನ ಜು.26ರೊಳಗೆ ಕೆಲಸ ಮುಗಿಸಿಲ್ಲವೆಂದರೆ ಮುಖ್ಯ ಕಾರ್ಯದರ್ಶಿಗಳಿಗೆ ನೀವೇ ಉತ್ತರ ಕೊಡಬೇಕಾಗುತ್ತದೆ ಎಂದು ತಾಕೀತು ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ದಿನ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರಬೇಕು, ಮಕ್ಕಳ ಆಧಾರ್‌ ಲಿಂಕ್‌ ಬಗ್ಗೆ ವರದಿ ತೆಗೆದುಕೊಂಡು ಕಳುಹಿಸಬೇಕು ಎಂದು ಸೂಚಿಸಿದರು. ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಹೊಸಮಟ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next