Advertisement

ಹನೂರಿನ ಪ್ರಥಮ ದರ್ಜೆ ಕಾಲೇಜು ನಿಪ್ಪಾಣಿಗೆ ಸ್ಥಳಾಂತರ: ಖಾಸಗಿ ಲಾಬಿಗೆ ಮಣಿದರೇ ಅಧಿಕಾರಿಗಳು

01:58 PM Jun 11, 2020 | keerthan |

ಹನೂರು (ಚಾಮರಾಜನಗರ): ಕ್ಷೇತ್ರ ವ್ಯಾಪ್ತಿಯ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೇರೆಡೆಗೆ ಹುದ್ದೆ ಸಹಿತ ಸ್ಥಳಾಂತರಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು, ಸರ್ಕಾರದ ಈ ನಿರ್ಧಾರದಿಂದಾಗಿ ತಾಲೂಕಿನ ಪದವಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ಆತಂಕಕ್ಕೀಡಾಗಿದ್ದಾರೆ.

Advertisement

ತಾಲೂಕಿನ ಏಕೈಕ ಪ್ರಥಮ ದರ್ಜೆ ಕಾಲೇಜು:  ಹನೂರು ಕ್ಷೇತ್ರವು ಬಹುಪಾಲು ಗುಡ್ಡಗಾಡು, ಗ್ರಾಮೀಣ ಪ್ರದೇಶ ಮತ್ತು ಅರಣ್ಯದಿಂದ ಆವೃತ್ತವಾದ ವಿಸ್ತಾರವಾದ ದೊಡ್ಡ ಕ್ಷೇತ್ರವಾಗಿದ್ದು ಕ್ಷೇತ್ರದ ಒಂದು ತುದಿಯಿಂದ ಮತ್ತೊಂದು ತುದಿಗೆ 150ಕಿ.ಮೀಗೂ ಅಧಿಕ ದೂರವಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರವು ಕೊಡಗು ಜಿಲ್ಲೆಯ ವಿಸ್ತೀರ್ಣಕ್ಕೆ ಸಮಾನವಾದ ಭೂ ಪ್ರದೇಶ ಹೊಂದಿದೆ. ಇಂತಹ ಗಡಿಭಾಗದ ಕ್ಷೇತ್ರವಾದ ಹನೂರಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣ ಕ ಪ್ರಗತಿಗಾಗಿ ಪ್ರಥಮ ದರ್ಜೆ ಕಾಲೇಜನ್ನು ತೆರೆದಿದ್ದು ಈ ಭಾಗದ ಕಡುಬಡತನದಿಂದ ಕೂಡಿರುವ ಹಿಂದುಳಿದ ವರ್ಗದ, ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಸೇರಿದ ಬಹುಪಾಲು ವಿದ್ಯಾರ್ಥಿಗಳು ತಮ್ಮ ಪದವಿ ವಿದ್ಯಾಭ್ಯಾಸಕ್ಕಾಗಿ ಹನೂರು ಪಟ್ಟಣದ ಪ್ರಥಮ ದರ್ಜೆ ಕಾಲೇಜನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಸರ್ಕಾರಿ ಕಾಲೇಜಿರಲಿ, ಖಾಸಗಿ ಕಾಲೇಜುಗಳೂ ಕೂಡಾ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ವರ್ಗಾಯಿಸಿರುವುದು ಈ ಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರ ಆತಂಕಕ್ಕೆ ಕಾರಣವಾಗಿದೆ.

ಸುಳ್ಳು ವರದಿ ನೀಡಿರುವ ಅಧಿಕಾರಿಗಳು:  ಸರ್ಕಾರವು 100 ವಿದ್ಯಾರ್ಥಿಗಳಿಗಿಂತ ಕಡಿಮೆ ದಾಖಲಾತಿ ಹೊಂದಿರುವ ಕಾಲೇಜುಗಳ ಪಟ್ಟಿ ನೀಡುವಂತೆ ಸಂಬಂಧಪಟ್ಟ ಕಾಲೇಜು ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಹನೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿನಲ್ಲಿ 325 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದರೂ ಸಹ 100ಕ್ಕೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಇರುವ ಏಕೈಕ ಕಾಲೇಜು ಎಂಬುದನ್ನು ಮರೆಮಾಚಿ ಮೂರು ಕಾಲೇಜುಗಳು ಇವೆ ಎಂದು ಸುಳ್ಳು ವರದಿಯನ್ನು ಸರ್ಕಾರಕ್ಕೆ ನೀಡಿದ್ದಾರೆ.

ಖಾಸಗಿ ಲಾಬಿಗೆ ಮಣಿದರಾ ಅಧಿಕಾರಿಗಳು?:  ಹನೂರು ಕ್ಷೇತ್ರದಲ್ಲಿ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಯಿರುವುದನ್ನು ಗಮನಿಸಿದ ಕೊಳ್ಳೇಗಾಲದ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಹನೂರು ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಕಳೆದ 4-5 ವರ್ಷಗಳಿಂದಲೂ ಪ್ರಯತ್ನ ಪಡುತ್ತಲೇ ಬಂದಿವೆ. ಆದರೆ ಈ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗೆ ಅನುಕೂಲ ಕಲ್ಪಿಸಿದಲ್ಲಿ ಈ ಭಾಗದ ಬಡಜನರಿಗೆ ತೊಂದರೆಯಾಗಲಿದೆ ಮತ್ತು ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಅಗತ್ಯ ಸವಲತ್ತುಗಳೊಂದಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಿರುವ ಸರ್ಕಾರಿ ಕಾಲೇಜನ್ನು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದನ್ನು ಅರಿತ ಶಿಕ್ಷಣ ಇಲಾಖಾ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಇದೀಗ ಏಕಾಏಕಿ ಕಾಲೇಜು ಸ್ಥಳಾಂತರಗೊಳ್ಳುವ ನಿಟ್ಟಿನಲ್ಲಿ ಸುಳ್ಳು ವರದಿ ನೀಡಿರುವುದು ಖಾಸಗಿ ಸಂಸ್ಥೆಯ ಲಾಬಿಗೆ ಮಣಿದು ಅಧಿಕಾರಿಗಳು ಸುಳ್ಳು ವರದಿ ನೀಡಿದ್ದಾರೆಯೇ ಎಂಬುವ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ದಕ್ಷಿಣ ಧ್ರುವದಿಂದ ಉತ್ತರ ಧ್ರುವಕ್ಕೆ: ಕರ್ನಾಟಕ ರಾಜ್ಯದ ದಕ್ಷಿಣ ತುದಿಯ ಕಟ್ಟಕಡೆಯ ಕ್ಷೇತ್ರ ಹನೂರಿನ ಪ್ರಥಮ ದರ್ಜೆ ಕಾಲೇಜನ್ನು ರಾಜ್ಯದ ಉತ್ತರದ ತುದಿಯ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರಿಸಿರುವುದು ಕಾಲೇಜು ಆಡಳಿತ ಮಂಡಳಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಕ್ಕೆ ಬೇಸರ ತಂದಿದ್ದು ಎತ್ತಣದ ಹನೂರು ಎತ್ತಣದ ನಿಪ್ಪಾಣಿ ಯಾವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಸಾರ್ವಜನಿಕರ ಆಗ್ರಹ:  ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಪ್ರಥಮ ದರ್ಜೆ ಕಾಲೇಜನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು. ಒಂದೊಮ್ಮೆ ಕಾಲೇಜು ಸ್ಥಳಾಂತರಗೊಂಡಿದ್ದೆ ಆದಲ್ಲಿ ವಿದ್ಯಾರ್ಥಿಗಳು ಈಗ ಕ್ರಮಿಸುತ್ತಿರುವ ದೂರದ ಜೊತೆಗೆ ಇನ್ನೂ 25 ಕಿ.ಮೀ ಹೆಚ್ಚಿನ  ದೂರ ಕ್ರಮಿಸಬೇಕಾಗುತ್ತದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಠಿಯಿಂದ ಮಾರಕವಾಗಲಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕಾಲೇಜನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಖಾಸಗಿ ಸಂಸ್ಥೆಗಳಿಂದ ಕಿಕ್‍ಬ್ಯಾಕ್ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿರುವ ಕಾಲೇಜು ಶಿಕ್ಷಣ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹನೂರು ತಾಲೂಕಿನ ಏಕೈಕ ಪ್ರಥಮ ದರ್ಜೆ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸಿರುವುದು ನನ್ನ ಗಮನಕ್ಕೆ ಬಂದಿದ್ದು ಇದು ಅಧಿಕಾರಿಗಳ ಕಣ್ತಪ್ಪಿನಿಂದ ಆಗಿರುವ ಪ್ರಮಾದವಾಗಿದೆ. ಈ ಸಂಬಂಧ ಈಗಾಗಲೇ ಉಪಮುಖ್ಯಮಂತ್ರಿ ಅಶ್ವಥ್‍ನಾರಾಯಣ್ ಅವರಿಗೆ ಮತ್ತು ಸಂಬಂಧಪಟ್ಟ ಕಮಿಷನರ್ ಅವರಿಗೆ ಮನವಿ ಮಾಡಲಾಗಿದ್ದು ಕಾಲೇಜನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಆರ್.ನರೇಂದ್ರ ರಾಜುಗೌಡ ಹೇಳಿದ್ದಾರೆ.

ನಾನು ಈ ಹುದ್ದೆಗೆ ಬಂದು 1 ವರ್ಷ ಕಳೆದಿದೆ. ಈ ಹಿಂದೆ ನೀಡಿದ್ದ ವರದಿಯ ಆಧಾರದ ಮೇಲೆ ಆದೇಶವಾಗಿದೆ ಎನ್ನಲಾಗುತ್ತಿದೆ. ಆದರೆ ಈ ಸಂಬಂಧ ನಮಗೆ ಇದುವರೆಗೂ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಹನೂರು ಕಾಲೇಜು ಉತ್ತಮವಾಗಿ ನಡೆಯುತ್ತಿದ್ದು ಹಾಸ್ಟೆಲ್ ನಿರ್ಮಾಣಕ್ಕೂ ಕೂಡ ಕ್ರಮವಹಿಸಲಾಗಿದೆ. ಇದೀಗ ಯಾವ ಆಧಾರದ ಮೇಲೆ ಸ್ಥಳಾಂತರಿಸಲಾಗುತ್ತಿದೆ ಎಂಬುದ ಬಗ್ಗೆ ನಮಗೂ ಮಾಹಿತಿಯಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಮುಗೇಶಪ್ಪ ಹೇಳಿದ್ದಾರೆ.

ವಿನೋದ್ ಎನ್ ಗೌಡ

Advertisement

Udayavani is now on Telegram. Click here to join our channel and stay updated with the latest news.

Next