Advertisement

ಮತ್ತೆ ಸದ್ದು ಮಾಡಿದ ಪಕ್ಷಾಂತರ ರಾಜಕೀಯ: ಕಾಂಗ್ರೆಸ್‌ ಸೇರಿದ ಗುಬ್ಬಿ ಶ್ರೀನಿವಾಸ್‌

12:00 AM Mar 31, 2023 | Team Udayavani |

ಬೆಂಗಳೂರು: ಜೆಡಿಎಸ್‌ ಮಾಜಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ (ವಾಸು) ಸಹಿತ ಮಂಡ್ಯ, ಮೂಡಿಗೆರೆಯ ಹಲವು ಬಿಜೆಪಿ ಮುಖಂಡರು ಗುರುವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಸೇರಿದರು.

Advertisement

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಶ್ರೀನಿವಾಸ ಅವರಿಗೆ ನಾನು ಬಹಳ ವರ್ಷಗಳಿಂದ ಗಾಳ ಹಾಕುತ್ತಿದ್ದೆ. ಆದರೆ ಅವರನ್ನು ಕರೆತರಲು ಸಾಧ್ಯವಾಗಿರಲಿಲ್ಲ. ಈಗ ಅವರು ಮತದಾರರ ಗಾಳಕ್ಕೆ ಬಿದ್ದಿದ್ದಾರೆ. ಅವರ ಸೇರ್ಪಡೆ ಕೇವಲ ತುಮಕೂರಿಗಲ್ಲ; ಇಡೀ ಹಳೆ ಮೈಸೂರಿಗೆ ದೊಡ್ಡ ಶಕ್ತಿ ಆಗಿದೆ. ಇವರ ಬೆನ್ನಲ್ಲೇ ಜೆಡಿಎಸ್‌ನಿಂದ ಶಿವಲಿಂಗೇಗೌಡ ಕೂಡ ಶೀಘ್ರ ರಾಜೀನಾಮೆ ನೀಡಲಿದ್ದಾರೆ. ಆದಷ್ಟು ಬೇಗ ನಮ್ಮನ್ನು ಸೇರುತ್ತಾರೆ. ಕಾಂತರಾಜ, ಮನೋಹರ, ಮಧು ಬಂಗಾರಪ್ಪ, ದೇವೇಂದ್ರಪ್ಪ ಹೀಗೆ ಅಲ್ಪಾವಧಿಯಲ್ಲಿ ಇದುವರೆಗೆ ಸುಮಾರು 37 ನಾಯಕರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯಿಂದ ಸಿ.ಪುಟ್ಟಣ್ಣ, ಮೋಹನ್‌ ನಿಂಬಿಕಾಯಿ, ಮಂಜುನಾಥ ಕುನ್ನೂರ ಸೇರಿ ಅನೇಕರು ಕಾಂಗ್ರೆಸ್‌ ಸೇರಿದ್ದಾರೆ ಎಂದ ಅವರು, ನಮ್ಮ ಶಾಸಕರನ್ನು ಕರೆದೊಯ್ದು ಸರಕಾರ ರಚಿಸಿದ್ದೀರಿ. ಈಗ ಕಾಂಗ್ರೆಸ್‌ನವರು ಬಿಜೆಪಿ ಶಾಸಕರ ಬಾಗಿಲು ತಟ್ಟುತ್ತಿದ್ದಾರೆ ಎಂದು ಹೇಳುತ್ತಿದ್ದೀರಿ. ನಿಮಗೆ (ಬಿಜೆಪಿಗೆ) ನೈತಿಕತೆ ಇದೆಯೇ? ವಾಸ್ತವವಾಗಿ ಇದು ಬಿಜೆಪಿ ಸರಕಾರ ಅಲ್ಲ; ಸಮ್ಮಿಶ್ರ ಸರಕಾರವಾಗಿದೆ ಎಂದು ಟೀಕಿಸಿದರು.

ನನಗಾದ ಸ್ಥಿತಿಯೇ ಶ್ರೀನಿವಾಸ್‌ಗೂ ಆಗಿದೆ
ಸಿದ್ದರಾಮಯ್ಯ ಮಾತನಾಡಿ, ಜೆಡಿ ಎಸ್‌ನಲ್ಲಿ ಉಸಿರುಗಟ್ಟುವ ವಾತಾವರಣವಿದೆ. 2007ರಲ್ಲಿ ನನಗಾದ ಸ್ಥಿತಿಯೇ ಈಗ ಶ್ರೀನಿವಾಸ್‌ಗೂ ಆಗಿದೆ. ಅಲ್ಲಿ ಸ್ವತಂತ್ರವಾಗಿ ಯೋಚನೆ ಮಾಡಲು ಅವಕಾಶವೇ ಇಲ್ಲ ಎಂದರು.

ಹೊರದಬ್ಬಿದರು
ಶ್ರೀನಿವಾಸ ಮಾತನಾಡಿ, ಜೆಡಿಎಸ್‌ ತೊರೆಯಬೇಕು ಅಂದು ಕೊಂಡಿರಲಿಲ್ಲ. ಕುಮಾರಸ್ವಾಮಿ ಅವರೇ ನನ್ನನ್ನು ಹೊರದಬ್ಬಿದರು. ಹಾಗಾಗಿ ಎಲ್ಲಾದರೂ ಜಾಗ ಕಂಡು ಕೊಳ್ಳುವುದು ಅನಿವಾರ್ಯ ವಾಯಿತು. 2000ದಲ್ಲಿ ನಾನು ಕಾಂಗ್ರೆಸ್‌ ಸದಸ್ಯನೇ ಆಗಿದ್ದೆ ಎಂದರು.
ಇದೇ ಸಂದರ್ಭ ಮೂಡಿಗೆರೆಯ ಪುರಸಭೆ ಮಾಜಿ ಅಧ್ಯಕ್ಷ ಹಾಲಪ್ಪ, ಮಂಡ್ಯದ ಸತ್ಯಾನಂದ ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರು. ಪ್ರಮುಖರಾದ ಟಿ.ಬಿ.ಜಯಚಂದ್ರ, ಮೋಟಮ್ಮ, ಕೆ.ಎನ್‌. ರಾಜಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಮತ್ತಿತರರಿದ್ದರು.

Advertisement

ಹಲವರು ಬಿಜೆಪಿಗೆ ಸೇರ್ಪಡೆ
ಬೆಂಗಳೂರು: ಕೋಲಾರದ ಕಾಂಗ್ರೆಸ್‌ ಮುಖಂಡ ಶ್ರೀನಿವಾಸ ರೆಡ್ಡಿ ಸಹಿತ ವಿವಿಧ ಪಕ್ಷಗಳ ಮುಖಂಡರು ಗುರುವಾರ ಬಿಜೆಪಿ ಸೇರಿದರು. ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಸಚಿವರಾದ ಬಿ.ಎ. ಬಸವರಾಜ (ಬೈರತಿ), ಡಾ| ಸಿ.ಎನ್‌. ಅಶ್ವತ್ಥ ನಾರಾಯಣ, ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನ ಮುಂತಾದವರು ಉಪಸ್ಥಿತರಿದ್ದರು. ರೆಡ್ಡಿ ಜತೆಗೆ ರಾಯಚೂರು ಜಿಲ್ಲೆಯ ಸಿಂಧನೂರಿನ ಕಾಂಗ್ರೆಸ್‌ ಉಪಾಧ್ಯಕ್ಷ ಕರಿಯಪ್ಪ, ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕೂಡ ಬಿಜೆಪಿ ಸೇರಿದರು.

ಕಂಪ್ಲಿ ರಾಜು ನಾಯ್ಕ ಜೆಡಿಎಸ್‌ಗೆ
ಕಂಪ್ಲಿ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ರಾಜು ನಾಯ್ಕ ಅವರು ಜೆಡಿಎಸ್‌ ಸೇರಿದ್ದಾರೆ. ಜೆಪಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭ ಮಾತನಾಡಿದ ಕುಮಾರಸ್ವಾಮಿ, ರಾಜು ನಾಯ್ಕ ಭರವಸೆಯ ಮುಖಂಡ. ನಮ್ಮ ತತ್ವ ಸಿದ್ಧಾಂತ ಒಪ್ಪಿ ಬಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿದೆ ಎಂದರು. ರಾಜು ನಾಯ್ಕ ಮಾತನಾಡಿ, ಕಾಂಗ್ರೆಸ್‌ನಲ್ಲಿ ಹಗಲಿರುಳು ಪಕ್ಷಕ್ಕಾಗಿ ದುಡಿದರೂ ಪ್ರಯೋಜನವಿಲ್ಲ. ಇಡೀ ರಾಜ್ಯದಲ್ಲಿ ವಾಲ್ಮೀಕಿ ಸಮು ದಾಯನ್ನು ಸಂಘಟಿಸಿ ದ್ದೇನೆ. ಕಾಂಗ್ರೆಸ್‌ಗೆ ಪ್ರಜ್ಞಾ ವಂತರು, ಬುದ್ಧಿವಂತರು ಬೇಕಾಗಿಲ್ಲಎಂದರು.

Advertisement

Udayavani is now on Telegram. Click here to join our channel and stay updated with the latest news.

Next