Advertisement

ಎಲ್ಲೆಡೆ ಸೋಲು-ಗೆಲುವಿನ ಲೆಕ್ಕಾಚಾರ

12:54 PM Apr 28, 2019 | Suhan S |
•ವಿಶೇಷ ವರದಿ

ಬಾಗಲಕೋಟೆ: ಪ್ರಸ್ತುತ ಲೋಕಸಭೆ ಚುನಾವಣೆ ಮತದಾನ ಮುಗಿದರೂ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರಿಗೆ ಗೊಂದಲ, ತಳಮಳ ಇನ್ನೂ ಮುಗಿದಿಲ್ಲ.

Advertisement

ಹೌದು, ಲೋಕಸಭೆ ಚುನಾವಣೆಯ ಎಲೆಕ್ಷನ್‌ ಮುಗಿದಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಅಭ್ಯರ್ಥಿಗಳು ಟೆನ್ಷನ್‌ದಿಂದ ಹೊರಬರಲು ಇನ್ನೂ ಒಂದು ತಿಂಗಳು (ಮೇ 23ರವರೆಗೆ) ಕಾಯಲೇಬೇಕು. ಎರಡೂ ಪಕ್ಷಗಳಿಂದ ಪ್ರಬಲ ಅಭ್ಯರ್ಥಿಗಳು ಸ್ಫರ್ಧಿಸಿದ್ದು, ಗೆಲುವು ನನ್ನದೇ ಎನ್ನುವ ಭರವಸೆಯಲ್ಲಿದ್ದರೂ ಟೆನ್‌ಷನ್‌ನಿಂದ ಸಂಪೂರ್ಣ ನಿರಾಳರಾಗಿಲ್ಲ.

ಯಾರ ನಿರೀಕ್ಷೆ ಸತ್ಯ: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ, ಜಿಲ್ಲೆಯ ಮತದಾರರು ನನ್ನನ್ನು ತಮ್ಮ ಸಂಸದರನ್ನಾಗಿ ಆಯ್ಕೆ ಮಾಡುತ್ತಾರೆ ಎನ್ನುವ ಭರವಸೆಯಲ್ಲಿದ್ದಾರೆ. ಇನ್ನೂ ಸತತ ಮೂರು ಬಾರಿ ಸಂಸದರಾಗಿದ್ದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪಿ.ಸಿ. ಗದ್ದಿಗೌಡರ, ಈ ಬಾರಿಯೂ ಮತದಾರರು ನನ್ನನ್ನು ಸಂಸತ್ತಿಗೆ ಕಳುಹಿಸುತ್ತಾರೆೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಯಾರ ಗೆಲುವಿನ ನಿರೀಕ್ಷೆ ಸತ್ಯವಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಕ್ಷೇತ್ರದ ಮಂದಾಳತ್ವ ಯಾರಿಗೆ: ಸತತ ಮೂರು ಬಾರಿ ಇಡೀ ಕ್ಷೇತ್ರದ ಆಡಳಿತದ ಚುಕ್ಕಾಣಿ ಹಿಡಿದಿರುವುದು ಬಿಜೆಪಿ ಪಕ್ಷ. ಪ್ರಸ್ತುತ ಚುನಾವಣೆಯಲ್ಲಿ ಗೆದ್ದು ಪುನಃ ಪಡೆಯಲು ಕಾಂಗ್ರೆಸ್‌ ಬೇರೊಂದು ತಂತ್ರಗಾರಿಕೆ ಹೆಣೆದು ಲಿಂಗಾಯತ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿತ್ತು. ಈ ಚುನಾವಣೆಯಲ್ಲಿ ಒಂದು ವೇಳೆ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಗೆಲುವು ಸಾಧಿಸಿದರೇ, ಜಿಲ್ಲೆಯ ಮತದಾರರು ಮಹಿಳಾ ಅಭ್ಯರ್ಥಿಯ ಕೈ ಹಿಡಿದಿದ್ದಾರೆ ಎಂದು ಜನರು ಮತ್ತು ಕಾಂಗ್ರೆಸ್‌ ನಾಯಕರು ಭಾವಿಸಿಕೊಳ್ಳುತ್ತಾರೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ

ಪಿ.ಸಿ. ಗದ್ದಿಗೌಡರ ಗೆಲುವು ಸಾಧಿಸಿದರೇ, ಜಿಲ್ಲೆಯ ಮತದಾರರು ಬಾಗಲಕೋಟೆಯನ್ನು ಬಿಜೆಪಿ ಭದ್ರ ಕೋಟೆ ಎಂದು ಮತ್ತೆ ಸಾಬೀತು ಮಾಡುತ್ತಾರೆ. ಗದ್ದಿಗೌಡರನ್ನು ಸೋಲಿಲ್ಲದ ಸರದಾರ ಎನ್ನುವ ಭಾವನೆ ಬಿಜೆಪಿ ನಾಯಕರಲ್ಲಿ ಮತ್ತು ಜಿಲ್ಲೆಯ ಜನರಲ್ಲಿ ಮೂಡುತ್ತದೆ. ಆದರೆ ಈ ಬಾರಿ ಮತಕ್ಷೇತ್ರದ ಮುಂದಾಳತ್ವ ಯಾರು ವಹಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

Advertisement

ಅಭ್ಯರ್ಥಿಗಳು ಈ ಚುನಾವಣೆಯ ರಗಳೆಯಿಂದ ಹೊರಬಂದು ರಿಲ್ಯಾಕ್ಸ್‌ ಮೂಡಿನಲ್ಲಿದ್ದಾರೆ. ಪ್ರಚಾರದ ವೇಳೆ, ಮುಂಜಾನೆ ಮನೆ ಬಿಟ್ಟರೇ ರಾತ್ರಿ ಮನೆ ಸೇರಿದ್ದ ಅಭ್ಯರ್ಥಿಗಳು, ಈಗ ದಿನಪೂರ್ತಿ ಕುಟುಂಬ ಹಾಗೂ ಕಾರ್ಯಕರ್ತರೊಂದಿಗೆ ಕಾಲ ಕಳೆೆಯುತ್ತಿದ್ದಾರೆ. ಮನೆಗೆ ಬರುವ ಕಾರ್ಯಕರ್ತರೊಂದಿಗೆ ಮತದಾರರ ಮತ್ತು ಮತದಾನದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೇ 23 ಯಾರಿಗೆ ಸಿಹಿ-ಕಹಿ: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಒಟ್ಟು ವಿವಿಧ ಪಕ್ಷಗಳ 14 ಅಭ್ಯರ್ಥಿಗಳು ಸ್ಫರ್ಧಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಭ್ಯರ್ಥಿ ವೀಣಾ ಕಾಶಪ್ಪನವರ ಮತ್ತು ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ನಡುವೆ ತೀವ್ರ ಪೈಪೋಟಿ ನಡೆದಿದೆ. ಗೆಲುವಿನ ಲೆಕ್ಕಾಚಾರದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಮೇ 23ರಂದು ಹೊರಬೀಳಲಿದೆ. ಅಂದು ಚುನಾವಣೆಯ ಫಲಿತಾಂಶ ಹೊರ ಬೀಳಲಿದ್ದು, ಕೆಲವರಿಗೆ ಸಿಹಿ ಅನುಭವ ನೀಡಿದರೆ ಇನ್ನೂ ಕೆಲವರಿಗೆ ಕಹಿ ಅನುಭವ ನೀಡುವುದಂತೂ ಸತ್ಯ.

ಒಟ್ಟಿನಲ್ಲಿ ಚುನಾವಣೆಯ ಅಭ್ಯರ್ಥಿಗಳಿಗೆ ಎಲೆಕ್ಷನ್‌ ಮುಗಿದರೂ ಟೆನ್‌ಶನ್‌ ಮಾತ್ರ ಮುಗಿದಿಲ್ಲ. ಅದೂ ಮುಗಿಯುವುದು ಫಲಿತಾಂಶ ಪ್ರಕಟವಾದ ದಿನದಂದು. ಅಲ್ಲಿಯವರೆಗೆ ಅಭ್ಯರ್ಥಿಗಳು ಈ ಸೋಲು-ಗೆಲುವಿನ ಟೆನ್‌ಶನ್‌ನಲ್ಲಿಯೇ ದಿನ ಕಳೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next