Advertisement

ಅಂತರಂಗವೇ ಬಹಿರಂಗ ದೀಪಿಕಾ ಉವಾಚ

06:10 PM Mar 19, 2020 | Team Udayavani |

ಸಾಮಾನ್ಯವಾಗಿ ಸ್ಟಾರ್‌ಗಳು ಮತ್ತು ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಅಂತೆ-ಕಂತೆ ಸುದ್ದಿಗಳು ಯಾವಾಗಲೂ ಹರಿದಾಡುತ್ತಿರುತ್ತವೆ. ಅನೇಕ ಸಂದರ್ಭಗಳಲ್ಲಿ ಇಂಥ ಅಂತೆ-ಕಂತೆಗಳ ಬಗ್ಗೆ ಯಾವ ಸ್ಟಾರ್‌, ಸೆಲೆಬ್ರಿಟಿಗಳು ಬಹಿರಂಗವಾಗಿ ಮಾತನಾಡದೇ ಇರುವುದರಿಂದ ಇಂಥ ಸುದ್ದಿಗಳನ್ನೇ ಅವರ ಅಭಿಮಾನಿಗಳು ನಿಜ ಎಂದು ನಂಬುವ ಸಾಧ್ಯತೆಗಳೂ ಇರುತ್ತವೆ. ಆದರೆ ಇದೀಗ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಬಗ್ಗೆ ಹರಿದಾಡುತ್ತಿದ್ದ ಇಂಥದ್ದೇ ಒಂದು ಸುದ್ದಿಯ ಬಗ್ಗೆ ನೇರವಾಗಿ ಮಾತನಾಡಿ ಅನೇಕರ ಹುಬ್ಬೇರುವಂತೆ ಮಾಡಿದ್ದಾರೆ. ಅಂದ ಹಾಗೆ, ದೀಪಿಕಾ ಪಡುಕೋಣೆ ಮಾತನಾಡಿರುವುದು ತಮ್ಮ ವಿವಾಹಪೂರ್ವ ಸಂಬಂಧಗಳ ಬಗ್ಗೆ!

Advertisement

ದೀಪಿಕಾ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಹಿಂದಿನ ಸಂಬಂಧಗಳು ಹಾಗೂ ಅದರಿಂದ ಉಂಟಾದ ದ್ರೋಹದ ಬಗ್ಗೆ ಮಾತನಾಡಿದ್ದಾರೆ. “ನನ್ನ ಪಾಲಿಗೆ ಲೈಂಗಿಕತೆ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಅದರಲ್ಲಿ ಭಾವನಾತ್ಮಕತೆಯೂ ಇರುತ್ತದೆ. ನಾನು ಪ್ರೇಮ ಸಂಬಂಧದಲ್ಲಿದ್ದಾಗ ಮೋಸಮಾಡಿರಲಿಲ್ಲ ಅಥವಾ ದೂರಮಾಡಿರಲಿಲ್ಲ. ನಾನು ವಂಚಿಸುವುದಾದರೆ ನಾನೇಕೆ ಸಂಬಂಧದಲ್ಲಿ ಇರಬೇಕು? ಒಬ್ಬಳೇ ಇದ್ದು ಮಜಾ ಮಾಡಬಹುದು. ಆದರೆ, ಎಲ್ಲರೂ ಹಾಗೆಯೇ ಯೋಚಿಸುವುದಿಲ್ಲ’ ಎಂದು ದೀಪಿಕಾ ಹೇಳಿದ್ದಾರೆ.

ಇನ್ನು ತಾನು ಯಾರ ಜೊತೆ ಸಂಬಂಧದಲ್ಲಿದ್ದೆ ಎನ್ನುವ ಹೆಸರನ್ನು ಉಲ್ಲೇಖೀಸದ ದೀಪಿಕಾ, “ಒಬ್ಬ ವ್ಯಕ್ತಿಗೆ ಎರಡನೆಯ ಅವಕಾಶ ನೀಡುವಷ್ಟು ತಾನು ಮೂರ್ಖಳಾಗಿದ್ದೆ. ಇದಕ್ಕಾಗಿ ಈ ಹಿಂದೆ ಘಾಸಿಗೊಂಡಿದ್ದೆ. ನಾನು ಆತನಿಗೆ ಎರಡನೆಯ ಅವಕಾಶ ನೀಡುವಷ್ಟು ದಡ್ಡಳಾಗಿದ್ದೆ. ಏಕೆಂದರೆ ಆತ ಬೇಡಿಕೊಂಡ ಮತ್ತು ಅಂಗಲಾಚಿದ್ದ. ನನ್ನ ಸುತ್ತ ಇರುವ ಪ್ರತಿಯೊಬ್ಬರೂ, “ಆತ ದಾರಿ ತಪ್ಪಿದ್ದಾನೆ. ಸರಿ ಹೋಗಿಲ್ಲ’ ಎಂದು ಹೇಳಿದ್ದರೂ ನಾನು ಆತನನ್ನು ಮತ್ತೆ ಒಪ್ಪಿಕೊಂಡೆ. ನಂತರ ವಾಸ್ತವವಾಗಿ ಆತನನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದೆ. ಇದರಿಂದ ಹೊರಗೆ ಬರಲು ನನಗೆ ಕೆಲವು ಸಮಯ ಬೇಕಾಯಿತು. ಆದರೆ ಅದನ್ನು ಮಾಡಿದ ಬಳಿಕ ನಾನು ಮತ್ತೆ ಆ ದಿನಗಳಿಗೆ ಹೋಗುವಂತೆ ಮಾಡಲು ಯಾವುದರಿಂದಲೂ ಸಾಧ್ಯವಿಲ್ಲ. ಆ ಹಡಗು ಮುಳುಗಿ ಹೋಗಿದೆ’ ಎಂದು ದೀಪಿಕಾ ತನ್ನ ಹಿಂದಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ತಾನು ಸಂಬಂಧದಲ್ಲಿ ಮೋಸ ಹೋಗಿರುವುದರ ಬಗ್ಗೆ ಮಾತನಾಡಿರುವ ದೀಪಿಕಾ, “ಆತ ಮೊದಲ ಬಾರಿಗೆ ನನಗೆ ಮೋಸ ಮಾಡಿದಾಗ, ನಮ್ಮ ಸಂಬಂಧದಲ್ಲಿ ಏನೋ ತಪ್ಪಾಗಿದೆ ಎಂದು ನಾನು ಭಾವಿಸಿದ್ದೆ. ಅಥವಾ ನನ್ನಲ್ಲೇ ತಪ್ಪು ಇದೆ ಎಂದುಕೊಂಡೆ. ಆದರೆ ನಮ್ಮ ಜತೆಗಿದ್ದವರು ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಾಗ ಆತನಲ್ಲಿಯೇ ಸಮಸ್ಯೆಗಳು ಇವೆ ಎನ್ನುವುದು ಅರ್ಥವಾಗುತ್ತದೆ. ಸಂಬಂಧಗಳಲ್ಲಿ ನಾನು ತುಂಬಾ ನೀಡಿದ್ದೇನೆ. ಹಾಗೆಯೇ ಪ್ರತಿಯಾಗಿ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ. ಆದರೆ ಸಂಬಂಧ ದ್ರೋಹ ಎನ್ನುವುದು ಸಂಬಂಧಗಳ ಒಪ್ಪಂದಗಳನ್ನು ಮುರಿದು ಹಾಕುತ್ತದೆ. ಒಮ್ಮೆ ಅದು ಬಂದರೆ ಗೌರವ ದೂರ ಹೋಗುತ್ತದೆ. ನಂಬಿಕೆ ಸತ್ತು ಹೋಗುತ್ತದೆ. ಇವುಗಳು ಸಂಬಂಧದ ಮುಖ್ಯ ಸ್ತಂಭಗಳು’ ಎಂದು ಹೇಳಿದ್ದಾರೆ.

ಇನ್ನು ದೀಪಿಕಾ ತಮ್ಮ ವಿಚಾರದ ಬಗ್ಗೆ ಯಾವುದೇ ಮುಚ್ಚುಮರೆ, ಹಿಂಜರಿಕೆಯಿಲ್ಲದೆ ಮಾತನಾಡಿರುವುದಕ್ಕೆ ಸೋಶಿಯಲ್‌ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವು ತಿಂಗಳ ಹಿಂದೆ ದೀಪಿಕಾ ತಾವು ಖನ್ನತೆಗೆ ಒಳಗಾಗಿದ್ದನ್ನು ಮತ್ತು ಅದರಿಂದ ಹೊರಗೆ ಬಂದಿದ್ದ ವಿಷಯವನ್ನು ಬಹಿರಂಗಪಡಿಸಿ ಸುದ್ದಿಯಾಗಿದ್ದರು. ಅಂದ ಹಾಗೆ, ದೀಪಿಕಾ ಪಡುಕೋಣೆ ಇಷ್ಟು ವಿಷಯಗಳು ಹೇಳಿರುವುದು ರಣಬೀರ್‌ ಕಪೂರ್‌ ಕುರಿತಾಗಿ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next